Advertisement

75 ಲಕ್ಷ ರೂ. ಹವಾಲ ಹಣ ಜಪ್ತಿ

11:19 AM Nov 29, 2018 | |

ಬೆಂಗಳೂರು: ಮದ್ಯದ ದೊರೆ ವಿಜಯ್‌ ಮಲ್ಯಗೆ ಸೇರಿದ ಊಟಿಯಲ್ಲಿನ ಬಂಗಲೆ ಖರೀದಿಸಿದ್ದ ಉದ್ಯಮಿಗೆ 75 ಲಕ್ಷ ರೂ. ಹವಾಲಾ ಹಣ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಊಟಿ ಮೂಲದ ನಂದೀಶ್‌ ಹಾಗೂ ಹೈದ್ರಾಬಾದ್‌ನ ನಿಸಾರ್‌ ಅಹಮದ್‌ ಬಂಧಿತರು. ವಿ.ವಿ.ಪುರದ ಸಜ್ಜನ ರಾವ್‌ ವೃತ್ತದ ಬಳಿ ಹವಾಲ ಮೂಲಕ 75 ಲಕ್ಷ ರೂ. ಹಣ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಎಸಿಪಿ ಪಿ.ಟಿ.ಸುಬ್ರಹ್ಮಣ್ಯ ನೇತೃತ್ವದ ತಂಡ ದಾಳಿ ನಡೆಸಿ, ಹಣ ತೆಗೆದುಕೊಂಡು ಹೋಗಲು ಬಂದಿದ್ದ ನಂದೀಶ್‌ ಹಾಗೂ ನಿಸಾರ್‌ ಅಹಮದ್‌ರನ್ನು ಬಂಧಿಸಿ ಹಣ ಜಪ್ತಿ ಮಾಡಿಕೊಂಡಿದೆ. ಇವರಿಗೆ ಹಣ ತಲುಪಿಸಿದ್ದ ಡೀಲರ್‌ ದಿನೇಶ್‌ ಎಂಬಾತ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ.

Advertisement

ವಿಜಯ್‌ ಮಲ್ಯ ಊಟಿಯಲ್ಲಿ ಹೊಂದಿದ್ದ ಬಂಗಲೆಯನ್ನು ಡಯೋಜಿಯೋ ಕಂಪನಿ ಖರೀದಿಸಿತ್ತು. ಬಳಿಕ ಆ ಕಂಪನಿಯಿಂದ ಹೈದ್ರಾಬಾದ್‌ನ ಉದ್ಯಮಿ ಮುಜಾಯಿದ್‌ 7.1 ಕೋಟಿ ರೂ.ಗೆ ಬಂಗಲೆ ಖರೀದಿಸಿದ್ದಾನೆ. ಹೀಗಾಗಿ, ಬಂಗಲೆಯ ನೋಂದಣಿ ಸೇರಿ ಇನ್ನಿತರೆ ಪ್ರಕ್ರಿಯೆಗಳಿಗೆ ಬೇಕಾಗುವ ಹಣವನ್ನು ತೆರಿಗೆ ವಂಚಿಸಿ, ಅಕ್ರಮವಾಗಿ ಪಡೆದುಕೊಳ್ಳುವ ಯೋಜನೆ ಮುಜಾಯಿದ್‌ನದ್ದಾಗಿತ್ತು. ಹೀಗಾಗಿ ಆತ ಬೆಂಗಳೂರಿನಲ್ಲಿ ತನಗೆ ಪರಿಚಯವಿರುವ ಹವಾಲ ಡೀಲರ್‌ ದಿನೇಶ್‌ನನ್ನು ಸಂಪರ್ಕಿಸಿದ್ದ. ಜತೆಗೆ ದಿನೇಶ್‌ ನಿಂದ 75 ಲಕ್ಷ ರೂ. ಪಡೆದುಕೊಂಡು ಬರಲು ನಂದೀಶ್‌ ಹಾಗೂ ನಿಸಾರ್‌ನನ್ನು ಕಳುಹಿಸಿಕೊಟ್ಟಿದ್ದ ಎಂಬ ಅಂಶ ಆರೋಪಿಗಳ ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಸಿಸಿಬಿಯ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು. ಈ ಕುರಿತು ವಿ.ವಿ.ಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next