Advertisement

ರಾಕ್‌ಲೈನ್‌ ಇನ್‌ ಬಾಲಿವುಡ್‌!

05:57 PM Oct 23, 2017 | |

ಬಹುಶಃ ಮುಂಬೈನ ಟ್ರೈಡೆಂಟ್‌ ಹೋಟೆಲ್‌ನ ಲಾಬಿಯಲ್ಲಿ ಕುಳಿತು ರಾಕ್‌ಲೈನ್‌ ವೆಂಕಟೇಶ್‌ ಅವರ ಜೊತೆಗೆ ಮಾತಾಡಬಹುದು ಅಂತ ಯಾರು ಊಹೆ ಮಾಡಿರುತ್ತಾರೆ ಹೇಳಿ? ಅಂಥದ್ದೊಂದು ಸಂದರ್ಭ ಕಳೆದ ತಿಂಗಳು ಒದಗಿ ಬಂತು. “ಸೈರಾತ್‌’ ಎಂಬ ಬ್ಲಾಕ್‌ಬಸ್ಟರ್‌ ಮರಾಠಿ ಚಿತ್ರದ ಬಗ್ಗೆ ಕೇಳಿರಬಹುದು ನೀವು. ನಲವತ್ತು ದಿನಗಳಲ್ಲಿ 100 ಕೋಟಿ ಬಾಚಿಕೊಂಡಿರುವ ಆ ಚಿತ್ರವನ್ನು ರಾಕ್‌ಲೈನ್‌ ವೆಂಕಟೇಶ್‌, ಕನ್ನಡ ಸೇರಿದಂತೆ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಿಗೆ ಜೀ ಸ್ಟುಡಿಯೋದವರ ಜೊತೆಗೆ ಸೇರಿ ರೀಮೇಕ್‌ ಮಾಡುತ್ತಿದ್ದಾರೆ. ಅದನ್ನು ಘೋಷಿಸುವುದಕ್ಕೆಂದೇ ಒಂದು ಸಂತೋಷ ಕೂಟ ಆಯೋಜಿಸಿದ್ದರು ಚಿತ್ರತಂಡದವರು ಮತ್ತು ರೀಮೇಕ್‌ ಮಾಡುತ್ತಿರುವ ವಿಷಯವನ್ನು ಹೇಳುವುದಕ್ಕೆ ರಾಕ್‌ಲೈನ್‌ ಸಹ ಮುಂಬೈನಲ್ಲಿದ್ದರು. ಅದನ್ನ ಪತ್ರಿಕಾಗೋಷ್ಠಿ ಎನ್ನುತ್ತೀರೋ ಅಥವಾ ಸಂತೋಷ ಕೂಟ ಎನ್ನುತ್ತೀರೋ ಎನ್ನುವುದು ನಿಮಗೆ ಬಿಟ್ಟ ವಿಚಾರ. ಅದೇನೇ ಆದರೂ ಶುರುವಾಗುವುದು ರಾತ್ರಿ 10ರ ನಂತರ. ಮುಗಿಯುವುದು ಬೆಳಗ್ಗಿನ ಝಾವಕ್ಕೆ. ಪಾರ್ಟಿ ಇನ್ನೂ ಶುರುವಾಗಿರಲಿಲ್ಲ. ಆಯೋಜಕರು ಸಂಪೂರ್ಣವಾಗಿ ಬಂದಿರಲಿಲ್ಲ. ಮುಂದೇನು ಎಂದು ಸರಿಯಾಗಿ ಗೊತ್ತಿರಲಿಲ್ಲ. ಆಗ ಕಾಯುತ್ತಾ ಟ್ರೈಂಡಟ್‌ ಹೋಟೆಲ್‌ನ ಲಾಬಿಯಲ್ಲಿ ಕುಳಿತಿದ್ದಾಯಿತು. ಈ ಚಿತ್ರವನ್ನ ಯಾಕೆ ರೀಮೇಕ್‌ ಮಾಡಬೇಕಂತನಿಸಿತು ಎಂದು ಕೇಳಬೇಕೆನಿಸಿತು. ಪ್ರಶ್ನೆಗೆ ಉತ್ತರ, ಉತ್ತರಕ್ಕೆ ಪ್ರಶ್ನೆ … ಹೀಗೆ ಮುಂದಿನ ಅರ್ಧ ಗಂಟೆ ಹೋಗಿದ್ದೇ ಗೊತ್ತಾಗಲಿಲ್ಲ.

