Advertisement

ಗಿಡ ಬೆಳೆಸಲು ಮಕ್ಕಳಿಗೆ 5 ರೂ. ಪ್ರೋತ್ಸಾಹ

04:09 PM Oct 26, 2022 | Team Udayavani |

ಬೆಂಗಳೂರು: ಬಾಲ್ಯದಲ್ಲೆ ಶಾಲಾ ಮಕ್ಕಳಲ್ಲಿ ಪರಿಸರ ಪ್ರೇಮ ಬಿತ್ತುವ ನಿಟ್ಟಿನಲ್ಲಿ ಬೆಂಗಳೂರು ನಗರ ಜಿಪಂನ ಹೂಸ್ಕೂರ್‌ ಗ್ರಾಪಂ ದಾಪುಗಾಲಿರಿಸಿದೆ. ನೆರಳೆ, ಹಲಸು, ಮಾವು ಸೇರಿದಂತೆ ಮತ್ತಿತರ ಹಣ್ಣಿನ ಸಸಿಗಳನ್ನು ಬೆಳೆಸಿ ಗ್ರಾಪಂಗೆ ನೀಡುವ ಮಕ್ಕಳಿಗೆ ಪ್ರತಿ ಗಿಡಕ್ಕೆ 5ರೂ.ಗಳ ಪ್ರೋತ್ಸಾಹ ಧನ ನೀಡಲು ತೀರ್ಮಾನಿಸಿದೆ.

Advertisement

ಬೆಂಗಳೂರು ಉತ್ತರ ತಾಲೂಕಿನ ವ್ಯಾಪ್ತಿಗೆ ಸೇರುವ ಹುಸ್ಕೂರ್‌ ಗ್ರಾಪಂನಲ್ಲಿ ಹತ್ತಕ್ಕೂ ಅಧಿಕ ಗ್ರಾಮಗಳಿವೆ. ತೋಟಗೆರೆ, ಬೊಮ್ಮಶೆಟ್ಟಿಹಳ್ಳಿ, ರಾಮಪಾಳ್ಯ,ಅಗ್ರಹಾರ ಪಾಳ್ಯ, ಹೊಸಹಳ್ಳಿ ಪಾಳ್ಯ, ಹುಚ್ಚನ ಪಾಳ್ಯ, ಗೋವಿಂದಪುರ,ಹೊನ್ನಸಂದ್ರ, ವಡೇರಹಳ್ಳಿ, ಬೆತ್ತನಗೆರೆ ಗ್ರಾಮಗಳು ಹೂಸ್ಕೂರ್‌ ಗ್ರಾಪಂ ವ್ಯಾಪ್ತಿಗೆ ಸೇರಲಿವೆ. ಕಿರಿಯ ಪ್ರಾಥಮಿಕ ಶಾಲೆಯಿಂದ ಹಿರಿಯ ಪ್ರಾಥಮಿಕ ಶಾಲೆ ವರೆಗೂ ನೂರಾರು ಸಂಖ್ಯೆಯಲ್ಲಿ ಮಕ್ಕಳು ಕಲಿಕೆಯಲ್ಲಿ ನಿರತರಾಗಿದ್ದಾರೆ. ಶಾಲಾ ಹಂತದಲ್ಲೆ ವಿದ್ಯಾರ್ಥಿಗಳನ್ನು ಪರಿಸದತ್ತ ಆಕರ್ಷಿಸುವ ಸದುದ್ದೇಶ ಕೂಡ ಇದರಲ್ಲಿ ಸೇರಿದೆ.

