Advertisement

ಸವಣೂರು ಹೋಬಳಿ ಕೇಂದ್ರ: ಕಂದಾಯ ಸಚಿವರಿಗೆ ಮನವಿ; ಗರಿಗೆದರಿದ ಬೇಡಿಕೆ

01:42 AM Oct 14, 2019 | Sriram |

ಸವಣೂರು: ವೇಗವಾಗಿ ಬೆಳೆಯುತ್ತಿರುವ ಪುತ್ತೂರು ತಾಲೂಕಿನ ಸವಣೂರನ್ನು ಹೋಬಳಿ ಕೇಂದ್ರವನ್ನಾಗಿ ಮಾಡಬೇಕೆಂಬ ಕೂಗು ಕಳೆದ ಹಲವು ವರ್ಷಗಳಿಂದ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಇಲ್ಲಿನ ವಿಶೇಷತೆ ಎಂದರೆ ತಾಲೂಕು ಪುತ್ತೂರು. ವಿಧಾನ ಸಭೆ ಸುಳ್ಯ. ಕಂದಾಯ ಹೋಬಳಿ ಕಡಬ. ಪೊಲೀಸ್‌ ಠಾಣೆ ಬೆಳ್ಳಾರೆ ಹೀಗೆ ಸವಣೂರಿಗೆ ವಿವಿಧ ರೀತಿಯ ಸಂಪರ್ಕಗಳಿವೆ.

Advertisement

ಸುಮಾರು ಮೂರು ದಶಕಗಳಿಂದ ಶ್ರವಣರ ಊರು ಸವಣೂರು ಎಂಬ ಪುಟ್ಟ ಹಳ್ಳಿ ವಿವಿಧ ಕಾರಣಗಳಿಂದ ವೇಗವಾಗಿ ಬೆಳೆಯುತ್ತಿದೆ. ಸರಕಾರಿ, ಖಾಸಗಿ ಶಿಕ್ಷಣ ಸಂಸ್ಥೆಗಳು, ಕಂದಾಯ ಕಚೇರಿ, ಗ್ರಾ.ಪಂ., ವಸತಿ ಸಮುಚ್ಚಯ, ಗ್ರಾ.ಪಂ., ಪೆಟ್ರೋಲ್‌ ಬಂಕ್‌, ವಾಣಿಜ್ಯ ಸಂಕೀರ್ಣ, ರಾಷ್ಟ್ರೀಕೃತ ಬ್ಯಾಂಕ್‌, ಸಹಕಾರಿ ಸಂಘಗಳು, ಸಭಾಭವನ, ವಿದ್ಯುತ್‌ ಸಬ್‌ಸ್ಟೇಷನ್‌ ಮೊದಲಾದ ಆವಶ್ಯಕತೆಗಳು ಬೆಳವಣಿಗೆಗೆ ಪೂರಕವಾಗಿ ಇಲ್ಲಿದೆ.

ಕಡಬ ದೂರ
ಪ್ರಸ್ತುತ ಈ ಭಾಗದ ಗ್ರಾಮದ ಜನರಿಗೆ ಕಂದಾಯ ಹೋಬಳಿ ಹಾಗೂ ತಾಲೂಕು ಕೇಂದ್ರ ಕಡಬ. ಇಲ್ಲಿಗೆ ಸಂಪರ್ಕ ಬಹಳ ತ್ರಾಸದಾಯಕ. ಕಂದಾಯ ಇಲಾಖೆಯ ಕೆಲಸಗಳು ತುಸು ನಿಧಾನಗತಿಯಲ್ಲೇ ನಡೆಯುತ್ತಿ ರುವುದರಿಂದ ಒಂದೇ ಕೆಲಸಕ್ಕೆ ಹಲವು ಬಾರಿ ತೆರಳಬೇಕಾದ ಅನಿವಾರ್ಯತೆ. ಈ ನಿಟ್ಟಿನಲ್ಲಿ ಸವಣೂರಿನಲ್ಲಿ ಕಂದಾಯ ಹೋಬಳಿ ಕೇಂದ್ರ (ನಾಡ ಕಚೇರಿ) ತೆರೆಯುವುದು ಆವಶ್ಯಕ. ಸಂಬಂಧಿಸಿದವರು ಈ ಕುರಿತು ಗಮನಹರಿಸುವುದು ಅಗತ್ಯವಾಗಿದೆ.

