Advertisement

ಹಲಸಿನಿಂದ ಹುಲುಸಾದ ಆದಾಯ

11:31 AM Jun 12, 2017 | Harsha Rao |

ಹುಬ್ಬಳ್ಳಿಗೆ ಶಿವಮೊಗ್ಗಕ್ಕೂ ಸಂಬಂಧ ಇದೆ. ಶಿವಮೊಗ್ಗ ಸುತ್ತಮುತ್ತ ಬೆಳೆದ ಹಲಸು ಘಮ್ಮೆನ್ನುವುದು ಹುಬ್ಬಳ್ಳಿಯಲ್ಲಿ. ಇದರಿಂದಲೇ ಎಷ್ಟೋ ಜನ ಬದುಕು ಕಟ್ಟಿಕೊಂಡಿದ್ದಾರೆ. ಅದು ಹೇಗೆ ಅನ್ನೋದರ ವಿವರಣೆ ಇಲ್ಲಿದೆ. 

Advertisement

ಶಿವಮೊಗ್ಗದ ಸುತ್ತಮುತ್ತ ಹಳ್ಳಿಗಳಲ್ಲಿ ಬೆಳೆಯುವ ಹಲಸಿಗೆ ಹುಬ್ಬಳ್ಳಿ ಬಹುದೊಡ್ಡ ಮಾರುಕಟ್ಟೆ. ಹಲಸು ಇಲ್ಲಿ ಉತ್ತಮ ಬೆಲೆಯನ್ನು ಗಿಟ್ಟಿಸಿಕೊಳ್ಳುತ್ತದೆ.     ತೊಳೆ ಲೆಕ್ಕದಲ್ಲಿ ಉತ್ತಮ ಬೆಲೆಗೆ ಮಾರಾಟವಾಗುತ್ತದೆ. ದೊಡ್ಡ ತೊಳೆಗಳು ಬಿಡಿ ಬಿಡಿಯಾಗಿ, ಸಣ್ಣ ಸಣ್ಣ ತೊಳೆಗಳು ಕಿಲೋ ಲೆಕ್ಕದಲ್ಲಿ ಮಾರಾಟಗೊಳ್ಳುತ್ತದೆ.  ಮೇ ತಿಂಗಳಿನಲ್ಲಿ ಹಲಸಿನ ವ್ಯಾಪಾರಸ್ಥರು ಕ್ರಿಯಾಶೀಲರಾಗುತ್ತಾರೆ. ಜೂನ್‌ಕೊನೆಯ ವರೆಗೆ ದಿನ ನಿತ್ಯ ಬಿಡುವಿಲ್ಲದ ಕೆಲಸ ಇವರದು.

ಮಲೆನಾಡಿನ ಹಳ್ಳಿಗಳಿಗೆ ಭೇಟಿ ನೀಡಿ ಹಲಸಿನ ಕಾಯಿಗಳನ್ನು ಸಂಗ್ರಹಿಸಿ ನಗರಗಳಿಗೆ ಸಾಗಿಸಿ ಮಾರಾಟ ಮಾಡುವ ವ್ಯಾಪಾರಿಗಳ ಸಣ್ಣ ಗುಂಪು ನಗರಗಳಲ್ಲಿ ಕಂಡುಬರುತ್ತದೆ. ಉಳಿದ ದಿನಗಳಲ್ಲಿ ಬೇರೆ ಬೇರೆ ವ್ಯಾಪಾರಗಳಲ್ಲಿ ತೊಡಗಿಕೊಂಡಿರುವ ಅವರು ಹಲಸಿನ ಸೀಸನ್‌ನಲ್ಲಿ ಹಲಸು ಕೃಷಿಗೆ ಮುಂದಾಗುತ್ತಾರೆ. ಹಳ್ಳಿ ಹಲಸಿನ ರುಚಿಯನ್ನು ನಗರವಾಸಿಗಳಿಗೆ ತಲುಪಿಸುವ ಮೂವತ್ತಕ್ಕೂ ಅಧಿಕ ವ್ಯಾಪಾರಸ್ಥರು ಹುಬ್ಬಳ್ಳಿಯಲ್ಲಿದ್ದಾರೆ.

