Advertisement

ಗೌಪ್ಯತೆಯ ಹಕ್ಕು: ಗಂಭೀರ ಚಿಂತನೆ ಅಗತ್ಯ

03:57 PM Mar 07, 2021 | Team Udayavani |

ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಅದು ನಮ್ಮ ಮೂಲಭೂತ ಹಕ್ಕು ಎನ್ನುವ ಮಾತು ಆಗಾಗ ಕೇಳಿ ಬರುತ್ತಲೇ ಇರುತ್ತದೆ. ಹೀಗೆ ಹೇಳುವವರೆಲ್ಲ ತಮ್ಮ ಮೂಲಭೂತ ಕರ್ತವ್ಯಗಳನ್ನೂ ನೆನಪಿನಲ್ಲಿಡಬೇಕಾಗುತ್ತದೆ.

Advertisement

ನಮ್ಮ ಮೂಲಭೂತ ಹಕ್ಕುಗಳ ಕುರಿತು ಮಾತನಾಡುವಾಗ ನಮ್ಮ ಎಲ್ಲ ಹಕ್ಕಗಳು ಮತ್ತು ಕರ್ತವ್ಯಗಳ ಕುರಿತು ಸಮಾಲೋಚಿಸುವ ಅಗತ್ಯ ಇದೆ. ಅದರಲ್ಲೂ ಪ್ರಸ್ತುತ, ಜಗತ್ತಿನ ಚಿಂತೆಗೆ ಕಾರಣವಾಗಿರುವಂತಹ ಗೌಪ್ಯತೆಯನ್ನು ಕಾಪಾಡಿಕೊಳ್ಳುವುದು ಹೇಗೆ? ಎನ್ನುವುದರ ಕುರಿತು ಚಿಂತನೆ ನಡೆಸಬೇಕಾಗಿದೆ.

ಕಾಯುವ ಬೇಲಿಯೇ ಹೊಲವನ್ನು ಮೇಯ್ದರೆ
ನಮ್ಮ ಗೌಪ್ಯ ಸಂಗತಿಗಳೆಲ್ಲವೂ ನಮಗೆ ತಿಳಿಯದಂತೆ ಜಗಜ್ಜಾಹೀರು ಆಗಿ ಬಿಟ್ಟರೆ, ಅದರಿಂದ ನಾವು ಅನುಭವಿಸಬಲ್ಲ ಅಸಹಾಯಕತೆ ಯಾರಿಗೂ ಹೇಳತೀರದು. ಈ ಉದಾಹರಣೆಗಳಂತೆಯೇ ನಮ್ಮನ್ನು ಒತ್ತಾಯ ಪೂರ್ವಕವಾಗಿ ಅಸಹಾಯಕರನ್ನಾಗಿಸುವುದು ಮಾತ್ರವಲ್ಲದೆ, ನಮ್ಮ ಗೌಪ್ಯ ಸಂಗತಿಗಳನ್ನು, ಅತಿ ಮುಖ್ಯ ಮಾಹಿತಿಗಳನ್ನು ನಮ್ಮ ಅರಿವಿಗೆ ಬಾರದಂತೆ ವಿಶ್ವದ ಯಾವುದೋ ಮೂಲೆಯಲ್ಲಿ ಕೂತು ಸಂಗ್ರಹಿಸಿ ಮಾರುವ ದೊಡ್ಡ ಹುನ್ನಾರ ನಡೆಯುತ್ತಲೇ ಇದೆ. ನಮ್ಮ ವೈಯಕ್ತಿಕ ಮಾಹಿತಿಗಳನ್ನು ತಂತ್ರಜ್ಞಾನ ಎಂಬ ನಾಲ್ಕಕ್ಷರದ ಮಾಯಾಲೋಕದೊಳಗೆ ಶೇಖರಿಸಿಡುವ ನಾವು, ಇದು ಸುರಕ್ಷಿತ ಎಂಬ ಭ್ರಮೆಯಲ್ಲಿ ನಿಶ್ಚಿಂತೆಯಿಂದಿರುತ್ತೇವೆ. ಆದರೆ ನಾವು ಮೊಬೈಲ್‌ನಲ್ಲಿ ಗಮನಕೊಡುವ ವಿಷಯಗಳಾಧಾರಿತವಾಗಿ ನಮಗೆ ಇನ್ನಿತರ ಮಾಹಿತಿಗಳನ್ನು ಬೇಡದಿದ್ದರೂ ನೀಡುವ ಸವಲತ್ತು ಪ್ರಸ್ತುತ ಇದೆ.