Advertisement

“ಇದೊಂದು ಹೊಸತನ ಪ್ರಾಜೆಕ್ಟ್’ ಎಂದು ಮಾತು ಶುರು ಮಾಡಿದರು ರಾಕ್‌ಲೈನ್‌ ವೆಂಕಟೇಶ್‌. “ಇದು ಎಲ್ಲಾ ಕಡೆ ನಡೆಯುವ ಘಟನೆಯೇ. ಆದರೆ, ಅದನ್ನು ಬಹಳ ಚೆನ್ನಾಗಿ ಮಾಡಿದ್ದಾರೆ. ಬಹಳ ಸೂಕ್ಷ್ಮವಾಗಿ ಹ್ಯಾಂಡಲ್‌ ಮಾಡಿದ್ದಾರೆ. ನಾನು ಸಿನಿಮಾ ನೋಡಿರಲಿಲ್ಲ. ಮುಂಬೈಗೆ ಇತ್ತೀಚೆಗೆ ಯಾವಾಗಲೋ ಬಂದಾಗ, ನೋಡುವ ಅವಕಾಶ ಸಿಕ್ಕಿತು. ಇಷ್ಟ ಆಯ್ತು. ಇದನ್ನು ರೀಮೇಕ್‌ ಮಾಡಿದರೆ, ಚೆನ್ನಾಗಿರುತ್ತದೆ ಎಂದನಿಸಿತು. ಚಿತ್ರ ನಿರ್ಮಿಸಿರುವ ಜೀ ಸ್ಟುಡಿಯೋಸ್‌ಗೆ ಹೋಗಿ ರೈಟ್ಸ್‌ ಕೇಳಿದೆ. ಅವರು ಸಹ ರೀಮೇಕ ಮಾಡಬೇಕೆಂದುಕೊಂಡಿದ್ದರು. ಬನ್ನಿ ಜೊತೆಗೆ ಸೇರಿಕೊಂಡು ರೀಮೇಕ್‌ ಮಾಡೋಣ ಅಂದರು. ಸಾಮಾನ್ಯವಾಗಿ ನಾನು ಪಾರ್ಟ°ರ್‌ಶಿಫ್ನಲ್ಲಿ ಚಿತ್ರ ಮಾಡುವುದಿಲ್ಲ. ಇದರ ಕಥೆ ಚೆನ್ನಾಗಿದೆ ಅನ್ನೋ ಕಾರಣಕ್ಕೆ ಅವರ ಜೊತೆಗೆ ಸೇರಿ ಜಾಯಿಂಟ್‌ ಪ್ರೊಡಕ್ಷನ್‌ ಮಾಡಿದ್ದೀನಿ’ ಎನ್ನುತ್ತಾರೆ ರಾಕ್‌ಲೈನ್‌.

ಇತ್ತೀಚೆಗೆ ರಾಕ್‌ಲೈನ್‌ ಬೆಂಗಳೂರಿಗಿಂತ ಮುಂಬೈ, ಚೆನ್ನೈ ಅಂತಲೇ ಹೆಚ್ಚು ಓಡಾಡುತ್ತಿದ್ದಾರೆ. ಯಾಕೆ? ಇಲ್ಲಿನ ವಾತಾವರಣ ತಮ್ಮಂಥ ಮೇಕರ್‌ನ ಆಕರ್ಷಿಸುತ್ತದೆ ಎನ್ನುತ್ತಾರೆ ಅವರು. “ಇಲ್ಲೊಂದು ಪ್ರೊಫೆಶನಲ್‌ ಆದಂತಹ ವಾತಾವರಣ ಇದೆ. ಅದು ನನ್ನಂತಹ ಮೇಕರ್‌ಗಳನ್ನ ತುಂಬಾ ಎಳೆಯುತ್ತದೆ. ಎಲ್ಲಾ ಪಕ್ಕಾ ಪ್ಲಾನಿಂಗ್‌ ಆಗಿಯೇ ಚಿತ್ರೀಕರಣ ಶುರುವಾಗೋದು. ಅದಕ್ಕೇ ಇಲ್ಲಿ ಮೇಲಿಂದ ಮೇಲೆ ಬರಿ¤ದ್ದೀನಿ. ತಮಿಳಿನ “ವಿಸಾರಣೈ’ ಚಿತ್ರವನ್ನ ಹಿಂದಿಗೆ ಮಾಡುತ್ತಿದ್ದೀನಿ. ಅದಲ್ಲದೆ ಇನ್ನೂ ಒಂದು ದೊಡ್ಡ ಪ್ರಾಜೆಕ್ಟ್ ಇದೆ. ಬಹುಶಃ ನವೆಂಬರ್‌ ಅಥವಾ ಡಿಸೆಂಬರ್‌ ಒಳಗೆ ಎಲ್ಲಾ ಪಕ್ಕ ಆಗಲಿದೆ‌’ ಎಂಬ ಉತ್ತರ ಅವರಿಂದ ಬರುತ್ತದೆ.

