Advertisement

ನಗರದೆಲ್ಲೆಡೆ ಸವಾರ ಸ್ನೇಹಿ ರೋಡ್‌ ಹಂಪ್ಸ್‌

10:11 AM Apr 18, 2018 | |

ಮಹಾನಗರ: ನಗರದಲ್ಲಿ ವಾಹನ ದಟ್ಟಣೆ ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ, ಅಪಘಾತ ಪ್ರಮಾಣ
ನಿಯಂತ್ರಣ ಕಷ್ಟಸಾಧ್ಯವಾಗುತ್ತಿದೆ. ಇದಕ್ಕೆಲ್ಲ ಕಡಿವಾಣ ಹಾಕುವ ಉದ್ದೇಶದಿಂದ ಸಂಚಾರ ಪೊಲೀಸರು ನಗರದೆಲ್ಲೆಡೆ ಆಧುನಿಕ ಮಾದರಿ ರೋಡ್‌ ಹಂಪ್ಸ್‌ ಹಾಗೂ ಸೂಚನ ಫಲಕಗಳನ್ನು ಅಳವಡಿಸುತ್ತಿದ್ದಾರೆ.

Advertisement

ನಗರದಲ್ಲಿ ವಾಹನಗಳ ಸುಗಮ ಸಂಚಾರ ಹಾಗೂ ಅಪಘಾತಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಂಚಾರ ಪೊಲೀಸರು ಹೆಚ್ಚಿನ ಗಮನಹರಿಸುತ್ತಿದ್ದು, ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಇದಕ್ಕಾಗಿ ನಗರ ಸಂಚಾರಿ ಪೊಲೀಸ್‌ ಇಲಾಖೆಯು ಈಗಾಗಲೇ ಆರು ಮಂದಿ ಅಧಿಕಾರಿಗಳ ಪ್ರತ್ಯೇಕ ಸಮಿತಿಯೊಂದನ್ನು ರಚನೆ ಮಾಡಿದೆ. ಈ ಸಮಿತಿಯು ಆಗಾಗ ಸಭೆ ಸೇರಿ ನಗರ ವ್ಯಾಪ್ತಿಯಲ್ಲಿರುವ ಅಪಾಯಕಾರಿ ಅಪಘಾತ ವಲಯವನ್ನು ಗುರುತು ಮಾಡುತ್ತಿದೆ. ಆ ಬಳಿಕ ಚರ್ಚೆ ನಡೆಸಿ ನಗರದ ಪ್ರಮುಖ ಸ್ಥಳಗಳಲ್ಲಿ ರೋಡ್‌ ಹಂಪ್‌ ಮತ್ತು ಸೂಚನ ಫಲಕ ಅಳವಡಿಸಲು ತೀರ್ಮಾನ ಕೈಗೊಳ್ಳುತ್ತಾರೆ.

ಈಗಾಗಲೇ ಜಪ್ಪು, ಕಂಕನಾಡಿ, ಮಣ್ಣಗುಡ್ಡೆ, ಬಿಜೈ, ಕರಂಗಲಪಾಡಿ, ಎಂಜಿ ರಸ್ತೆ, ಕೆಎಸ್‌ ರಸ್ತೆ, ನಂದಿಗುಡ್ಡೆ ಸೇರಿದಂತೆ ವಿವಿಧೆಡೆ ಅಪಘಾತ ವಲಯವನ್ನು ಗುರುತು ಮಾಡಿ ವೈಜ್ಞಾನಿಕ ರೀತಿಯ ರೋಡ್‌ ಹಂಪ್‌ ಅಳವಡಿಸಲಾಗಿದೆ. ಕೆಲವು ಕಡೆಗಳಲ್ಲಿ ಯೂ ಟರ್ನ್ ನಿಷೇಧಿಸಿ ಸೂಚನಾ ಫಲಕ ಅಳವಡಿಸಲಾಗಿದೆ. ಇದಲ್ಲದೆ, ಕೆಲವು ಪ್ರದೇಶವನ್ನು ನೋ ಪಾರ್ಕಿಂಗ್‌ ಪ್ರದೇಶ ಎಂದು ಗುರುತು ಮಾಡಲಾಗಿದ್ದು, ಸೂಚನಾ ಫಲಕ ಹಾಕಲಾಗಿದೆ.

