Advertisement

Repo: ರೆಪೊ ದರ ಯಥಾಸ್ಥಿತಿ ನನಸಾಗದ ಬಡ್ಡಿ ದರ ಇಳಿಕೆಯ ಕನಸು

12:33 AM Oct 11, 2023 | Team Udayavani |

ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಈ ಬಾರಿ ಕೂಡ ರೆಪೊ ದರವನ್ನು ಯಥಾಸ್ಥಿತಿಯಲ್ಲಿ (ಶೇ. 6.5) ಇರಿಸುವ ಮೂಲಕ ಸಾಲದ ಮೇಲಿನ ಬಡ್ಡಿ ಇಳಿಕೆಯ ಸಾಲಗಾರರ ಕನಸಿಗೆ ತಣ್ಣೀರೆರಚಿದೆ.

Advertisement

ರೆಪೊ ದರ ಏರಿಸಿದ ಬಳಿಕ ನಾಲ್ಕು ಬಾರಿ ಆರ್‌ಬಿಐಯ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆ ಸೇರಿದೆ. ದ್ವೆ„ಮಾಸಿಕವಾಗಿ ನಡೆದ ಈ ಸಭೆಯಲ್ಲೂ ರೆಪೊ ದರವನ್ನು ಇಳಿಸುವ ಮನಸ್ಸು ಮಾಡಿಲ್ಲ. ಹಣದುಬ್ಬರ ತಕ್ಕ ಮಟ್ಟಿಗೆ ನಿಯಂತ್ರಣಕ್ಕೆ ಬಂದಿದ್ದರೂ ದೇಶೀಯ ಮತ್ತು ಜಾಗತಿಕ ವಿದ್ಯಮಾನಗಳ ಮೇಲೆ ಕಣ್ಣಿಟ್ಟಿರುವ ಆರ್‌ಬಿಐ ಈಗಲೇ ಅವಸರದ ಅಥವಾ ದೂರಗಾಮಿ ದೃಷ್ಟಿಕೋನ ಇಲ್ಲದ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದೆ.

ದೇಶದಲ್ಲಿ ಈ ಬಾರಿಯ ಮುಂಗಾರು ಮಳೆಯ ಅಸಮರ್ಪಕತೆಯು ಖಾರಿಫ್ ಫ‌ಸಲಿನ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ. ದೇಶದ ಒಟ್ಟಾರೆ ಕೃಷಿ ಉತ್ಪಾದನೆಯಲ್ಲಿ ಮುಂಗಾರು ಪ್ರಮುಖ ಪಾತ್ರ ವಹಿಸುತ್ತಿರುವುದರಿಂದ ಅದು ನೀಡಿರುವ ಪೆಟ್ಟು ಒಂದೆಡೆಯಾದರೆ, ಇನ್ನೊಂದೆಡೆ ಜಾಗತಿಕ ವಿದ್ಯಮಾನಗಳು ಕೂಡ ಭಾರತದ ಆರ್ಥಿಕತೆಯ ಮೇಲೆ ತನ್ನದೇ ಆದ ಪ್ರಭಾವ ಬೀರುತ್ತದೆ. ಇವೆಲ್ಲವನ್ನೂ ಗಮನ ದಲ್ಲಿರಿಸಿಕೊಂಡು ರೆಪೊ ದರವನ್ನು ಸ್ಥಿರವಾಗಿರಿಸಲಾಗಿದೆ.

ದೇಶದಲ್ಲಿ ಈ ಬಾರಿ ಅಕ್ಕಿ ಉತ್ಪಾದನೆ ನಿರೀಕ್ಷಿತ ಮಟ್ಟದಲ್ಲಿ ಇರುವ ಆಶಾವಾದ ಇದ್ದರೂ (ಕಳೆದ ವರ್ಷ 400.72 ಲಕ್ಷ ಹೆಕ್ಟೇರ್‌ಗಳಲ್ಲಿ ಭತ್ತ ಬೆಳೆದಿದ್ದರೆ, ಈ ಬಾರಿ 411.52 ಲಕ್ಷ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗಿದೆ. ಫ‌ಸಲು ಇನ್ನಷ್ಟೇ ಬರಬೇಕಿದೆ.) ಖಾದ್ಯ ತೈಲ ಬೀಜಗಳ ಉತ್ಪಾದನೆ (ಕಳೆದ ವರ್ಷ 196.08 ಲಕ್ಷ ಹೆಕ್ಟೇರ್‌ಗಳಲ್ಲಿ ಬೆಳೆದಿದ್ದರೆ, ಈ ಬಾರಿ 186.07 ಲಕ್ಷ ಹೆಕ್ಟೇರ್‌ ಪ್ರದೇಶ

ಗಳಲ್ಲಿ ಮಾತ್ರ ಬೆಳೆಯಲಾಗಿದೆ.) ಗಣನೀಯವಾಗಿ ಕಡಿಮೆ ಆಗುವ ಆತಂಕ ಹೊಂದಲಾಗಿದೆ.