ಬಾಲಿವುಡ್‌ನ‌ ಪ್ರೊಫೆಷಲಿಸಂ ಬಗ್ಗೆ ರಾಕ್‌ಲೈನ್‌ ಇನ್ನಷ್ಟು ಹೇಳುತ್ತಾರೆ. “ಒಂದು ಚಿತ್ರದ ಚಿತ್ರೀಕರಣ ಶುರುವಾಗುವುದಕ್ಕಿಂತ ಮುಂಚೆ, ಎರಡೂ¾ರು ಸ್ಟೇಜ್‌ಗಳಿವೆ. ಅಲ್ಲಿ ಕ್ಲಿಯರ್‌ ಆಗಿ ಬಂದರೆ ಮಾತ್ರ ಇಲ್ಲಿ ಸಿನಿಮಾ ಮಾಡ್ತಾರೆ. ಅಲ್ಲಿ ರಿಜೆಕ್ಟ್ ಆದರೆ, ಸಿನಿಮಾ ಬಿಟ್ಟಾಕ್ತಾರೆ. ಪ್ರಮುಖವಾಗಿ ಚಿತ್ರದ ಕಥೆ ಇಷ್ಟ ಆಗಬೇಕು. ಇಷ್ಟ ಆದರೆ, ಟಕ್‌ ಅಂತ ಸಿನಿಮಾ ಎತ್ಕೊàತಾರೆ. ಆಗ ರಿಸ್ಕ್ ಸಹ ಕಡಿಮೆ, ಜವಾಬ್ದಾರಿ ಸಹ ಶೇರ್‌ ಆಗಿರುತ್ತೆ. ವಕೌìಟ್‌ ಆಗಲಿಲ್ಲ ಅಂದರೆ ಯೋಚನೆ ಮಾಡೋದೇ ಇಲ್ಲ. ಪಕ್ಕಾ ಪ್ಲಾನಿಂಗ್‌ ಇರೋದ್ರಿಂದ, ಬಜೆಟ್‌ ಸಹ ಉಳಿಸಬಹುದು ಮತ್ತು ಪ್ರಾಫಿಟ್‌ ಸಹ ಬರತ್ತೆ. ಅದೇ ಕಾರಣಕ್ಕೆ ನಾನು ಇಲ್ಲಿ ಹೆಚ್ಚು ಹೆಚ್ಚು ಸಿನಿಮಾ ಮಾಡುತ್ತಿದ್ದೀನಿ’ ಎನ್ನುತ್ತಾರೆ.