ಸಾರ್ವಜನಿಕರಿಗೆ ಎಲ್ಲ ಸೇವೆಗಳನ್ನು ಒಂದೇ ಕಡೆ ನೀಡಬೇಕೆಂಬ ಸರಕಾರದ ಉದ್ದೇಶದಿಂದ ಪಹಣಿ ಪತ್ರ, ಸಂಧ್ಯಾ ಸುರಕ್ಷಾ, ಸರಕಾರದ ವಿವಿಧ ಪಿಂಚಣಿ ಮೊದಲಾದ ಯೋಜನೆಗಳಿಗೆ ಗ್ರಾ.ಪಂ. ಗಳಲ್ಲಿ ಬಾಪೂಜಿ ಸೇವಾ ಕೇಂದ್ರವನ್ನು ಆರಂಭಿಸುವಂತೆ ಸೂಚಿಸ ಲಾಗಿತ್ತು. ಆದರೆ ಈಗ ಗ್ರಾ.ಪಂ.ನಲ್ಲಿ ಪಹಣಿಪತ್ರವೇ ಸಿಗುತ್ತಿಲ್ಲ. ಇದರಿಂದ ಸಾರ್ವಜನಿರಿಗೆ ಯಾವುದೇ ಪ್ರಯೋಜನವಾಗಿಲ್ಲ.

ಸರಕಾರ ಘೋಷಣೆ ಮಾಡಿರುವ ಹೊಸ ತಾಲೂಕು ಕಡಬಕ್ಕೆ ಈ ಭಾಗದ ಬೆಳಂದೂರು, ಸವಣೂರು, ಕಾಣಿಯೂರು ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಾದ ಬೆಳಂದೂರು, ಕುದ್ಮಾರು, ಕಾçಮಣ, ಪಾಲ್ತಾಡಿ, ಸವಣೂರು, ಪುಣcಪ್ಪಾಡಿ, ಕಾಣಿಯೂರು, ಚಾರ್ವಾಕ ಗ್ರಾಮಗಳ ಜನರು ಸೇರ್ಪಡೆ ಕುರಿತು ಬಲವಾಗಿ ವಿರೋಧಿಸಿದ್ದರು.

Advertisement

ಆದರೆ ಈ ಕುರಿತು ಕಾಣಿಯೂರು, ಬೆಳಂದೂರು, ಸವಣೂರು ಈ ಮೂರು ಗ್ರಾ.ಪಂ.ಗಳಿಂದ ಆಕ್ಷೇಪಣೆ ಸಲ್ಲಿಸಲಾಗಿತ್ತು. ಈಗಿರುವಂತೆ ಯೇ ಈ ಮೂರು ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳನ್ನು ಪುತ್ತೂರು ತಾಲೂಕಿನಲ್ಲಿಯೇ ಉಳಿಸಿ, ಸವಣೂರನ್ನು ಹೋಬಳಿ ಕೇಂದ್ರ ವನ್ನಾಗಿ ಮಾಡಬೇಕೆಂಬುದು ಈ ಭಾಗದ ಜನರ ಆಶಯವಾಗಿತ್ತು. ಆದರೆ ಕಡಬ ತಾಲೂಕಿಗೆ ಈ ಭಾಗದ ಗ್ರಾಮಗಳನ್ನು ಸೇರ್ಪಡೆಗೊಳಿಸಿ ಗೆಜೆಟ್‌ ನೋಟಿಫಿಕೇಶನ್‌ ಆಗಿದ್ದರಿಂದ ಆ ಪ್ರಯತ್ನ ಕೈಗೂಡಲಿಲ್ಲ. ಹೋಬಳಿ ಕೇಂದ್ರ ರಚನೆಗೆ ಆವಶ್ಯವಿರುವ ನಿವೇಶನವನ್ನು ನೀಡಲು ಸವಣೂರು ಗ್ರಾ.ಪಂ.ನ ಆಡಳಿತ ಮಂಡಳಿಯಲ್ಲಿ ನಿರ್ಣಯಿಸಲಾಗಿದೆ.