ಮೂಲಭೂತ ಹಕ್ಕುಗಳ ಬಗ್ಗೆ ಮಾತನಾಡುವವರಲ್ಲಿ ಹೆಚ್ಚಿನವರು ಅಭಿವ್ಯಕ್ತಿ ಸ್ವಾತಂತ್ಯದ ಬಗ್ಗೆ ಮಾತ್ರ ಮಾತಾಡೋದ್ಯಾಕೆ? ಉಳಿದವುಗಳ ಬಗ್ಗೆ ಯಾಕಿಲ್ಲ ಗಮನ? ಮೂಲಭೂತ ಹಕ್ಕುಗಳಲ್ಲಿ ಪ್ರಸ್ತುತ ಹೆಚ್ಚು ಸದ್ದು ಮಾಡುತ್ತಿರುವುದು ಗೌಪ್ಯತೆಯ ಹಕ್ಕು. 2017ರಲ್ಲಿ ಖಾಸಗಿತನದ ಮಹತ್ವವನ್ನರಿತು ಗೌಪ್ಯತೆಯ ಹಕ್ಕನ್ನು ಮೂಲಭೂತ ಹಕ್ಕುಗಳ ಪಟ್ಟಿಗೆ ಸೇರಿಸಲಾಯಿತು. ಆದರೆ ಅದಾದ ನಂತರದಲ್ಲಿ ನಮ್ಮೆಲ್ಲರ ಖಾಸಗಿ ಮಾಹಿತಿಗಳು ಸಂರಕ್ಷಿಸಲ್ಪಡುವುದಕ್ಕೆ ಪ್ರಯತ್ನಗಳು ನಡೆದಿರುವುದು ಅತ್ಯಲ್ಪ.

ಪ್ರತಿಯೊಬ್ಬರಲ್ಲೂ ಮುನ್ನೆಚ್ಚರಿಕೆ ಬೇಕು
ಇನ್ನು ಸಾಮಾಜಿಕ ಜಾಲತಾಣಗಳು ನಂಬಿಕೆಯನ್ನು ಗಿಟ್ಟಿಸಿ, ಅನಂತರ ಆ ನಂಬಿಕೆಗೆ ನೀರೆರಚುವ ಕಾಯಕವನ್ನು ಸದ್ದಿಲ್ಲದೆ ಮಾಡುತ್ತಿವೆ. ನಮ್ಮ ವೈಯಕ್ತಿಕ ಮಾಹಿತಿಗಳನ್ನು ತನಗಿಷ್ಟ ಬಂದವರಿಗೆ ನೀಡುವ ಮೂಲಕ ಜನರ ಗೌಪ್ಯ ಸಂಗತಿಗಳನ್ನು ಹಣ ಮಾಡುವ ಸಾಧನವನ್ನಾಗಿ ಮಾಡಿಕೊಂಡಿವೆ. ಕೆಲವು ದಿನಗಳ ಹಿಂದೆ ವಾಟ್ಸಪ್‌ನ ವಿಷಯದಲ್ಲಗಿದ್ದೂ ಇದೆ. ಇಂತಹ ಬೆಳವಣಿಗೆಗಳ ಕುರಿತು ಗಂಭೀರವಾಗಿ ಯೋಚಿಸುವ ಅಗತ್ಯ ಇದೆ.

ಭಾರತದಲ್ಲಿ ಗೌಪ್ಯತೆಯ ಹಕ್ಕನ್ನೇನೋ ಮೂಲಭೂತ ಹಕ್ಕನ್ನಾಗಿ ಮಾಡಿಯಾಗಿದೆ . ಆದರೆ ನಮ್ಮ ಗೌಪ್ಯತೆಗೆ ಚ್ಯುತಿ ಬಂದರೆ ಅದರ ವಿರುದ್ಧ ಧ್ವನಿ ಎತ್ತುವವರ ಸಂಖ್ಯೆ ತೀರಾ ಕಡಿಮೆ. ಈ ಗೌಪ್ಯತೆ ಎನ್ನುವುದು ಕೇವಲ ಒಬ್ಬ ವ್ಯಕ್ತಿಗೆ ಮಾತ್ರ ಸೀಮಿತವಾಗಿರುವುದಲ್ಲ. ಪ್ರತೀ ದೇಶಕ್ಕೂ ಅದರದ್ದೇ ಆದ ಗೌಪ್ಯ ಸಂಗತಿಗಳಿರುತ್ತವೆ. ಅವುಗಳನ್ನು ಇತರ ದೇಶಗಳಿಂದ ಮರೆಮಾಚಲು ಶತಪ್ರಯತ್ನವನ್ನು ಎಲ್ಲ ರಾಷ್ಟ್ರಗಳು ಮಾಡುತ್ತಲೇ ಇರುತ್ತವೆ. ಕೆಲವು ವರ್ಷಗಳಿಂದ ಚೀನಾ ವಸ್ತುಗಳ ಬಹಿಷ್ಕಾರಕ್ಕಾಗಿ ಭಾರತದಾದ್ಯಂತ ದೊಡ್ಡ ಆಂದೋಲನವೇ ಎದ್ದು ಬಿಟ್ಟಿದೆ. ಚೀನಾ ನಮ್ಮನ್ನು ಆರ್ಥಿಕವಾಗಿ ಲೂಟಿ ಮಾಡುವುದಲ್ಲದೇ, ಭೌಗೋಳಿಕವಾಗಿ ನಮ್ಮ ಗಡಿಯನ್ನು ಕಬಳಿಸುವ ದುಸ್ಸಾಹಸಕ್ಕೆ ಕೈ ಹಾಕುತ್ತಿದೆ. ಅದರ ಜತೆಗೆ ತಂತ್ರಜ್ಞಾನದ ಶಕ್ತಿಯಿಂದ ಭಾರತದ ಮತ್ತು ಭಾರತೀಯರ ಸಕಲ ಮಾಹಿತಿಯನ್ನೂ ಕಲೆ ಹಾಕುತ್ತಿದೆ. ತಾನು ಇತರ ದೇಶಗಳಿಗೆ ರಫ್ತು ಮಾಡುವ ತಂತ್ರಜ್ಞಾನದ ಮೂಲಕ ಮತ್ತೂಂದು ರಾಷ್ಟ್ರದ ಗೌಪ್ಯ ಸಂಗತಿಗಳನ್ನು ಕದಿಯುವ ನೀಚ ಕಾಯಕ ಇದಾಗಿದೆ. ಈ ವಿಷಯದ ಕಾರಣಕ್ಕಾಗಿಯೇ ಇತ್ತೀಚೆಗೆ ಹತ್ತಾರು ಚೀನಾ ಆ್ಯಪ್‌ಗ್ಳನ್ನು ಭಾರತದಲ್ಲಿ ನಿಷೇಧಿಸಲಾಯಿತು.

