Advertisement

ಮನಸೂರೆಗೊಳಿಸುವ ಸುಂದರ ಪ್ರವಾಸಿತಾಣ ‘ಉತ್ಸವ ರಾಕ್ ಗಾರ್ಡನ್’

11:52 AM May 09, 2021 | Team Udayavani |

ಉತ್ಸವ ರಾಕ್ ಗಾರ್ಡನ್ ಎಂಬ ಹೆಸರಿನ ಈ ತಾಣವು ಇರುವುದು ಉತ್ತರ ಕರ್ನಾಟಕದಲ್ಲಿ. ಹಾವೇರಿ ಜಿಲ್ಲೆಯ ಹಾವೇರಿ ಪಟ್ಟಣದಿಂದ ವಾಯವ್ಯ ದಿಕ್ಕಿಗೆ 30 ಕಿ.ಮೀ ಚಲಿಸಿದರೆ ಸಿಗುವ ಪಟ್ಟಣ ಶಿಗ್ಗಾಂವ್. ಇಲ್ಲಿಂದ ಮತ್ತೆ ವಾಯವ್ಯ ದಿಕ್ಕಿಗೆ ಸುಮಾರು 10 ಕಿ.ಮೀ ಕ್ರಮಿಸಿದರೆ ಗೊಟಗೋಡಿ ಎಂಬ ಹಳ್ಳಿಯ ಸರಹದ್ದಿನಲ್ಲಿರುವ ಉತ್ಸವ ರಾಕ್ ಗಾರ್ಡನ್ ಸಿಗುತ್ತದೆ.

Advertisement

ಹಳ್ಳಿಯ ಸಮಗ್ರ ಜೀವನದ ಚಿತ್ರಣವನ್ನು ಮಾದರಿ ಪ್ರತಿಮೆಗಳ ಮೂಲಕ ಸುಂದರವಾಗಿ ಇಲ್ಲಿ ನಿರ್ಮಿಸಲಾಗಿದೆ. ಅಲ್ಲದೆ ಸುಂದರವಾದ ಉದ್ಯಾನವನವನ್ನೂ ಸಹ ಇಲ್ಲಿ ಕಾಣಬಹುದು.

ಪ್ರವೇಶ ದ್ವಾರ ಆಕರ್ಷಕವಾಗಿದೆ. ಬೃಹತ್ ಹಾವಿನ ಹುತ್ತದ ಮಾದರಿಯಲ್ಲಿ ಮುಂಭಾಗದ ಗೋಡೆ ಇದೆ. ಇದರ ಮೇಲೆ ಮಿಂಚುತ್ತಿರುವ ಪುಟಾಣಿಗಳ ಗ್ಲಾಸ್ ಶಿಲ್ಪಗಳಿವೆ. ಚಕ್ಕಡಿಯ ಗಾಲಿಗಳು ಗಾರ್ಡನ್‌ನ ಪ್ರವೇಶದ್ವಾರ. ಒಳ ಪ್ರವೇಶಿಸುತ್ತಿದ್ದಂತೆ ಕನ್ನಡಿಗರ ಕಣ್ಮಣಿ ದಿ.ರಾಜಕುಮಾರ್ ಕೊಳವೊಂದರಲ್ಲಿ ತನ್ನ ಆರಾಧ್ಯದೈವ ಶಿವನಿಗೆ ಕಣ್ಣು ನೀಡುವ ಬೇಡರ ಕಣ್ಣಪ್ಪನ ರೂಪದಲ್ಲಿ ಕಾಣಸಿಗುತ್ತಾರೆ.

