Advertisement

ರಸ್ತೆ-ವಿಭಜಕಕ್ಕಿಲ್ಲ ನವೀಕರಣ ಭಾಗ್ಯ

02:28 PM Dec 18, 2019 | Suhan S |

ಕುಷ್ಟಗಿ: ಪಟ್ಟಣದ ಮುಖ್ಯ ರಸ್ತೆಗಳ ಸ್ಥಿತಿ-ಗತಿ ಸಂಚಾರಕ್ಕೆ ಉಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಪಟ್ಟಣ ವ್ಯಾಪ್ತಿಯ ರಾಜ್ಯ ಹೆದ್ದಾರಿಗಳ ಸುಗಮ ಸಂಚಾರದ ಪುರಸಭೆ, ಲೋಕೋಪಯೋಗಿ ಇಲಾಖೆ ಧೋರಣೆ ಸಾರ್ವಜನಿಕರಿಗೆ ಪ್ರಶ್ನಾರ್ಹವಾಗಿವೆ. ಪಟ್ಟಣದ ಏಕಮುಖ ಸಂಚಾರ ವ್ಯವಸ್ಥೆಯ ಹಿನ್ನೆಲೆಯಲ್ಲಿ ಪಟ್ಟಣದ ಸೌಂದಯೀಕರಣ ಹೆಚ್ಚಿಸುವ ನಿಟ್ಟಿನಲ್ಲಿ ಹಸಿರಿನಿಂದ ಕಂಗೊಳಿಸಬೇಕಾದ ರಸ್ತೆ ಹಾಗೂ ವಿಭಜಕಗಳು ನವೀಕರಣ ಭಾಗ್ಯವಿಲ್ಲದೇ ಹಾಳಾಗಿವೆ.

Advertisement

ಪಟ್ಟಣದಲ್ಲಿ ದಿನೇ ದಿನೇ ವಾಹನ ದಟ್ಟನೆ ಹೆಚ್ಚಿದ್ದು, ಸಂಚಾರ ನಿಯಂತ್ರಣಕ್ಕಾಗಿ ರಸ್ತೆಗಳ ವಿಭಜಕ ವ್ಯವಸ್ಥೆಯಿಂದ ಏಕಮುಖ ಸಂಚಾರ ವ್ಯವಸ್ಥೆಯಿಂದ ಅಪಘಾತಗಳನ್ನು ನಿಯಂತ್ರಿಸುವುದು ಸಾಧ್ಯವಾಗಿದೆ. ಆದರೆ ಪಟ್ಟಣದ ಮುಖ್ಯ ರಸ್ತೆಗಳ ವಿಭಜಕಗಳು ನಾಮಕಾವಾಸ್ತೆ ಎನಿಸಿದೆ.

ಬಸವೇಶ್ವರ ವೃತ್ತದಿಂದ ಪುರಸಭೆ ಎದುರಿನ ಟಿಪ್ಪು ಸುಲ್ತಾನ್‌ ವೃತ್ತದವರೆಗೆ ನಗರೋತ್ಥಾನ ಯೋಜನೆಯಲ್ಲಿ ರಸ್ತೆಯ ವಿಭಜಕಗಳನ್ನು ನಿರ್ಮಿಸಿದ್ದು, ಸದರಿ ವಿಭಜಕಗಳಲ್ಲಿ ಸಸಿಗಳನ್ನು ನೆಡುವುದನ್ನು ಕೈ ಬಿಟ್ಟಿದೆ. ಸದರಿ ವಿಭಜಕಗಳಲ್ಲಿ ಅರೆ ಬರೆಯಾಗಿ ಮಣ್ಣು ಬಿದ್ದಿರುವುದು ಕಾಣಬಹುದಾಗಿದೆ.

