Advertisement

ಇಚ್ಚಾಶಕ್ತಿ ಇದ್ದರೆ ಒಬ್ಬ ಜನಪ್ರತಿನಿಧಿ ಏನೆಲ್ಲಾ ಮಾಡಬಹುದು ಎಂಬುದಕ್ಕೆ ಎಂ.ಪಿ.ರೇಣುಕಾಚಾರ್ಯ ಮಾದರಿಯಾಗಿ ನಿಲ್ಲುತ್ತಾರೆ.

Advertisement

ರೇಣುಕಾಚಾರ್ಯರ ರಾಜಕೀಯ ಆರಂಭದ ದಿನಗಳು ಮುಳ್ಳಿನ ಹಾದಿ. 2004ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದಾಗ ರೇಣುಕಾಚಾರ್ಯ ಗೆಲ್ಲುವುದು ಕನಸು ಎಂದೇ ಅನೇಕರು ಭಾವಿಸಿದ್ದರು. ಆದರೆ ರೇಣುಕಾಚಾರ್ಯ ಅವರು ಗೆಲುವು ಸಾಧಿಸಿ ಒಬ್ಬº ಸಾಮಾನ್ಯ ಕಾರ್ಯಕರ್ತ ಸಂಘಟನೆಯಿಂದ, ಜನ ಮನ್ನಣೆಯಿಂದ ಹೇಗೆ ರಾಜಕೀಯದ ಹಾದಿಯಲ್ಲಿ ಮೇಲೇರಬಹುದು ಎಂಬುದನ್ನು ಸಾಧಿಸಿ ತೋರಿಸುವ ಮೂಲಕ ಗೆಲುವು ಕಷ್ಟ ಎಂದವರೇ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡಿದ್ದರು.

ಪ್ರಪ್ರಥಮ ಬಾರಿಗೆ 2004ರ ವಿಧಾನಸಭಾ ಚುನಾವಣೆಯಲ್ಲಿ ಘಟಾನುಘಟಿಗಳ ಮಧ್ಯೆ ಸ್ಪರ್ಧಿಸಿ ಪ್ರಪ್ರಥಮ ಬಾರಿಗೆ ಅಭೂತಪೂರ್ವ ಗೆಲುವು ಸಾಧಿಸಿ ಶಾಸಕರಾದರು. ನಂತರ 2008 ರ ವಿಧಾನ ಸಭಾ ಚುನಾವಣೆಯಲ್ಲಿ 2ನೇ ಬಾರಿ ಸ್ಪರ್ಧಿಸಿ ತಾಲೂಕಿನ ಜನರ ಆಶೀರ್ವಾದದಿಂದ ಪುನರಾಯ್ಕೆಯಾದರು. ಈಗ ಮತ್ತೂಮ್ಮೆ ವಿಜಯದುಂಧುಬಿ ಮೊಳಗಿಸಿದ್ದಾರೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ಅಹಿರ್ನಿಶಿ ಕೆಲಸ ಮಾಡುವ ಮೂಲಕ ಹೊನ್ನಾಳಿ ಕ್ಷೇತ್ರದಲ್ಲಿ ತಮ್ಮ ಅಭಿವೃದ್ಧಿ ಪರ್ವ ಮುಂದುವರಿಸಿದ್ದಾರೆ.

ಶಾಸಕರಾದ ನಂತರ ಹೊನ್ನಾಳಿ ತಾಲೂಕಿನಲ್ಲಿ ಮಹತ್ವಾಕಾಂಕ್ಷಿಯಾದ ಹಲವಾರು ಶಾಶ್ವತವಾದ ಜನಪರ ಯೋಜನೆಗಳನ್ನು ಜಾರಿಗೆ ತಂದರು. ಪ್ರಥಮ ಬಾರಿಗೆ ಕಿಯೋನಿಕ್ಸ್‌ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ನಂತರ ಹಟ್ಟಿ ಚಿನ್ನದ ಗಣಿ ಅಧ್ಯಕ್ಷರಾಗಿ ಗಣಿಕಾರ್ಮಿಕರ ಹಿತ ರಕ್ಷಿಸಿ ಚಿನ್ನದ ಗಣಿಗೆ ಹೊಸ ಕಾಯಕಲ್ಪ ನೀಡಿದರು.