ಅಗಲವಾದ ರೋಡ್‌ ಹಂಪ್‌
ನಗರದೆಲ್ಲೆಡೆ ಹಳೆಯ ಫೈಬರ್‌ ರೋಡ್‌ ಹಂಪ್‌ ಬಗ್ಗೆ ಸಾರ್ವಜನಿಕರಿಂದ ಅಪಸ್ವರ ಕೇಳಿ ಬಂದಿತ್ತು. ಕೆಲವೆಡೆ ಅವೈಜ್ಞಾನಿಕ ರಸ್ತೆ ಉಬ್ಬುಗಳನ್ನು ನಿರ್ಮಿಸಲಾಗಿದ್ದು, ಅದಕ್ಕೂ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದಾಗ ಅವುಗಳನ್ನು ತೆರವುಗೊಳಿಸಿ, ಹೆಚ್ಚು ಸುರಕ್ಷಿತ ಮಾದರಿಯ ಹಂಪ್‌ ಹಾಕಲಾಗಿತ್ತು. ಇನ್ನು ಕೆಲವು ಕಡೆಗಳಲ್ಲಿ ಫೈಬರ್‌ ಹಂಪ್‌ ಕಿತ್ತು ಹೋಗಿವೆ. ಈ ರೋಡ್‌ ಹಂಪ್‌ ಗಳಿಂದ ದ್ವಿಚಕ್ರ ವಾಹನ ಸವಾರರಿಗೆ ಬೆನ್ನು ನೋವು ಉಂಟಾಗುವ ಬಗ್ಗೆ ದೂರುಗಳು ಬಂದಿದ್ದವು. ಈ ಎಲ್ಲ ಅಂಶವನ್ನು ಗಮನಿಸಿ ಸವಾರರ ಸುರಕ್ಷೆಯ ದೃಷ್ಟಿ ಯಿಂದ ಸಂಚಾರಿ ಪೊಲೀಸರು ಅತ್ಯಾಧುನಿಕ ಮಾದರಿಯ ಹಂಪ್‌ಗ್ಳನ್ನು ಅಳವಡಿಸುವುದಕ್ಕೆ ತೀರ್ಮಾನಿಸಿದ್ದಾರೆ.

ಹಂಪ್ಸ್‌ಗಳಿಗೆ ರಿಫ್ಲೆಕ್ಟರ್‌ ಲೈಟ್‌
ಬ್ರಾಂಡೆಡ್‌ ಮಾದರಿಯ ರೋಡ್‌ ಹಂಪ್‌ ಇದಾಗಿದ್ದು, ಬೇರೆ ರೋಡ್‌ ಹಂಪ್‌ಗ್ಳ ಹೋಲಿಕೆ ಮಾಡಿದರೆ ಹೆಚ್ಚು ಅಗಲವಾಗಿದೆ. ಜತೆಗೆ ಅದರ ಉಬ್ಬು ಕೂಡ ಕಡಿಮೆಯಿದ್ದು, ತುಂಬಾ ಬಾಳ್ವಿಕೆ ಬರುತ್ತದೆ. ಇಲಾಖೆಯ ರೋಡ್‌ ಸೇಫ್ಟಿ ವಿಭಾಗ ಕೂಡ ಈ ರೋಡ್‌ ಹಂಪ್‌ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದೆ. ಇನ್ನು ಈ ಹಂಪ್ಸ್ ಗಳನ್ನು ರಾತ್ರಿವೇಳೆಯೂ ಸವಾರರು ಸುಲಭವಾಗಿ ಗುರುತಿಸಬಹುದು. ಏಕೆಂದರೆ, ಅದು ರಿಫ್ಲೆಕ್ಟರ್‌ ಲೈಟ್‌ಗಳನ್ನು ಹೊಂದಿವೆ.

Advertisement

ಇವಿಷ್ಟೇ ಅಲ್ಲದೆ, ಅಪಘಾತ ತಡೆಯುವ ನಿಟ್ಟಿನಲ್ಲಿ ಸಂಚಾರಿ ಪೊಲೀಸ್‌ ಇಲಾಖೆಯು ಸಾರಿಗೆ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ರೋಡ್‌ ಹಂಪ್‌, ಸೂಚನ ಫಲಕಗಳು ಸೇರಿದಂತೆ ಅಪಘಾತದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತಿದೆ.

