ಅಜೆಕಾರು: ಕಡ್ತಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಲವಾರು ಮರಗಳು ಅಪಾಯಕಾರಿ ಸ್ಥಿತಿಯಲ್ಲಿದ್ದು ಇದನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆಗೆ ಪಂಚಾಯತ್ ಆಡಳಿತ ಹಾಗೂ ನಾಗರಿಕರು ಮನವಿ ಮಾಡಿದರೂ ಈವರೆಗೆ ತೆರವುಗೊಂಡಿಲ್ಲ. ಅಪಾಯ ಸಂಭವಿಸುವ ಮೊದಲೇ ಈ ಅಪಾಯಕಾರಿ ಮರಗಳನ್ನು ತೆರವುಗೊಳಿಸಬೇಕೆಂದು ಗ್ರಾಮಸ್ಥರು ಕಡ್ತಲ ಗ್ರಾ.ಪಂ. ಸಭೆಯಲ್ಲಿ ಆಗ್ರಹಿಸಿದರು.
ಪಂಚಾಯತ್ ವ್ಯಾಪ್ತಿಯ ಗ್ರಾಮ ಕರಣಿಕರ ಕಚೇರಿ ಸಮೀಪ, ಕುಕ್ಕುಜೆ ಇಸರ್ಮಾರ್, ಪಡ್ತಕ್ಯಾರು, ಮುಖ್ಯ ರಸ್ತೆಯ ಇಕ್ಕೆಲಗಳು ಸೇರಿದಂತೆ ಹಲವೆಡೆ ಮರಗಳು ಅಪಾಯಕಾರಿ ಸ್ಥಿತಿಯಲ್ಲಿದ್ದು ಗಾಳಿ ಮಳೆ ಸಂದರ್ಭ ಉರುಳಿ ಬಿದ್ದು ಅಪಾಯ ಸಂಭವಿಸುವ ಸಾಧ್ಯತೆಯಿದೆ. ಅನಾಹುತಕ್ಕೂ ಮೊದಲೇ ಅರಣ್ಯ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದರು.
ಅಸಮರ್ಪಕ ಸಹಾಯಧನ
ಬೆಳೆ ಹಾನಿಗೆ ಸರಕಾರದಿಂದ ಸಿಗುವ ಸಹಾಯಧನ ಸಮರ್ಪಕವಾಗಿಲ್ಲ. ರೈತರಿಗೆ ಹಾನಿಯಾದ ಬೆಳೆಯ ಮೌಲ್ಯದಷ್ಟೇ ಪರಿಹಾರ ದೊರಕುವಂತಾಗಬೇಕು ಎಂದು ಗ್ರಾಮಸ್ಥರಾದ ದಯಾನಂದ ಹೆಗ್ಡೆ ಒತ್ತಾಯಿಸಿದರು. ಈ ಬಗ್ಗೆ ಪಂಚಾಯತ್ ಆಡಳಿತ ನಿರ್ಣಯ ಕೈಗೊಂಡು ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ಹೇಳಿದರು.
Advertisement
ಕಡ್ತಲ ಗ್ರಾ.ಪಂ.ನ 2019-20ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಪಂಚಾಯತ್ನ ಸುವರ್ಣ ಸೌಧದ ಸಭಾಭವನದಲ್ಲಿ ಪಂಚಾಯತ್ ಅಧ್ಯಕ್ಷ ಅರುಣ್ ಕುಮಾರ್ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
Related Articles
Advertisement
ಪಂಚಾಯತ್ ವ್ಯಾಪ್ತಿಯ ಮೆಸ್ಕಾಂ ಸಿಬಂದಿ ತುರ್ತು ಸಂದರ್ಭಕರೆ ಸ್ವೀಕರಿಸುತ್ತಿಲ್ಲ. ಪ್ರತೀ ಬಾರಿಯೂ ಮೆಸ್ಕಾಂ ಅಧಿಕಾರಿಯವರನ್ನೇ ಅವಲಂಭಿಸಬೇಕಾಗಿದೆ ಎಂದು ಗ್ರಾಮಸ್ಥರು ದೂರಿದರು. ಕಳೆದ ಕೆಲ ವರ್ಷಗಳಿಂದ ಮೆಸ್ಕಾಂ ಅಧಿಕಾರಿ ಅವರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ಸಿಬಂದಿಗೆ ತುರ್ತು ಸಂದರ್ಭಗಳಲ್ಲಿ ಸ್ಪಂದಿಸುವಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದರು. ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು.