Advertisement

ಪಕ್ಕಾ ಇರುವುದರಿಂದ ರಿಸ್ಕ್ ಕಡಿಮೆ ಹಾಗಾದರೆ, ರಿಸ್ಕ್ ಇರುವುದೇ ಇಲ್ಲವಾ? “ರಿಸ್ಕ್ ಇಲ್ಲದೆಯೇ ಏನು ಮಾಡೋಕೆ ಸಾಧ್ಯ’ ಎಂದು ಪ್ರಶ್ನಿಸುತ್ತಲೇ, “ರಿಸ್ಕ್ ಅನ್ನೋದು ಎಲ್ಲಾ ಕಡೆ ಇದ್ದೇ ಇರುತ್ತೆ. ಆದರೆ, ಇಲ್ಲಿ ಸ್ವಲ್ಪ ಕಡಿಮೆ. ಏಕೆಂದರೆ, ಇಲ್ಲಿ ಚಿತ್ರ ಮಾಡ್ತಿರೋರೆಲ್ಲಾ ಕಾರ್ಪೋರೇಟ್‌ ಕಂಪನಿಗಳು. ಸಾಮಾನ್ಯವಾಗಿ ನಾವೇನು ಮಾಡ್ತೀವಿ? ಹೀರೋಗೆ ಇಷ್ಟ ಆದರೆ ಸಿನಿಮಾನ ಶುರು ಮಾಡ್ತೀವಿ. ಇಲ್ಲಿ ಮೊದಲು ಕಾರ್ಪೋರೇಟ್‌ ಕಂಪನಿಗಳು ಮತ್ತು ಹೀರೋಗಳಿಬ್ಬರಿಗೂ ಪ್ರಾಜೆಕ್ಟ್ ಇಷ್ಟವಾಗಬೇಕು. ಹೀರೋಗಳು ಸಹ ಚಿತ್ರದಲ್ಲಿ ಇನ್ವಾಲ್‌Ì ಆಗುವುದರಿಂದ, ಅವರು ಅಂತಿಂಥ ಸಿನಿಮಾನ ಒಪ್ಪೋಕೆ ಸಾಧ್ಯವೇ ಇಲ್ಲ. ಹಾಗಾಗಿ ಒಂದು ಕಥೆ ವರ್ಥ್ ಅಥವಾ ಇಲ್ವಾ ಎಂದು ಮೊದಲೇ ಪಕ್ಕಾ ಮಾಡಿಕೊಂಡು ಸಿನಿಮಾ ಮಾಡೋಕೆ ಇಳಿಯುವುದರಿಂದ, ರಿಸ್ಕ್ ಕಡಿಮೆ ಇರುತ್ತದೆ’ ಎಂಬ ಉತ್ತರ ಅವರದು. 

ಕಲಿಯೋದು ಬೇಡ, ಅರ್ಥವಾದರೆ ಸಾಕು ಬಾಲಿವುಡ್‌ನ‌ ಈ ವೃತ್ತಿಪರತೆಯಿಂದ ಕನ್ನಡ ಚಿತ್ರರಂಗ ಏನು ಕಲಿಯಬೇಕಿದೆ ಎಂದರೆ, ಕಲಿಯೋದು ಬೇಡ, ಅರ್ಥ ಮಾಡಿಕೊಂಡರೆ ಸಾಕು ಎನ್ನುತ್ತಾರೆ ರಾಕ್‌. ಪ್ರಮುಖವಾಗಿ ಎರಡು ವಿಷಯಗಳನ್ನು ನಮ್ಮವರು ಅರ್ಥ ಮಾಡಿಕೊಕಳ್ಳಬೇಕಿದೆಯಂತೆ. ಮೊದಲು ಕಥೆಯ ಮಹತ್ವ. ಎರಡನೆಯದು ಕಥೆಯನ್ನು ಗೌರವಿಸಬàಕು ಎಂದು. ಇವೆರೆಡಾದರೆ, ಎಲ್ಲಾ ಸರಿ ಹೋಗುತ್ತದೆ ಎಂಬುದು ಅವರ ಅಭಿಪ್ರಾಯ. “ಈ ಸತ್ಯ ಈಗ ಎಲ್ಲಾ ರಾಜ್ಯದ ಚಿತ್ರರಂಗಗಳಿಗೆ ಅರ್ಥ ಆಗಿದೆ. ದೊಡ್ಡ ದೊಡ್ಡ ಸ್ಟಾರ್ಗಳಿಗೆ ಸಹ ಅರ್ಥ ಆಗಿದೆ. ಏಕೆಂದರೆ, ದೊಡ್ಡ ದೊಡ್ಡ ಸ್ಟಾರ್‌ಗಳ ಚಿತ್ರಗಳು ಮೊದಲ ದಿನವೇ ಫ್ಲಾಪ್‌ ಆಗುತ್ತಿವೆ. ಹಾಗಾಗಿ ಬೇರೆಲ್ಲಕ್ಕಿಂತ ಕಂಟೆಂಟ್‌ ಮತ್ತು ಸಿನಿಮಾ ಮುಖ್ಯ ಅನ್ನೋದು ಅರ್ಥ ಆಗಿದೆ. ಆ ನಿಟ್ಟಿನಲ್ಲಿ ಎಲ್ಲಾ ಕಡೆ ಕೆಲಸ ನಡೆಯುತ್ತಿದೆ’ ಎನ್ನುತ್ತಾರೆ ಅವರು. 