Advertisement

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರ ಸಂಪುಟದಲ್ಲಿ ಅಬಕಾರಿ ಖಾತೆಯಂತಹ ಮಹತ್ವದ ಖಾತೆಯ ಸಚಿವರಾಗಿ ರಾಜ್ಯದೆಲ್ಲೆಡೆ ಸುತ್ತಾಡಿ ಕಳ್ಳ ಭಟ್ಟಿ ಅಡ್ಡೆಗಳನ್ನು ಸಂಪೂರ್ಣ ನಾಶಮಾಡಿ ಸರ್ಕಾರದ ಬೊಕ್ಕಸಕ್ಕೆ ದಾಖಲೆಯ ಪ್ರಮಾಣದಲ್ಲಿ ಆದಾಯ ತಂದುಕೊಟ್ಟರು.

ಹೊನ್ನಾಳಿ ಎಂಬ ಹೊನ್ನರಳಿದ ಕ್ಷೇತ್ರದಲ್ಲಿ ಪ್ರಜ್ಞಾವಂತ ಮತದಾರರಿಂದ ಸತತ ಎರಡು ಬಾರಿ ಶಾಸಕರಾಗಿ ಗೆದ್ದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಮಂತ್ರಿಮಂಡಲದಲ್ಲಿ ಅಬಕಾರಿ ಸಚಿವರಾಗಿ ಅತ್ಯಂತ ಚುರುಕಾದ ಮತ್ತು ಸದಾ ಚಟುವಟಿಕೆಯುಳ್ಳ ಸಚಿವರಾಗಿ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರಿಗೆ ಸಲ್ಲುತ್ತದೆ.

ಕ್ಷೇತ್ರದ ಜನ ಮೂಲ ಸೌಲಭ್ಯಗಳಿಂದ ವಂಚಿತರಾಗಬಾರದೆಂಬ ಮಹತ್ವದ ಕನಸು ಹೊತ್ತು ಕ್ಷೇತ್ರವನ್ನು ಸರ್ವಾಂಗೀಣ ಸುಂದರವಾಗಿ ಅಭಿವೃದ್ಧಿ ಪಡಿಸಿ ಮಾದರಿ ತಾಲೂಕನ್ನಾಗಿ ರೂಪಿಸುವ ಅವರ ಬಹುದೊಡ್ಡ ಕನಸಿಗೆ ತಾಲೂಕಿನ ಜನ ಭೀಮ ಬಲ ನೀಡುತ್ತಿದ್ದಾರೆ.

ರೇಣುಕಾಚಾರ್ಯರು ಯಾವುದೇ ಕೆಲಸನ್ನು ಕೈಗೆತ್ತಿಕೊಂಡರೆ ಅದು ಪೂರ್ಣಗೊಳ್ಳುವವರೆಗೂ ಬಿಡುವುದಿಲ್ಲ. ಅವರು ಒಂದು ರೀತಿ ಉಡ ಇದ್ದಹಾಗೆ ಎಂದು ಜನರು ಪ್ರೀತಿ, ಅಭಿಮಾನದಿಂದ ಆಡುವ ಮಾತಿಗೆ ಅವರು ಮಾಡಿರುವ, ಮಾಡುತ್ತಿರುವ ಅನೇಕ ಕಾಮಗಾರಿಗಳು ಸಾಕ್ಷಿಯಾಗಿವೆ. ನ್ಯಾಮತಿ-ಸುರಹೊನ್ನೆ ಗ್ರಾಮಗಳಿಗೆ 16ಕಿ.ಮೀ.ದೂರದ ತುಂಗಭದ್ರಾ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ರೂಪಿಸಿ ಅದನ್ನು ಕಾರ್ಯಗತಗೊಳಿಸಿ ಅವಳಿ ಗ್ರಾಮಗಳು ಅನುಭವಿಸುತ್ತಿದ್ದ ನೀರಿನ ಸಮಸ್ಯೆಯನ್ನು ನೀಗಿಸಿ ನೀರು ಹರಿಸಿದ ಭಗೀರಥ.. ಎನಿಸಿಕೊಂಡರು.