ಎರಡು ತಿಂಗಳು ಹಲಸು ಬಿರುಸು
ಹುಬ್ಬಳ್ಳಿಯ ಈದ್ಗಾ ಮೈದಾನದ ಪಕ್ಕ ಸಾಯಿಬಾಬಾ ಮಂದಿರದ ಎದುರು ಹಲಸಿನ ರಾಶಿ ಹಾಕಿಕೊಂಡು ಕುಳಿತಿರುವ ಮಹಮದ್‌ ಸಾದೀಕ್‌ ಹಲಸಿನ ವ್ಯಾಪಾರಿಗಳಲ್ಲೊಬ್ಬರು. ಹದಿನೈದು ವರ್ಷಗಳಿಂದ ಇದೇ ಸ್ಥಳದಲ್ಲಿ ಹಲಸನ್ನು ಗ್ರಾಹಕರಿಗೆ ತಲುಪಿಸುತ್ತಿರುವ ಇವರದು ಹಲಸಿನ ವ್ಯವಹಾರದಲ್ಲಿ ಪಳಗಿದ ಕೈ. ಹಲಸಿನ ಆಕಾರ, ಮುಳ್ಳುಗಳ ರೀತಿ, ಹಲಸಿನ ಮೇಲ್ಭಾಗದ ತೊಟ್ಟನ್ನು ಗಮನಿಸಿಯೇ ಒಳಗಿರುವ ತೊಳೆ ಹೇಗಿರಬಹುದೆಂದು ಅಂದಾಜಿಸಬಲ್ಲ ಬುದ್ದಿವಂತಿಕೆ ಇವರದು. ಉಳಿದ ದಿನಗಳಲ್ಲಿ ಮೆಣಸಿನ ಕಾಯಿ ವ್ಯಾಪಾರ ಮಾಡುವ ಇವರು ಮೇ ತಿಂಗಳು ಬಂತೆಂದರೆ ಹಲಸಿನ ವ್ಯಾಪಾರಕ್ಕಿಳಿಯುತ್ತಾರೆ. ಜೂನ್‌ ಕೊನೆಯ ವರೆಗೆ ಬಿಡುವು ರಹಿತ ಕೆಲಸ ಇವರದು.

ಶಿವಮೊಗ್ಗ, ತೀರ್ಥಹಳ್ಳಿ, ಸಾಗರ, ಸೊರಬ ಮುಂತಾದ ಕಡೆಗಳ ಹಲಸಿನ ಕಾಯಿಗಳನ್ನು ಖರೀದಿಸುತ್ತಾರೆ. ಶಿವಮೊಗ್ಗದಲ್ಲಿರುವ ಹೋಲ್‌ ಸೇಲ್‌ ವ್ಯಾಪಾರಸ್ಥರಿಂದ ನಾಲ್ಕು ದಿನಕ್ಕೆ ಒಂದು ಲೋಡ್‌ನ‌ಂತೆ ತರಿಸಿಕೊಳ್ಳುತ್ತಾರೆ. ಪ್ರತಿ ಲೋಡ್‌ನ‌ಲ್ಲಿ ಮುನ್ನೂರು ಕಾಯಿಗಳಿರುತ್ತದೆ. ಬೇಡಿಕೆ ಅಧಿಕವಿದ್ದಲ್ಲಿ ಎರಡು ದಿನಕ್ಕೊಮ್ಮೆ ತರಿಸಿಕೊಳ್ಳುವುದೂ ಇದೆ. ಹುಬ್ಬಳ್ಳಿಯಲ್ಲಿರುವ ಹಲವು ಮುಖ್ಯ ವ್ಯಾಪಾರಸ್ಥರಲ್ಲಿ ಇವರೂ ಒಬ್ಬರು. ಇವರಿಂದ ಖರೀದಿಸಿ ನಗರದ ಓಣಿಗಳಲ್ಲಿ ತಳ್ಳು ಗಾಡಿಗಳಲ್ಲಿ ಕೊಂಡೊಯ್ದು ಮಾರುವ ಇನ್ನೊಂದು ವರ್ಗವಿದೆ.  8-10 ಮಂದಿ ಸಹ ವ್ಯಾಪಾರಸ್ಥರು ಇವರಿಂದ ಹಣ್ಣುಗಳನ್ನು ಖರೀದಿಸಿಕೊಂಡು ಗ್ರಾಹಕರಿಗೆ ತಲುಪಿಸಲು ತೊಡಗಿದ್ದಾರೆ. ಹಲಸಿನಿಂದಲೇ ಬದುಕು ಕಟ್ಟಿಕೊಂಡಿದ್ದಾರೆ.

Advertisement

“ವ್ಯಾಪಾರ ಆರಂಭಿಸಿ ಒಂದು ತಿಂಗಳಾಗಿದೆ. ಏಳು ಲೋಡ್‌ ಹಣ್ಣುಗಳನ್ನು ತರಿಸಿಕೊಂಡಿದ್ದೇನೆ. ಎರಡು ಸಾವಿರದ ಒಂದು ನೂರು ಹಣ್ಣುಗಳನ್ನು ವ್ಯಾಪಾರವಾಗಿದೆ. ಈ ಬಾರಿಯ ಬೇಡಿಕೆ ಕಳೆದ ವರ್ಷಕ್ಕಿಂತಲೂ ಜಾಸ್ತಿಯಿದೆ. ಬೇಡಿಕೆಯನ್ನು ಗಮನಿಸಿದರೆ ಇನ್ನೂ 15-20 ಲೋಡ್‌ ಹಲಸು ಬೇಕಾಗಬಹುದು’ ಎನ್ನುತ್ತಾರೆ ಸಾದಿಕ್‌. 