ಈ ಕಾರ್ಯಕ್ರಮ ಯಶಸ್ವಿ ಸಂಬಂಧ ಹೂಸ್ಕೂರ್‌ ಗ್ರಾಪಂ ಪಣತೊಟ್ಟಿದ್ದು ಶಾಲಾ ಶಿಕ್ಷಕರನ್ನು ಒಳಗೂಡಿಸಿದೆ. ಗ್ರಾಪಂ ವ್ಯಾಪ್ತಿಯ ಎಲ್ಲ ಶಾಲಾ ಶಿಕ್ಷಕರಿಗೆ ಈ ಬಗ್ಗೆ ಪಂಚಾಯ್ತಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಕ್ಕಳು ಕೂಡ ಸಸಿಗಳ ಬೆಳೆಸುವ ಬಗ್ಗೆ ಆಸಕ್ತಿಯನ್ನು ಕೂಡ ತೋರಿಸುತ್ತಿದ್ದಾರೆ ಎಂದು ಪಂಚಾಯ್ತಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಪರಿಸರ ದಿನೇ ದಿನೆ ಕ್ಷೀಣಿಸುತ್ತಿದೆ. ಭವಿಷ್ಯತ್ತಿನ ದೃಷ್ಟಿಯಿಂದ ಗಿಡಮರಗಳನ್ನು ಬೆಳೆಸಬೇಕಾಗಿದೆ.ಆ ಹಿನ್ನೆಲೆಯಲ್ಲಿ ಶಾಲಾ ವಿದ್ಯಾರ್ಥಿಗಳಲ್ಲಿ ಗಿಡ ಬೆಳೆಸುವ ಸಂಸ್ಕೃತಿಯ ಬಗ್ಗೆ ತಿಳಿವಳಿಕೆ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಹುಸ್ಕೂರ್‌ ಗ್ರಾಪಂ ಇದೀಗ ಪ್ರಾಯೋಗಿಕ ಹೆಜ್ಜೆಯಿರಿಸಿದ್ದು ಮುಂದಿನ ದಿನಗಳಲ್ಲಿ ದೊಡ್ಡಮಟ್ಟದ ಪರಿಸರದ ಬಗ್ಗೆ ತಿಳುವಳಿಕೆ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ ಎಂದು ಹೇಳಿದ್ದಾರೆ.

ಹಣ್ಣುಗಳ ಗಿಡದ ಬಗ್ಗೆ ತಿಳಿವಳಿಕೆ: ಮಕ್ಕಳು ಮೊಬೈಲ್‌ ನಲ್ಲೆ ಮುಳುಗಿ ಹೋಗುತ್ತಿದ್ದಾರೆ. ಜತೆಗೆ ಕೆಲವು ಮಕ್ಕಳಿಗೆ ಹಣ್ಣು ಬಿಡುವ ಗಿಡಗಳ ಬಗ್ಗೆ ಪರಿಚಯವೇ ಇಲ್ಲ. ಆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಹಣ್ಣು ಬಿಡುವ ಗಿಡಗಳ ಬಗ್ಗೆ ತಿಳಿವಳಿಕೆ ಮೂಡಿಸುವುದು ಕೂಡ ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ ಎಂದು ಹೂಸ್ಕೂರ್‌ ಗ್ರಾಪಂನ ಪಿಡಿಒ ರಾಜೇಶ್‌ ಹೇಳುತ್ತಾರೆ. ಗ್ರಾಪಂನಿಂದಲೇ ಹಣ್ಣಿನ ಗಿಡ ಬೆಳೆಸಲು ಮಕ್ಕಳಿ ಪ್ಲಾಸ್ಟಿಕ್‌ ಕೊಟ್ಟೆಗಳನ್ನು ಕೂಡ ನೀಡಲಾಗುತ್ತದೆ. ಅವುಗಳಲ್ಲಿ ಗಿಡಗಳನ್ನು ಪೋಷಿಸಿ, ಸಂರಕ್ಷಣೆ ಮಾಡಿ ಮಕ್ಕಳು ಗ್ರಾಪಂಗೆ ನೀಡಿದರೆ ಅವರಿಗೆ 5.ರೂ.ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಪಂಚಾಯ್ತಿಯ ಸ್ವನಿಧಿಯಿಂದ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಲು ಬಳಕೆ ಮಾಡಲಾಗುವುದು ಎಂದು ತಿಳಿಸುತ್ತಾರೆ.