Advertisement

ಇಂತಹ ಸಮಸ್ಯೆ ಕೇವಲ ಭಾರತಕ್ಕೆ ಮಾತ್ರವಲ್ಲ ಎಲ್ಲ ರಾಷ್ಟ್ರಗಳೂ ಎದುರಿಸುತ್ತಿವೆ. ಭಾರತದಲ್ಲಿ ಈ ಕುರಿತಾದ ಸಮಸ್ಯೆಗಳು ಜಾಸ್ತಿಯಾಗುತ್ತಿದ್ದರೂ ಅದಕ್ಕೆ ಕಡಿವಾಣ ಹಾಕಬಲ್ಲಂತಹ ಸೂಕ್ತ ನಿಯಗಳಿಲ್ಲ. 2000ದಲ್ಲಿ ಜಾರಿಗೆ ಬಂದ Information Technology Act ಅನ್ನು ಸೈಬರ್‌ ಕ್ರೈಮ್‌ ಮತ್ತು ಖಾಸಗಿ ಮಾಹಿತಿ ಸಂರಕ್ಷಣೆಗಾಗಿ ಬಂದಂತಹ ಭಾರತದ ಮೊದಲ ನಿಯಮ. ಅದಾದ ಬಳಿಕ ದೊಡ್ಡ ಮಟ್ಟದಲ್ಲಿ ಇದರ ಕುರಿತು ಸರಕಾರ ಗಮನ ಕೊಟ್ಟಂತಿಲ್ಲ. ಆ ಕಾರಣದಿಂದಲೋ ಏನೋ ಸೈಬರ್‌ ಕ್ರೈಮ್‌ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. 2018ರಲ್ಲಿ 28,248 ಕೇಸ್‌ಗಳು ಪತ್ತೆಯಾದರೆ 2019ರಲ್ಲಿ 44,546 ಕೇಸ್‌ ಗಳು ಪತ್ತೆಯಾಗಿವೆ!

ಎರಡು ವರ್ಷಗಳ ಹಿಂದಿನಿಂದ Personal Data Protection Bill-2019 ಅನ್ನು ಜಾರಿಗೆ ತರುವ ಕುರಿತು ಚರ್ಚೆ ಸಂಸತ್ತಿನಲ್ಲಿ ನಡೆಯುತ್ತಿದೆ. ಕೆಲವು ಬದಲಾವಣೆಗಳೊಂದಿಗೆ ಇದನ್ನು ಜಾರಿಗೊಳಿಸಬೇಕು ಮತ್ತು ಸರಕಾರ ಸೂಕ್ತ ಕ್ರಮಗಳನ್ನು ಇದರ ಹೊರತಾಗಿಯೂ ತೆಗೆದುಕೊಳ್ಳಬೇಕು. ಜನತೆಯೂ ತಮ್ಮ ಮಾಹಿತಿಗಳನ್ನು ಗೌಪ್ಯವಾಗಿಡುವಲ್ಲಿ ಆದಷ್ಟು ಎಚ್ಚರಿಗೆಯನ್ನು ವಹಿಸಬೇಕು.


ಅರುಣ್‌ ಕಿರಿಮಂಜೇಶ್ವರ, ವಿವೇಕಾನಂದ ಕಾಲೇಜು, ಪುತ್ತೂರು.

Advertisement

Udayavani is now on Telegram. Click here to join our channel and stay updated with the latest news.

Next