Advertisement

ನೀರಾವರಿಗೆ 13 ಸಾವಿರ ಕೋಟಿ ರೂ. ವೆಚ್ಚ: ಪಾಟೀಲ

03:06 PM Aug 02, 2017 | |

ವಿಜಯಪುರ: ಮುಳವಾಡ ಏತ ನೀರಾವರಿ ಯೋಜನೆ, ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ಸೇರಿದಂತೆ ವಿವಿಧ ನೀರಾವರಿ ಯೋಜನೆಗಳಡಿ ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಜಿಲ್ಲೆಯಲ್ಲಿ ಹದಿಮೂರುವರೆ ಸಾವಿರ ಕೋಟಿ ರೂ. ವೆಚ್ಚದ ನೀರಾವರಿ ಯೋಜನೆ ಕೈಗೊಂಡು 15.75 ಲಕ್ಷ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಜಲ ಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ| ಎಂ.ಬಿ. ಪಾಟೀಲ ಹೇಳಿದರು.

Advertisement

ಮಂಗಳವಾರ ಮುಳವಾಡ ಏತ ನೀರಾವರಿ ಯೋಜನೆ-3ರ ಹಂತದ ಮಲಘಾಣ ಪಶ್ಚಿಮ ಕಾಲುವೆ ಕಾಮಗಾರಿ, ಅಕ್ವಾಡೆಕ್ಟ್ ಕಾಮಗಾರಿ, ಬಬಲೇಶ್ವರ ಶಾಖಾ ಕಾಲುವೆ ಸೇರಿದಂತೆ ವಿವಿಧ ಕಾಮಗಾರಿಗಳ ಪರಿವೀಕ್ಷಣೆ ನಡೆಸಿದರು. ಬಳಿಕ ಮಲಘಾಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ನೀರಾವರಿ ಕ್ಷೇತ್ರದಲ್ಲಿ ನಿರೀಕ್ಷೆ ಮೀರಿ ಪ್ರಗತಿ ಸಾಧಿಸಿ ಮುಳವಾಡ ಏತ ನೀರಾವರಿ ಯೋಜನೆ 7 ಸಾವಿರ ಕೋಟಿ ರೂ. ಹಾಗೂ ತುಬಚಿ-ಬಬಲೇಶ್ವರ 3,600 ಕೋಟಿ ರೂ. ವೆಚ್ಚದ ಯೋಜನೆಗಳು ಸೇರಿದಂತೆ ನೀರಾವರಿ ನಿಗಮ ಮತ್ತು ಕೃಷ್ಣಾಭಾಗ್ಯ ಜಲನಿಗಮದಿಂದ 13,500 ಕೋಟಿ ರೂ.ಗೂ ಹೆಚ್ಚು ಹಣ ವ್ಯಯಿಸಲಾಗುತ್ತಿದೆ ಎಂದರು.

ಚಡಚಣ ನೀರಾವರಿ ಯೋಜನೆಗೆ ಈಗಾಗಲೇ ಟೆಂಡರ್‌ ಕರೆಯಲಾಗಿದೆ. ಬೂದಿಹಾಳ-ಪೀರಾಪುರ ಯೋಜನೆ ಕಾಮಗಾರಿ ಶೀಘ್ರವೇ ಆರಂಭಗೊಳ್ಳಲಿದೆ. ನಾಗರಬೆಟ್ಟ ಯೋಜನೆಗೆ ಮುಂಬರುವ ಸಚಿವ ಸಂಪುಟದಲ್ಲಿ ಆಡಳಿತಾತ್ಮಕ ಅನುಮೋದನೆ ಪಡೆಯಲಾಗುವುದು. ಆಲಮಟ್ಟಿ ಶಾಸ್ತ್ರೀ ಜಲಾಶಯ ಎತ್ತರ ಹೆಚ್ಚಿಸಲು ಬರುವ 3 ವರ್ಷಗಳ ಅವಕಾಶ ಬೇಕು. ಆದರೆ ತ್ವರಿತವಾಗಿ ಜಿಲ್ಲೆಯ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಮುಳವಾಡ ಏತ ನೀರಾವರಿ ಯೋಜನೆ ಹಂತ-3ರಡಿಯಲ್ಲಿ 54.43 ಟಿಎಂಸಿ ಅಡಿ ನೀರು ಬಳಸಿಕೊಂಡು 5,63,304 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಕಾಮಗಾರಿ ಭರದಿಂದ ಸಾಗಿದೆ. ಮಸೂತಿ ಡೆಲಿವರಿ ಚೇಂಬರ್‌-3ರ ನಂತರ ಕಾಲುವೆ ಜಾಲ ಕೊನೆಯ ಮಸೂತಿ ಗ್ರಾಮದಲ್ಲಿರುವ
ವೈ ಜಂಕ್ಷನ್‌ದಿಂದ ವಿಜಯಪುರ ಮುಖ್ಯ ಕಾಲುವೆ 4ನೇ ಬಿ ಲಿಫ್ಟ್‌ದಿಂದ ಹಾಗೂ ಮಲಘಾಣ ಪಶ್ಚಿಮ ಕಾಲುವೆಯಿಂದ 4ನೇ ಎ ಲಿಫ್ಟ್‌ದಿಂದ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ ಎಂದರು.

