Advertisement

ರಸ್ತೆಯಲ್ಲಿ ವ್ಯಾಪಾರ: ಸಂಚಾರಕ್ಕೆ ಸಂಕಟ

05:35 PM May 25, 2019 | Suhan S |

ಕುಣಿಗಲ್: ವ್ಯಾಪಾರ ಮಾಡಲು ಸೂಕ್ತವಾದ ಸ್ಥಳವಿದ್ದರೂ ವ್ಯಾಪಾರಿಗಳು, ಸಂಚಾರ ನಿಯಮವನ್ನು ಅನುಸರಿಸದೇ ರಸ್ತೆ ಬದಿಯ ಎರಡು ಕಡೆ ಹೆಚ್ಚಾಗಿ ತರಕಾರಿ, ಸೊಪ್ಪು ಹಾಕಿಕೊಂಡು ವ್ಯಾಪಾರ ಮಾಡು ತ್ತಿದ್ದಾರೆ. ಆದ್ದ ರಿಂದ ವಾಹನ ಸಂಚಾರಕ್ಕೆ ಹಾಗೂ ಗ್ರಾಹಕರು ವ್ಯಾಪಾರ ಖರೀದಿಗೆ ತೀವ್ರ ಅಡಚಣೆ ಉಂಟಾಗಿದೆ. ಇದರಿಂದ ಸಾರ್ವಜನಿಕರು, ಕಿರಿಕಿರಿ ಅನುಭವಿಸುತ್ತಿರುವುದು ಪಟ್ಟಣದ ಸಂತೇ ಮೈದಾನ ದಲ್ಲಿ ನಿತ್ಯ ಕಾಣಬಹುದಾಗಿದೆ.

Advertisement

ಇತಿಹಾಸ ಪ್ರಸಿದ್ಧವಾದ ಶ್ರೀಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯ ಹಾಗೂ ಮೂಡಲ್ ಕುಣಿಗಲ್ ಕೆರೆಗೆ ಹೊಂದಿಕೊಂಡಿರುವ ಇಲ್ಲಿನ ಸಂತೇಮೈದಾನ ಪುರಾತನ ಕಾಲ ದಿಂದಲ್ಲೂ ವ್ಯಾಪಾರಕ್ಕೆ ಹೆಸರಾಗಿದೆ. ಪ್ರತಿ ಬುಧವಾರದಂದು ತುಮಕೂರು, ನಾಗವಲ್ಲಿ, ಹೆಬ್ಬೂರು, ತುರುವೇಕೆರೆ, ಹುಲಿಯೂರು ದುರ್ಗ, ಎಡಿಯೂರು, ನಾಗಮಂಗಲ ಸೇರಿ ದಂತೆ ಹತ್ತಾರು ದೂರದ ಊರುಗಳಿಂದ ವ್ಯಾಪಾರಸ್ಥರು ಬಂದು ವ್ಯಾಪಾರ ಮಾಡು ತ್ತಿದ್ದಾರೆ. ರಾಗಿ, ಅಕ್ಕಿ, ಮೆಣಸಿನ ಕಾಯಿ, ದ್ವಿದಳ ಧಾನ್ಯಗಳು, ಈರುಳ್ಳಿ, ಬೆಳ್ಳುಳ್ಳಿ ಸೇರಿ ದಂತೆ ವಿವಿಧ ಮಾದರಿಯ ತರಕಾರಿ, ಬಟ್ಟೆ, ಕೋಳಿ, ಮಡಕೆ, ಚಾಪೆ, ಒಣಗಿದ ಮೀನು ಸೇರಿದಂತೆ ಧವಸ- ಧಾನ್ಯಗಳು ಮಾರಾಟ ಮಾಡುತ್ತಿದ್ದಾರೆ. ಇದನ್ನು ಕೊಳ್ಳಲು ಕುಣಿಗಲ್ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಗ್ರಾಹಕರು ಬಂದು ವಸ್ತುಗಳನ್ನು ಖರೀದಿಸು ತ್ತಿದ್ದಾರೆ. ಅಲ್ಲದೇ ಸಂತೆ ದಿನವಲ್ಲದೆ ಬೇರೆ ದಿನಗಳಲ್ಲೂ ಬೆಳಗ್ಗೆ 5ರಿಂದ ಬೆಳಗ್ಗೆ 9 ಗಂಟೆಯವರಗೆ ತರಕಾರಿ ವ್ಯಾಪಾರ ಬಿರುಸಿ ನಿಂದ ನಡೆಯುತ್ತದೆ.

