Advertisement

ದೇಶದಲ್ಲಿರುವ ಆದಾಯ ಮೂಲಗಳು ಜಪ್ತಿಯಾಗಲಿ; ಡಿ ಕಂಪೆನಿಗೆ ಮರ್ಮಾಘಾತ

07:53 AM Sep 15, 2017 | |

1993ರ ಸರಣಿ ಬಾಂಬ್‌ ಸ್ಫೋಟ ಸೇರಿದಂತೆ ಭಾರತದಲ್ಲಿ ನೂರಾರು ಪಾತಕಗಳನ್ನು ಎಸಗಿ ಪಾಕಿಸ್ಥಾನದಲ್ಲಿ ಅಡಗಿಕೊಂಡಿರುವ ಭೂಗತ ಜಗತ್ತಿನ ಪಾತಕಿ ದಾವೂದ್‌ ಇಬ್ರಾಹಿಂನ 42000 ಕೋ.ರೂ.ಗೂ ಅಧಿಕ ಮೌಲ್ಯದ ಸ್ವತ್ತುಗಳನ್ನು ಬ್ರಿಟನ್‌ ಸರಕಾರ ಜಪ್ತಿ ಮಾಡಿರುವುದು ಅವನ ಅಪರಾಧ ಸಾಮ್ರಾಜ್ಯವನ್ನು ಮಟ್ಟ ಹಾಕುವ ಪ್ರಯತ್ನಕ್ಕೆ ಮಹತ್ವದ ಯಶಸ್ಸು ಎನ್ನಬಹುದು. ನೇರವಾಗಿ ದಾವೂದ್‌ ವಿರುದ್ಧ ಕಾರ್ಯಾಚರಣೆ ನಡೆಸಲು ಪಾಕಿಸ್ಥಾನ ಬಹುದೊಡ್ಡ ಅಡ್ಡಿಯಾಗಿದೆ. ಹೀಗಾಗಿ ಅವನನ್ನು ಪರೋಕ್ಷವಾಗಿ ಮಟ್ಟ ಹಾಕುವುದು ಅನಿವಾರ್ಯವಾಗಿತ್ತು. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ಕೇಂದ್ರ ಒಂದೊಂದೇ ಬಿಗಿಪಟ್ಟು ಹಾಕುತ್ತಿದೆ. ಕಳೆದ ವರ್ಷ ಯುಎಇ ಕೂಡ ದಾವೂದ್‌ಗೆ ಸೇರಿದ ಸಾವಿರಾರು ಕೋ. ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಇದೀಗ ಬ್ರಿಟನ್‌ ಸರದಿ. ದಾವೂದ್‌ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರ ಅನುಸರಿಸುತ್ತಿರುವ ತಂತ್ರಕ್ಕೂ ಹಿಂದಿನ ಸರಕಾರಗಳು ಅನುಸರಿಸುತ್ತಿದ್ದ ತಂತ್ರಗಳಿಗೂ ಭಾರೀ ವ್ಯತ್ಯಾಸವಿದೆ. ಹಿಂದೆ ದಾವೂದ್‌ ಪಾಕಿಸ್ಥಾನದಲ್ಲೇ ಇದ್ದಾನೆ ಎಂದು ಸಾಬೀತುಪಡಿಸಲು ಕಡತಗಟ್ಟಲೆ ದಾಖಲೆಗಳನ್ನು ಕೊಟ್ಟು ಅವನನ್ನು ಗಡೀಪಾರು ಮಾಡಿ ಎಂದು ವಿನಂತಿಸುವುದೇ ದೊಡ್ಡ ರಾಜತಾಂತ್ರಿಕ ನಡೆಯಾಗಿತ್ತು. ಎಷ್ಟೇ ದಾಖಲೆಗಳನ್ನು ಒದಗಿಸಿದರೂ ಪಾಕಿಸ್ಥಾನ ದಾವೂದ್‌ ನಮ್ಮಲ್ಲಿಲ್ಲ ಎಂಬ ಹಳೇ ವಾದವನ್ನು ಮಂಡಿಸಿ ಬಾಯಿ ಮುಚ್ಚಿಸುತ್ತಿತ್ತು. ಇದರಿಂದ ಯಾವ ಪ್ರಯೋಜನವೂ ಇಲ್ಲದಿದ್ದರೂ ಈ ಪ್ರಹಸನ ಮಾತ್ರ ಪದೇ ಪದೇ ಪುನರಾವರ್ತನೆಯಾಗುತ್ತಿತ್ತು. ಆದರೆ ಈಗಿನ ಸರಕಾರ ಈ ಹಾದಿಯನ್ನು ಬಿಟ್ಟು ಪಾತಕಿಯ ಆರ್ಥಿಕ ಮೂಲಗಳಿಗೆ ಕೊಡಲಿಯೇಟು ಹಾಕಿ ಅವನ ಸಾಮ್ರಾಜ್ಯವನ್ನು ದುರ್ಬಲಗೊಳಿಸುವ ಹಾದಿಯನ್ನು ಅನುಸರಿಸುತ್ತಿದ್ದು, ಇದು ಯಶಸ್ವಿಯಾಗುವ ಲಕ್ಷಣಗಳು ಕಾಣಿಸುತ್ತಿದೆ. 