ಇರೋದು ಎರಡು ತರಹದ ನಿರ್ಮಾಪಕರು ರಾಕ್‌ಲೈನ್‌ ಕಂಡಂತೆ ನಮ್ಮಲ್ಲಿರುವ ಪ್ರಮುಖವಾದ ಸಮಸ್ಯೆ ಏನು? ಒಮ್ಮೆ ನಿಟ್ಟುಸಿರುಬಿಟ್ಟರು ರಾಕ್‌ಲೈನ್‌. ಅಷ್ಟರಲ್ಲಿ ಯಾರೋ ಬಂದು ಅವರನ್ನು ಮಾತಾಡಿಸಿಕೊಂಡು ಹೋದರು. ಅವರು ಹೋಗುತ್ತಿದ್ದಂತೆಯೇ, ರಾಕ್‌ಲೈನ್‌ ಮಾತು ಮುಂದುವರೆಸಿದರು. “ನಮ್ಮಲ್ಲಿ ತುಂಬಾ ಜನ ಹೊಸಬ್ರು ಬರ್ತಾ ಇದ್ದಾರೆ ಕಣಮ್ಮ. ಆದರೆ, ಅವರನ್ನ ತುಂಬಾ ಜನ ಮಿಸ್‌ಯೂಸ್‌ ಮಾಡ್ಕೊàತಾರೆ. ಇದರಿಂದ ಇಡೀ ಸಿಸ್ಟಂ ಹಾಳಾಗುತ್ತಿದೆ. ರೆಗ್ಯುಲರ್‌ ಆಗಿ ಚಿತ್ರ ಮಾಡುವವರಿಗೆ ಇವೆಲ್ಲಾ ಆಗೋಲ್ಲ. ಅವರೆಲ್ಲಾ ಹಿಂದೆ ಹೋಗುತ್ತಿದ್ದಾರೆ. ಇಲ್ಲಿ ಎರಡು ತರಹದ ನಿರ್ಮಾಪಕರಿದ್ದಾರೆ. ಒಬ್ಬರು ಹಿಂದಿನ ಸಾಲ ತೀರಿಸೋಕೆ ಇನ್ನೊಂದು ಸಿನಿಮಾ ಮಾಡೋ ನಿರ್ಮಾಪಕರು. ಹುಲಿ ಮೇಲೆ ಕುಳಿತಂಗೆ ಅವರ ಸ್ಥಿತಿ. ಇಳಿಯೋಂಗಿಲ್ಲ, ಬಿಡೋಂಗಿಲ್ಲ. ವಿಧಿ ಇಲ್ಲದೆ ಒಂದರ ಹಿಂದೊಂದು ಸಿನಿಮಾ ಮಾಡುತ್ತಲೇ ಇರಬೇಕಾಗ್ತದೆ. ಇನ್ನೊಬ್ಬರು ಒಳ್ಳೆಯ ಕಥೆ ಇದ್ದರೆ ಮಾತ್ರ ಚಿತ್ರ ಮಾಡೋಣ, ಇಲ್ಲವಾದರೆ ಬೇಡ ಎಂದು ಕಾಯೋರು …’

