Advertisement

ರೈತನಿಂದ ವೈದ್ಯರವರೆಗೆ ನಿಸ್ವಾರ್ಥ ಸೇವೆಗೆ ಗೌರವ

02:42 AM Jan 27, 2019 | |

ಹೊಸದಿಲ್ಲಿ: ಕೆಲವು ವರ್ಷಗಳಂತೆ ಈ ಬಾರಿಯೂ ಪದ್ಮ ಪ್ರಶಸ್ತಿಗಳು ದೇಶದ ಮೂಲೆ ಮೂಲೆಯಲ್ಲಿ ನಿಸ್ವಾರ್ಥ ಸೇವೆ ನೀಡುತ್ತಿರುವ ಎಲೆಮರೆ ಕಾಯಿಗಳನ್ನು ಅರಸುತ್ತಾ ಬಂದಿವೆ. ಪದ್ಮ ಗೌರವಕ್ಕೆ ಪಾತ್ರರಾದ 112 ಮಂದಿ ಸಾಧಕರ ಪೈಕಿ 12 ಮಂದಿ ರೈತರು, 14 ವೈದ್ಯರು ಮತ್ತು 9 ಕ್ರೀಡಾಳುಗಳೂ ಸೇರಿದ್ದಾರೆ. ಬೇಬಿಕಾರ್ನ್ ಬೆಳೆಯುವ ರೈತನಿಂದ ಹಿಡಿದು, ಕ್ಯಾಟರ್ಯಾಕ್ಟ್ ಸರ್ಜನ್‌, ಕಬಡ್ಡಿ ಚಾಂಪಿಯನ್‌… ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ರುವಂಥವರನ್ನೂ ಪದ್ಮ ಪುರಸ್ಕಾರ ತಲುಪಿದೆ. ವಿಶೇಷವೆಂದರೆ, ಈ ಬಾರಿ ಪದ್ಮ ಪ್ರಶಸ್ತಿ ಗಾಗಿ ದಾಖಲೆಯ ಸುಮಾರು 50 ಸಾವಿರ ನಾಮನಿರ್ದೇಶನಗಳು ಬಂದಿದ್ದವು. 2014ಕ್ಕೆ ಹೋಲಿಸಿದರೆ ಇದು 20 ಪಟ್ಟು ಹೆಚ್ಚು. ಆ ವರ್ಷ ಒಟ್ಟು 2,200 ನಾಮನಿರ್ದೇಶನಗಳು ಬಂದಿದ್ದವು ಎಂದು ಗೃಹ ಇಲಾಖೆ ಮಾಹಿತಿ ನೀಡಿದೆ.

Advertisement

9 ರಾಜ್ಯಗಳ 12 ರೈತರು: ಒಟ್ಟು 9 ರಾಜ್ಯಗಳ 12 ಮಂದಿ ಕೃಷಿಕರನ್ನು ಪದ್ಮ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಸಾಂಪ್ರದಾಯಿಕ ಕೃಷಿಕರು, ಪ್ರಗತಿಪರ ರೈತರು, ಹೈನುಗಾರಿಕೆ ವಲಯವನ್ನೂ ಪರಿಗಣಿಸಿ, ವಿಶೇಷ ಸಾಧನೆ ಮಾಡಿದವರನ್ನು ಗೌರವಿಸಲಾಗಿದೆ. ಬಡ ಜನರ ಸೇವೆಗೆ ತಮ್ಮ ವೃತ್ತಿಯನ್ನು ಮುಡುಪಾಗಿಟ್ಟಿರುವ 11 ರಾಜ್ಯಗಳ 14 ವೈದ್ಯರ ಸೇವೆಯನ್ನೂ ಪರಿಗಣಿಸಲಾಗಿದೆ. ಇದಲ್ಲದೆ, ಸಮಾಜವಾದಿ ನಾಯಕ ಹುಕುಂದೇವ್‌ ಯಾದವ್‌, ಬುಡಕಟ್ಟು ನಾಯಕ ಕರಿಯಾ ಮುಂಡಾ, ಸಿಖ್‌ ನಾಯಕ ಸುಖ್‌ದೇವ್‌ ಸಿಂಗ್‌, ಮಹಾದಲಿತ ಮಹಿಳಾ ನಾಯಕಿ ಭಾಗೀರಥಿ ದೇವಿ, 1984ರ ಸಿಖ್‌ ವಿರೋಧಿ ದಂಗೆಯ ವಿರುದ್ಧ ಹೋರಾಡುತ್ತಿರುವ ಸಿಖ್‌ ವಕೀಲ ಹರ್ವಿಂದರ್‌ ಸಿಂಗ್‌ ಫ‌ೂಲ್ಕಾ ಕೂಡ ಪದ್ಮ ಗೌರವಕ್ಕೆ ಪಾತ್ರರಾಗಿದ್ದಾರೆ. ಹಲವು ಸುತ್ತಿನ ಪರಿಶೀಲನೆ, ತಜ್ಞರ ಸಲಹೆಗಳನ್ನು ಆಧರಿಸಿ ಈ ಆಯ್ಕೆಗಳನ್ನು ಮಾಡಲಾಗಿದೆ ಎನ್ನುತ್ತಾರೆ ಗೃಹ ಇಲಾಖೆ ಅಧಿಕಾರಿಗಳು.

ಪದ್ಮ ಪುರಸ್ಕಾರ ತಿರಸ್ಕರಿಸಿದ ಗೀತಾ ಮೆಹ್ತಾ
ಒಡಿಶಾ ಸಿಎಂ ನವೀನ್‌ ಪಟ್ನಾಯಕ್‌ ಅವರ ಸಹೋದರಿ, ಖ್ಯಾತ ಲೇಖಕಿ ಗೀತಾ ಮೆಹ್ತಾ ಅವರು ತಮಗೆ ಸಂದಿರುವ ಪದ್ಮಶ್ರೀ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ. ನನ್ನನ್ನು ಪ್ರಶಸ್ತಿಗೆ ಪರಿಗಣಿಸಿದ್ದಕ್ಕೆ ಭಾರತ ಸರಕಾರಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ಆದರೆ, ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸಿದರೆ ತಪ್ಪು ಅರ್ಥ ಉಂಟಾ ಗುತ್ತದೆ. ಇದರಿಂದ ಸರಕಾರಕ್ಕೂ, ನನಗೂ ಮುಜುಗರ ಉಂಟಾಗುತ್ತದೆ. ಹೀಗಾಗಿ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ನನಗೆ ನೀಡಿರುವ ಪ್ರಶಸ್ತಿಯನ್ನು ತಿರಸ್ಕರಿಸುತ್ತಿದ್ದೇನೆ ಎಂದಿದ್ದಾರೆ ಮೆಹ್ತಾ.

Advertisement

Udayavani is now on Telegram. Click here to join our channel and stay updated with the latest news.

Next