Advertisement

ಇಷ್ಟು ಮಾತ್ರವಲ್ಲದೆ ಈ ಹಂಗಾಮಿನ ಈರುಳ್ಳಿ ಫ‌ಸಲೂ ನಿರ್ಣಾಯಕ. ಕೆಲವು ತಿಂಗಳುಗಳ ಹಿಂದೆ ಏರುಗತಿಗೆ ಮುಖ ಮಾಡಿದ್ದ ಈರುಳ್ಳಿ ಬೆಲೆಯನ್ನು ನಿಯಂತ್ರಣದಲ್ಲಿರಿಸಲು ಸರಕಾರ ಸಾಕಷ್ಟು ಕಸರತ್ತು ನಡೆಸಿತ್ತು. ಈ ಬಾರಿ ಉತ್ತಮ ಫ‌ಸಲು ಬಂದರೆ ಸರಿ. ಮಳೆ ಕೊರತೆ ಕಾರಣಕ್ಕೆ ಪ್ರತಿಕೂಲ ಪರಿಸ್ಥಿತಿ ಎದುರಾದರೆ ಇದು ಕೂಡ ಹಣದುಬ್ಬರದ ಮೇಲೆ (ಟೊಮೇಟೊ ರೀತಿ) ಪರಿಣಾಮ ಬೀರಲಿದೆ. ಇನ್ನೊಂದು ನಿರ್ಣಾಯಕ ಅಂಶವೆಂದರೆ ದಕ್ಷಿಣ ಭಾರತದ ಜಲಾಶಯಗಳಲ್ಲಿ ಮುಂದಿನ ಋತುವಿನ ಬೆಳೆಗೆ ಕಾಡಲಿರುವ ನೀರಿನ ಸಮಸ್ಯೆ. ಪ್ರಸ್ತುತ ಈ ಜಲಾಶಯಗಳಲ್ಲಿ  ಪೂರ್ಣ ಸಾಮರ್ಥ್ಯದ ಶೇ. 50ರಷ್ಟೂ ನೀರಿಲ್ಲ. ಸರಿಯಾಗಿ ಹಿಂಗಾರು ಮಳೆ ಬಾರದಿದ್ದರೆ ಇಲ್ಲೂ ಸಮಸ್ಯೆಯಾಗಲಿದೆ.

ಇದರ ನಡುವೆ ಜಾಗತಿಕವಾಗಿ ಹಲವಾರು ಅಂಶಗಳು ಆರ್‌ಬಿಐಯ ವಿತ್ತೀಯ ನಿರೀಕ್ಷೆ ಮೇಲೆ ಪರಿಣಾಮ ಬೀರುತ್ತದೆ. ಅಮೆರಿಕದ ಫೆಡ್‌ ರೇಟ್‌ ಒಂದೆಡೆಯಾದರೆ, ಪ್ರಮು ಖವಾಗಿ ವಿದೇಶ ಗಳನ್ನೇ ಅವಲಂಬಿಸಿರುವ ಇಂಧ ನದ ಬೆಲೆ ಲಗಾಮಿಲ್ಲದಂತೆ ಕುಣಿಯುತ್ತಿದೆ. ಉಕ್ರೇನ್‌ ಯುದ್ಧದ ಬಳಿಕ ಈಗ ಇಸ್ರೇಲ್‌ನಲ್ಲಿ (ರೆಪೊ ದರ ಪ್ರಕಟನೆಯ ಬಳಿಕ) ಆರಂಭವಾಗಿರುವ ಯುದ್ಧ ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ.

ಇಳಿದ ಹಣದುಬ್ಬರ

ಒಂದೊಮ್ಮೆ ಶೇ. 7.48ಕ್ಕೆ ಏರಿದ್ದ ಹಣದುಬ್ಬರವು ಕೇಂದ್ರೀಯ ಬ್ಯಾಂಕ್‌ನ ನೀತಿ ಮತ್ತು ತರಕಾರಿಗಳ ಬೆಳೆ ಇಳಿಕೆ (ಮುಖ್ಯವಾಗಿ ಟೊಮೇಟೊ) ಬಳಿಕ ಪ್ರಸ್ತುತ 6.8ರಲ್ಲಿದೆ. ಆದರೆ ಆರ್‌ಬಿಐ ನಿರೀಕ್ಷಿಸಿರುವ ಮಟ್ಟಕ್ಕಿಂತ ಇದು ಜಾಸ್ತಿಯೇ ಇರು ವುದರಿಂದ ರೆಪೊ ದರ ಇಳಿಕೆಗೆ ಇದು ಸಕಾಲವಲ್ಲ ಎಂಬುದು ಅದರ ಲೆಕ್ಕಾ ಚಾರ. ರೆಪೊ ದರ ಏರಿಕೆಯ ಬಳಿಕ ಹಣದುಬ್ಬರ ನಿಯಂತ್ರಣಕ್ಕೆ ಬಂತಾದರೂ ನಿರೀಕ್ಷಿಸಿದ ರೀತಿ ಪೂರ್ಣ ಪ್ರಮಾಣದಲ್ಲಿ ಫ‌ಲ ನೀಡಿಲ್ಲ ಎಂಬುದು ಆರ್‌ಬಿಐ ಗವರ್ನರ್‌ ಶಶಿಕಾಂತ ದಾಸ್‌ ಅವರ ಅಭಿಪ್ರಾಯ. ಹಣದುಬ್ಬರದ ಮೇಲೆ ಹದ್ದಿನ ಕಣ್ಣಿರಿಸಿದ್ದೇವೆ. ಪರಿಸ್ಥಿತಿಗೆ ತಕ್ಕಂತೆ ಕ್ರಮ ಕೈಗೊಳ್ಳಲು ಸದಾ ಸಿದ್ಧರಿದ್ದೇವೆ ಎಂಬುದಾಗಿಯೂ ದಾಸ್‌ ತಿಳಿಸಿದ್ದಾರೆ.

