Advertisement

ರೊಟ್ಟಿ ಪಂಚಮಿ ಸಡಗರ-ಸಂಭ್ರಮ

12:01 PM Aug 04, 2019 | Suhan S |

ಗದಗ: ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರ ಸಡಗರ-ಸಂಭ್ರಮದಿಂದ ರೊಟ್ಟಿ ಪಂಚಮಿ ಆಚರಿಸಲಾಯಿತು.

Advertisement

ನಗರದ ಗಂಗಾಪುರ ಪೇಟೆ, ಪಂಚಾಕ್ಷರ ನಗರ, ಸಿದ್ಧಲಿಂಗ ನಗರ, ಬೆಟಗೇರಿ ಸೇರಿದಂತೆ ಅವಳಿ ನಗರದ ಮಹಿಳೆಯರು ರೊಟ್ಟಿ ಪಂಚಮಿ ನಿಮಿತ್ತ ದೇವರಿಗೆ ನೈವೇದ್ಯ ಅರ್ಪಿಸಿ ಭಕ್ತಿ ಸಮರ್ಪಿಸಿದರು.

ಬಳಿಕ ಎಣ್ಣೆಗಾಯಿ, ಹೆಸರು, ಮಡಕೆ ಕಾಳು ಪಲ್ಯ, ಉಸುಳಿ, ಮೊಸರಿನ ಉಂಡೆ, ಶೇಂಗಾ-ಗುರೆಳ್ಳು ಚಟ್ನಿಯೊಂದಿಗೆ ಎಳ್ಳು ಹಚ್ಚಿದ ಸಜ್ಜೆ, ಜೋಳದ ಖಡಕ್‌ ರೊಟ್ಟಿಯನ್ನು ನೆರೆಮನೆಯವರೊಂದಿಗೆ ಪರಸ್ಪರ ಹಂಚಿಕೊಂಡರು.

ವಾರದ ಮೊದಲೇ ಸಿದ್ಧತೆ: ಉತ್ತರ ಕರ್ನಾಟಕದಲ್ಲಿ ನಾಗರ ಪಂಚಮಿ ಅಂಗವಾಗಿ ರೊಟ್ಟಿ ಪಂಚಮಿಯನ್ನು ವಿಶೇಷವಾಗಿ ಆಚರಿಸುವ ಸಂಪ್ರದಾಯವಿದೆ. ಪಂಚಮಿ ಸಮೀಪ ಬರುತ್ತಿದ್ದಂತೆ ಪ್ರತಿ ಮನೆ-ಮನೆಗಳಲ್ಲೂ ಸಜ್ಜೆ, ಜೋಳದ ಖಡಕ್‌ ರೊಟ್ಟಿ ತಯಾರಿಸುತ್ತಾರೆ. ಅದರೊಂದಿಗೆ ಶೇಂಗಾ, ಎಳ್ಳು, ಪುಟಾಣಿ ಚಟ್ನಿ ತಯಾರಿಸಲಾಗುತ್ತದೆ.

ಜೊತೆಗೆ ಚುರುಮುರಿ ಉಂಡಿ, ದಾಣಿ, ಗುಳ್ಳಅಡಕಿ, ರವಾ, ಬೇಸನ್‌, ಲಡಗಿ, ಹೆಸರು, ಅಂಟಿನ, ಖರ್ಜಿಕಾಯಿ, ಶಂಕರಪೊಳೆ, ಬಾದುಷಾ, ಮಾದ್ಲಿ ಸೇರಿದಂತೆ ಇನ್ನಿತರೆ ಸಿಹಿ ಖಾದ್ಯಗಳನ್ನು ತಯಾರಿಸುತ್ತಾರೆ. ಚಕ್ಕುಲಿ, ಕೋಡುಬಳೆ, ಚೂಡಾ, ಅವಲಕ್ಕಿಯಂತಹ ಖಾರದ ಪದಾರ್ಥಗಳು ಇರುತ್ತವೆ. ಇದೇ ಸಂದರ್ಭ ಮಕ್ಕಳು ಗೋಲಬಗರಿ ಆಡಿ ನಲಿದಾಡಿದರೇ, ಮಹಿಳೆಯರು, ಹೆಣ್ಣು ಮಕ್ಕಳು ಜೋಕಾಲಿ ಜೀಕಿ ಹಬ್ಬದ ಸಂಭ್ರಮ ಸವಿದರು.