ಈದ್ಗಾ ಮೈದಾನದ ಇನ್ನೊಂದು ಪಾರ್ಶ್ವದಲ್ಲಿ ವ್ಯಾಪಾರ ಮಾಡುತ್ತಿದ್ದ ಬರ್ಕತ್‌ ಉಲ್ಲಾ  ಶಿವಮೊಗ್ಗದ ಹಳ್ಳಿಗಳಿಗೆ ಹೋಗಿ, ರೈತರಿಂದ ಹಲಸಿನ ಕಾಯಿಗಳನ್ನು ಖರೀದಿಸಿ ಹೋಲ್‌ ಸೇಲ್‌ ದರದಲ್ಲಿ ಹುಬ್ಬಳ್ಳಿಯ ಸಣ್ಣ ಸಣ್ಣ ವ್ಯಾಪಾರಸ್ಥರಿಗೆ ಮಾರಾಟ ಮಾಡುತ್ತಾರೆ. ಹುಬ್ಬಳ್ಳಿಯ ಕೇಶ್ವಾಪುರ, ಆದರ್ಶನಗರ, ಅಕ್ಷಯ ಪಾರ್ಕ್‌, ಕೋರ್ಟ್‌ ಸರ್ಕಲ್‌ ಗಳಲ್ಲಿರುವ ಸಣ್ಣ ಸಣ್ಣ ಹಲಸು ವ್ಯಾಪಾರಿಗಳಿಗೆ ಹಲಸಿನ ಕಾಯಿಗಳನ್ನು ಪೂರೈಸುವುದು ಇವರೇ. 

ಬೆಳೆಯುವ ಕ್ರಮ ಬದಲಾಗಬೇಕು
ಹಲಸಿನ ಹಣ್ಣಿಗೆ ದರದಲ್ಲಿ ರಾಜ ಮರ್ಯಾದೆ ಸಿಗಬೇಕೆಂದರೆ ಹಲಸನ್ನು ಬೆಳೆಯುವ ರೈತರಲ್ಲಿ ಪ್ರಜ್ಞೆ ಮೂಡುವ ಅಗತ್ಯವಿದೆ. ನೈಸರ್ಗಿಕವಾಗಿ ಬೆಳೆದಿರುವ ಅಥವಾ ಹಿರಿಯರು ನೆಟ್ಟಿರುವ ಹಲಸಿನ ಮರಗಳಿಂದಲೇ ಕಾಯಿಗಳನ್ನು ಕೊಯ್ಲು ಮಾಡುವುದರಿಂದ ಬೆಲೆ ಸಿಗಲು ಸಾಧ್ಯವಿಲ್ಲ. ಹಲಸಿನ ಸಿಪ್ಪೆ ದಪ್ಪವಿಲ್ಲದ, ಕಡಿಮೆ ರಚ್ಚೆಯನ್ನು ಹೊಂದಿರುವ, ತೆಳುವಾದ ಗುಜ್ಜೆ ಹೊಂದಿರುವ, ತೊಳೆ ಗಾತ್ರ ದಪ್ಪವಿರುವ, ಬೀಜ ಸಣ್ಣದಿರುವ, ತೊಳೆಗಳ ಸಂಖ್ಯೆ ಹೇರಳವಾಗಿರುವ ಅನೇಕ ಹಲಸಿನ ತಳಿಗಳನ್ನು ಇತ್ತೀಚೆಗೆ ಅಭಿವೃದ್ದಿ ಪಡಿಸಲಾಗಿದೆ. ಇಂತಹ ಗಿಡಗಳು ನರ್ಸರಿಗಳಲ್ಲಿಯೂ ಲಭ್ಯ. 

ಇಳುವರಿ ಹೆಚ್ಚಿಸಲು ರಾಸಾಯನಿಕಗಳನ್ನು ಬಳಸದ, ರೋಗ ನಿಯಂತ್ರಣಕ್ಕೆಂದು ಕೀಟನಾಶಕ ಸಿಂಪಡಿಸದ. ಯಾವುದೇ ರೀತಿಯಿಂದಲೂ ಬಾಹ್ಯ ಭಾದೆಗೆ ಒಳಗಾಗದ ಹಣ್ಣು ಹಲಸು. ಸಂಪೂರ್ಣ ಸಾವಯವ ಅಂಶಗಳನ್ನು ಮೈಗೂಡಿಸಿಕೊಂಡಿರುವ ಹಲಸು ಪೌಷ್ಟಿಕವಾದ ಆಹಾರ. ಅಡ್ಡ ಪರಿಣಾಮಗಳಿಲ್ಲದ ಪರಿಪೂರ್ಣಗುಣವನ್ನು ಹೊಂದಿರುವ ಹಲಸು ಗ್ರಾಹಕರಿಗೆ ಸಹಜವಾಗಿಯೇ ಇಷ್ಟವಾಗುವ ಹಣ್ಣು. 