ಕೊಳದ ಸುತ್ತಲು ಇವರ ಅಭಿನಯದ ಸಾಮಾಜಿಕ ಹಾಗೂ ಭಕ್ತಿ ಪ್ರದಾನ ಚಿತ್ರಗಳ ಶಿಲ್ಪಗಳಿವೆ. ಇದಕ್ಕೆ ಡಾ.ರಾಜ್‌ಕುಮಾರ್ ಸರ್ಕಲ್‌ಎಂದು ಹೆಸರಿಡಲಾಗಿದೆ.ರಾಜಣ್ಣನನ್ನು ಕಣ್ಣು ತುಂಬಿಕೊಂಡು ಮುಂದೆ ಸಾಗಿದಾಗ ಕರ್ನಾಟಕದ ಮೂವರು ಮಹಾನ ಕಲಾವಿದರಾದ ಡಾ.ಎಂ.ವಿ.ಮಿಣಜಗಿ, ಡಿ.ವಿ.ಹಾಲಬಾವಿ ಹಾಗೂ ಟಿ.ಪಿ.ಅಕ್ಕಿಅವರ ಸ್ಮರಣಾರ್ಥ ನಿರ್ಮಿಸಿದ ಬೃಹತ್‌ಆಲದ ಮರ ಇದೆ. ತುಸು ಮುಂದಕ್ಕೆ ಸಾಗಿದರೆ ಕೆಟ್ಟದ್ದನ್ನು ನೋಡಬೇಡ, ಮಾತಾಡಬೇಡ, ಕೇಳಬೇಡ ಎಂದು ಬಾಪುಜಿ ಸಂದೇಶ ಸಾರುವ ಮಕ್ಕಳ ಕಾರಂಜಿ ಇದೆ. ಇಲ್ಲಿ ನಮ್ಮ ಬಾಲ್ಯಾವಸ್ಥೆಯ ಸವಿ ನೆನಪುಗಳು ಹಸಿರಾಗುತ್ತವೆ. ಇದು ಮಕ್ಕಳ ಮುಗ್ಧಲೋಕ್ಕೆಹಿಡಿದ ಕೈಗನ್ನಡಿಯಾಗಿದೆ.

Advertisement

ನವ್ಯಕಲಾ ಪ್ರದರ್ಶನಾಲಯ, ಮದುವೆ ಪ್ರದರ್ಶನಾಲಯಗಳು ಪ್ರವಾಸಿಗರು ಹೌಹಾರುವಂತೆ ಮಾಡುತ್ತವೆ. ಕಲಾವಿದರ ಕೈ ಚಳಕಕ್ಕೆ ಶರಣು ಎನ್ನುತ್ತಾ ಮುಂದೆ ಸಾಗುತ್ತಾರೆ ಪ್ರವಾಸಿಗರು.

ಮದುವೆ ಪ್ರದರ್ಶನಾಲಯದಲ್ಲಿ ಇಸ್ಲಾಂ, ಕ್ರೈಸ್ತ, ಶೈವ, ವೈದಿಕ, ಜೈನ ಹೀಗೆ ಮುಂತಾದ ಧರ್ಮಗಳ ರೂಢಿಗತ ಮದುವೆ ಸಂಪ್ರದಾಯಗಳನ್ನು ಬಿಂಬಿಸಲಾಗಿದ್ದು ನೋಡುಗರ ಮನಸೂರೆಗೊಳ್ಳುತ್ತವೆ.

ಉತ್ತರ ಕರ್ನಾಟಕದ ಹಿಂದಿನ ಗ್ರಾಮಿಣ ಸೊಗಡನ್ನು ನೆನಪಿಸುವ ಶಿಲ್ಪಕಲೆಗಳು ಎಲ್ಲರನ್ನುಆಕರ್ಷಿಸುತ್ತದೆ. ಇಲ್ಲಿ ಕೆಲಸದಲ್ಲಿ ತೊಡಗಿದ ಹೆಂಗಸರು, ಗಂಡಸರು ತಮ್ಮ ಸಾಂಪ್ರದಾಯಿಕ ಉಡುಗೆ ತೊಡುಗೆಗಳಿಂದ ಗಮನ ಸೆಳೆಯುತ್ತಾರೆ. ಇಲ್ಲಿಯ ಶಿಲ್ಪಗಳು, ಅವುಗಳಿಗೆ ಪೂರಕವಾಗುವಂತೆ ಜೋಡಿಸಿದ ಸುತ್ತಲಿನ ದಿನಬಳಕೆಯ ಗ್ರಾಮ್ಯ ಸಾಮಾಗ್ರಿಗಳು, ಮನೆಗಳ ಮಾದರಿಗಳು ಇತ್ಯಾದಿ. ದೃಶ್ಯಗಳು ಹಿಂದಿನ ಗ್ರಾಮ ಸಾಮ್ರಾಜ್ಯದ ಸೊಬಗನ್ನು ನೆನಪಿಸುತ್ತವೆ.