ನ್ಯಾಮತಿ ತಾಲೂಕಾಗಬೇಕೆಂಬ ಬಹುದಿನಗಳ ಕನಸಿಗೆ ರೇಣುಕಾಚಾರ್ಯರ ಇಚ್ಛಾಶಕ್ತಿ ಸೇರಿಕೊಂಡು ಅಂದಿನ ಬಿಜೆಪಿ ಸರ್ಕಾರದಲ್ಲಿ ನ್ಯಾಮತಿ ತಾಲೂಕು ಘೋಷಿಸಲ್ಪಟ್ಟಿತು.131 ಕೋಟಿ ವೆಚ್ಚದ ಚತುಷ್ಪಥ ರಸ್ತೆ ಕಾಮಗಾರಿ, 30 ಹಾಸಿಗೆ ಆಸ್ಪತ್ರೆ, ಪ್ರಥಮ ದರ್ಜೆ ಕಾಲೇಜು, ಕೃಷಿ ಮಾರುಕಟ್ಟೆ ಸಂಕೀರ್ಣ, ನೂತನ ಗ್ರಾಮ ಪಂಚಾಯ್ತಿ ಕಟ್ಟಡ, ನೂತನ ಪದವಿ ಪೂರ್ವ ಕಾಲೇಜು ಹಾಗೂ ಪದವಿ ಕಾಲೇಜು ಕಟ್ಟಡ ಮುಂತಾದ ಜನಪರ ಯೋಜನೆಗಳನ್ನು ನ್ಯಾಮತಿಯನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡುವ ಮುಂದಾಲೋಚನೆಯಿಂದ ಮಂಜೂರು ಮಾಡಿಸಿ, ಸಾರ್ವಜನಿಕರ ಸೇವೆಗೆ ಲೋಕಾರ್ಪಣೆ ಮಾಡಲಾಗಿದೆ.

ಅಭಿವೃದ್ಧಿ ಗೆ ಅರ್ಥ ನೀಡಿದ ನಾಯಕ
ಯಾವುದೇ ಕ್ಷೇತ್ರದಲ್ಲಿ ಸಾಧನೆ… ಎಂಬುದು ಸಾರ್ಥಕತೆಯ ಪ್ರತಿಬಿಂಬ. ತಳಮಟ್ಟದಿಂದಲೇ ಅದ್ಭುತ ಸಾಧನೆಗೈದು ಜನಸೇವೆಗೆ ತನ್ನನ್ನು ತಾನು ಅರ್ಪಿಸಿಕೊಂಡಿರುವ ರಾಜಕಾರಣಿ ಎಂ.ಪಿ. ರೇಣುಕಾಚಾರ್ಯ ಅಭಿವೃದ್ಧಿ ಎಂಬ ಪದಕ್ಕೆ ಅನ್ವರ್ಥವಾಗಿ ಬೆಳೆದ ಜನನಾಯಕ.

ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯನ್ನು ಗುರಿಯಾಗಿಟ್ಟುಕೊಂಡು ಶಿಕ್ಷಣ, ಆರೋಗ್ಯ, ರಸ್ತೆಗಳು, ಕುಡಿಯುವ ನೀರು, ವಿದ್ಯಾರ್ಥಿ ನಿಲಯಗಳು, ಸಾರಿಗೆ ಸಂಸ್ಥೆ ಬಸ್‌ ನಿಲ್ದಾಣ ಮತ್ತು ಡಿಪೋ, ತುಂಗಾ ಭದ್ರಾ ನದಿಗೆ ನೂತನ ಸೇತುವೆ, 131 ಕೋಟಿ ವೆಚ್ಚದ ಹೊನ್ನಾಳಿ- ಸವಳಂಗ ಚತುಷ್ಪಥ ಹೆದ್ದಾರಿ, ಭದ್ರಾ ಮತ್ತು ತುಂಗಾ ನಾಲಾ ಆಧುನೀಕರಣ, ತುಂಗಭದ್ರಾ ನದಿಗೆ ಸೇತುವೆ ನಿರ್ಮಾಣ, ಆಸ್ಪತ್ರೆ, ದಾದಿಯರ ಕಟ್ಟಡಗಳು, ಕಿತ್ತೂರು ರಾಣಿ ಚನ್ನಮ್ಮ ಹಾಗೂ ಮೊರಾರ್ಜಿ ವಸತಿ ಶಾಲೆಗಳು, ಪಾಲಿಟೆಕ್ನಿಕ್‌ ಹಾಗೂ ಐ.ಟಿ.ಐ ಕಾಲೇಜುಗಳು ಅಲ್ಪಸಂಖ್ಯಾಂತರ ಉರ್ದು ಪ್ರೌಢಶಾಲೆ ಮತ್ತು ಮಸೀದಿ, ದರ್ಗಾ ಅಭಿವೃದ್ಧಿ, ಪೊಲೀಸ್‌ ಠಾಣೆ ಕಟ್ಟಡಗಳು ಮತ್ತು 7 ವಸತಿ ಗೃಹಗಳು, ನೂತನ ಅಗ್ನಿ ಶಾಮಕ ಠಾಣೆ, ತಾಲೂಕು ಕ್ರಿಡಾಂಗಣ ಮತ್ತು ಅತ್ಯಾಧುನಿಕ ಸುಸಜ್ಜಿತ ಒಳಾಂಗಣ ಕ್ರಿಡಾಂಗಣ, ವಿದ್ಯಾರ್ಥಿ ನಿಲಯ ಕಟ್ಟಡಗಳು, ಪ್ರಥಮ ದರ್ಜೆ ಮತ್ತು ಪಿ.ಯು. ಕಾಲೇಜುಗಳ ಕಟ್ಟಡಗಳು, ಹಾಗೂ ಪ್ರಾಥಮಿಕ, ಪ್ರೌಢಶಾಲಾ ಕಟ್ಟಡಗಳು, ಹಾಗೂ 6 ಪ್ರೌಢಶಾಲೆಗಳ ಮಂಜೂರಾತಿ. ಅಂಗನವಾಡಿ ಕಟ್ಟಡಗಳು, ಸ್ತ್ರೀ ಶಕ್ತಿ ಭವನ, ನೂತನ ಪ್ರವಾಸಿ ಮಂದಿರ, ಹೊನ್ನಾಳಿ ಪಟ್ಟಣಕ್ಕೆ ಶುದ್ದ ಕುಡಿಯುವ ನೀರಿನ ಘಟಕ, ಪಟ್ಟಣದ ಒಳಚರಂಡಿ ವ್ಯವಸ್ಥೆ, ನಗರೋತ್ಥಾನ ಯೋಜನೆಯಡಿ ಯಲ್ಲಿ ನಗರದ ಸರ್ವಾಂಗೀಣ ಅಭಿವೃದ್ಧಿ ಕಾರ್ಯ… ಹೀಗೆ ಹತ್ತು ಹಲವು ಏಣಿಕೆಗೆ ಸಿಗದಷ್ಟು, ಅಭಿವೃದ್ಧಿ ಕಾಮಗಾರಿಯನ್ನು ಕೈಗೊಂಡಿರುವುದು ಅವರ ಜನಪರ ಕಾಳಜಿಗೆ ಹಿಡಿದ ಕೈಗನ್ನಡಿಯಾಗಿದೆ.

ಮುಖ್ಯಮಂತ್ರಿ ಪರಿಹಾರ ನಿಧಿ
ಹಲವಾರು ಕಾಯಿಲೆಗಳಿಗೆ ತುತ್ತಾದ, ಬಡರೋಗಿಗಳ ಚಿಕಿತ್ಸೆಗೆ ಮತ್ತು ಚಿಕಿತ್ಸೆ ಫಲಿಸದೆ ಮರಣ ಹೊಂದಿದ ಕುಟುಂಬದವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿ ಒದಗಿಸುವಲ್ಲಿ ಮುಂಚೂಣಿ ಸ್ಥಾನದಲ್ಲಿದ್ದಾರೆ. 10 ಕೋಟಿಗೂ ಆಧಿಕ ಮೊತ್ತದ ಪರಿಹಾರ ದೊರಕಿಸಿಕೊಟ್ಟಿರುವ ಹೆಗ್ಗಳಿಕೆಗೆ ರೇಣುಕಾಚಾರ್ಯ ಪಾತ್ರರಾಗಿದ್ದಾರೆ.

