Advertisement

ಚೀನದಿಂದ ಸೈಬರ್‌ ಯುದ್ಧ; ಮುಖಭಂಗದ ಬೆನ್ನಲ್ಲೇ ಇನ್ನೊಂದು ಕುತಂತ್ರ ; ಪ್ರಮುಖ ಇಲಾಖೆಗಳೇ ಗುರಿ

03:14 AM Jun 24, 2020 | Hari Prasad |

ಹೊಸದಿಲ್ಲಿ: ಗಡಿಯಲ್ಲಿ ತನ್ನ ಸೈನಿಕರನ್ನು ಛೂಬಿಟ್ಟು ಉಪಟಳ ನೀಡಿ ಮುಖಭಂಗ ಅನುಭವಿಸಿರುವ ಚೀನವು ಈಗ ತೆರೆಮರೆಯಲ್ಲಿ ಭಾರತದ ವಿರುದ್ಧ ಸೈಬರ್‌ ಯುದ್ಧ ಆರಂಭಿಸಿದೆ.

Advertisement

ಕೇಂದ್ರ ಮತ್ತು ವಿವಿಧ ರಾಜ್ಯಗಳ ಸಚಿವಾಲಯಗಳು, ಸರಕಾರಿ ಮತ್ತು ಖಾಸಗಿ ಸಂಸ್ಥೆಗಳು, ಕಾರ್ಪೊರೆಟ್‌ ಸಂಸ್ಥೆಗಳ ಮಾಹಿತಿ ಕದಿಯಲು ಅದು ಮುಂದಾಗಿದೆ ಎಂದು ಸಿಂಗಾಪುರ ಮೂಲದ ಸೈಫ‌ರ್ಮಾ ರಿಸರ್ಚ್‌ ಸಂಸ್ಥೆ ತಿಳಿಸಿದೆ.

ರಕ್ಷಣಾ ಕ್ಷೇತ್ರ, ಟೆಲಿಕಾಂ, ಫಾರ್ಮಸಿ, ಮಾಧ್ಯಮಗಳು, ಸ್ಮಾರ್ಟ್‌ ಫೋನ್‌ ತಯಾರಕರು, ಕಟ್ಟಡ ನಿರ್ಮಾಣ ಮತ್ತು ಟೈರ್‌ ತಯಾರಿಕೆ ಕ್ಷೇತ್ರಗಳನ್ನು ಹ್ಯಾಕರ್‌ಗಳು ಟಾರ್ಗೆಟ್‌ ಮಾಡಿಕೊಂಡಿದ್ದಾರೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

ಕೇಂದ್ರ ರಕ್ಷಣೆ, ವಿದೇಶಾಂಗ ಹಾಗೂ ಮಾಹಿತಿ ಮತ್ತು ಪ್ರಸಾರ ಖಾತೆಗಳ ಮೇಲೆ ಹ್ಯಾಕರ್‌ಗಳು ನಿಗಾ ಇರಿಸಿದ್ದಾರೆ. ಕಾರ್ಪೊರೆಟ್‌ ಮತ್ತು ಸರಕಾರಿ ಕಂಪೆನಿಗಳ ಪಟ್ಟಿಯಲ್ಲಿ ರಿಲಯನ್ಸ್‌ ಜಿಯೋ, ಏರ್‌ಟೆಲ್‌, ಬಿಎಸ್ಸೆನ್ನೆಲ್‌, ಮೈಕ್ರೋಮ್ಯಾಕ್ಸ್‌, ಸಿಪ್ಲಾ, ಸನ್‌ ಫಾರ್ಮಾ, ಎಂಆರ್‌ಎಫ್ ಮತ್ತು ಎಲ್‌ ಆ್ಯಂಡ್‌ ಟಿ ಸಂಸ್ಥೆ ಸೇರಿವೆ. ಇವುಗಳ ಇ-ದಾಖಲೆ ಕದ್ದು ಮಸಿ ಬಳಿಯುವ ಉದ್ದೇಶವನ್ನು ಅವರು ಹೊಂದಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮಧ್ಯಪ್ರವೇಶಿಸುವುದಿಲ್ಲ: ರಷ್ಯಾ
ಭಾರತ, ಚೀನ ತಮ್ಮ ನಡುವಣ ಸಮಸ್ಯೆಗಳನ್ನು ಸ್ವತಃ ಇತ್ಯರ್ಥ ಮಾಡಿಕೊಳ್ಳಬಲ್ಲವು. ಹಾಗಾಗಿ ಈಗಿನ ಉದ್ವಿಗ್ನ ಸ್ಥಿತಿಯ ನಿವಾರಣೆಗಾಗಿ ರಷ್ಯಾ ಮಧ್ಯಸ್ಥಿಕೆ ವಹಿಸುತ್ತಿಲ್ಲ ಎಂದು ರಷ್ಯಾ ವಿದೇಶಾಂಗ ಸಚಿವ ಸರ್ಗೆಯಿ ಲಾವ್ರೊವ್‌ ತಿಳಿಸಿದ್ದಾರೆ.

