Advertisement

ಸಾಹಿತ್ಯ ಲೋಕಕ್ಕೆ ಜೈನ ಸಮುದಾಯದ ಕೊಡುಗೆ ಅಪಾರ

04:27 PM May 06, 2019 | Naveen |

ರಿಪ್ಪನ್‌ಪೇಟೆ: ಜೈನ ಸಾಹಿತ್ಯದಲ್ಲಿ ವರ್ಣ ಮತ್ತು ಜಾತಿ ದಾಟುವ ಆಶಯವಿದೆ. ಅಂಚಿನ ಸಮುದಾಯದ ಜನರ ಚಿತ್ರಣವಿದ್ದು, ಮೇಲಿನಿಂದ ಕೆಳಗೆ ಹಾಗೂ ಕೆಳಗಿನಿಂದ ಮೇಲೆ ಜೀವಿ ಹಾಗೂ ವ್ಯಕ್ತಿಗಳು ಭಾವನೆಗಳಲ್ಲಿ ಅವತರಿಸುವ ಸಂದೇಶವಿದೆ ಎಂದು ಹಂಪಿ ವಿಶ್ವ ವಿದ್ಯಾಲಯದ ಕುಲಪತಿ ಸ.ಚಿ. ರಮೇಶ ಹೇಳಿದರು.

Advertisement

ಸಮೀಪದ ಹೊಂಬುಜ ಜೈನಮಠದಲ್ಲಿ 50 ವಿಭಿನ್ನ ಅಮೂಲ್ಯ ಗ್ರಂಥಗಳ ಲೋಕಾರ್ಪಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮ ಸಮಾಜದ ನಿರ್ಮಾಣಕ್ಕೆ ಬೇಕಾದ ಆಶಯಗಳಿವೆ. ಈ ಹಿನ್ನೆಯಲ್ಲಿ ಜೈನಕೃತಿಗಳು ಸಾಂಸ್ಕೃತಿಕ ಸಂವಿಧಾನವೇ ಸರಿ. ಕ್ರೂರಿ ಎನ್ನುವ ಕಲ್ಪನೆ ಇಲ್ಲ, ಎಲ್ಲವೂ ಅಹಿಂಸ ಮನೋಭಾವನೆ ಹೊಂದಿರುತ್ತದೆ. ಪರಿಸರದಿಂದ ಕ್ರೂರತ್ವ ಬರುತ್ತದೆ ವಿನಃ ಹುಟ್ಟಿನಿಂದಲ್ಲ. ಮಾನವ ಧರ್ಮದಲ್ಲಿ ಕ್ರೂರ ಮತ್ತು ಕೆಟ್ಟ ಗುಣಗಳನ್ನು ಹೊರತು ಪಡಿಸಿ ಸದ್ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಜೈನಧರ್ಮ ಅಂದಿನಿಂದ ಈತನಕ ಸಮಾಜಕ್ಕೆ ಸಾರುತ್ತಾ ಬಂದಿದೆ ಎಂದರು.

ಸರ್ಕಾರ ಮತ್ತು ವಿಶ್ವವಿದ್ಯಾಲಯಗಳು ಇಂತಹ 50 ಗ್ರಂಥಗಳನ್ನು ಬಿಡುಗಡೆ ಮಾಡುವ ಜವಾಬ್ದಾರಿ ಹೊಂದಿರಬೇಕು. ಆದರೆ ಶ್ರೀಮಠವು ಇಂತಹ ಮಹತ್ಕಾರ್ಯ ಮಾಡಿರುವುದು ಶ್ಲಾಘನೀಯ. ಇದು ಕನ್ನಡ ಸಾಹಿತ್ಯ ಲೋಕಕ್ಕೆ ಜೈನ ಸಮಾಜ ಅಂದು-ಇಂದು ನೀಡಿದ ಅಪಾರ ಕೊಡುಗೆಯಾಗಿದೆ. ಹೊಂಬುಜದಲ್ಲಿ ಸ್ಥಳಾವಕಾಶನೀಡಿದಲ್ಲಿ ಹಂಪಿ ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರ ತೆರೆಯಲಿದ್ದೇವೆ ಎಂದರು.

ಸ್ವಸ್ತಿಶ್ರೀ ಡಾ| ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ವಾತ್ಸಲ್ಯವಾರಿ ಆಚಾರ್ಯ ಶ್ರೀ 108 ವರ್ಧಮಾನ ಸಾಗರರ 100 ನೇ ವರ್ಷದ ದೀಕ್ಷಾಕೋತ್ಸವದ ಅಂಗವಾಗಿ 2019-20ರ ಶಾಂತಿಸಾಗರ ದತ್ತಿ ನಿದಿ ಸ್ಥಾಪಿಸಿ ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದ ಅಧ್ಯಯನ ಕೇಂದ್ರ ತೆರೆಯಲು ಹೊಂಬುಜದಲ್ಲಿ ಸ್ಥಳಾವಕಾಶ ನೀಡಲಾಗುವುದು ಎಂದು ತಿಳಿಸಿದರು. ಪ್ರಾಕೃತ ಸಂಸ್ಕೃತ, ಹಿಂದಿ ಭಾಷೆಯ ಗೊಮ್ಮಟ ಸಾರ ಜೀನಕಾಂಡ, ತಿಲೋಯಪರ್ಣಿತಿ, ತತ್ವಾರ್ಥವೃತಿ, ಸ್ತೋತ್ರ ಸಂಗ್ರಹ ಇತ್ಯಾದಿ ಗ್ರಂಥಗಳಿದ್ದವು. ಈ ಸಂದರ್ಭದಲ್ಲಿ ಶ್ರೀ 108 ವರ್ಧಮಾನ ಸಾಗರ ಮುನಿವೃಂದ, ಆರ್ಯೇಕರು, ಖ್ಯಾತವಿದ್ವಾಂಸಕ ನಾಡೋಜ ಡಾ| ಹಂ.ಪ. ನಾಗರಾಜಯ್ಯ, ಆನಂದ ಪ್ರಕಾಶ ಶಾಸ್ತ್ರಿ ಕೊಲ್ಕತ್ತ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next