ಪಟ್ಟಣದ ಎನ್‌ಎಚ್‌ ಕ್ರಾಸ್‌ನಿಂದ ಬಸವೇಶ್ವರ ವೃತ್ತ ಹಾಗೂ ಪುರಸಭೆಯವರೆಗೆ, ಬಸವೇಶ್ವರ ವೃತ್ತದಿಂದ ಮಾರುತಿ ವೃತ್ತ, ಕಾರ್ಗಿಲ್‌ ವೃತ್ತ, ಮುರಡಿ ಭೀಮಜ್ಜ ವೃತ್ತದವರೆಗೆ (ಕೊಪ್ಪಳ ರಸ್ತೆ) ದ್ವಿಪಥ ರಸ್ತೆಯ ವ್ಯವಸ್ಥೆ ಇದೆ. ಮಾರುತಿ ವೃತ್ತದಿಂದ ಕನಕದಾಸ ವೃತ್ತದ (ಗಜೇಂದ್ರಗಡ ರಸ್ತೆ) ಸಿಂಗಲ್‌ ರಸ್ತೆ ಇದ್ದು, ದಿನೇ ದಿನೇ ವಾಹನ ದಟ್ಟನೆ ಹೆಚ್ಚಿದ ಪರಿಣಾಮ ಈ ರಸ್ತೆಯನ್ನು ದ್ವಿಪಥ ರಸ್ತೆ ಅಗಲೀಕರಣಗೊಳಿಸಬೇಕು ಎಂದು ಸಾರ್ವಜನಿಕರ ಬೇಡಿಕೆ ಇದೆ. ಆದರೆ ಸಂಬಂಧಿಸಿದ ಇಲಾಖೆ ಸದರಿ ಬೇಡಿಕೆಗೆ ಈವರೆಗೂ ಸ್ಪಂದಿಸಿಲ್ಲ ಬಸವೇಶ್ವರ ವೃತ್ತದಿಂದ ಮಾರುತಿ ವೃತ್ತ, ಇದೇ ಬಸವೇಶ್ವರ ವೃತ್ತದಿಂದ ಎನ್‌ಎಚ್‌ ಕ್ರಾಸ್‌ವರೆಗೂ ರಸ್ತೆ ವಿಭಜಕಗಳನ್ನು ನಿರ್ಮಿಸಲು ಲೋಕೋಪಯೋಗಿ ಇಲಾಖೆ ಹಾಗೂ ಪುರಸಭೆ ನಡುವಿನ ಹಿಂಜರಿತ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ ಸದರಿ ಮುಖ್ಯ ರಸ್ತೆಗಳ ವಿಭಜಕದ ಕೆಲಸಕ್ಕೆ ಐದಾರು ವರ್ಷಗಳಾದರೂ ಕಾಲಕೂಡಿ ಬಂದಿಲ್ಲ. ಇಷ್ಟು ವರ್ಷಗಳಾದರೂ ಸ್ಥಳೀಯ ಶಾಸಕರು ಗಮನ ಹರಿಸದೇ ಇರುವುದು ಅಚ್ಚರಿ ಎನಿಸಿದೆ. ದಿನೇ ದಿನೇ ವಾಹನ ದಟ್ಟನೆ ಹೆಚ್ಚಿದ್ದು, ಈ ರಸ್ತೆಗಳಲ್ಲಿ ಸುವ್ಯವಸ್ಥೆಯ ವಿಭಜಕಗಳಿಲ್ಲದೇ ಇರುವುದು ವಾಹನಗಳು ಅಡ್ಡಾ-ದಿಡ್ಡಿ ಸಂಚರಿಸುತ್ತಿವೆ. ಈ ವಿಭಜಕದಲ್ಲಿ ಬಿಡಾಡಿ ದನಗಳು ವಿಶ್ರಮಿಸುತ್ತಿದ್ದು, ಕೆಲವೊಮ್ಮೆ ವಾಹನಗಳ ಸಂಚಾರಕ್ಕೆ ಅಡಚಣೆಗೆ ಕಾರಣವಾಗುತ್ತಿದೆ.

