Advertisement

ಭೂಸೇನಾ ನಿಗಮ ಕಾರ್ಯ ವೈಖರಿಗೆ ಅಸಮಾಧಾನ

12:22 PM Dec 14, 2019 | Suhan S |

ಬಾಗಲಕೋಟೆ: ಪೂರ್ಣ ಪ್ರಮಾಣದ ಅನುದಾನ ನೀಡಿದರೂ ಕಾಮಗಾರಿ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿರುವ ಭೂ ಸೇನಾ ನಿಗಮದ ಕಾರ್ಯ ವೈಖರಿ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ| ಕೆ. ರಾಜೇಂದ್ರ, ನಿಗಮದ ಉಪ ನಿರ್ದೇಶಕರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ.

Advertisement

ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ನಡೆದ ಎಸ್‌ ಸಿಪಿ, ಟಿಎಸ್‌ಪಿ ಕಾಮಗಾರಿ ಪ್ರಗತಿ ಪರಿಶೀಲನೆ ಹಾಗೂ ಜಿಲ್ಲಾಮಟ್ಟದ ಜಾಗೃತಿ ನಿಯಂತ್ರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಾದಾಮಿ-ಮುಧೋಳದಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ಸಂಪೂರ್ಣ ಅನುದಾನ ಬಿಡುಗಡೆ ಮಾಡಲಾಗಿದೆ. ಕಾಮಗಾರಿಯ ಜವಾಬ್ದಾರಿ ಪಡೆದ ಭೂ ಸೇನಾ ನಿಗಮ ಈವರೆಗೆ ಕಾಮಗಾರಿ ಕೈಗೊಂಡಿಲ್ಲ. ಒಂದು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಎಚ್ಚರಿಕೆ ನೀಡಿದರು.

ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಸಕ್ತ ಸಾಲಿನ ನವೆಂಬರ್‌ ಅಂತ್ಯಕ್ಕೆ ಉಳಿದ ಎಲ್ಲ ಸ್ಥಳೀಯ ಸಂಸ್ಥೆಗಿಂತ ಗುಳೇದಗುಡ್ಡ ಪುರಸಭೆ ಮಾತ್ರ ಅತೀ ಕಡಿಮೆ ಶೇ.40 ಮಾತ್ರ ಪ್ರಗತಿ ಸಾಧಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ಕೂಡಲೇ ನಿಗದಿ ಅವಧಿಯಲ್ಲಿ ಕಾಮಗಾರಿ ಕೈಗೊಳ್ಳಲು ಸೂಚಿಸಿದರು.

ಜಿಲ್ಲೆಯ ಎಲ್ಲ ಸಮಾಜ ಕಲ್ಯಾಣ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ವಸತಿ ನಿಲಯಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಹುನಗುಂದದ ವಸತಿ ನಿಲಯಕ್ಕೆ ಕಾಂಪೌಂಡ್‌ ಇಲ್ಲ. ಹಾಸ್ಟೇಲ್‌ನಲ್ಲಿ ನೀರಿನ ತೊಟ್ಟಿ ಇದ್ದು, ಮಕ್ಕಳು ಬೀಳದಂತೆ ಕ್ರಮ ವಹಿಸಬೇಕು. ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಸ್ವತ್ಛತೆ ಕಾಪಾಡಲು ತಿಳಿಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಮಾತನಾಡಿ, ಸಾಮರಸ್ಯ ಬೆಳೆಸಲು ಜಿಲ್ಲೆಯಾದ್ಯಂತ ವಿವಿಧೆಡೆ ಸಭೆ ಆಯೋಜಿಸಲಾಗುತ್ತಿದೆ. ಜಿಲ್ಲೆಯಲ್ಲಿ ಈ ವರ್ಷ ಜನವರಿಯಿಂದ ನವೆಂಬರ್‌ವರೆಗೆ ಒಟ್ಟು 33 ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 32 ತನಿಖೆ ಹಂತದಲ್ಲಿವೆ ಎಂದರು. ಜಿಲ್ಲೆಯಲ್ಲಿ ಎಲ್ಲ ದೌರ್ಜನ್ಯ ಪ್ರಕರಣಗಳಲ್ಲಿ ಎಲ್ಲರಿಗೂ ಹಂತ ಹಂತವಾಗಿ ಪರಿಹಾರ ಕಳೆದೆರಡು ವರ್ಷಗಳಿಂದ ಆರ್‌ಟಿಜಿಎಸ್‌ ಮೂಲಕವೇ ನೇರವಾಗಿಅವರ ಬ್ಯಾಂಕ್‌ ಖಾತೆಗೆ ಜಮಾ   ಮಾಡಲಾಗುತ್ತಿದೆ. ಮದ್ಯವರ್ತಿಗಳ ಹಾವಳಿ ತಡೆಗೆ ಉತ್ತಮ ಕ್ರಮವಾಗಿದ್ದು, ಜೂನ್‌ದಿಂದ ಇಲ್ಲಿವರೆಗೆ ಒಟ್ಟು 29 ಪ್ರಕರಣಗಳಿಗೆ ಪರಿಹಾರಧನ ನೀಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಜಗದೀಶ ಹೆಬ್ಬಳ್ಳಿ ಸಭೆಗೆ ತಿಳಿಸಿದರು.

ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯಡಿ ಕೃಷಿ ಇಲಾಖೆ ಒಟ್ಟು ಶೇ.73.82, ತೋಟಗಾರಿಕೆ ಇಲಾಖೆ ಶೇ.87.23, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಶೇ.85.51, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶೇ.71.05, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಶೇ.99.50, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಶೇ.70.26, ಕೈಗಾರಿಕೆ ಇಲಾಖೆ ಶೇ.100, ಕಾರ್ಮಿಕ ಇಲಾಖೆ ಶೇ.73, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಶೇ.91.32 ಪ್ರಗತಿ ಸಾಧಿಸಿವೆ. ಒಟ್ಟಾರೆ ವಿಶೇಷ ಘಟಕ ಯೋಜನೆಯಡಿ 59.50 ಕೋಟಿ ರೂ. ಹಾಗೂ ಗಿರಿಜನ ಉಪಯೋಜನೆಯಡಿ 58.68 ಕೋಟಿ ರೂ.ಖರ್ಚು ಮಾಡಲಾಗಿದೆ ಎಂದರು.

Advertisement

ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಾಗೃತಿ ಸಮಿತಿಯ ಸದಸ್ಯ ಎಂ.ಎಚ್‌. ಚಲವಾದಿ, ದುಂಡಪ್ಪ ಸಾವಳಗಿ, ಯಲ್ಲಪ್ಪ ಮೇತ್ರಿ, ಶಂಭುಗೌಡ ಪಾಟೀಲ, ಸುಭಾಸ ಗತ್ತಿ, ಎಸ್‌.ಎಸ್‌. ಗುಳೇದ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next