Advertisement

ಪತ್ರಕರ್ತ ಬುಖಾರಿ ಹತ್ಯೆಯಲ್ಲಿ ISI, ಲಷ್ಕರ್‌ ಕೈವಾಡ?

05:00 AM Jun 16, 2018 | Team Udayavani |

ಪೊಲೀಸರು ಬಿಡುಗಡೆ ಮಾಡಿದ ಶಂಕಿತರ ಚಿತ್ರ

Advertisement

ಶ್ರೀನಗರ/ಹೊಸದಿಲ್ಲಿ /ಲಂಡನ್‌: ಜಮ್ಮು ಮತ್ತು ಕಾಶ್ಮೀರದ ಹಿರಿಯ ಪತ್ರಕರ್ತ, ‘ರೈಸಿಂಗ್‌ ಕಾಶ್ಮೀರ್‌’ ಪತ್ರಿಕೆ ಸಂಪಾದಕ ಶುಜಾತ್‌ ಬುಖಾರಿ ಹತ್ಯೆಯನ್ನು ಲಷ್ಕರ್‌-ಎ-ತೊಯ್ಬಾ ಉಗ್ರಗಾಮಿ ಸಂಘಟನೆ ನಡೆಸಿದೆ. ಅದಕ್ಕೆ ಪಾಕಿಸ್ಥಾನದ ಗುಪ್ತಚರ ಸಂಸ್ಥೆ ಐಎಸ್‌ಐ ಕುಮ್ಮಕ್ಕು ನೀಡಿರುವ ಸಾಧ್ಯತೆಯಿದೆ ಎಂದು ಕೇಂದ್ರ ಗುಪ್ತಚರ ಸಂಸ್ಥೆ ಹೇಳಿದೆ. ಶ್ರೀನಗರ ಪೊಲೀಸರು ಬಿಡುಗಡೆ ಮಾಡಿರುವ ಸಿಸಿಟಿವಿ ದೃಶ್ಯಾವಳಿಯಲ್ಲಿ ದಾಖಲಾಗಿರುವ ಮೂವರ ಶಂಕಿತರ ಪೈಕಿ ಒಬ್ಬನ ಗುರುತು ಲಷ್ಕರ್‌ ಸಂಘಟನೆಯ ನವೀದ್‌ ಜತ್‌ ಚಹರೆ ಹೋಲುತ್ತಿರುವುದೂ ಈ ಸಂಶಯಕ್ಕೆ ಕಾರಣ ಎನ್ನಲಾಗಿದೆ. ಜತೆಗೆ ಮೆಹ್ರಾಜುದ್ದೀನ್‌ ಬಾಂಗ್ರೂ, ವಾಜಾ ಎಂಬ ಉಗ್ರರೂ ಹತ್ಯೆ ಪ್ರಕರಣದಲ್ಲಿ ಶಾಮೀಲಾಗಿರುವ ಬಗ್ಗೆ ಗುಮಾನಿಗಳಿವೆ.  ಜಮ್ಮು ಮತ್ತು ಕಾಶ್ಮೀರ ಪೊಲೀಸರೂ ಕೂಡಾ ಹತ್ಯೆ ಪ್ರಕರಣಕ್ಕೆ ಉಗ್ರ ಲಿಂಕ್‌ ಖಚಿತ ಪಡಿಸಿದ್ದಾರೆ. 


SIT ರಚನೆ: ಹತ್ಯೆ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ (SIT) ರಚಿಸಲಾಗಿದೆ. ಇದೇ ವೇಳೆ ಜುಬೈರ್‌ ಖಾದ್ರಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ದಾಖಲಾಗಿರುವ ಶಂಕಿತ ವ್ಯಕ್ತಿಗಳಲ್ಲೊಬ್ಬ ಆತ ಎಂದು ದೃಢಪಟ್ಟಿದೆ ಎಂದು ಜಮ್ಮು ಮತ್ತು ಕಾಶ್ಮೀರ ಐಜಿಪಿ ಸ್ವಯಂ ಪ್ರಕಾಶ್‌ ಪಾಣಿ ಹೇಳಿದ್ದಾರೆ. ಕಾಶ್ಮೀರ ವಿವಾದವನ್ನು ಶಾಂತಿಯುತವಾಗಿ ಪರಿಹರಿಸುವ ನಿಟ್ಟಿನಲ್ಲಿ ಶುಜಾತ್‌ ಬುಖಾರಿ ಐರೋಪ್ಯ ಒಕ್ಕೂಟ ಮತ್ತು ಇಸ್ಲಾಮಾಬಾದ್‌ ನಲ್ಲಿ ನಡೆದಿದ್ದ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಈ ಕಾರಣಕ್ಕಾಗಿಯೇ ಅವರನ್ನು ಕೊಲ್ಲಲಾಗಿದೆ ಎಂದು ಊಹಿಸಲಾಗಿದೆ.

ವಿಡಿಯೋ ವೈರಲ್‌: ಇತ್ತೀಚೆಗೆ ಯೋಧ ಔರಂಗಜೇಬ್‌ ಅವರನ್ನು ಗುಂಡು ಹಾರಿಸಿ ಹತ್ಯೆ ಮಾಡುವ ಕೆಲವೇ ಕ್ಷಣಗಳ ಮೊದಲು ಚಿತ್ರೀಕರಿಸಲಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಯೋಧನನ್ನು ಅಪಹರಿಸಿದ್ದ ಹಿಜ್ಬುಲ್‌ ಉಗ್ರರು ಅವರನ್ನು ವಿಚಾರಣೆ ನಡೆಸುತ್ತಿರುವುದು ಇದರಲ್ಲಿ ದಾಖಲಾಗಿದೆ.