Advertisement

ಹಸಿರು ಮಾಯ: ಪಟ್ಟಣದ ಸೌಂದಯೀಕರಣದ ಹಿನ್ನೆಲೆಯಲ್ಲಿ ಹಸೀಕರಣಕ್ಕಾಗಿ ರಸ್ತೆ ವಿಭಜಕಗಳಲ್ಲಿ ಸಸಿಗಳನ್ನು ನೆಡುವ ಬಗ್ಗೆ ಪುರಸಭೆಗೆ ಇಚ್ಛಾಶಕ್ತಿ ಇಲ್ಲ. ಪುರಸಭೆ ನಿರ್ವಹಿಸಬೇಕಾದ ಕಾರ್ಯವನ್ನು ಲಯನ್ಸ್‌ ಕ್ಲಬ್‌ ಸಂಸ್ಥೆ ಸದರಿ ರಸ್ತೆಗಳಲ್ಲಿ ಅಶೋಕ ವೃಕ್ಷದ ಗಿಡಗಳನ್ನು ನೆಟ್ಟಿದ್ದರೂ, ಪುರಸಭೆ ಗಿಡಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಸರಿಯಾದ ನಿರ್ವಹಣೆ ಇಲ್ಲದಿರುವುದು, ಬಿಡಾಡಿ ದನಗಳ ಕಾಟಕ್ಕಾಗಿ ಸಸಿಗಳು ಹಾಳಾಗಿವೆ. ಪುನಃ ಬೆಳೆಸುವುದಕ್ಕೆ ಪುರಸಭೆ ಮನಸ್ಸು ಮಾಡದಿರುವುದು ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ. ವಿಭಜಕಗಳಲ್ಲಿ ಗಿಡಗಳಿದ್ದರೆ ಸಾಧ್ಯವಾದಷ್ಟು ಧೂಳು, ಹೊಗೆ ನಿಯಂತ್ರಿಸುವ ಸಾದ್ಯತೆಗಳಿದ್ದರೂ ಆ ಕಾಳಜಿಯೂ ಪುರಸಭೆಗೆ ಇಲ್ಲವಾಗಿದೆ ಎಂದು ಪರಿಸರವಾದಿ ವೀರೇಶ ಬಂಗಾರಶೆಟ್ಟರ ಕಳಕಳಿಯಾಗಿದೆ.

ಹೆಚ್ಚಿದೆ ವಾಹನ ದಟ್ಟನೆ: ಪಟ್ಟಣದ ಬಸವೇಶ್ವರ ವೃತ್ತದಿಂದ ಪುರಸಭೆ ಎದುರಿನ ಟಿಪ್ಪು ಸುಲ್ತಾನ ವೃತ್ತದವರೆಗಿನ ರಸ್ತೆಯಲ್ಲಿ ವಾರದ ಸಂತೆಯ ರವಿವಾರದಂದು ಜನಜಂಗುಳಿ ಸೇರುತ್ತಿದೆ. ಉಳಿದ ದಿನ ಸದರಿ ರಸ್ತೆ ಸಂಚಾರ ಅಷ್ಟಕಷ್ಟೇ ಇರುವ ಹಿನ್ನೆಲೆಯಲ್ಲಿ ಭಣಗುಡುತ್ತಿರುತ್ತದೆ. ಪಕ್ಕದ ಮಾರುತಿ ವೃತ್ತದಿಂದ ಕನಕದಾಸ ವೃತ್ತ ಗಜೇಂದ್ರಗಡ ರಸ್ತೆ ಸಿಂಗಲ್‌ ರಸ್ತೆಯಾಗಿದ್ದು, ಈ ರಸ್ತೆಯ ಮೂಲಕ ಹುಬ್ಬಳ್ಳಿ, ಮಂಗಳೂರು ಇತರೆಡೆಗೆ ಮುಖ್ಯ ಮಾರ್ಗವಾಗಿರುವ ಹಿನ್ನೆಲೆಯಲ್ಲಿ ಸಹಜವಾಗಿ ವಾಹನಗಳ ದಟ್ಟನೇ ಹೆಚ್ಚಿದೆ.

 

-ಮಂಜುನಾಥ ಮಹಾಲಿಂಗಪುರ

Advertisement

Udayavani is now on Telegram. Click here to join our channel and stay updated with the latest news.

Next