Advertisement
ನವದೆಹಲಿಯಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾದ ಸಂಸದ ಕರಡಿ ಸಂಗಣ್ಣ, ಗಂಗಾವತಿ ರೈಲು ನಿಲ್ದಾಣ ಅಭಿವೃದ್ಧಿಯಿಂದ ಅಂಜನಾದ್ರಿಗೆ ತೆರಳುವ ಭಕ್ತರ ಸಂಖ್ಯೆ ಅಧಿಕವಾಗಲಿದೆ ಎಂದು ಸಚಿವರ ಗಮನಕ್ಕೆ ತಂದಿದ್ದು, ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ.
Related Articles
Advertisement
ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ರೈಲ್ವೆ ಯೋಜನೆ ವಿಸ್ತರಿಸಲಾಗಿದೆ. ಇದು ಬಿಜೆಪಿ ಸರ್ಕಾರದ ಬದ್ಧತೆಯಾಗಿದೆ. ಅಮೃತ ಭಾರತ ಸ್ಟೇಷನ್ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಕೊಪ್ಪಳ ಹಾಗೂ ಮುನಿರಾಬಾದ್ ರೈಲು ನಿಲ್ದಾಣಗಳಿಗೆ ತಲಾ 20 ಕೋಟಿ ರೂ. ಬಿಡುಗಡೆಯಾಗಲಿದೆ. ಈ ಭಾಗದ ಐತಿಹಾಸಿಕ ಸ್ಮಾರಕಗಳ ಚಿತ್ರದಂತೆ ರೈಲು ನಿಲ್ದಾಣದ ಮುಂಭಾಗ ಅಭಿವೃದ್ಧಿಯಾಗಲಿದೆ ಎಂದರು.
ರೈಲ್ವೆ ಗೇಟ್ ಗಳಲ್ಲಿ ವಾಹನ ದಟ್ಟಣೆ ಹೆಚ್ಚಳವಾಗುತ್ತಿದ್ದು, ಇದನ್ನು ತಡೆಯಲು ಮೇಲ್ಸೆತುವೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುದಾನ ನೀಡುತ್ತಿದೆ. ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ರೈಲ್ವೆ ಯೋಜನೆಗಳ ಬಗ್ಗೆ ಕೇಂದ್ರ ಸಚಿವರನ್ನು ಭೇಟಿಯಾದ ತಕ್ಷಣವೇ ಆ ಯೋಜನೆಗೆ ಅನುಮೋದನೆ ಸಿಗುತ್ತಿದೆ. ಸಚಿವರು ಜಿಲ್ಲೆಯ ಅಭಿವೃದ್ಧಿಗೆ ಸ್ಪಂದಿಸುತ್ತಿದ್ದಾರೆ. ಕೇಂದ್ರ ಸಚಿವರಿಗೆ ಜಿಲ್ಲೆಯ ಜನತೆ ಪರವಾಗಿ ಅಭಿನಂದನೆಗಳು. ಜನತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ಕೆಲಸಗಳನ್ನು ನೋಡಿದ್ದಾರೆ. ಮತ್ತೊಮ್ಮೆ ಆಶೀರ್ವಾದ ಮಾಡಲಿದ್ದಾರೆ ಎಂದರು.
ರೈಲ್ವೆ ನಿಲ್ದಾಣದಲ್ಲಿ ಏನೆಲ್ಲ ಅಭಿವೃದ್ಧಿ ಕಾಮಗಾರಿ:
ನಿಲ್ದಾಣದಲ್ಲಿ ರೂಫ್ ಪ್ಲಾಜಾವನ್ನು ರಚಿಸಲಾಗುವುದು. ಉಚಿತ ವೈಫೈ, 5G ಮೊಬೈಲ್ ಟವರ್ಗಳಿಗೆ ಸ್ಥಳಾವಕಾಶ, ರಸ್ತೆಗಳ ಅಗಲೀಕರಣ, ಅನಪೇಕ್ಷಿತ ರಚನೆಗಳನ್ನು ತೆಗೆಯುವುದು, ಸರಿಯಾಗಿ ವಿನ್ಯಾಸಗೊಳಿಸಿದ ಚಿಹ್ನೆಗಳ ಅಳವಡಿಕೆ, ಮೀಸಲಾದ ಪಾದಚಾರಿ ಮಾರ್ಗಗಳು, ಉತ್ತಮ ಪಾರ್ಕಿಂಗ್ ವ್ಯವಸ್ಥೆ, ಸುಧಾರಿತ ಬೆಳಕು, ಸುಗಮ ಪ್ರವೇಶ, ಕೆಫಟೇರಿಯಾ, ವೇದಿಕೆಗಳು, ವಿಶ್ರಾಂತಿ ಕೊಠಡಿಗಳು ಮತ್ತು ಕಚೇರಿಗಳು, ಅಂಗವಿಕಲರಿಗೆ ವಿಶೇಷ ಸೌಕರ್ಯಗಳು, ಉತ್ತಮ ಪೀಠೋಪಕರಣಗಳನ್ನು ಅಳವಡಿಸಲಾಗುವುದು ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಯಲಿದೆ.
ಆ.6 ರಂದು ರೈಲು ನಿಲ್ದಾಣ ಅಭಿವೃದ್ಧಿಗೆ ಚಾಲನೆ:
ಕೊಪ್ಪಳ ಹಾಗೂ ಮುನಿರಾಬಾದ್ ರೈಲು ನಿಲ್ದಾಣಗಳು ಅಮೃತ ಭಾರತ ಸ್ಟೇಷನ್ ಯೋಜನೆಗೆ ಆಯ್ಕೆಯಾಗಿದ್ದು, ಆ. 6 ರಂದು ರೈಲು ನಿಲ್ದಾಣಗಳ ಮರು ಅಭಿವೃದ್ಧಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಚಾಲನೆ ನೀಡಲಿದ್ದಾರೆ. ದೀರ್ಘಾವಧಿಯ ದೃಷ್ಟಿಯೊಂದಿಗೆ ನಿರಂತರ ಆಧಾರದ ಮೇಲೆ ನಿಲ್ದಾಣಗಳ ಅಭಿವೃದ್ಧಿಯಾಗಲಿದೆ. ಮರು ಅಭಿವೃದ್ಧಿ ಅಡಿಗಲ್ಲು ಕಾರ್ಯಕ್ರಮದಲ್ಲಿ ಸಂಸದ ಕರಡಿ ಸಂಗಣ್ಣ ಸೇರಿ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಅಮೃತ ಭಾರತ ಸ್ಟೇಷನ್ ಯೋಜನೆಯಡಿ ಕೊಪ್ಪಳ ಹಾಗೂ ಮುನಿರಾಬಾದ್ ರೈಲು ನಿಲ್ದಾಣ ಆಯ್ಕೆಯಾಗಿದೆ. ಗಂಗಾವತಿ ರೈಲು ನಿಲ್ದಾಣದ ಪ್ರಸ್ತಾವನೆ ಕಳುಹಿಸಿ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಸಚಿವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಯೋಜನೆಯು ಹೊಸ ಸೌಕರ್ಯಗಳ ಪರಿಚಯ ಮತ್ತು ಅಸ್ತಿತ್ವದಲ್ಲಿರುವ ಸೌಕರ್ಯಗಳ ಉನ್ನತೀಕರಣ ಮಾಡಲಿದೆ. – ಸಂಗಣ್ಣ ಕರಡಿ, ಸಂಸದರು.