Advertisement

ಹಳೇ ವಿದ್ಯಾರ್ಥಿಗಳಿಂದ ಮಾದರಿ ಸೇವೆ

11:06 AM Dec 21, 2019 | Suhan S |

ಹುಬ್ಬಳ್ಳಿ: ಅಂಗವಿಕಲ ಮಕ್ಕಳ ಹಾಗೂ ಸರಕಾರಿ ಶಾಲೆಗಳ ಅಭಿವೃದ್ಧಿಯನ್ನೇ ಗುರಿಯನ್ನಾಗಿಸಿಕೊಂಡು ನಗರದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘವೊಂದು ರಚನಾತ್ಮಕ ಕಾರ್ಯವನ್ನು ಸದ್ದಿಲ್ಲದೆ ಮಾಡುತ್ತಿದೆ.

Advertisement

ಸಿದ್ಧಾರೂಢ ಮಠ ಸುತ್ತಮುತ್ತಲಿನ ಶಾಲೆಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಕಲಿತಿರುವವರೇ ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಬೇಕು ಹಾಗೂ ಬಡ-ಅಂಗವಿಕಲ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕೆಂಬ ಉತ್ಕಟ ಇಚ್ಛೆ, ಗುರಿ ಇಟ್ಟುಕೊಂಡು “ಶ್ರೀ ಸದ್ಗುರು ಸಿದ್ಧಾರೂಢ ಹಳೇ ವಿದ್ಯಾರ್ಥಿಗಳ ಸಂಘ’ ಸ್ಥಾಪಿಸಿದ್ದಾರೆ. ಆ ಮೂಲಕ 3 ವರ್ಷಗಳಿಂದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ.

ಹನ್ನೊಂದು ಆಡಳಿತ ಮಂಡಳಿ ಸದಸ್ಯರು ಸೇರಿ ಸುಮಾರು 77 ಸದಸ್ಯರನ್ನು ಹೊಂದಿರುವ ಸಂಘದಲ್ಲಿ ಆಟೋ ಚಾಲಕರು, ಪೇಂಟರ್, ಎಂಜಿನಿಯರ್‌, ಗುತ್ತಿಗೆದಾರ, ಸರಕಾರಿ ನೌಕರ, ವ್ಯಾಪಾರಸ್ಥ, ವೈದ್ಯ, ಗಾಯಕ, ಕಲಾವಿದ, ಪೊಲೀಸ್‌ ಆಗಿದ್ದಾರೆ. ಇವರೆಲ್ಲ ತಮಗೆ ಬರುವ ಸಂಬಳ, ಆದಾಯದಲ್ಲಿನ ಒಂದಿಷ್ಟು ಹಣ ಕೂಡಿಟ್ಟು ಸರಕಾರಿ ಶಾಲೆಗಳ ಅಭಿವೃದ್ಧಿ, ಅಂಗವಿಕಲ ಮಕ್ಕಳು ಹಾಗೂ ಅನಾಥರು, ವೃದ್ಧರಿಗೆ ಸಹಾಯ ಮಾಡುತ್ತಿದ್ದಾರೆ. ಅಲಿಸಾ ಮಿರ್ಜಿ ಸಂಘದ ಚೇರ್ಮೇನ್ ಆಗಿದ್ದಾರೆ.

ಸ್ವಚ್ಛತೆಗೆ ಆದ್ಯತೆ: ಸಂಘದವರು ಈಗಾಗಲೇ ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ವಿದ್ಯಾರ್ಥಿಘಳ ಸಹಕಾರದಿಂದ ನಗರದಲ್ಲಿ ದುರಸ್ತಿಯಲ್ಲಿದ್ದ ಹಾಗೂ ಬಣ್ಣವಿಲ್ಲದೆ ಕಳೆಗುಂದಿದ್ದ ನಾಲ್ಕು ಸರಕಾರಿ ಶಾಲೆಗಳಲ್ಲಿ ಪ್ರತ್ಯೇಕವಾಗಿ ಬಾಲಕ, ಬಾಲಕಿಯರಿಗೆ ಶೌಚಾಲಯ ನಿರ್ಮಿಸಿದ್ದಾರೆ. ಶಾಲೆಯ ಕಟ್ಟಡಗಳನ್ನು ಬಣ್ಣ ಹಚ್ಚಿ ಶೃಂಗಾರಗೊಳಿಸಿದ್ದಾರೆ. ಕಾಂಪೌಂಡ್‌ ನಿರ್ಮಿಸಿದ್ದಾರೆ. ಆವರಣದ ಸುತ್ತಲೂ ಸಸಿನೆಟ್ಟು ಪೋಷಿಸುತ್ತಿದ್ದಾರೆ. ಮಕ್ಕಳಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಚಿತ್ರಗಳನ್ನು ಬಿಡಿಸಿದ್ದಾರೆ. ಸ್ವತ್ಛತೆಗೆ ಆದ್ಯತೆ ನೀಡುತ್ತಿರುವ ಕಾರ್ಮಿಕರನ್ನು ಗುರುತಿಸಿ ಸನ್ಮಾನಿಸುತ್ತಿದ್ದಾರೆ.