ಒಳ್ಳೆಯ ಕ್ರಮ
ಅಪಘಾತ ಪ್ರಮಾಣ ಕಡಿಮೆ ಮಾಡುವ ನಿಟ್ಟಿನಲ್ಲಿ ಸಂಚಾರಿ ಪೊಲೀಸರು ಅನೇಕ ಕಡೆಗಳಲ್ಲಿ ರೋಡ್‌ ಹಂಪ್‌ ಮತ್ತು ಸೂಚನ ಫಲಕವನ್ನು ಹಾಕಿದ್ದು ಒಳ್ಳೆಯ ಕ್ರಮ. ಏಕೆಂದರೆ ಇತ್ತೀಚೆಗೆ ಚಾಲಕರ ಅಜಾಗರೂಕತೆಯಿಂದಲೇ ಅಪಘಾತ ಪ್ರಮಾಣ ಹೆಚ್ಚಾಗುತ್ತಿದೆ. ಇದನ್ನು ತಡೆಯಲೂ ರೋಡ್‌
ಹಂಪ್‌ಗ್ಳೇ ಪರಿಹಾರ.
-ಶ್ರೇಯಸ್‌ ಕುಮಾರ್‌,
ಬೈಕ್‌ ಸವಾರ

ಸವಾರರಿಗೆ ಸಂಕಷ್ಟ
ಕೆಲವು ಕಡೆಗಳಲ್ಲಿ ಹೊಸದಾಗಿ ಯೂಟರ್ನ್ ನಿಷೇಧ ಮಾಡಲಾಗಿದೆ. ಕೆಲವೆಡೆ ಇದು ಅನಾವಶ್ಯಕ. ಜೈಲ್‌ರಸ್ತೆಯಿಂದ ಎಂ.ಜಿ.ರಸ್ತೆಗೆ ಹೋಗಬೇಕಾದರೆ ಈ ಹಿಂದೆ ಪಿವಿಎಸ್‌ನಲ್ಲಿ ಯೂಟರ್ನ್ ತೆಗೆಯಬೇಕಿತ್ತು. ಆದರೆ ಈಗ ಇಲ್ಲಿ ಯೂಟರ್ನ್ ನಿಷೇಧಿಸಿದ್ದು, ವಾಹನ ಸವಾರರಿಗೆ ಸುತ್ತು ಹಾಕಿ ಬರಬೇಕಾದ ಅನಿವಾರ್ಯತೆ ಇದೆ.
– ರಮಾಕಾಂತ್‌,
ಉದ್ಯೋಗಿ

ಮೇಲಧಿಕಾರಿಗಳ ಜತೆ ಚರ್ಚೆ
ನಗರದ ಅನೇಕ ಕಡೆಗಳಲ್ಲಿ ಈಗಾಗಲೇ ರೋಡ್‌ ಹಂಪ್ಸ್‌ ಮತ್ತು ಸೂಚನಾ ಫಲಕಗಳನ್ನು ಹಾಕಲಾಗುತ್ತಿದೆ. ಇದಕ್ಕೆ ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಪ್ರಯಾಣಿಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮಗಳನ್ನು ಕೈಗೊಂಡಿದ್ದೇವೆ. ರೋಡ್‌ ಹಂಪ್ಸ್‌ ಅಥವಾ ಸೂಚನಾ ಫಲಕಗಳನ್ನು ತೆಗೆಯಲೇಬೇಕು ಎಂದು ಒತ್ತಡ ಬಂದರೆ ಮೇಲಧಿಕಾರಿಗಳ ಜತೆ ಚರ್ಚೆ ಮಾಡುತ್ತೇವೆ.
 - ಮಂಜುನಾಥ ಶೆಟ್ಟಿ,
ಎಸಿಪಿ ಟ್ರಾಫಿಕ್‌ ಮಂಗಳೂರು 

ಅಪಘಾತ ಪ್ರಮಾಣ ಏರಿಕ
ಮಂಗಳೂರು ನಗರದಲ್ಲಿ ಮೂರು ವರ್ಷಗಳಲ್ಲಿ (2015-17) 2,185 ಅಪಘಾತಗಳಾಗಿವೆ. ಇದರಲ್ಲಿ 313 ಮಾರಣಾಂತಿಕ ಮತ್ತು 1,872 ಮಾರಣಾಂತಿಕವಲ್ಲದ ಅಪಘಾತಗಳಾಗಿವೆ. ಹೆಚ್ಚಾಗಿ ಚಾಲಕನ ಲೋಪವೇ ಅಪಘಾತಗಳಿಗೆ ಮೂಲ ಕಾರಣವಾಗಿದ್ದು, ಇದನ್ನು ತಪ್ಪಿಸುವ ಸಲುವಾಗಿ ಸಂಚಾರಿ ಪೊಲೀಸ್‌ ಇಲಾಖೆಯು ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದೆ.

ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next