Advertisement

ಹೊಂಡ- ಗುಂಡಿ ತುಂಬಿದ ರಸ್ತೆಯಲ್ಲಿ  ಸಂಚಾರ ಸಂಕಷ್ಟ 

12:39 PM Jun 19, 2018 | Team Udayavani |

ಸಸಿಹಿತ್ಲು: ಇಲ್ಲಿನ ಸಸಿಹಿತ್ಲು ಬೀಚ್‌ ರಸ್ತೆಯ ಕಾಂಕ್ರೀಟ್‌ ಕಾಮಗಾರಿಯನ್ನು ಮಳೆಯ ಕಾರಣ ನೀಡಿ ಅರ್ಧದಲ್ಲಿಯೇ
ನಿಲ್ಲಿಸಿರುವುದರಿಂದ ನಿತ್ಯ ಸಂಚಾರಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಸಸಿಹಿತ್ಲು ದರ್ಗಾದಿಂದ ಮುಂಡ ಬೀಚ್‌ನ ಬಸ್‌ನಿಲ್ದಾಣದವರೆಗೆ ವಿಶ್ವಬ್ಯಾಂಕ್‌ನ ನೆರವಿನಿಂದ ರಾಷ್ಟ್ರೀಯ ಬಿರುಗಾಳಿ ವಿಪತ್ತು ಕುಗ್ಗಿಸುವ ಯೋಜನೆ (ಎನ್‌ಸಿಆರ್‌ಎಂಪಿ) 4.5 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರೀಟ್‌ ಗೊಳ್ಳುತ್ತಿದ್ದು, ಈಗ ಸಸಿಹಿತ್ಲು ಭಗವತೀ ದೇವಸ್ಥಾನದ ದ್ವಾರದ ಬಳಿಯೇ ಮೊಟಕುಗೊಂಡಿದೆ.

Advertisement

ಶಿಲಾನ್ಯಾಸ ನಡೆದು ನಾಲ್ಕು ತಿಂಗಳಾದರೂ ಕಾಮಗಾರಿಯಲ್ಲಿ ಶೇ.30ರ ಪ್ರಗತಿಯನ್ನೂ ಕಾಣದಿರುವುದರಿಂದ ಇಲ್ಲಿನ ಜನರಿಗೆ ಸಂಚರಿಸಲು ತೊಂದರೆಯಾಗಿದೆ. ಭಗವತೀ ದೇವಸ್ಥಾನದ ದ್ವಾರದಿಂದ ಬೀಚ್‌ವರೆಗಿನ ಕಾಮಗಾರಿ ಮುಗಿದರೂ ಮುಕ್ಕದತ್ತ ತೆರಳುವ ಭಾಗದಲ್ಲಿ ರಸ್ತೆಯನ್ನೆಲ್ಲಾ ಅಗೆದು ರಸ್ತೆಯನ್ನು ಹೊಂಡ ಗುಂಡಿ ರಸ್ತೆಯನ್ನಾಗಿ ಪರಿವರ್ತಿಸಿರುವುದರಿಂದ ಸಂಚರಿಸಲು ತೀವ್ರ ತೊಂದರೆಯಾಗಿದೆ.

ಜೂ. 5ರಂದು ದೆಹಲಿಯ ವಿಶ್ವ ಬ್ಯಾಂಕ್‌ ಪ್ರತಿನಿಧಿಗಳ ತಂಡವು ಆಗಮಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸ್ಪಷ್ಟವಾದ ಸೂಚನೆ ನೀಡಿದ್ದರೂ ಸಹ ಕಾಮಗಾರಿ ಅರ್ಧದಲ್ಲಿಯೇ ನಿಲ್ಲಿಸಲಾಗಿದೆ.

ವನಮಹೋತ್ಸವ..!
ಸಸಿಹಿತ್ಲುವಿನ ದರ್ಗಾದಿಂದ ಹಿಡಿದು ಭಗವತೀ ದ್ವಾರದವರೆಗೆ ಇರುವ ಹೊಂಡ ಗುಂಡಿಗಳಿಗೆ ಸ್ಥಳೀಯ ನಾಗರಿಕರು ಹೂವಿನ ಹಾಗೂ ಬಾಳೆ ಗಿಡಗಳನ್ನು ನೆಟ್ಟು ರಸ್ತೆಯ ಅವ್ಯವಸ್ಥೆಯ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಸಿಲು ಬಂದ  ತತ್‌ಕ್ಷಣ ಆರಂಭ
ಸಸಿಹಿತ್ಲು ಬೀಚ್‌ನಿಂದ ದರ್ಗಾದವರೆಗೆ ಸುಮಾರು 6.1 ಕಿ.ಮೀ. ಉದ್ದದ ರಸ್ತೆಯನ್ನು ಒಂಭತ್ತು ತಿಂಗಳ ಕಾಲಾವಕಾಶದಲ್ಲಿ ನಿರ್ಮಿಸಲಾಗುತ್ತಿದೆ. ಭಗವತೀ ದ್ವಾರದ ಬಳಿಯ ರಸ್ತೆಯ 1.5 ಕಿ.ಮೀ. ನ ಒಂದು ಭಾಗವನ್ನು ಪೂರ್ಣಗೊಳಿಸಲಾಗಿದೆ. ಮಳೆಯಿಂದಾಗಿ ತಾತ್ಕಾಲಿಕವಾಗಿ ಕಾಮಗಾರಿ ನಿಲ್ಲಿಸಿದ್ದು, ಬಿಸಿಲು ಬಂದ ತತ್‌ಕ್ಷಣ ಆರಂಭಿಸಲಾಗುವುದು.
– ರವಿಕುಮಾರ್‌,
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು,
ಲೋಕೋಪಯೋಗಿ ಇಲಾಖೆ, ಮಂಗಳೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next