ತುಮಕೂರು: ರೌಡಿಶೀಟರ್ ಉಚ್ಚೆಮಂಜ ಕೂಲೆ ಪ್ರಕರಣದ ಆರೋಪಿಗಳ ಪತ್ತೆಗಾಗಿ ಮುಂದಾಗಿದ್ದ ಪೊಲೀಸರ ಮೇಲೆ ಡ್ರಾಗರ್ ನಿಂದ ಹಲ್ಲೆಗೆ ಮುಂದಾದ ರೌಡಿಶೀಟರ್ ಓರ್ವನ ಕಾಲಿಗೆ ಗುಂಡು ಹಾರಿಸಿದ ಘಟನೆ ರವಿವಾರ ಮುಂಜಾನೆ ನಡೆದಿದೆ.
ಗುಬ್ಬಿ ತಾಲೂಕಿನ ಗೌರಿ ಪುರದ ರೌಡಿಶೀಟರ್ ವಿಕಾಸ್ ಅಲಿಯಾಸ್ ವಿಕ್ಕಿ (24) ಗಾಯಗೊಂಡಿರುವ ಆರೋಪಿ. ಈತನನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ನಗರದಲ್ಲಿ ರೌಡಿ ಶೀಟರ್ ಉಚ್ಚೆ ಮಂಜ ಕೊಲೆ ಕೇಸಿಗೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆ ಹಚ್ಚಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಸಿಕೃಷ್ಣ ಅವರು ಮೂರು ತಂಡಗಳನ್ನು ರಚಿಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಈ ಸಂಬಂಧ ಭಾನುವಾರ ಬೆಳಗಿನ ಜಾವ 5:30 ರ ಸುಮಾರಿಗೆ ಒಬ್ಬ ಆರೋಪಿಯು ತುಮಕೂರು ಗ್ರಾಮಾಂತರ ಸರಹದ್ದಿನ ಅಜ್ಜಪ್ಪನಹಳ್ಳಿ ನೂತನವಾಗಿ ನಿರ್ಮಾಣವಾಗುತ್ತಿರುವ ಸಮುದಾಯ ಭವನದಲ್ಲಿ ಇರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣ ಅಲ್ಲಿಗೆ ತೆರಳಿದ್ದರು.
ತಿಲಕ್ ಪಾರ್ಕ್ ಠಾಣೆಯ ಪಿಎಸ್ಐ ನವೀನ್ ಹಾಗೂ ಸಿಬ್ಬಂದಿಗಳು ಆರೋಪಿಯನ್ನು ಬಂಧಿಸಲು ಹೋದಾಗ, ಆರೋಪಿಯು ಎಎಸ್ಐ ಪರಮೇಶ್ವರ ರವರಿಗೆ ತನ್ನ ಬಳಿಯಿದ್ದ ಡ್ರಾಗರ್ ನಿಂದ ಹಲ್ಲೆ ಮಾಡಿದ್ದು,ಪರಮೇಶ್ವರ ಅವರ ಎಡಗೈ ತೋಳಿಗೆ ಮಾರಣಾಂತಿಕ ಗಾಯವಾಗಿದೆ.
ಇದನ್ನೂ ಓದಿ:ಹಿರಿಯೂರು ಬಳಿ ಕೆಎಸ್ಆರ್ಟಿಸಿ ಬಸ್ ಪಲ್ಟಿ: ಬಾಲಕಿ ಸೇರಿ ಇಬ್ಬರ ದುರ್ಮರಣ
ಆರೋಪಿಯು ಮತ್ತೊಬ್ಬ ಸಿಬ್ಬಂದಿಯ ಬಳಿ ದಾಳಿ ನಡೆಸಲು ಬಂದಾಗ, ಪಿಎಸ್ಐ ನವೀನ್ ಶರಣಾಗುವಂತೆ ಹೇಳಿ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಸಿದ್ದರು. ಆದರೆ ಅವರ ಮಾತನ್ನು ಧಿಕ್ಕರಿಸಿದ ಆರೋಪಿ ವಿಕ್ಕಿ ಮತ್ತೆ ಹಲ್ಲೆಗೆ ಮುಂದಾದಾಗ ಪಿಎಸ್ಐ ನವೀನ್ ಅವರು ಆರೋಪಿಯ ಎಡಗಾಲಿಗೆ ಗುಂಡು ಹಾರಿಸಿ ಆತನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡಿರುವ ಎಎಸ್ಐ ಪರಮೇಶ್ವರ ಅವರಿಗೂ ಚಿಕಿತ್ಸೆ ನೀಡಲಾಗುತ್ತಿದೆ.
ಆಸ್ಪತ್ರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಸಿಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.