ರಾಕ್‌ಲೈನ್‌ ರೀಮೇಕ್‌ ಮಾಡ್ತಿದ್ದು ಯಾಕೆ ಗೊತ್ತಾ?
ಇನ್ನು ರಾಕ್‌ಲೈನ್‌ ವೆಂಕಟೇಶ್‌ ಮೇಲೆ ವಿಪರೀತ ರೀಮೇಕ್‌ ಮಾಡುವ ಆರೋಪವಿದೆ. ಆ ಬಗ್ಗೆ ಕೇಳಿದರೆ, “ಬರೀ ಕರ್ನಾಟಕದಲ್ಲಿದ್ದಿದ್ದರೆ, ನಾನು ಬದಲಾಗುತ್ತಿರಲಿಲ್ಲ’ ಅಂತಾರೆ. “ಇತ್ತೀಚೆಗೆ ನಾನೂ ಸ್ವಲ್ಪ ಟ್ರಾವಲ್‌ ಮಾಡುತ್ತಿರೋದರಿಂದ, ಅನುಭವ ಪಡೀತಿರೋದ್ರಿಂದ ಹೆಲ್ಪ್ ಆಗುತ್ತಿದೆ. ಈ ಹಿಂದೆ ಹೀರೋ ಡೇಟ್ಸ್‌ ಸಿಗು¤ ಅಂತ ತುಂಬಾ ಸಿನಿಮಾ ಮಾಡ್ತಿದ್ದೆ. ಹೀರೋಗಳು ಡೇಟ್ಸ್‌ ಕೊಡೋರು. ಆ ಡೇಟ್‌ಗೆ ಚಿತ್ರ ಮಾಡಬೇಕಿತ್ತು. ಕಥೆ ರೆಡಿ ಇಲ್ಲ ಅಂದರೆ ಅಥವಾ ಇಷ್ಟ ಆಗಲಿಲ್ಲ ಅಂದರೆ, ರೀಮೇಕ್‌ ಮಾಡುವುದು ಅನಿವಾರ್ಯ ಆಗೋದು. ಎಷ್ಟೋ ಬಾರಿ ಡೇಟ್‌ ಬಳಸಿಕೊಳ್ಳೋಕೆ ರೀಮೇಕ್‌ ಮಾಡುತ್ತಿದ್ದೆ. ಆದರೆ, ಈಗ ರೀಮೇಕ್‌ ಮಾಡೋದು ಕಷ್ಟ ಆಗುತ್ತಿದೆ. ಏಕೆಂದರೆ, ರೀಮೇಕ್‌ ಸ್ಕ್ರಿಪ್ಟ್ ಸಿಗೋದು ಕಷ್ಟ ಆಗುತ್ತಿದೆ. ಒಂದು ಚಿತ್ರ ಮಾಡಬೇಕು ಅಂದರೆ, ಅದು ನನ್ನ ಹಾಂಟ್‌ ಮಾಡಬೇಕು. ಹಾಂಟ್‌ ಮಾಡಿದರೆ ಆ ಚಿತ್ರ ಮಾಡುತ್ತೀನಿ. ಆ ನಂತರ ಡೇಟ್‌ ತೆಗೆದುಕೊಳ್ಳುವ ಪ್ರಯತ್ನ. ಒಂದು ಪಕ್ಷ ಡೇಟ್‌ ಸಿಗದಿದ್ದರೆ ಬೇಡ. ಈಗಲ್ಲದಿದ್ದರೆ ಇನ್ನಾéವಾಗೋ ಮಾಡೋಣ. “ಭಜರಂಗಿ ಭಾಯಿಜಾನ್‌’ ಆಗಿದ್ದು ಹಂಗೆ. ಕಥೆ ಇತ್ತು. ಎಷ್ಟೋ ಹೀರೋಗಳಿಗೆ ಹೇಳಿಸಿದ್ದೆ. ವರ್ಕ್‌ ಆಗಲಿಲ್ಲ. ಕೊನೆಗೆ ಸಲ್ಮಾನ್‌ ಖಾನ್‌ರಿಂದ ಚಿತ್ರವಾಯ್ತು’ ಎನ್ನುತ್ತಾರೆ ಅವರು.