Advertisement

ಹಲ್ಲೆಗೆ ಸ್ವತಃ ಆದೇಶಿಸಿತ್ತು ಚೀನ
ಭಾರತೀಯ ಯೋಧರೇ ನಮ್ಮ ಸೈನಿಕರ ಮೇಲೆ ಮೊದಲು ಹಲ್ಲೆ ನಡೆಸಿದ್ದು ಎನ್ನುತ್ತಿದ್ದ ಚೀನದ ನಿಜ ಬಣ್ಣ ಬಯಲಾಗಿದೆ. ಗಾಲ್ವಾನ್‌ನಲ್ಲಿ ಜೂ. 15ರ ರಾತ್ರಿ ಭಾರತೀಯ ಯೋಧರ ಮೇಲೆ ದಾಳಿ ನಡೆಸಲು ಲಡಾಖ್‌ ಭಾಗದಲ್ಲಿ ಚೀನದ ಪಡೆಯ ನೇತೃತ್ವ ವಹಿಸಿರುವ ಜ| ಝಾವೊ ಝೊಂಗ್‌ಕಿ ಅನುಮತಿ ನೀಡಿದ್ದರು ಚೀನ ಸೈನಿಕರಿಗೆ ಸರಕಾರವೇ ಆದೇಶ ನೀಡಿತ್ತು ಎಂದು ಅಮೆರಿಕದ ಗುಪ್ತಚರ ಇಲಾಖೆ ತಿಳಿಸಿದೆ. ಈ ಹಿಂದೆಯೂ ಭಾರತೀಯ ಯೋಧರ ಜತೆಗೆ ಚೀನದ ಸೈನಿಕರ ಘರ್ಷಣೆಯ ನೇತೃತ್ವ ವಹಿಸಿದ್ದ ಝೊಂಗ್‌ಕಿ, ಗಾಲ್ವಾನ್‌ ಘರ್ಷಣೆಯನ್ನು ಭಾರತಕ್ಕೆ ಪಾಠ ಕಲಿಸುವ ಅವಕಾಶ ಎಂದು ಭಾವಿಸಿದ್ದರು ಎಂದು ಗುಪ್ತಚರ ಮೂಲಗಳು ಹೇಳಿವೆ.

ಜ| ನರವಾಣೆ ಭೇಟಿ
ಎಲ್‌ಎಸಿಯಲ್ಲಿ ಪರಿಸ್ಥಿತಿಯ ತಳಮಟ್ಟದ ಪರಿಶೀಲನೆಗಾಗಿ ಲಡಾಕ್‌ಗೆ 2 ದಿನಗಳ ಭೇಟಿ ನೀಡಿರುವ ಭೂ ಸೇನಾ ಮುಖ್ಯಸ್ಥ ಜ| ಎಂ.ಎಂ. ನರವಾಣೆ ಗಾಲ್ವಾನ್‌ನಲ್ಲಿ ಗಾಯಗೊಂಡು, ಲೇಹ್‌ನಲ್ಲಿರುವ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭಾರತೀಯ ಯೋಧರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಅವರ ಜತೆಗೆ ನಾರ್ದರ್ನ್ ಆರ್ಮಿ ಕಮಾಂಡರ್‌ ಲೆ|ಜ| ವೈ.ಕೆ. ಜೋಶಿ ಇದ್ದರು.