ಕಾರಣ ಬೇಕಿಲ್ಲ, ಲಾಭವೇ ಎಲ್ಲ
ಹಲಸಿನ ಮರ ಇರುವ ಜಾಗಕ್ಕೆ ವಾಹನ ಹೋಗುವುದಿಲ್ಲ. ಭಾರವಾದ ಕಾಯಿಗಳನ್ನು ಆಳೆತ್ತರದ ಮರಗಳಿಂದ ಇಳಿಸುವುದೆಂದರೆ ಸವಾಲಿನ ಸಂಗತಿ. ಹಗ್ಗ ಕಟ್ಟಿ ಕಾಯಿ ಇಳಿಸುವ ಕಸರತ್ತಿಗೆ ನಿಪುಣ ಕೊಯ್ಲುಗಾರರು ಬೇಕು. ಅವರೆಲ್ಲಿ ಸಿಗುತ್ತಾರೆ? ಹೀಗೆ ಸಾಲು ಸಾಲು ಅಡ್ಡ ಪ್ರಶ್ನೆಗಳನ್ನು ಮುಂದಿಟ್ಟು ರೈತರು ಹಲಸು ಮರದಲ್ಲಿಯೇ ಕೊಳೆತರೂ ಬೇಸರಿಸಿಕೊಳ್ಳದ ಮನಃಸ್ಥಿತಿಯಲ್ಲಿದ್ದಾರೆ. ಆದರೆ ವ್ಯಾಪಾರಿ ಹಾಗೆ ಹೇಳುವ ಹಾಗಿಲ್ಲ. ಮರ ಕಾಡಿನ ಮೂಲೆಯಲ್ಲಿದ್ದರೂ, ತೋಟದ ನಡುವಿದ್ದರೂ ಕೊಯ್ಲು ಮಾಡಿಕೊಂಡು ಬರಬೇಕು.  ರೈತರಿಂದ ಹತ್ತು ರೂಪಾಯಿಗೆ ಒಂದು ಕಾಯಿ ದೊರೆತರೂ ದೂರದ ಪ್ರದೇಶಗಳಿಗೆ ರವಾನಿಸುವ, ಮಾರಾಟ ಮಾಡುವ ಹೊತ್ತಿಗೆ 40-50 ರೂ. ಖರ್ಚು ಬಂದಿರುತ್ತದೆ ಎನ್ನುತ್ತಾರೆ ವ್ಯಾಪಾರಿ ಬರ್ಕತ್‌ಉಲ್ಲಾ.

 “ಕಾಯಿ ಕೊಯ್ಲು ಮಾಡುವಾಗ ಮರದಿಂದ ಕೆಳಗೆ ಬಿದ್ದರೆ, ಹಣ್ಣಾದಾಗ ತೊಳೆಗಳು ಕೊಳೆತು ಹೋಗುತ್ತದೆ. ಕಾಯಿ ದೊಡ್ಡದಾಗಿ ಕಂಡರೂ ಹಲವು ಕಾಯಿಗಳಲ್ಲಿ ಒಳಗಡೆ ಗುಂಜಿನ ಪ್ರಮಾಣವೇ ಜಾಸ್ತಿ. ಸಣ್ಣ ಸಣ್ಣ ತೊಳೆಗಳಿರುತ್ತವೆ. ಇದರಿಂದ ನಮಗೆ ನಷ್ಟವೇ ಜಾಸ್ತಿ. ನಾವು ಖರೀದಿಸುವ ಹಲಸಿನ ರಾಶಿಗಳಲ್ಲಿ ಅಂಬಲಿ ಹಲಸಿನ ಕಾಯಿಗಳು ಸೇರಿಕೊಂಡರೆ ಮೇಲ್ನೋಟಕ್ಕೆ ಗೊತ್ತಾಗುವುದಿಲ್ಲ. ಹಣ್ಣಾದಾಗಲೇ ತಿಳಿಯಬೇಕು. ಮಾರಾಟಕ್ಕಿಂತ ಕೊಳೆಯುವುದೇ ಹೆಚ್ಚು ಎಂದು ವ್ಯಾಪಾರದ ಆಗು ಹೋಗುಗಳನ್ನು ವಿವರಿಸಿದರು ಮಹಮದ್‌ ಸಾದೀಕ್‌.

– ಕೋಡಕಣಿ ಜೈವಂತ ಪಟಗಾರ

Advertisement

Udayavani is now on Telegram. Click here to join our channel and stay updated with the latest news.

Next