Advertisement

ಶಾಶ್ವತ ವಸತಿ ಸೌಲಭ್ಯ ಕಲ್ಪಿಸಲು ಮನವಿ

11:29 AM Sep 10, 2019 | Team Udayavani |

ಬೆಳಗಾವಿ: ಗೋಕಾಕ ನಗರದ ಪ್ರವಾಹ ಪೀಡಿತ ಸಂತ್ರಸ್ತರು ಹಾಗೂ ವಸತಿ ರಹಿತ ಬಡ ಜನರಿಗೆ ನಗರದ ಸರಹದ್ದಿನಲ್ಲಿರುವ ಸರಕಾರಿ ಜಾಗದಲ್ಲಿ ಶಾಶ್ವತ ವಸತಿ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ತಾಲೂಕಿನ ವಸತಿ ರಹಿತರು ಸೋಮವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

Advertisement

ಸಂತ್ರಸ್ತರ ನೇತೃತ್ವ ವಹಿಸಿದ್ದ ಉತ್ತರ ಕರ್ನಾಟಕ ವಿಕಾಸ ವೇದಿಕೆ ಅಧ್ಯಕ್ಷ ಅಶೋಕ ಪೂಜಾರಿ ಮಾತನಾಡಿ, ಗೋಕಾಕ ನಗರದ ಪಶ್ಚಿಮ ಮತ್ತು ಉತ್ತರ ದಿಕ್ಕಿಗೆ ಮಾರ್ಕಂಡೇಯ ಮತ್ತು ಘಟಪ್ರಭಾ ನದಿಗಳು ಹರಿಯುತ್ತವೆ. ಈ ಎರಡೂ ನದಿಗಳಿಗೆ ಮಾರ್ಕಂಡೇಯ ಜಲಾಶಯ, ಹಿಡಕಲ್ ಮತ್ತು ಧೂಪದಾಳ ಜಲಾಶಯಗಳು ಗೋಕಾಕ ನಗರದ ಮೇಲ್ಮಟ್ಟದ ಪ್ರದೇಶಗಳಲ್ಲಿ ಇವೆ. ಘಟಪ್ರಭಾ ನದಿಗೆ ಹಿರಣ್ಯಕೇಶಿ ಕೂಡುವುದರಿಂದ ಈ ಮೂರು ನದಿಗಳ ಪ್ರವಾಹಗಳಿಗೆ ಸಿಲುಕಿ ಗೋಕಾಕ ನಗರ ಮೇಲಿಂದ ಮೇಲೆ ಸಂಕಷ್ಟಕ್ಕೆ ಸಿಲುಕುತ್ತಿದೆ ಎಂದರು.

ಈ ವರ್ಷದ ಆಗಸ್ಟ್‌ ತಿಂಗಳಲ್ಲಿ ಉಂಟಾದ ಭೀಕರ ಪ್ರವಾಹವು ಅಪಾರ ಪ್ರಮಾಣದಲ್ಲಿ ಅವಾಂತರ ಸೃಷ್ಟಿಸಿದೆ. ಸಾವಿರಾರು ಕುಟುಂಬಗಳು ಬೀದಿಗೆ ಬಂದಿವೆ. ನೆರೆಯಿಂದಾಗಿ ಸಾವಿರಾರು ಬಡ ಜನರು ಸೂರು ಕಳೆದುಕೊಂಡಿದ್ದಾರೆ. ಬಾಡಿಗೆ ಮನೆಯಲ್ಲಿ ವಾಸಿಸುವ ಬಡ ಜನರು, ವಸತಿ ರಹಿತರಿಗೆ ಶಾಶ್ವತ ಸೂರು ಒದಗಿಸಬೇಕಾಗಿದೆ. ಆದರೆ ಇಷ್ಟೊಂದು ಜನರಿಗೆ ಖಾಸಗಿ ಜಮೀನು ಖರೀದಿಸಿ, ನಿವೇಶನ ಒದಗಿಸುವುದು.

ಸಾಧ್ಯವಿಲ್ಲ. ಗೋಕಾಕ ಸರಹದ್ದಿನಲ್ಲಿರುವ ಸರ್ವೇ ನಂ. 244/ಎ ದಲ್ಲಿರುವ ಸರ್ಕಾರದ ಸುಮಾರು 312 ಎಕರೆ 10 ಗುಂಟೆ ಜಾಗವನ್ನು ಅಭಿವೃದ್ಧಿಪಡಿಸುವ ಮೂಲಕ ಅಲ್ಲಿ ಈ ಜನರಿಗೆ ವಸತಿ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.

ಈ ಪ್ರದೇಶದ ಜಮೀನನ್ನು ಬ್ರಿಟಿಷ್‌ ಸರ್ಕಾರ ಸ್ವಾತಂತ್ರ ಪೂರ್ವದಲ್ಲಿ ಗೋಕಾಕ ಮಿಲ್ಸ್ ಕಂಪನಿಗೆ ನೀಡಿತ್ತು. ಆದರೆ ಕಂಪನಿಯು ಪೂರ್ಣ ಜಮೀನನ್ನು ಉಪಯೋಗಿಸಿಕೊಂಡಿಲ್ಲ. ರಾಜ್ಯ ಸರ್ಕಾರ ಲೀಜ್‌ ಅವಧಿ ವಿಸ್ತರಿಸಿರುವದೂ ಅವೈಜ್ಞಾನಿಕವಾಗಿದೆ. ಆದ್ದರಿಂದ ಈ ಜಾಗವನ್ನು ಹಿಂದಕ್ಕೆ ಪಡೆದು ಅಲ್ಲಿ ಶಾಶ್ವತ ವಸತಿ ಸೌಲಭ್ಯ ಕಲ್ಪಿಸುವಂತೆ ಸರ್ಕಾರಕ್ಕೆ ವರದಿ ಕಳುಹಿಸಬೇಕು ಎಂದು ಅವರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಡಾ. ಎಸ್‌.ಬಿ.ಬೊಮ್ಮನಹಳ್ಳಿ ಅವರು ಈ ಕುರಿತು ಸರಕಾರಕ್ಕೆ ಸಮಗ್ರ ವರದಿ ಸಲ್ಲಿಸಲಾಗುವುದು ಹಾಗೂ ವಸತಿ ರಹಿತರಿಗೆ ಶಾಶ್ವತ ಪರಿಹಾರ ದೊರಕಿಸಿಕೊಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

Advertisement

ಈ ಸಂದರ್ಭದಲ್ಲಿ ದಸ್ತಗೀರ ಪಹೇಲ್ವಾನ್‌, ರಾಜು ಜಾಧವ, ಎ.ವೈ. ಪಂಗಣ್ಣವರ, ಸುನಿಲ ಮುರಕಿಭಾವಿ, ಎಂ.ಟಿ. ಪಾಟೀಲ, ಪ್ರವೀಣ ಪಾಟೀಲ, ಲಕ್ಷ್ಮಣ ತಳ್ಳಿ, ಸುಭಾಷ ಕವಲಗಿ, ಶ್ರೀಶೈಲ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next