ಕಂದಾಯ ಸಚಿವರಿಗೆ ಮನವಿ
ಸವಣೂರನ್ನು ಹೋಬಳಿ ಕೇಂದ್ರ ಮಾಡಬೇಕೆಂಬ ನಿಟ್ಟಿನಲ್ಲಿ ಈಗಿನ ಸರಕಾರದ ಕಂದಾಯ ಸಚಿವ ಆರ್‌. ಅಶೋಕ್‌ ಅವರಿಗೆ ಈ ಭಾಗದ ಜನರು ಪುತ್ತೂರು ಶಾಸಕ ಸಂಜೀವ ಮಠಂದೂರು, ಸುಳ್ಯ ಶಾಸಕ ಎಸ್‌. ಅಂಗಾರ ಅವರ ನೇತೃತ್ವದಲ್ಲಿ ಎಪಿಎಂಸಿ ಅಧ್ಯಕ್ಷ ದಿನೇಶ್‌ ಮೆದು, ಗ್ರಾ.ಪಂ.ನ ಮಾಜಿ ಉಪಾಧ್ಯಕ್ಷ ರಾಕೇಶ್‌ ರೈ ಕೆಡೆಂಜಿ, ಗ್ರಾ.ಪಂ. ಸದಸ್ಯರಾದ ಪ್ರಕಾಶ್‌ ಕುದ್ಮನಮಜಲು,ಸತೀಶ್‌ ಅಂಗಡಿಮೂಲೆ, ಪಾಲ್ತಾಡಿ ಗ್ರಾಮ ವಿಕಾಸ ಸಮಿತಿ ಅಧ್ಯಕ್ಷ ಪ್ರವೀಣ್‌ ಕುಮಾರ್‌, ಓಂಕಾರ ಸೇವಾ ಸಮಿತಿಯ ತೀರ್ಥರಾಮ ಕೆಡೆಂಜಿ ಅವರ ನಿಯೋಗದಿಂದ ಮನವಿ ಮಾಡ ಲಾಗಿತ್ತು. ಈ ಕುರಿತು ಪೂರಕವಾಗಿ ಸ್ಪಂದಿಸುವುದಾಗಿ ನಿಯೋಗಕ್ಕೆ ಭರವಸೆ ನೀಡಿದ್ದರು.

ಸವಣೂರು ಹೋಬಳಿ ಯಾಕೆ ಬೇಕು?
ಸವಣೂರು ಹೋಬಳಿ ಕೇಂದ್ರವಾದರೆ ಬೆಳಂದೂರು, ಸವಣೂರು, ಕಾಣಿಯೂರು ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಾದ ಬೆಳಂದೂರು, ಕುದ್ಮಾರು, ಕಾçಮಣ, ಪಾಲ್ತಾಡಿ, ಸವಣೂರು, ಪುಣcಪ್ಪಾಡಿ, ಕಾಣಿಯೂರು, ಚಾರ್ವಾಕ, ದೋಳ್ಪಾಡಿಯ ಸಾರ್ವಜನಿಕರಿಗೂ ಅನುಕೂಲವಾಗಲಿದೆ. ಸವಣೂರಿನಲ್ಲಿ ಹೋಬಳಿ ಕೇಂದ್ರವಾದರೆ ಇದಕ್ಕೆ ಹೊಂದಿಕೊಂಡ 9 ಗ್ರಾಮಗಳಿಗೆ ಮತ್ತು ಇತರ 4 ಗ್ರಾಮಗಳಿಗೆ ಪರೋಕ್ಷವಾಗಿ ಕೇಂದ್ರವಾಗುತ್ತದೆ.

 ಗ್ರಾ.ಪಂ. ನಿರ್ಣಯವೂ ಆಗಿದೆ
ಸವಣೂರು, ಬೆಳಂದೂರು, ಕಾಣಿಯೂರು ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳು ಪ್ರಸ್ತಾವಿತ ಕಡಬ ತಾಲೂಕಿಗೆ ಸೇರ್ಪಡೆಯಾಗಿದ್ದು, ಈ ನಿಟ್ಟಿನಲ್ಲಿ ಸವಣೂರನ್ನು ಹೋಬಳಿ ಕೇಂದ್ರವನ್ನಾಗಿ ಮಾಡಬೇಕೆಂಬುದು ಈ ಭಾಗದ ಜನರ ಬೇಡಿಕೆ. ಈ ಕುರಿತು ಗ್ರಾ.ಪಂ.ನಲ್ಲೂ ನಿರ್ಣಯ ಕೈಗೊಳ್ಳಲಾಗಿತ್ತು. ಈ ಭಾಗದ ನಿಯೋಗ ಕಂದಾಯ ಸಚಿವರಿಗೆ ಮನವಿ ಮಾಡಿದೆ. ಬೇಡಿಕೆ ಈಡೇರುವ ಆಶಯ ನಮ್ಮದು.
– ಇಂದಿರಾ ಬಿ.ಕೆ.,
ಅಧ್ಯಕ್ಷರು ಸವಣೂರು ಗ್ರಾ.ಪಂ.

-ಪ್ರವೀಣ್‌ ಚೆನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next