ಮಾತುಕತೆ ಫ‌ಲಪ್ರದ
ಭಾರತ – ಚೀನ ಗಡಿ ರೇಖೆಯ ಮಾಲ್ಡೋದಲ್ಲಿ 2 ದಿನಗಳಿಂದ ನಡೆಯು ತ್ತಿದ್ದ ಉಭಯ ದೇಶಗಳ ಕಮಾಂಡರ್‌ ಮಟ್ಟದ ಮಾತುಕತೆ ಯಶಸ್ವಿಯಾಗಿದೆ. ವಿವಾದಿತ ಸ್ಥಳಗಳಲ್ಲಿ ಎರಡೂ ಕಡೆಯವರು ಹೂಡಿರುವ ವಾಸ್ತವ್ಯಗಳನ್ನು ತೆರವುಗೊಳಿಸಲು ಸೇನಾಧಿಕಾರಿಗಳು ಒಪ್ಪಿದ್ದಾರೆ. ಸತತ 11 ತಾಸುಗಳ ಕಾಲ ನಡೆದ ಮಾತುಕತೆಯಲ್ಲಿ ಈ ಒಮ್ಮತದ ನಿರ್ಧಾರಕ್ಕೆ ಬರಲಾಗಿದೆ. ಎರಡೂ ಕಡೆಗಳ ಅಧಿಕಾರಿಗಳು ಹೃತ್ಪೂರ್ವಕ, ಸದಾಶಯದಿಂದ ಸ್ಪಂದಿಸಿದ್ದಾರೆ ಎಂದು ಭಾರತೀಯ ಸೇನೆ ಪ್ರಕಟಿಸಿದೆ.

ಬಾಂಧವ್ಯ ಕಾಪಾಡಿಕೊಳ್ಳುವುದೇ ಸವಾಲು: ಜೈಶಂಕರ್‌
ಈ ಕಾಲಘಟ್ಟದಲ್ಲಿ ಯಾವುದೇ ರಾಷ್ಟ್ರ ತನ್ನ ಮತ್ತು ಇತರ ದೇಶಗಳ ಜತೆಗಿನ ಬಾಂಧವ್ಯವನ್ನು ಕಾಪಾಡಿಕೊಳ್ಳುವುದಷ್ಟೇ ಮುಖ್ಯವಾಗಿ ಉಳಿದಿಲ್ಲ. ತಲೆ ತಲಾಂತರಗಳಿಂದ ಇರುವ ಬಾಂಧವ್ಯವನ್ನು ಹಿಡಿದಿಟ್ಟುಕೊಳ್ಳುವುದರ ಜತೆಗೆ, ನಮ್ಮ ನಡೆ- ನುಡಿಯಿಂದ ನೆರೆಯ ರಾಷ್ಟ್ರಗಳಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸುವುದೂ ಮುಖ್ಯ. ಅದೇ ಈಗ ನಮ್ಮ ಮುಂದಿರುವ ಅತೀ ದೊಡ್ಡ ಸವಾಲು ಎಂದು ಭಾರತದ ವಿದೇಶಾಂಗ ಸಚಿವ ಜೈಶಂಕರ್‌, ಚೀನದ ವಿದೇಶ ಸಚಿವ ವಾಂಗ್‌ ಯಿ ಅವರಿಗೆ ಪರೋಕ್ಷವಾಗಿ ತಿಳಿ ಹೇಳಿದ್ದಾರೆ.

ರಷ್ಯಾ ಆಯೋಜಿಸಿರುವ ಭಾರತ – ಚೀನ – ರಷ್ಯಾ ವಿದೇಶಾಂಗ ಸಚಿವರ ತ್ರಿಪಕ್ಷೀಯ ವರ್ಚುವಲ್‌ ಸಭೆಯಲ್ಲಿ ಪಾಲ್ಗೊಂಡ ಅವರು, ಅಂತಾರಾಷ್ಟ್ರೀಯ ಕಾನೂನನ್ನು ಬೆಂಬಲಿಸುವುದು, ನೆರೆ ದೇಶಗಳ ಹಿತಾಸಕ್ತಿ ಕಾಪಾಡುವುದು, ವೈವಿಧ್ಯವನ್ನು ಕಾಪಾಡಿಕೊಳ್ಳುವುದು ಮತ್ತು ಸಮುದಾಯದ ಒಳಿತಿಗಾಗಿ ಸಹಕರಿಸುವುದನ್ನು ಎಲ್ಲ ದೇಶಗಳೂ ಪಾಲಿಸಬೇಕಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next