Advertisement

ನಾಗರ ಪಂಚಮಿ ಬಲು ತುಟ್ಟಿ:

ಗಜೇಂದ್ರಗಡ: ಅಗತ್ಯ ವಸ್ತುಗಳ ಬೆಲೆ ಏರಿಕೆ ಮಧ್ಯೆ ನಾಗರ ಪಂಚಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲು ಮಹಿಳೆಯರು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಕಡ್ಲಿಗರ ಹುಣ್ಣಿಮೆ ಕಳೆದು ನಾಗರ ಪಂಚಮಿ ಬರುವಿಕೆಗೆ ವಾರ ಉಳಿಯುವಷ್ಟರಲ್ಲಿ ಜನರು ಆಗಲೇ ಹಬ್ಬದ ಆಚರಣೆಗೆ ಬೇಕಾದ ಆಹಾರ ಪದಾರ್ಥಗಳ ಖರೀದಿಗಾಗಿ ಮಾರುಕಟ್ಟೆಗೆ ಧಾವಿಸುವ ದೃಶ್ಯ ಸಾಮಾನ್ಯವಾಗಿರುತ್ತಿತ್ತು. ಆದರೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವುದರಿಂದ ಹಬ್ಬದ ಸಡಗರಕ್ಕೆ ಬೆಲೆ ಏರಿಕೆ ಕಾರ್ಮೋಡ ಕವಿದಿದೆ.

ಹಬ್ಬದ ಉಂಡೆಗಳನ್ನು ತಯಾರಿಸಲು ಬೇಕಾದ ಒಣ ಕೊಬ್ಬರಿ ಕೆಜಿಗೆ 200 ರೂ., ಶೇಂಗಾ 110 ರೂ., ಪುಟಾಣಿ 80 ರೂ., ಸಕ್ಕರೆ 40 ರೂ., ಬೆಲ್ಲ 50 ರೂ., ರವೆ 35 ರೂ., ತುಪ್ಪ 500 ರೂ. ಇದೆ. ಮಾರುಕಟ್ಟೆಯಲ್ಲಿ ಆಹಾರ ಪದಾರ್ಥಗಳ ಬೆಲೆ ಕೇಳಿದರೆ ನಡುಕ ಶುರುವಾಗುತ್ತದೆ. ಇಂತಹ ತುಟ್ಟಿ ದಿನದಲ್ಲಿ ಹಬ್ಬ ಹರಿದಿನ ಆಚರಿಸುವುದಾದರೂ ಹೇಗೆ ಎನ್ನುವುದು ಜನಸಾಮಾನ್ಯರ ಪ್ರಶ್ನೆಯಾಗಿದೆ.

ನಾಗರ ಪಂಚಮಿ ಎಂದರೆ ಅದು ಬರೀ ಒಂದು ಹಬ್ಬವಲ್ಲ. ಊಟ-ಉಪಹಾರದ ಅಬ್ಬರ. ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಶ್ರಾವಣದ ಮೊದಲ ಹಬ್ಬವನ್ನು ಬರಮಾಡಿಕೊಳ್ಳುವ ಬಗೆಯೇ ವಿಶಿಷ್ಟ. ಪಂಚಮಿಯಲ್ಲಿ ಹೆಂಗಳೆಯರು ಬಗೆಬಗೆಯ ಉಂಡಿ ತಯಾರಿಸಿ ನೈವೇದ್ಯವಾಗಿಡುತ್ತಾರೆ.

ಪಂಚಮಿ ಹಬ್ಬ ಬಂತೆಂದರೆ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಮನೆಯಲ್ಲಿ ಹಾಗೂ ಊರಿನ ಪ್ರಮುಖ ಬೀದಿಗಳಲ್ಲಿ ಜೋಕಾಲಿ ಕಟ್ಟಿ ಆಡುವುದು ವಿಶೇಷ. ಆದರೆ ಇತ್ತೀಚಿನ ದಿನಗಳಲ್ಲಿ ಇಂತಹ ಸಂಪ್ರದಾಯ ನಶಿಸುತ್ತಿರುವುದು ವಿಪರ್ಯಾಸ.

