Advertisement
ಮಾಹಿತಿ ಹಕ್ಕು ಕಾಯಿದೆ(ಆರ್ಟಿಐ)ಗೆ ಸರಕಾರ ಮಾಡಲು ದ್ದೇಶಿಸಿದ ತಿದ್ದುಪಡಿ ವಿವಾದಕ್ಕೀಡಾಗಿದೆ. ಲೋಕಸಭೆಯಲ್ಲಿ ಮಂಡಿಸಲಾದ ತಿದ್ದುಪಡಿ ಮಸೂದೆಗೆ ರಾಜ್ಯಸಭೆಯಲ್ಲೂ ಅಂಗೀಕಾರ ಸಿಕ್ಕರೆ ಜಾರಿಗೆ ಬರಲಿದೆ. ಎನ್ಡಿಎ ಸರಕಾರ ಹಿಂದಿನ ಅವಧಿಯಲ್ಲೇ ತಿದ್ದುಪಡಿಗೆ ಮುಂದಾದರೂ ವಿಪಕ್ಷಗಳ ತೀವ್ರ ವಿರೋಧದಿಂದಾಗಿ ಕೈಬಿಟ್ಟಿತ್ತು. ಇದೀಗ ನಿಚ್ಚಳ ಬಹುಮತದೊಂ ದಿಗೆ ಎರಡನೇ ಅವಧಿಗೆ ಅಧಿಕಾರಕ್ಕೇರಿರುವ ಮೋದಿ ಸರಕಾರ ಉದ್ದೇಶಿತ ತಿದ್ದುಪಡಿಯನ್ನು ಆದ್ಯತೆಯಲ್ಲಿ ಪರಿಗಣಿಸಿರುವುದು ಅದರ ಉದ್ದೇಶದ ಬಗ್ಗೆ ಕೊಂಚ ಸಂದೇಹ ಮೂಡಿಸಿದೆ.
Related Articles
Advertisement
ಈ ತಿದ್ದುಪಡಿಯ ಪ್ರಕಾರ ಸರಕಾರ ತನ್ನ ಮೂಗಿನ ನೇರಕ್ಕೆ ನಡೆದು ಕೊಳ್ಳದ ಮುಖ್ಯ ಮಾಹಿತಿ ಆಯುಕ್ತರಿಗೆ ಪದಚ್ಯುತಿಯ ಬೆದರಿಕೆಯನ್ನೊಡ್ಡಬಹುದು ಇಲ್ಲವೇ ಅಧಿಕಾರಾವಧಿ ವಿಸ್ತರಣೆಯ ಆಮಿಷ ಒಡ್ಡಬಹುದು. ಅಂತೆಯೇ ವೇತನ ಏರಿಸುವ ಪ್ರಲೋಭನೆ ಯನ್ನೂ ಒಡ್ಡಬಹುದು. ಈ ರಾಜಕೀಯ ಕಾರಣಗಳಿಗಾಗಿ ತಿದ್ದು ಪಡಿಯ ಹಿಂದಿನ ನೈಜ ಉದ್ದೇಶ ಪ್ರಶ್ನೆಗೀಡಾಗಿದೆ. ಹಿಂದಿನ ಅವಧಿ ಯಲ್ಲಿ ಎನ್ಡಿಎ ಸರಕಾರ ಆರ್ಟಿಐಯಿಂದಾಗಿ ಕೆಲವು ಮುಜು ಗರದ ಸನ್ನಿವೇಶಗಳನ್ನು ಎದುರಿಸಿತ್ತು. ಹೀಗಾಗಿ ಕಾಯಿದೆಯನ್ನು ಹಲ್ಲಿಲ್ಲದ ಹಾವನ್ನಾಗಿಸಲಾಗುತ್ತಿದೆ ಎನ್ನುವುದು ವಿಪಕ್ಷಗಳ ಟೀಕೆ.
2005ರಲ್ಲಿ ಆರ್ಟಿಐ ಕಾಯಿದೆಯನ್ನು ಅವಸರದಲ್ಲಿ ಅನುಮೋದನೆ ಪಡೆಯಲಾಗಿತ್ತು. ಆರ್ಟಿಐ ಆಯುಕ್ತರಿಗೆ ಸುಪ್ರೀಂ ಕೋರ್ಟಿನ ನ್ಯಾಯಾಧೀಶರ ಸ್ಥಾನಮಾನವನ್ನು ನೀಡಿದ್ದರೂ ಅವರ ತೀರ್ಪನ್ನು ಹೈಕೋರ್ಟಿನಲ್ಲಿ ಪ್ರಶ್ನಿಸಬಹುದಿತ್ತು. ಅಂತೆಯೇ ಕಾಯಿದೆ ಸರಕಾರಕ್ಕೆ ಕಾನೂನು ರಚಿಸುವ ಅಧಿಕಾರ ವನ್ನು ಕೊಟ್ಟಿರಲಿಲ್ಲ. ಈ ವಿರೋಧಾಭಾಸಗಳನ್ನು ಸರಿಪಡಿಸಲಾ ಗುತ್ತಿದೆ ಅಷ್ಟೇ ಎಂಬುದು ಸರಕಾರದ ವಿವರಣೆ.
ಯಾವುದೇ ಕಾಯಿದೆ ಅಥವಾ ಕಾನೂನನ್ನು ಕಾಲಕಾಲಕ್ಕೆ ಪರಿಷ್ಕರಿಸಬೇಕು ಎನ್ನುವುದು ನಿಜ. ಆರ್ಟಿಐ ಕಾಯಿದೆ ಜಾರಿಗೆ ಬಂದು 15 ವರ್ಷಗಳಾಗುತ್ತಿದ್ದು, ಲೋಪದೋಷಗಳನ್ನು ಸರಿಪಡಿ ಸಲು ಇದು ಪಕ್ವವಾದ ಸಮಯ. ಆದರೆ ಇಂಥ ತಿದ್ದುಪಡಿ ಕಾಯಿದೆಯ ಮೂಲ ಆಶಯಕ್ಕೆ ಭಂಗ ತರಬಾರದೆಂಬ ಎಚ್ಚರಿಕೆ ಆಳುವವರಲ್ಲಿ ಇರಬೇಕಾದದ್ದು ಅವಶ್ಯ. ಆರ್ಟಿಐ ಆಯುಕ್ತರ ಸ್ಥಾನಮಾನ, ಅಧಿಕಾರ, ವೇತನ ಮತ್ತು ಸ್ವಾಯತ್ತೆಯನ್ನು ದುರ್ಬಲಗೊಳಿಸುವ ಪ್ರಯತ್ನ ಬರೀ ಆ ಸಂಸ್ಥೆಯ ಮೇಲೆ ಮಾತ್ರವಲ್ಲದೆ ಒಟ್ಟಾರೆಯಾಗಿ ಇಡೀ ಸಾಂವಿಧಾನಿಕ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುವ ಅಪಾಯವಿದೆ.