Advertisement

ಎರಡು ವರ್ಷದ ಹಿಂದೆ ಬ್ರಿಟನ್‌ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಮೋದಿ ಅಲ್ಲಿನ ಸರಕಾರಕ್ಕೆ ಬ್ರಿಟನ್‌ನಲ್ಲಿ ದಾವೂದ್‌ ಹೊಂದಿರುವ ಸ್ವತ್ತುಗಳ ದಾಖಲೆಗಳನ್ನು ಹಸ್ತಾಂತರಿಸಿದ್ದರು. ಈ ದಾಖಲೆಗಳ ಆಧಾರದಲ್ಲಿ ಬ್ರಿಟನ್‌ ಜಪ್ತಿ ಮಾಡಿದೆ. ಜಗತ್ತಿನ ಅತಿ ಸಿರಿವಂತ ಕ್ರಿಮಿನಲ್‌ಗ‌ಳ ಸಾಲಿನಲ್ಲಿ ದಾವೂದ್‌ ಎರಡನೇ ಸಾಲಿನಲ್ಲಿದ್ದಾನೆ. ಭಾರತ, ಪಾಕಿಸ್ಥಾನ ಮಾತ್ರವಲ್ಲದೆ ಜರ್ಮನಿ, ಟರ್ಕಿ, ಫ್ರಾನ್ಸ್‌, ಸ್ಪೈನ್‌, ಮೊರಕ್ಕೊ, ಸೈಪ್ರಸ್‌, ದಕ್ಷಿಣ ಆಫ್ರಿಕಾ ಸೇರಿದಂತೆ ವಿಶ್ವದ ಎಲ್ಲ ಭೂಖಂಡಗಳ ದೇಶಗಳಲ್ಲಿ ಅವನು ವ್ಯವಹಾರ ವಿಸ್ತರಿಸಿದೆ. ಈ ಸಂಪತ್ತಿನ ಬಲದಿಂದಲೇ ಅವನು ಪಾಕಿಸ್ಥಾನವನ್ನು ಕಿರುಬೆರಳಿನಲ್ಲಿ ಕುಣಿಸುತ್ತಿದ್ದಾನೆ. ಕಾಶ್ಮೀರದಲ್ಲಿ ಪಾಕಿಸ್ಥಾನ ಉಗ್ರರನ್ನು ಛೂ ಬಿಟ್ಟು ಎಸಗುತ್ತಿರುವ ರಕ್ತಪಾತದ ಹಿಂದೆಯೂ ದಾವೂದ್‌ ಕೈವಾಡವಿದೆ. ಇಂತಹ ಕೃತ್ಯಗಳಿಗೆ ದಾವೂದ್‌ ಧಾರಾಳ ಧನ ಮತ್ತು ಜನ ಸಹಾಯ ಮಾಡುತ್ತಿದ್ದಾನೆ. ಅಮೆರಿಕೆ ಈಗಾಗಲೇ ಅವನನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸಿದೆ. ವಿಶ್ವಸಂಸ್ಥೆಯೂ ದಾವೂದ್‌ ಪಾಕಿಸ್ಥಾನದಲ್ಲಿರುವುದನ್ನು ದೃಢೀಕರಿಸಿರುವುದು ಭಾರತದ ರಾಜತಾಂತ್ರಿಕ ಹೋರಾಟಕ್ಕೆ ಸಂದಿರುವ ದೊಡ್ಡ ಜಯ. ದಾವೂದ್‌ ಇಟ್ಟುಕೊಂಡಿರುವ 15 ಬದಲಿ ಹೆಸರುಗಳನ್ನು ಕೂಡ ವಿಶ್ವಸಂಸ್ಥೆ ಬಹಿರಂಗಗೊಳಿಸಿದೆ. ಕರಾಚಿಯ ಕ್ಲಿಫ್ಟನ್‌ ರಸ್ತೆಯಲ್ಲಿರುವ ಬಂಗಲೆಯಲ್ಲಿ ದಾವೂದ್‌ ವಾಸವಾಗಿರುವುದು ಈಗ ರಹಸ್ಯ ವಿಷಯವಲ್ಲ. ಇದು ಪಾಕಿಸ್ಥಾನದ ಅತ್ಯಂತ ಸುರಕ್ಷಿತ ಪ್ರದೇಶವಾಗಿದ್ದು, ಸ್ವತಹ ಪಾಕಿಸ್ಥಾನದ ಸೈನಿಕರೇ ಇಲ್ಲಿ ದಾವೂದ್‌ಗೆ ಅಂಗರಕ್ಷಕರಾಗಿದ್ದಾರೆ. ಇದಲ್ಲದೆ ಆಗಾಗ ವಾಸ್ತವ್ಯ ಬದಲಾಯಿಸಲು ಕೂಡ ಹಲವಾರು ಬಂಗಲೆಗಳನ್ನು ದಾವೂದ್‌ ಪಾಕಿಸ್ಥಾನದಲ್ಲಿ ನಿರ್ಮಿಸಿಕೊಂಡಿದ್ದಾನೆ. ಐಎಸ್‌ಐ ಮತ್ತು ಪಾಕ್‌ ಸೈನಿಕರ ಕಣ್ಣು ತಪ್ಪಿಸಿ ಒಂದು ಸೊಳ್ಳೆಯೂ ಒಳಗೆ ಪ್ರವೇಶಿಸಲಾಗದ ಅಬೇಧ್ಯ ಕೋಟೆಗಳಿವು. 

