Advertisement

ತ್ಯಾಜ್ಯ ವಿಲೇವಾರಿ ಘಟಕ ಸ್ಥಳಾಂತರಕ್ಕೆ ಆಗ್ರಹ

04:08 PM Feb 11, 2020 | Suhan S |

ಭಟ್ಕಳ: ಇಲ್ಲಿನ ಸಾಗರ ರಸ್ತೆಯಲ್ಲಿರುವ ಪುರಸಭೆ ತ್ಯಾಜ್ಯ ವಿಲೇವಾರಿ ಘಟಕದಿಂದ ಜನರು ದಿನಂಪ್ರತಿ ಸಂಕಷ್ಟ ಅನುಭವಿಸುತ್ತಿದ್ದು, ಆದಷ್ಟು ಬೇಗ ಘಟಕ ಸ್ಥಳಾಂತರಿಸಿ ಪಟ್ಟಣ ವ್ಯಾಪ್ತಿಯಲ್ಲಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿ ಮುಟ್ಟಳ್ಳಿ, ತಲಾಂದ, ಕಡಸಲಗದ್ದೆ, ಮರಂಬಳ್ಳಿ ಗ್ರಾಮದ ಸಾರ್ವಜನಿಕರು ಸೋಮವಾರ ಬೆಳಗ್ಗೆ ತ್ಯಾಜ್ಯ ವಿಲೇವಾರಿ ಘಟಕದ ಮುಂದೆ ಧರಣಿ ಸತ್ಯಾಗ್ರಹ ನಡೆಸಿ ಅಧಿಕಾರಿಗಳನ್ನು ಆಗ್ರಹಿಸಿದರು.

Advertisement

ತ್ಯಾಜ್ಯ ವಿಲೇವಾರಿ ಘಟಕದ ಅಸಮರ್ಪಕ ನಿರ್ವಹಣೆ ಹಾಗೂ ಘಟಕದಿಂದ ಬರುತ್ತಿರುವ ದುರ್ವಾಸನೆ, ಕೊಳಕು ನೀರು ಘಟಕದಿಂದ ಹೊರ ಬಿಡುತ್ತಿರುವುದು, ತ್ಯಾಜ್ಯ ತಿಂದು ಸಾಕುಪ್ರಾಣಿಗಳು, ಆಕಳು  ಸಾವನ್ನಪ್ಪುತ್ತಿರುವುದರ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು ಕಡಸಲ ಗದ್ದೆ ಭಾಗದಲ್ಲಿ ಕ್ಯಾನ್ಸರ್‌ ಕಾಯಿಲೆ ಪೀಡಿತರಾಗುತ್ತಿದ್ದೇವೆ ಎಂದೂ ಆರೋಪಿಸಿದರು.

ಕಾನೂನು ಬಾಹಿರವಾಗಿ ಇಲ್ಲಿ ಪುರಸಭೆಯವರು ತ್ಯಾಜ್ಯ ಹಾಕುತ್ತಿದ್ದಾರೆ. ಜನರಿಗೆ ತೊಂದರೆ, ಸಮಸ್ಯೆ ಆಗುತ್ತಿರುವ ತ್ಯಾಜ್ಯ ವಿಲೇವಾರಿ ಘಟಕವನ್ನು ಸ್ಥಳಾಂತರ ಮಾಡಿ ಪುರಸಭೆಯವರು ಪಟ್ಟಣದಲ್ಲೇ ಮಾಡಿಕೊಳ್ಳಲಿ. ಅಮಸರ್ಪಕ ನಿರ್ವಹಣೆಯಿಂದ ವಿನಾ ಕಾರಣ ನಮಗೆ ತೊಂದರೆ ಕೊಡುವುದನ್ನು ನಿಲ್ಲಿಸಲಿ ಎಂದು ಧರಣಿ ನಿರತ ಸಾರ್ವಜನಿಕರು ಆಗ್ರಹಿಸಿದರು.

ಸ್ಥಳಕ್ಕಾಗಮಿಸಿದ ಶಾಸಕ ಸುನೀಲ ನಾಯ್ಕ, ಸಹಾಯ ಆಯುಕ್ತ ಸಾಜೀದ್‌ ಅಹ್ಮದ್‌ ಮುಲ್ಲಾ ಎದುರಿನಲ್ಲೇ ಪುರಸಭೆ ಮುಖ್ಯಾಧಿಕಾರಿಯನ್ನು ಸಾರ್ವಜನಿಕರು ತರಾಟೆ ತೆಗೆದುಕೊಂಡರು. ಶಾಸಕ ಸುನೀಲ ನಾಯ್ಕ ಅವರಲ್ಲಿ ಘಟಕದಿಂದ ಸುತ್ತಮುತ್ತಲಿನ ಜನರುಅನುಭವಿಸುತ್ತಿರುವ ಸಂಕಷ್ಟ, ತೊಂದರೆಗಳ ಬಗ್ಗೆ ವಿವರಿಸಿದರು.

ಸಮಸ್ಯೆ ಆಲಿಸಿದ ಶಾಸಕರು ಘಟಕ ಸ್ಥಳಾಂತರಿಸುವುದು ಕಷ್ಟದ ಕೆಲಸ. ಆದರೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳುವ ಕುರಿತು ಭರವಸೆ ನೀಡಿದರು. ಸಾರ್ವಜನಿಕರಾದ ಜಟ್ಟಪ್ಪ ನಾಯ್ಕ, ಕೃಷ್ಣಾ ನಾಯ್ಕ, ಮುಟ್ಟಳ್ಳಿ ಗ್ರಾಪಂ ಉಪಾಧ್ಯಕ್ಷ ಗಣಪತಿ ನಾಯ್ಕ ಮುಂತಾದವರು ತ್ಯಾಜ್ಯ ಘಟಕದಿಂದಾಗುತ್ತಿರುವ ಸಮಸ್ಯೆ ತಿಳಿಸಿ ಶಾಸಕರು, ಅಧಿಕಾರಿಗಳನ್ನು ಘಟಕದೊಳಗೆ ಕರೆದೊಯ್ದು ಅಲ್ಲಿನಅವ್ಯವಸ್ಥೆ ಬಗ್ಗೆ ತೋರಿಸಿದರು. ಪ್ರತಿಭಟನೆಯಲ್ಲಿ ಮಹಿಳೆಯರು ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next