ಸಾಂಪ್ರದಾಯಿಕ ಕೃಷಿ ಪದ್ಧತಿಯ ಹಂತಗಳು, ಹೈನುಗಾರಿಕೆ, ಆಡು, ಕುರಿ ಸಾಕಣೆ, ಬುಡಕಟ್ಟು ಜನಾಂಗದ ಬದುಕು, ಸಾಕು ಪ್ರಾಣಿ, ಕಾಡು ಪ್ರಾಣಿಗಳು, ವಿವಿಧ ತಳಿಯ ಆಕಳು ಎಮ್ಮೆಯ ತಳಿಗಳು, ಜನಪದರ ಆಟ,ಸಾರಿಗೆ ವ್ಯವಸ್ಥೆ ಹೀಗೆ ಇನ್ನು ಹಲವಾರು ಸಂಗತಿಗಳನ್ನು ಶಿಲ್ಪಗಳ ಮೂಲಕ ಅವುಗಳೊಂದಿಗೆ ಸುವ್ಯವಸ್ಥಿತ ವಾಗಿ ಸಮ್ಮಿಲನಗೊಂಡ ನಿಸರ್ಗದ ಮೂಲಕ ಕಣ್ಣು ತುಂಬಿಕೊಳ್ಳಬೇಕಾದರೆ ‘ಉತ್ಸವ ರಾಕ್‌ಗಾರ್ಡನ್’ಗೆ ಒಮ್ಮೆ ಭೇಟಿ ನೀಡಲೇಬೇಕು.

ನಮ್ಮ ನಾಡಿನ ಗ್ರಾಮೀಣ ಸಂಸ್ಕೃತಿಯ ಮಜಲುಗಳನ್ನೆಲ್ಲಾ ಸಾವಿರಾರು ಶಿಲ್ಪಗಳಲ್ಲಿ ಹಿಡಿದಿಟ್ಟಿರುವುದರಿಂದ ಎಂಟು ವಿಶ್ವ ದಾಖಲೆಗಳಲ್ಲಿ ‘ಉತ್ಸವರಾಕ್ ಗಾರ್ಡನ’ ಹೆಸರಿಸಲ್ಪಟ್ಟಿದೆ.

ಇದು ವೈಶಿಷ್ಟತೆಗಳಿಂದ ಕೂಡಿದ ಪ್ರವಾಸಿ ತಾಣವಲ್ಲದೆ ಶೈಕ್ಷಣಿಕ, ಸಾಂಸ್ಕೃತಿಕಕೇಂದ್ರವೂ ಹೌದು. ಮಕ್ಕಳು, ಸಾಮಾನ್ಯರು, ವಿದ್ಯಾವಂತರು, ಪ್ರಜ್ಞಾವಂತರೆಲ್ಲರನ್ನು ಸಮಾನವಾಗಿ ರಂಜಿಸುವ ಅಪರೂಪದ ಸ್ಥಳ. ಸಮಾಜದ ಎಲ್ಲ ಸಮುದಾಯದ ಜನ ಒಂದೆಡೆ ಸೇರಿ ಖುಷಿಪಡುವ ಭಾವೈಕ್ಯತಾ ತಾಣ.

ಬರುವುದು ಹೇಗೆ ?

ಹುಬ್ಬಳ್ಳಿ ಹಾಗೂ ಹಾವೇರಿಗಳಿಂದ ಗೊಟಗೋಡಿಯವರೆಗೆ ಬಸ್ಸುಗಳು ಸುಲಭವಾಗಿ ದೊರೆಯುತ್ತವೆ. ಬೆಂಗಳೂರು-ಮೈಸೂರು ಕಡೆಯಿಂದ ಬರುವವರು ಹರಿಹರ, ಹಾಸನದಿಂದ ಬರುವವರು ಅರಸಿಕೆರೆ, ದಾವಣಗೆರೆ, ಉತ್ತರಕನ್ನಡದಿಂದ ಬರುವವರು ಸಿರ್ಸಿ, ಹಾವೇರಿ, ಬೆಳಗಾವಿ, ಗುಲ್ಬರ್ಗ ಹಾಗೂ ಬೀದರ್ ಕಡೆಯಿಂದ ಬರುವವರು ಹುಬ್ಬಳ್ಳಿ ಮಾರ್ಗವಾಗಿ ಬರಬಹುದು. ಗಾರ್ಡನ್ ರಾಷ್ಟ್ರೀಯ ಹೆದ್ದಾರಿ-4 ಕ್ಕೆ ಹೊಂದಿಕೊಂಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next