Advertisement

ಮನೋಜ್‌ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ

11:55 AM Dec 08, 2018 | Team Udayavani |

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಆವರಣದಲ್ಲಿರುವ ಹೈಪರ್‌ಸಾನಿಕ್‌ ಮತ್ತು ಶಾಕ್‌ ವೇವ್‌ ರಿಸರ್ಚ್‌ ಸೆಂಟರ್‌ನ ಪ್ರಯೋಗಾಲಯದಲ್ಲಿ ಸಂಭವಿಸಿದ ಆಕಸ್ಮಿಕ ಸ್ಫೋಟದಲ್ಲಿ ಮೃತಪಟ್ಟ ಸಂಶೋಧಕ ಪಿ.ಮನೋಜ್‌ ಕುಮಾರ್‌ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರವನ್ನು ಐಐಎಸ್ಸಿ ಘೋಷಿಸಿದೆ.

Advertisement

ಈ ಕುರಿತು ಶುಕ್ರವಾರ ಪತ್ರಿಕಾ ಪ್ರಕಟಣೆ ನೀಡಿರುವ ಐಐಎಸ್ಸಿ, ಆಕಸ್ಮಿಕ ಸ್ಫೋಟದಲ್ಲಿ ಪಿ.ಮನೋಜ್‌ ಮೃತಪಟ್ಟ ಬಗ್ಗೆ ತೀವ್ರ ಸಂತಾಪವಿದೆ. ಮಾನವೀಯತೆ ಆಧಾರದಲ್ಲಿ ಸಂಸ್ಥೆಯಿಂದ, ಮನೋಜ್‌ ಅವರ ಪತ್ನಿಗೆ 10 ಲಕ್ಷ ರೂ. ಪರಿಹಾರ ಬಿಡುಗಡೆ ಮಾಡಲಾಗಿದೆ. ದುರ್ಘ‌ಟನೆಯಲ್ಲಿ ಗಾಯಗೊಂಡಿರುವ ನರೇಶ್‌, ಕಾರ್ತಿಕ್‌ ಮತ್ತು ಅತುಲ್ಯ ಅವರ ಚಿಕಿತ್ಸಾ ವೆಚ್ಚ ವಿಮೆ ಮೊತ್ತ ಮೀರಿದರೆ ಸಂಸ್ಥೆಯಿಂದ ಭರಿಸಲಾಗುವುದು ಎಂದು ತಿಳಿಸಿದೆ.

ಎಂ.ಎಸ್‌.ರಾಮಯ್ಯ ಆಸ್ಪತ್ರೆಗೆ ಭೇಟಿ ನೀಡಿದ ಸಂಸ್ಥೆಯ ಹಿರಿಯ ಅಧಿಕಾರಿಗಳು, ನರೇಶ್‌, ಕಾರ್ತಿಕ್‌ ಮತ್ತು ಅತುಲ್ಯ ಅವರ ಆರೋಗ್ಯದ ಮಾಹಿತಿ ಪಡೆದುಕೊಂಡಿದ್ದು, ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ. ನರೇಶ್‌ ಕುಮಾರ್‌ ಮತ್ತು ಕಾರ್ತಿಕ್‌ ಶೆಣೈ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ.

ಕಾರ್ತಿಕ್‌ ಶೆಣೈಗೆ ರಕ್ತದ ಅಗತ್ಯವಿದ್ದು, ರಕ್ತ ನೀಡಲಾಗುವುದು. ಅತುಲ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಅವರನ್ನು ಶುಕ್ರವಾರ ರಾತ್ರಿ ವಾರ್ಡ್‌ಗೆ ಸ್ಥಳಾಂತರಿಸಲಾಗುವುದು ಎಂದು ಎಂ.ಎಸ್‌ ರಾಮಯ್ಯ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next