ಇನ್ನು ಮುಂದೆ ಸ್ವಮೇಕ್‌
ಈ ಎರಡೂಮೂರು ವರ್ಷಗಳ ಗ್ಯಾಪ್‌ ಆಗಿರುವುದರಿಂದ ಒಂದಿಷ್ಟು ಸ್ವಮೇಕ್‌ ಕಥೆಗಳು ಇವೆಯಂತೆ. “ಮುಂಚೆ ಡೇಟ್‌ಗೊàಸ್ಕರ ಸಿನಿಮಾ ಮಾಡುತ್ತಿದ್ದೆ. ಈಗ ಐದಾರು ಸ್ಕ್ರಿಪ್ಟ್$Õ ಮಾಡಿಸಿದ್ದೀನಿ. ಅದನ್ನ ಇಟ್ಟುಕೊಂಡು ಹೀರೋಗಳ ಹತ್ತಿರ ಹೋಗುತ್ತೀನಿ. ಅವರಿಗೆ ಇಷ್ಟವಾದರೆ ಓಕೆ. ಇಲ್ಲ ಬೇಸರ ಇಲ್ಲ. ಒಂದಕ್ಕಿಂತ ಒಂದು ಅಪರೂಪದ ಸ್ಕ್ರಿಪ್ಟ್ಗಳಿವೆ. ಅವನ್ನೆಲ್ಲಾ ಮಾಡೋಕೆ ಮೂರು ವರ್ಷ ಬೇಕು. ಜೊತೆಗೆ ಒಂದಿಷ್ಟು ಟೀಮ್‌ಗಳನ್ನ ಮಾಡಿಟ್ಟಿದ್ದೀನಿ. ಅವರೆಲ್ಲಾ ಕೆಲಸ ಮಾಡುತ್ತಲೇ ಇರುತ್ತಾರೆ. ಹಿಂದೆ ಡಾ. ರಾಜಕುಮಾರ್‌ ಅವರದ್ದೇ ಒಂದು ತಂಡ ಇತ್ತು. ವಿಷ್ಣುವರ್ಧನ್‌ ಅವರ ತಂಡ ಇತ್ತು. ಯೋಗರಾಜ್‌ ಭಟ್‌ ಸಹ ಒಂದು ತಂಡ ಮಾಡಿಕೊಂಡಿದ್ದರು. ಇತ್ತೀಚೆಗೆ  ಅವೆಲ್ಲಾ ಕಡಿಮೆ ಆಗಿದೆ. ಹಾಗೆ ತಂಡಗಳನ್ನ ಕಟ್ಟಿದರೆ ಸಕ್ಸಸ್‌ ಆಗಬಹುದು’ ಎಂಬುದು ಅಭಿಪ್ರಾಯ.
ರಾಕ್‌ಲೈನ್‌ ಇನ್ನೂ ಮಾತಾಡುತ್ತಿದ್ದರೇನೋ. ಅಷ್ಟರಲ್ಲಿ ಜನ ಬರುತ್ತಿದ್ದರು. ಆಯೋಜಕರು ಬಂದು ರಾಕ್‌ಲೈನ್‌ರನ್ನು ಕರೆದುಕೊಂಡು ಹೋಗುವುದಕ್ಕೆ ಸಜ್ಜಾಗುತ್ತಿದ್ದರು. ರಾಕ್‌ಲೈನ್‌ ಪತ್ರಿಕಾಗೋಷ್ಠಿಗೆ ಎದ್ದರು.

ಹಾಲಿವುಡ್‌ಗೆ ರಾಕ್‌ಲೈನ್‌?
ಸ್ಯಾಂಡಲ್‌ವುಡ್‌ ಆಯಿತು, ಕೋಲಿವುಡ್‌, ಟೋಲಿವುಡ್‌, ಬಾಲಿವುಡ್‌ ಸಹ ಆಯಿತು. ಮುಂದೇನು ಎಂದರೆ, ಹಾಲಿವುಡ್‌ ಚಿತ್ರವೊಂದನ್ನು ಮಾಡುವಾಸೆ ಇದೆ ಎಂಬ ಆಸೆ ಹೊರಗೆ ಬರುತ್ತದೆ. “ಹಾಲಿವುಡ್‌ನ‌ಲ್ಲಿ ಸಿನಿಮಾ ಮಾಡಬೇಕು ಎಂಬುದು ಬಹಳ ದಿನಗಳ ಕನಸು. ಆದರೆ, ಅಲ್ಲಿ ಸಿನಿಮಾ ಮಾಡೋದು ಎಷ್ಟು ಕಷ್ಟ ಎಂಬುದು ಗೊತ್ತಲ್ಲ. ಹಾಗಂತ ಪ್ರಯತ್ನ ಬಿಟ್ಟಿಲ್ಲ. ಈ ವಿಷಯದಲ್ಲಿ ಹತ್ತಿರಹತ್ತಿರ ಹೋಗುತ್ತಿದ್ದೇನೆ. ಎಲ್ಲಾ ಅಂದುಕೊಂಡಂತೆ ಆದರೆ, ಆ ವಿಷಯವಾಗಿ ಮುಂದಿನ ದಿನಗಳಲ್ಲಿ ಹೇಳುತ್ತೇನೆ’ ಎನ್ನುತ್ತಾರೆ ಅವರು.