Advertisement

ಕೃಷಿಯತ್ತ ಒಲವು ತೋರಲು ಸಹಕಾರಿ: ಮಕ್ಕಳಲ್ಲಿ ಪರಿಸರ ಆಸಕ್ತಿ ಮೂಡಿಸಲು ಇಂತಹ ಕಾರ್ಯ ಕ್ರಮಗಳು ಅನುಕೂಲವಾಗಲಿದೆ. ಭವಿಷ್ಯತ್ತಿನ ದೃಷ್ಟಿ ಯಿಂದ ಇಂತಹ ಕಾರ್ಯಕ್ರಮಗಳು ರೂಪಿತ ವಾಗಬೇಕು. ಮಕ್ಕಳಲ್ಲಿ ನಮ್ಮ ಸುತ್ತಮುತ್ತಲಿನ ಪರಿ ಸರದ ಬಗ್ಗೆ ಅರಿವು ಮೂಡುವುದರ ಜತೆಗೆ ಮುಂದಿ ದಿನಗಳಲ್ಲಿ ಮಕ್ಕಳು ಕೃಷಿ ಕ್ಷೇತ್ರದತ್ತ ಒಲವು ತೋರಲು ಕೂಡ ಇದು ಸಹಾಕವಾಗಲಿದೆ ಎಂದು ನರಸೀಪುರ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಎನ್‌.ವಿ. ರಮೇಶ್‌ ಹೇಳುತ್ತಾರೆ.

ಗ್ರಾಪಂ ವ್ಯಾಪ್ತಿಯಲ್ಲಿರುವ ಸ್ಮಶಾನ,ಅರಣ್ಯ ಪ್ರದೇಶ ಸೇರಿದಂತೆ ಮತ್ತತಿರರ ಸ್ಥಳಗಳಲ್ಲಿ ಗಿಡುವ ಕಾರ್ಯಕ್ರಮವನ್ನು ಗ್ರಾಪಂನಿಂದ ಹಮ್ಮಿಕೊಳ್ಳುವ ಆಲೋಚನೆ ಇದೆ. ಆ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಗ್ರಾಪಂನಿಂದ ನರ್ಸರಿ ಅನ್ನು ಕೂಡ ತೆರೆಯಲಾಗಿದೆ. ಗಿಡಮರಗಳನ್ನು ಬೆಳೆಸಿ ಸಂರಕ್ಷಿಸುವುದಕ್ಕೆ ಪಂಚಾಯ್ತಿ ಹೆಚ್ಚಿನ ಆದ್ಯತೆ ನೀಡಲಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಗ್ರಾಪಂ ಕಾರ್ಯ ಕೇವಲ ಒಳಚರಂಡಿ, ರಸ್ತೆ ನಿರ್ಮಾಣ ಮಾಡುವುದು ಅಷ್ಟೇ ಅಲ್ಲ. ಪರಿಸರದ ಬಗ್ಗೆ ಕಾಳಜಿ ತೋರುವುದು ಸೇರಿದೆ. ಆ ಹಿನ್ನೆಲೆಯಲ್ಲೆ ಇದೀಗ ಗ್ರಾಪಂನ ಶಾಲಾ ವಿದ್ಯಾರ್ಥಿಗಳಲ್ಲಿ ಪರಿಸರದತ್ತ ಆಕರ್ಷಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಿದೆ. ಮುಂದಿನಗಳಲ್ಲಿ ಸ್ಮಶಾನ ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿ ಗಿಡಗಳನ್ನು ನೆಡುವ ಆಲೋಚನೆ ಇದೆ. – ರಾಜೇಶ್‌, ಪಿಡಿಒ, ಹೂಸ್ಕೂರ್‌ ಗ್ರಾಪಂ

-ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next