ಸಮರ್ಪಕ ಸೌಲಭ್ಯ ಬಳಕೆ ಇಲ್ಲ: ಸಂತೆಗೆ ಬರುವ ವ್ಯಾಪಾರಿಗಳ ಹಾಗೂ ಗ್ರಾಹಕರ ಅನುಕೂಲಕ್ಕಾಗಿ ಸಂಸದ ಡಿ.ಕೆ.ಸುರೇಶ್‌ ಅಂದಿನ ಶಾಸಕರಾದ ಡಿ.ನಾಗರಾಜಯ್ಯ, ಬಿ.ಬಿ.ರಾಮಸ್ವಾಮಿಗೌಡ ಅವರು ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್‌ ದೀಪ, ಶೌಚಾಲಯ, ಕುಡಿಯುವ ನೀರು, ಸಿಮೆಂಟ್ ರಸ್ತೆ, ಚರಂಡಿ, ಪ್ಲಾಟ್ಫಾರಂ ನಿರ್ಮಾಣ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದಾರೆ. ಆದರೆ, ಇದನ್ನು ಸಮರ್ಪಕವಾಗಿ ವ್ಯಾಪಾರಿಗಳು ಬಳಸಿಕೊಳ್ಳುತ್ತಿಲ್ಲ. ವ್ಯಾಪಾರದ ದುರಾಸೆ ಯಿಂದ ಸಿಮೆಂಟ್ ರಸ್ತೆಗೆ ಹಳ್ಳ ತೋಡಿ, ನೆರಳು ಕಡ್ಡಿ ಹಾಕಿ ಕೊಂಡು ರಸ್ತೆ ಹಾಳು ಮಾಡಿದ್ದಾರೆ. ಪ್ಲಾಟ್ ಫಾರಂ ಮೇಲೆ ಕುಳಿತು ವ್ಯಾಪಾರ ಮಾಡದೇ ರಸ್ತೆಯ ಎರಡು ಕಡೆ ವ್ಯಾಪಾರ ಮಾಡುತ್ತಿರುವುದರಿಂದ ಗ್ರಾಹಕರು ಖರೀದಿಸಲು ನಿತ್ಯ ಕಿರಿಕಿರಿ ಅನುಭವಿ ಸುತ್ತಿದ್ದಾರೆ. ಅಲ್ಲದೆ, ಸರಕು ತರಲು ಹಾಗೂ ತುಂಬಿಕೊಂಡು ಹೋಗಲು ರಸ್ತೆ ಮೇಲೆ ಕುಳಿತು ವ್ಯಾಪಾರ ಮಾಡುತ್ತಿರುವುದರಿಂದ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

ಅಧಿಕಾರಿಗಳ ವಿರುದ್ಧ ಗ್ರಾಹಕರ ಆಕ್ರೋಶ: ರಸ್ತೆ ಬದಿಯ ಎರಡು ಕಡೆ ವ್ಯಾಪಾರಿಗಳು ರಾಶಿರಾಶಿ ತರಕಾರಿ, ಇತರೆ ವಸ್ತುಗಳು ಹಾಕಿ ಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಕಿರಿದಾದ ರಸ್ತೆಯಲ್ಲಿ ಹೋಗಿ ಗ್ರಾಹಕರು ವ್ಯಾಪಾರ ಮಾಡಲು ತೊಂದರೆ ಉಂಟಾ ಗಿದ್ದು, ಹಲವು ಬಾರಿ ವ್ಯಾಪಾರಸ್ಥರ ಹಾಗೂ ಗ್ರಾಹಕರ ನಡುವೆ ವಾಗ್ವಾದ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿರುವುದು ಉಂಟು. ಆದರೆ, ಇಷ್ಟೆಲ್ಲಾ ಸಂಚಾರ ಅವ್ಯವಸ್ಥೆ ಯಾದರೂ ಇದನ್ನು ಸರಿಪಡಿಸು ವಲ್ಲಿ ಸ್ಥಳೀಯ ಪುರಸಭೆ ಹಾಗೂ ಪೊಲೀಸ್‌ ಇಲಾಖೆ ಅಧಿಕಾರಿಗಳು ಕಂಡು ಕಾಣದಂತೆ ಇರುವುದು ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ.

ಶೌಚಾಲಯಕ್ಕೆ ಬೀಗ: ಗ್ರಾಹಕರ ಹಾಗೂ ವ್ಯಾಪಾರಿ ಗಳ ಅನುಕೂಲಕ್ಕಾಗಿ ಪುರಸಭೆ 9 ಲಕ್ಷ ರೂ., ಖರ್ಚು ಮಾಡಿ ಸಂತೇ ಮೈದಾನ ದಲ್ಲಿ ಶೌಚಾಲಯ ನಿರ್ಮಿ ಸಿದೆ. ಶೌಚಾಲಯ ಉದ್ಘಾಟನೆಗೊಂಡು ಕೆಲ ದಿನಗಳ ಬಳಿಕ ಸರಿಯಾಗಿ ನಿರ್ವಹಣೆ ಮಾಡದೇ ಶೌಚಾ ಲಯಕ್ಕೆ ಹಲವು ತಿಂಗಳಿನಿಂದ ಬೀಗ ಹಾಕ ಲಾಗಿದೆ. ಇದರಿಂದ ವ್ಯಾಪಾರಿಗಳ ಹಾಗೂ ಗ್ರಾಹಕರ ಶೌಚಕ್ಕೆ ತೊಂದರೆ ಉಂಟಾಗಿ, ಎಲ್ಲೆಂದರಲ್ಲಿ ಮೂತ್ರ ಹಾಗೂ ಮಲ ವಿಸರ್ಜನೆ ಮಾಡುತ್ತಿದ್ದಾರೆ. ಇದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ ಎಂದು ಸಾರ್ವ ಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

● ಕೆ.ಎನ್‌.ಲೋಕೇಶ್‌

Advertisement

Udayavani is now on Telegram. Click here to join our channel and stay updated with the latest news.

Next