ಶಿವರಾತ್ರಿ ವೇಳೆ ಸಿದ್ಧಾರೂಢಸ್ವಾಮಿ ಜಾತ್ರೋತ್ಸವದಂದು ಬಡವರಿಗೆ ಹಣ್ಣು-ಹಂಪಲ, ನೀರು ವಿತರಿಸುತ್ತಿದ್ದಾರೆ. ರಂಜಾನ ವೇಳೆ ಪ್ರಾರ್ಥನೆಗೆ ಬಂದವರಿಗೆ ನೀರು ವಿತರಿಸುತ್ತಿದ್ದಾರೆ. ಸದ್ಗುರು ಶ್ರೀ ಗುರುನಾಥಾರೂಢರು ಕಲಿತ 120 ವರ್ಷ ಪೂರೈಸಿದ ಹಳೇಹುಬ್ಬಳ್ಳಿ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆ ನಂ. 1 ಅನ್ನು ಹಡಗು ಮಾದರಿಯಲ್ಲಿ ಬಣ್ಣ ಬಳಿದು ಕಂಗೊಳಿಸಿದ್ದಾರೆ. ಕಾರವಾರ ರಸ್ತೆ ವಿದ್ಯುತ್‌ ನಗರದ ಗ್ರಿಡ್‌ ಸರಕಾರಿ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ನಂ.9ರ ಆವರಣ ಗೋಡೆಯನ್ನು ರೈಲು ಎಂಜಿನ್‌, ಬೋಗಿಗಳ ಮಾದರಿಯಲ್ಲಿ ಬಣ್ಣ ಹಚ್ಚಿ ಹಾಗೂ ಟೈರ್‌ ಗಳಲ್ಲಿ ಗಿಡನೆಟ್ಟು ಶೃಂಗಾರಗೊಳಿಸಿದ್ದಾರೆ.

Advertisement

ಹೆಗ್ಗೇರಿಯ ಶ್ರೀ ಮಂಜುನಾಥ ಪ್ರೌಢಶಾಲೆ ಹಾಗೂ ಗೋಕುಲ ರಸ್ತೆ ಬಸವೇಶ್ವರ ನಗರದ ಸರಕಾರಿ ಶಾಲೆಯ ಕಟ್ಟಡವನ್ನು ಬಣ್ಣ ಹಚ್ಚಿ ಕಂಗೊಳಿಸಿದ್ದಾರೆ. ಬಸವೇಶ್ವರ ನಗರದಲ್ಲಿ ಬಿದ್ದಿದ್ದ ಶಾಲೆಯ ಕಾಂಪೌಂಡ್‌ ಅನ್ನು ಕಟ್ಟಿದ್ದಾರೆ. ಹೆಗ್ಗೇರಿಯ ಮಂಜುನಾಥ ಹೈಸ್ಕೂಲ್‌ ಹಾಗೂ ಹಳೇಹುಬ್ಬಳ್ಳಿ ಸರಕಾರಿ ಶಾಲೆ ನಂ. 1ರ ಆವರಣ ಗೋಡೆಗಳನ್ನು ಅಭಿವೃದ್ಧಿಗೊಳಿಸಲು ಮುಂದಾಗಿದ್ದಾರೆ.

ಶ್ರಮದಾನ ಮೂಲಕ ಶಾಲೆ ಅಭಿವೃದ್ಧಿ: ಶ್ರೀ ಸದ್ಗುರು ಸಿದ್ಧಾರೂಢ ಹಳೇ ವಿದ್ಯಾರ್ಥಿಗಳ ಸಂಘದಲ್ಲಿ ಪೇಂಟರ್‌, ಗುತ್ತಿಗೆದಾರರು ಇರುವುದರಿಂದ ಅವರೇ ಆ ಶಾಲೆಯಲ್ಲಿ ಕೈಗೊಳ್ಳಬಹುದಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸರ್ವೇ ಮಾಡಿ, ಅಂದಾಜು ವೆಚ್ಚ ಸಿದ್ಧಪಡಿಸಿ ಸ್ವತಃ ತಾವೇ ಶ್ರಮದಾನದ ಮೂಲಕ ಕಡಿಮೆ ವೆಚ್ಚದಲ್ಲಿ ಗುಣಮಟ್ಟದಲ್ಲಿ