ಮಹಿಳೆಯರಿಂದ ಪರಸ್ಪರ ರೊಟ್ಟಿ ವಿನಿಮಯ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ನಾಗರ ಪಂಚಮಿ ಮುನ್ನಾ ದಿನವಾದ ಶನಿವಾರ ರೊಟ್ಟಿ ಪಂಚಮಿಯನ್ನು ಮಹಿಳೆಯರು ವಿಜೃಂಭಣೆಯಿಂದ ಆಚರಿಸಿದರು.

ಪಂಚಮಿ ಹಬ್ಬದ ರೊಟ್ಟಿ ಸಂಭ್ರಮ ಉತ್ತರ ಕರ್ನಾಟಕದ ಹಬ್ಬ ಹರಿದಿನಗಳಲ್ಲಿ ವಿಶೇಷತೆ ಪಡೆದುಕೊಂಡಿದೆ. ನಾಗರ ಪಂಚಮಿ ಮುನ್ನಾ ದಿನವನ್ನು ರೊಟ್ಟಿ ಹಬ್ಬ ಎಂದು ಆಚರಿಸಲಾಗುತ್ತದೆ. ಪ್ರತಿವರ್ಷ ಮುಂಗಾರು ಮಳೆ ಅನ್ನದಾತನಿಗೆ ಅನುಕುಲವಾಗುಷ್ಟು ಸುರಿದು ಕೃಷಿ ಭೂಮಿಯಲ್ಲಿ ಬೆಳೆದ ಬೆಳೆಗಳ ಮೊದಲ ಫಸಲಿನ ಸಂತಸವನ್ನು ರೊಟ್ಟಿ ಮತ್ತು ವಿವಿಧ ತರಕಾರಿ ಹಾಗೂ ಕಾಳುಗಳ ಪಲ್ಯದೊಂದಿಗೆ ಎಲ್ಲರೂ ಪರಸ್ಪರ ಹಂಚಿಕೊಳ್ಳುವುದು ಈ ರೊಟ್ಟಿ ಹಬ್ಬದ ವಿಶೇಷತೆ.

ಅದರಂತೆ ನಾಗ ಪಂಚಮಿ ಮುನ್ನದಿನ ಬೆಳಗ್ಗೆ ಮನೆಯನ್ನು ಶುದ್ಧಗೊಳಿಸಿ ಮನೆ ಮಂದಿಯೆಲ್ಲ ಅಭ್ಯಂಗ ಸ್ನಾನ ಮಾಡಿ, ಮನೆ ಮುಂದೆ ವಿವಿಧ ರೀತಿಯಲ್ಲಿ ಬಣ್ಣ ಬಣ್ಣದ ರಂಗೋಲಿಯಿಂದ ಅಂಗಳವನ್ನು ಅಲಂಕಾರಗೊಳಿಸಿದರು. ಎಲ್ಲರೂ ಮನೆಗಳಲ್ಲಿ ಜೋಳದ ರೊಟ್ಟಿ, ಸಜ್ಜಿ ರೊಟ್ಟಿ, ಮೊಸರು ಚಟ್ನಿ, ಶೇಂಗಾ ಚಟ್ನಿ ಹೀಗೆ ವಿವಿಧ ಬಗೆಯ ಖಾದ್ಯಗಳನ್ನು ರೊಟ್ಟಿ ಹಬ್ಬದ ಸಡಗರಕ್ಕೆಂದು ತಯಾರಿಸಿ ಸುತ್ತಲಿನ ಮನೆಯವರೊಂದಿಗೆ ಪರಸ್ಪರ ವಿನಿಮಯ ಮಾಡಿಕೊಂಡರು.

ಹೊಸದಾಗಿ ಮದುವೆಯಾದ ಎಲ್ಲ ಮಹಿಳೆಯರು ತವರು ಮನೆಗೆ ಆಗಮಿಸಿ ಕುಟುಂಬದವರೊಂದಿಗೆ ಭೋಜನ ಸವಿದು ಸಂಭ್ರಮದಿಂದ ಆಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next