ಗ್ರಾಮಸ್ಥರ ಪರವಾಗಿ ರಘುನಾಥ್ ನಾಯಕ್, ಆನಂದ ನಾಯಕ್, ದಯಾನಂದ ಹೆಗ್ಡೆ ಮಾತನಾಡಿದರು. ಸಭೆಯ ಮಾರ್ಗದರ್ಶಿ ಅಧಿಕಾರಿಯಾಗಿ ಎಂಜಿನಿಯರ್ ಮಧುಕುಮಾರ್ ಭಾಗವಹಿಸಿದ್ದರು. ಜಿ.ಪಂ. ಸದಸ್ಯೆ ಜ್ಯೋತಿಹರೀಶ್, ಗ್ರಾ.ಪಂ.ಉಪಾಧ್ಯಕ್ಷೆ ಮಾಲತಿ ಕುಲಾಲ್, ಸದಸ್ಯರಾದ ಸತೀಶ್ ಪೂಜಾರಿ, ಸುಕೇಶ್ ಹೆಗ್ಡೆ, ಸುಮಿತ್ರಾ, ಜಯಂತಿ ಎಸ್. ಪೂಜಾರಿ, ಲಲಿತಾ, ಪ್ರಕಾಶ್ ಶೆಟ್ಟಿ, ಸಂದ್ಯಾ, ಅಶೋಕ್ ಕುಮಾರ್, ದೊಂಡೇರಂಗಡಿ ಪ್ರಾ. ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಚಂದ್ರಿಕಾ ಕಿಣಿ ಉಪಸ್ಥಿತರಿದ್ದರು. ಆರೋಗ್ಯ, ಮೆಸ್ಕಾಂ, ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಅರಣ್ಯ, ಕಂದಾಯ ಇಲಾಖೆಗಳ ಇಲಾಖಾಧಿ ಕಾರಿಗಳು ಮಾಹಿತಿ ನೀಡಿದರು. ಸಭೆಯ ಪ್ರಾರಂಭಕ್ಕೂ ಮುನ್ನ ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪಿಡಿಒ ಫರ್ಜಾನಾ ಸ್ವಾಗತಿಸಿ, ವಂದಿಸಿದರು.
ಕೃಷಿ ಇಲಾಖೆಯು ಕೃಷಿಕರಿಗೆ ಸಹಕಾರಿಯಾಗುವಂತಹ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತದೆಯಾದರೂ ಕೃಷಿಕರಿಗೆ ಕಾರ್ಯಕ್ರಮದ ಬಗ್ಗೆ ಸೂಕ್ತ ಮಾಹಿತಿ ಒದಗಿಸುತ್ತಿಲ್ಲ ಎಂದು ಗ್ರಾಮಸ್ಥರಾದ ಆನಂದ ನಾಯಕ್ ಹೇಳಿದರು. ಈ ಬಗ್ಗೆ ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಂಡು ಕಾರ್ಯಕ್ರಮದ ಮಾಹಿತಿ ನೀಡಲಾಗುವುದು ಎಂದು ಕೃಷಿ ಅಧಿಕಾರಿ ಹೇಳಿದರು.
ಕೃಷಿಕರಿಗೆ ಮಾಹಿತಿಯಿಲ್ಲ
ಕೃಷಿ ಇಲಾಖೆಯು ಕೃಷಿಕರಿಗೆ ಸಹಕಾರಿಯಾಗುವಂತಹ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತದೆಯಾದರೂ ಕೃಷಿಕರಿಗೆ ಕಾರ್ಯಕ್ರಮದ ಬಗ್ಗೆ ಸೂಕ್ತ ಮಾಹಿತಿ ಒದಗಿಸುತ್ತಿಲ್ಲ ಎಂದು ಗ್ರಾಮಸ್ಥರಾದ ಆನಂದ ನಾಯಕ್ ಹೇಳಿದರು. ಈ ಬಗ್ಗೆ ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಂಡು ಕಾರ್ಯಕ್ರಮದ ಮಾಹಿತಿ ನೀಡಲಾಗುವುದು ಎಂದು ಕೃಷಿ ಅಧಿಕಾರಿ ಹೇಳಿದರು.