ಅಂತ್ಯಕ್ರಿಯೆ: ಪತ್ರಕರ್ತ ಬುಖಾರಿ ಅಂತ್ಯಕ್ರಿಯೆ ಬಾರಾಮುಲ್ಲಾ ಜಿಲ್ಲೆಯ ಕೀರಿ ಎಂಬಲ್ಲಿ ಬಿಗಿ ಭದ್ರತೆಯ ನಡುವೆ ನಡೆಸಲಾಗಿದೆ. ಜಮ್ಮು ಮತ್ತು ಕಾಶ್ಮೀರ ಸರಕಾರದ ಸಚಿವರು, ವಿಪಕ್ಷ ನಾಯಕ ಒಮರ್‌ ಅಬ್ದುಲ್ಲಾ, ಇದಲ್ಲದೆ ಸಾವಿರಾರು ಮಂದಿ ಭಾಗವಹಿಸಿದ್ದರು.

Advertisement

ಖಂಡನೆ: ಹೊಸದಿಲ್ಲಿ, ಶ್ರೀನಗರ, ಲಂಡನ್‌ ಸೇರಿದಂತೆ ವಿಶ್ವದ ಹಲವಾರು ಸ್ಥಳಗಳಲ್ಲಿ ಹತ್ಯೆ ಪ್ರಕರಣ ಖಂಡಿಸಲಾಗಿದೆ. ಲಂಡನ್‌ನಲ್ಲಿರುವ ಅಂತಾರಾಷ್ಟ್ರೀಯ ಪತ್ರಿಕಾ ಸಂಸ್ಥೆ (ಐಪಿಐ) ಹೇಳಿಕೆ ನೀಡಿ, ಇದೊಂದು ಹೇಡಿತನದ ಕೃತ್ಯ ಎಂದು ಟೀಕಿಸಿದೆ.

ದಾಳಿ: ಈ ನಡುವೆ ಶ್ರೀನಗರದ ಕಾಕ್‌ ಸರೈ ಪ್ರದೇಶದಲ್ಲಿ ಉಗ್ರರು ಸೈನಿಕರ ಮೇಲೆ ನಡೆಸಿದ ದಾಳಿಯಲ್ಲಿ ಇಬ್ಬರು ಪೊಲೀಸ್‌ ಸಿಬಂದಿ ಸೇರಿದಂತೆ ಐವರು ಗಾಯಗೊಂಡಿದ್ದಾರೆ. 

ಕಪ್ಪು ಬಣ್ಣದ ಮೊದಲ ಪುಟ


ಶುಜಾತ್‌ ಬುಖಾರಿ ಪ್ರಧಾನ ಸಂಪಾದಕರಾಗಿರುವ ‘ರೈಸಿಂಗ್‌ ಕಾಶ್ಮೀರ್‌’ ಪತ್ರಿಕೆಯ ಮೊದಲ ಪುಟವನ್ನು ದುಃಖಸೂಚಕವಾಗಿ ಕಪ್ಪು ಬಣ್ಣದ ಹಿನ್ನೆಲೆಯಲ್ಲಿ ಅವರ ಫೋಟೋ ಮುದ್ರಿಸಿತ್ತು. ಜತೆಗೆ ಇಂಥ ಕೃತ್ಯಗಳಿಂದ ಎದೆಗುಂದುವುದಿಲ್ಲ ಎಂಬ ಸಂದೇಶವನ್ನೂ ಪ್ರಕಟಿಸಲಾಗಿದೆ. ‘ಹಠಾತ್‌ ಆಗಿ ನೀವು ನಮ್ಮಿಂದ ದೂರ ಹೋದಿರಿ. ಆದರೆ ಉತ್ತಮ ರೀತಿಯ ವೃತ್ತಿಪರತೆ, ಅಸಾಧಾರಣ ಧೈರ್ಯದ ಮನೋಭಾವ ನಮ್ಮಲ್ಲಿ ತುಂಬಿದ್ದೀರಿ. ಇಂಥ ಹೇಡಿತನದ ಕೃತ್ಯಗಳಿಂದ ನಾವು ಎದೆಗುಂದುವುದಿಲ್ಲ. ಎಷ್ಟೇ ಅಪ್ರಿಯ ಸತ್ಯವನ್ನು ಹೇಳುವಂಥ ನಿಮ್ಮ ತತ್ವಾದರ್ಶಗಳನ್ನು ಹೇಳಿಯೇ ಹೇಳುತ್ತೇವೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಬರೆಯಲಾಗಿತ್ತು. 

ಗೋಲಿಬಾರ್‌: ಯುವಕ ಸಾವು
ದಕ್ಷಿಣ ಕಾಶ್ಮೀರದ ಪುಲ್ವಾರಾ ಜಿಲ್ಲೆಯ ನೌಪೋರಾದಲ್ಲಿ ಸೇನೆ ಮತ್ತು ಜನರ ಗುಂಪಿನ ನಡುವೆ ಘರ್ಷಣೆ ನಡೆದಿದೆ. ಆಗ, ಸೇನೆ ಗುಂಡು ಹಾರಿಸಿದ್ದ ಪರಿಣಾಮ ವಿಕಾಸ್‌ ಅಹ್ಮದ್‌ (18) ಎಂಬ ಯುವಕ ಅಸುನೀಗಿ, ಮಹಿಳೆ ಗಾಯಗೊಂಡಿದ್ದಾರೆ. ರಂಜಾನ್‌ ಅವಧಿಯಲ್ಲಿ ಕಾಶ್ಮೀರದಲ್ಲಿ ನಾಗರಿಕರೊಬ್ಬರು ಪ್ರಾಣ ತೆತ್ತಿದ್ದು ಇದೇ ಮೊದಲು. 

Advertisement

Udayavani is now on Telegram. Click here to join our channel and stay updated with the latest news.

Next