ಶಾಲೆ ಅಭಿವೃದ್ಧಿ ಪಡಿಸುತ್ತಿದ್ದಾರೆ. ಸಂಘದವರು ಮಾಡುತ್ತಿರುವ ಕಾರ್ಯ ಮನಗಂಡ ಇನ್ನಿತರೆ ಸರಕಾರಿ ಶಾಲೆಯವರು ತಮ್ಮ ಶಾಲೆಯನ್ನು ಅಭಿವೃದ್ಧಿಗೊಳಿಸಿ ಕೊಡಿ ಎಂದು ಸಂಘದವರಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಈಗಾಗಲೇ ಈ ಸಂಘದವರಿಗೆ ಹುಬ್ಬಳ್ಳಿ, ಕಲಘಟಗಿ, ಚವರಗುಡ್ಡ, ಕೊಪ್ಪಳ ಜಿಲ್ಲೆ ಯಲಬುರ್ಗಾ ಸೇರಿದಂತೆ ಇನ್ನಿತರೆ ಭಾಗಗಳಿಂದ 15ಕ್ಕೂ ಅಧಿಕ ಶಾಲೆಯವರು ಮನವಿ ಮಾಡಿಕೊಂಡಿದ್ದಾರೆ. ಅವುಗಳನ್ನು ಒಂದೊಂದಾಗಿ ಅಭಿವೃದ್ಧಿ ಪಡಿಸಲು ಮುಂದಾಗಿದ್ದಾರೆ.

ಸಂಘದ ಸದಸ್ಯರು 2020ರಲ್ಲಿ ಎಸ್‌.ಎಂ. ಕೃಷ್ಣ ನಗರದ ಸರಕಾರಿ ಕನ್ನಡ ಮಾಧ್ಯಮ ಶಾಲೆ, ಹಳೇಹುಬ್ಬಳ್ಳಿ ಕಿಲ್ಲಾದ ಉರ್ದು ಶಾಲೆ, ಹೆಗ್ಗೇರಿ ಫತೇಶಾ ನಗರದ ಎಲ್‌ಪಿಯುಜಿಸ್‌ ಉರ್ದು ಶಾಲೆ ಸೇರಿದಂತೆ ಐದು ಶಾಲೆಗಳನ್ನಾದರೂ ಅಭಿವೃದ್ಧಿ ಪಡಿಸಬೇಕೆಂಬ ಗುರಿ ಹೊಂದಿದ್ದಾರೆ.

 ಕಲಾ ಪ್ರದರ್ಶನದ ಗಳಿಕೆಯೂ ಸಾಥ್‌:  ಸದ್ಗುರು ಶ್ರೀ ಸಿದ್ಧಾರೂಢ ಹಳೇ ವಿದ್ಯಾರ್ಥಿಗಳ ಸಂಘದವರಲ್ಲಿ ಕೆಲವರು ಹಾಡುಗಾರರಿದ್ದಾರೆ. ಮೆಲೋಡಿ ತಂಡ ರಚಿಸಲಾಗಿದೆ. ಅವರು ಸಭೆ-ಸಮಾರಂಭ, ಮದುವೆ, ಇನ್ನಿತರೆ ಕಾರ್ಯಕ್ರಮಗಳಲ್ಲಿ ರಸಮಂಜರಿ ಕಾರ್ಯಕ್ರಮ ನಡೆಸಿ ಅದರಿಂದ ಬರುವ 8-10 ಸಾವಿರ ರೂ. ಹಣವನ್ನು ಸಂಘದಿಂದ ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಲಾಗುತ್ತದೆ. ಅಲ್ಲದೆ ಸಂಘದ ಕಚೇರಿಯಲ್ಲಿ ಮಕ್ಕಳಿಗೆ ಪ್ರತಿದಿನ ಹಾಡು, ನೃತ್ಯ ಕಲಿಸಲಾಗುತ್ತದೆ. ಸಂಘದಲ್ಲಿ ಸದ್ಗುರು ಸಿದ್ಧಾರೂಢ ಶಾಲೆಯಲ್ಲಿ ಕಲಿತವರೆ ಹೆಚ್ಚಿನ ಸದಸ್ಯರಿದ್ದಾರೆ. ಹಳೆಹುಬ್ಬಳ್ಳಿ ಸರ್ಕಾರಿ ಶಾಲೆ ನಂ. 1ರಲ್ಲಿ ಡಿ. 29ರಂದು ಶಾಲೆಯ 120ನೇ ವಾರ್ಷಿಕೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ಸಂಜೆ ಸಂಘದವರು ಶಾಲೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

 

-ಶಿವಶಂಕರ ಕಂಠಿ

Advertisement

Udayavani is now on Telegram. Click here to join our channel and stay updated with the latest news.

Next