ಮಲಘಾಣ ಪಶ್ಚಿಮ ಕಾಲುವೆಯ 118 ಕಿ.ಮೀ. ಕಾಲುವೆ  ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ವಿದ್ಯುತ್‌ ಸಂಪರ್ಕ ಜಾಲ ತ್ವರಿತ ಕ್ರಮಕ್ಕೆ ಅ ಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬರುವ ದಿನಗಳಲ್ಲಿ ಹಂತ-ಹಂತವಾಗಿ ಮುಳವಾಡ, ಮಸೂತಿ-1, 2, ಮಲಘಾಣ, ರೋಣಿಹಾಳ,
ಕಲಗುರ್ಕಿ ಭಾಗಕ್ಕೆ ಶೀಘ್ರವೇ ನೀರು ಹರಿಸಲಾಗುತ್ತದೆ ಎಂದರು. 

Advertisement

ಈ ವೇಳೆ ಸಚಿವರು ವಿವಿಧ ರೈತರ ಸಮಸ್ಯೆಗಳನ್ನು ಆಲಿಸಿ, ಕಾಲುವೆ ಜಾಲ ಮೂಲಕ ನೀರು ಸರಬರಾಜು ಸಂದರ್ಭದಲ್ಲಿ ಅವಶ್ಯಕತೆ ಇರುವ ಕಡೆ ಸಮಸ್ಯೆಗಳಿಗೆ ಸ್ಪಂದಿಸಿ ತಾತ್ಕಾಲಿಕವಾಗಿ ಕೆರೆಗಳನ್ನು ತುಂಬಿಸಲಾಗುವುದು. ವಿಶೇಷವಾಗಿ ರೈತರ ಬೇಡಿಕೆಯನ್ವಯ ಮಸೂತಿಯ 2 ಕೆರೆಗಳನ್ನು
ತಾತ್ಕಾಲಿಕವಾಗಿ ತುಂಬಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ ಸಚಿವರು, ಈ ಕಾಲುವೆ ನಿರ್ಮಾಣ ಸಂದರ್ಭದಲ್ಲಿ ರೈತರು ನೀಡಿರುವ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.

ಸಚಿವರ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಹಾಂತೇಶ ಬಿರಾದಾರ, ಜಿಪಂ ಸದಸ್ಯ ಉಮೇಶ ಕೋಳಕೂರ, ಸೋಮನಾಥ ಕಳ್ಳಿಮನಿ, ಅಪ್ಪಣ್ಣ ಐಹೊಳೆ, ಆಲಮಟ್ಟಿ ಮುಖ್ಯ ಅಭಿಯಂತರ ಜಗನ್ನಾಥ ರೆಡ್ಡಿ, ಅಧೀಕ್ಷಕ ಅಭಿಯಂತರ ಎಸ್‌.ಎಸ್‌. ಮಂಜಪ್ಪ, ಬಬಲೇಶ್ವರ ಕಾರ್ಯನಿರ್ವಾಹಕ ಅಭಿಯಂತರ ಶಂಕರ ರಾಠೊಡ, ಇಇ ಪಿ.ಕೆ. ಶಂಕರ, ಎಸ್‌ಎಲ್‌ಒ ಸೋಮಲಿಂಗಪ್ಪ ಗೆಣ್ಣೂರ, ತಹಶೀಲ್ದಾರ್‌ ಎಂ.ಎನ್‌. ಚೋರಗಸ್ತಿ, ಪುನರ್ವಸತಿ ಅಧಿಕಾರಿ ಮಲ್ಲಿಕಾರ್ಜುನ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next