ಭಾರತಕ್ಕೆ ಎಂದೆ‌ಂದಿಗೂ ವಾಸಿಯಾಗದ ಬರೆ ಎಳೆದಿದ್ದರೂ ಈ ಪಾತಕಿಯನ್ನು ಆರಾಧಿಸುವ, ಅವನು ಎಸೆಯುವ ಮಾಮೂಲು ಎಂಜಲು ಕಾಸಿಗಾಗಿ ಬಾಯಿಬಿಡುವ ಅನೇಕ ಮಂದಿ ಇಲ್ಲಿ ಇದ್ದಾರೆ ಎನ್ನುವುದು ನಾವು ವಿಷಾದಿಸಬೇಕಾದ ವಿಷಯ. ಬಾಲಿವುಡ್‌, ರಿಯಲ್‌ ಎಸ್ಟೇಟ್‌, ಹೈಪರ್‌ ಮಾರ್ಕೆಟ್‌ ಎಂದು ಎಲ್ಲೆಡೆಗಳಲ್ಲಿ ದಾವೂದ್‌ನ ಬೇನಾಮಿ ಹೂಡಿಕೆಯಿದೆ. ಪಾಕಿಸ್ಥಾನದಲ್ಲಿ ಮುದ್ರಿತವಾಗುವ ನಕಲಿ ನೋಟುಗಳನ್ನು ಚಲಾವಣೆಗೆ ಬಿಡುವ ಜಾಲವನ್ನು ದಾವೂದ್‌ ನಿಯಂತ್ರಿಸುತ್ತಿದ್ದಾನೆ. ಕ್ರಿಕೆಟ್‌ ಬೆಟ್ಟಿಂಗ್‌ ಅವನ ಆದಾಯ ಮುಖ್ಯ ಮೂಲಗಳಲ್ಲಿ ಒಂದು. ಇದರ ಜತೆಗೆ ಹಫ್ತಾ ವಸೂಲು, ವ್ಯಾಜ್ಯ ಬಗೆಹರಿಸುವಂತಹ ಸಾಂಪ್ರದಾಯಿಕ ಅಕ್ರಮ ಮೂಲಗಳಿಂದ ಭಾರೀ ಪ್ರಮಾಣದ ಆದಾಯವಿದೆ. ಒಂದು ಮೂಲದ ಪ್ರಕಾರ ಈಗಲೂ ದಾವೂದ್‌ನ ಶೇ. 40 ಆದಾಯ ಭಾರತದಿಂದಲೇ ಬರುತ್ತಿದೆ. ಉನ್ನತ ಸರಕಾರಿ ಅಧಿಕಾರಿಗಳು ಮತ್ತು ರಾಜಕಾರಣಿಗಳು ಕೂಡ ದಾವೂದ್‌ನ ಹಿತೈಷಿಗಳ ಲಿಸ್ಟ್‌ನಲ್ಲಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ವಿದೇಶಗಳ ಆದಾಯ ಮೂಲಕ್ಕೆ ಕೊಡಲಿಯೇಟು ಹಾಕಿದಂತೆ ಭಾರತದಲ್ಲಿರುವ ಈ ಬೇನಾಮಿ ಹೂಡಿಕೆಗಳನ್ನು ಪತ್ತೆ ಹಚ್ಚಿ ಜಪ್ತಿ ಮಾಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next