ಇಳಿಕೆ ಯಾವಾಗ?

ಹಾಗಾದರೆ ದೀರ್ಘ‌ ಸಮಯದಿಂದ ಸ್ಥಿರವಾಗಿರುವ ರೆಪೊ ದರ ಯಾವಾಗ ಇಳಿಕೆಯಾಗುತ್ತದೆ?. ಸದ್ಯದ ಪರಿಸ್ಥಿತಿಯಲ್ಲಿ ಇದನ್ನು ನಿಖರವಾಗಿ ಹೇಳುವ ಹಾಗಿಲ್ಲ. ದೇಶೀಯ ಮಟ್ಟದಲ್ಲಿ ಹಣದುಬ್ಬರ ನಿಯಂತ್ರಣಕ್ಕೆ ಬಂದರೂ ಜಾಗತಿಕ ಬೆಳವಣಿಗೆಗಳೂ ಸಮಚಿತ್ತದಲ್ಲಿ ಇರುವುದು ಅಗತ್ಯ. ರಷ್ಯಾ-ಉಕ್ರೇನ್‌ ಯುದ್ಧದ ಜತೆ ಇಸ್ರೇಲ್‌-ಪ್ಯಾಲೆಸ್ತೀನ್‌ ಸಮರದ ಪರಿಸ್ಥಿತಿ ಎಲ್ಲಿಗೆ ತಲಪುತ್ತದೆ?, ಭಾರತವು ವಿದೇಶಗಳನ್ನು ಅವಲಂಬಿಸಿರುವ ಇಂಧನ, ಆಹಾರ ವಸ್ತುಗಳು, ಖಾದ್ಯ ತೈಲಗಳ ಬೆಲೆ ಇವೆಲ್ಲವೂ ನಿರ್ಣಾಯಕ. ಎಲ್ಲವೂ ಸರಿಯಾಗಿದ್ದರೆ ಮುಂದಿನ ಫೆಬ್ರವರಿಯಲ್ಲಿ ರೆಪೊ ದರ ಇಳಿಕೆಯಾಗುವ ನಿರೀಕ್ಷೆ ಇದೆ. ಅಂದರೆ ಅದಕ್ಕಿಂತ ಮೊದಲು ಡಿಸೆಂಬರ್‌ನಲ್ಲಿ ಹಣಕಾಸು ನೀತಿ ಸಮಿತಿ ಸಭೆ ಇದೆಯಾದರೂ ಈಗಿನ ವಿದ್ಯಮಾನ ಗಳಿಂದ ಅಂತಹ ದೊಡ್ಡ ನಿರೀಕ್ಷೆ ಕಾಣಿಸುತ್ತಿಲ್ಲ.

ಬಡ್ಡಿ ದರ ಏನಾಗುತ್ತದೆ?

ರೆಪೊ ದರ ಇಳಿಕೆಯಾದರೆ ಬಡ್ಡಿ ದರವೂ ಕಡಿಮೆಯಾಗುತ್ತದೆ. ಬ್ಯಾಂಕ್‌ಗಳಿಂದ ಪಡೆದಿರುವ ಗೃಹ, ವಾಹನ ಸಹಿತ ವಿವಿಧ ಸಾಲಗಳ ಮಾಸಿಕ ಕಂತು (ಇಎಂಐ) ಇಳಿಕೆಯಾಗಿ ಜನರ ಕೈಯಲ್ಲಿ ಕಾಸು ಓಡಾಡುತ್ತದೆ. ಖರೀದಿ ಪ್ರಕ್ರಿಯೆಯೂ ಹೆಚ್ಚಾಗುತ್ತದೆ. ಆರ್ಥಿಕ ಚಟುವಟಿಕೆಗಳಿಗೆ ಜೀವ ಬರುತ್ತದೆ. ಈ ಬಾರಿ ಇಳಿಕೆಯಾಗದ ಕಾರಣ ಬಡ್ಡಿದರದಲ್ಲಿ ಯಾವುದೇ ಏರು-ಪೇರು ಆಗದು. ಅದೇ ರೀತಿ ಉಳಿತಾಯ ಠೇವಣಿಗಳ ಬಡ್ಡಿಯೂ ಬದಲಾಗದು.

 ಕೆ. ರಾಜೇಶ್‌ ಮೂಲ್ಕಿ

Advertisement

Udayavani is now on Telegram. Click here to join our channel and stay updated with the latest news.

Next