ಸದ್ಯದಲ್ಲೇ ಇನ್ನೊಂದು “ಡಕೋಟ ಎಕ್ಸ್‌ಪ್ರೆಸ್‌’
ನಿರ್ಮಾಣ ಮತ್ತು ವಿತರಣೆಯಲ್ಲಿ ಸಿಕ್ಕಿ, ರಾಕ್‌ಲೈನ್‌ ನಟಿಸುವುದನ್ನು ಸಾಕಷ್ಟು ಕಡಿಮೆ ಮಾಡಿದ್ದಾರೆ. ಆಗಾಗ ಕೆಲವು ಚಿತ್ರಗಳಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದು ಬಿಟ್ಟರೆ, ನಟನೆಯಲ್ಲಿ ಅವರು ಇತ್ತೀಚೆಗೆ ಹೆಚ್ಚಾಗಿ ತೋಡಿಸಿಕೊಂಡಿಲ್ಲ. ಸದ್ಯದಲ್ಲೇ “ಡಕೋಟ ಎಕ್ಸ್‌ಪ್ರೆಸ್‌’ ಶೈಲಿಯ ಇನ್ನೊಂದು ಚಿತ್ರದಲ್ಲಿ ನಟಿಸುವ ಸಾಧ್ಯತೆ ಇದೆ ಎಂದು ಹೇಳುತ್ತಾರೆ ಅವರು. “”ಡಕೋಟ ಎಕ್ಸ್‌ಪ್ರೆಸ್‌’ ಚಿತ್ರದ ನಂತರ ಎಲ್ಲಿ ಹೋದರೂ ಆ ಚಿತ್ರದ ಕುರಿತು ಜನ ಮಾತಾಡುತ್ತಾರೆ. ಇನ್ನೊಂದು ಅದೇ ತರಹದ ಚಿತ್ರ ಮಾಡಿ ಎನ್ನುತ್ತಾರೆ. ನಾನು ಅಭಿನಯಿಸಿದರೆ, ಅಂತಹ ಚಿತ್ರಗಳಲ್ಲೇ ಅಭಿನಯಿಸಬೇಕೇ ಹೊರತು, ಡೈನಾಮಿಕ್‌ ಪಾತ್ರಗಳಲ್ಲಿ ಜನ ನನ್ನನ್ನು ನೋಡುವುದಿಲ್ಲ. ಹಾಗಾಗಿ ಅಂಥದ್ದೊಂದು ಸಿನಿಮಾ ಮಾಡುವ ಯೋಚನೆಯಿದೆ. ಅದಕ್ಕೆ ಸರಿಯಾಗಿ ಒಂದು ಸ್ಕ್ರಿಪ್ಟ್ ಸಹ ಸಿಕ್ಕಿದೆ. ಒಂದು ಮಜವಾದ ಚಿತ್ರವೊಂದರಲ್ಲಿ ನಟಿಸಿದರೂ ಆಶ್ಚರ್ಯವಿಲ್ಲ’ ಎನ್ನುತ್ತಾರೆ ರಾಕ್‌ಲೈನ್‌.

ಬರಹ: ಚೇತನ್‌ ನಾಡಿಗೇರ್‌; ಚಿತ್ರಗಳು: ಸಂಗ್ರಹ

Advertisement

Udayavani is now on Telegram. Click here to join our channel and stay updated with the latest news.

Next