ತಾಲೂಕಿನಲ್ಲಿ ದಿನನಿತ್ಯ ಯಾವುದೇ ಸಾವು, ನೋವು ಸಂಭವಿಸಿದರೂ ಕೇವಲ ದೂರವಾಣಿ ಕರೆಗೆ ಸ್ಪಂದಿಸಿ ತಕ್ಷಣ ನೊಂದವರ ಮನೆಗೆ ತೆರಳಿ ಕೈಲಾದಷ್ಟು ಪ್ರಾಮಾಣಿಕವಾಗಿ ಧನ ಸಹಾಯ ಮಾಡುತ್ತಿದ್ದಾರೆ. ಅಲ್ಲದೆ ಪ್ರತಿನಿತ್ಯ ತಮ್ಮ ಕಷ್ಟ ಹೇಳಿಕೊಂಡು, ಬಡ ವಿದ್ಯಾರ್ಥಿಗಳು, ಕ್ರೀಡಾಪಟುಗಳು, ಅಂಗವಿಕಲರು, ವಯೋವೃದ್ಧರು, ಆರ್ಥಿಕವಾಗಿ ಹಿಂದುಳಿದವರು, ಮದುವೆ ಇನ್ನು ಮುಂತಾದ ಶುಭ ಕಾರ್ಯಗಳಿಗೂ ಕೂಡಾ ತಮ್ಮಿಂದಾದ ಧನ ಸಹಾಯ ಮಾಡುವುದನ್ನು ಇಂದಿಗೂ ಮುಂದುವರೆಸಿಕೊಂಡು ಬರುತ್ತಿದ್ದಾರೆ.

ಎಂ.ಪಿ.ರೇಣುಕಾಚಾರ್ಯ ಅವರು ಅಧಿಕಾರ ಇದ್ದಾಗಲೂ ಹಾಗೂ ಅಧಿಕಾರ ಕಳೆದುಕೊಂಡಾಗಲೂ ಸದಾ ಜನರ ಜೊತೆ ಇರುತ್ತಾರೆ ಎಂಬುದಕ್ಕೆ ಅವರ ಮನೆಯಲ್ಲಿ ಸದಾ ಎಲ್ಲಾ ಜನಾಂಗದ ಜನಜಂಗುಳಿ ಇರುವುದೇ ಸಾಕ್ಷಿಯಾಗಿದೆ.

ನೊಂದವರ ಧ್ವನಿ
ಬರಗಾಲದಿಂದ ಆತ್ಮಹತ್ಯೆಗೆ ಒಳಗಾದ ರೈತರ ಮನೆಗೆ ತೆರಳಿ ಸಾಂತ್ವನ ಹೇಳುವ ಮೂಲಕ ಕುಟುಂಬಸ್ಥರಿಗೆ ಆತ್ಮಸ್ಥೈರ್ಯ ತುಂಬಿ ಸರ್ಕಾರದಿಂದ ಸಿಗುವ ಸೌಲತ್ತುಗಳನ್ನು ತಮ್ಮ ಹೋರಾಟದ ಮೂಲಕ ಸರ್ಕಾರದಿಂದ ಪರಿಹಾರ ಕೊಡಿಸುವಲ್ಲಿ ಯಶಸ್ವಿಯಾಗಿ ನೊಂದವರ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮ್ಮದು ಕೇವಲ ಮಾತಿನಲ್ಲಷ್ಟೇ ಸಾಧನೆ ಅಲ್ಲ. ಆಡಿದ್ದನ್ನು ಮಾಡಿ ತೋರಿಸುವ ಜನಸೇವಕ ಹಾಗೂ ನಾಯಕ ಎಂಬುದನ್ನು ರೇಣುಕಾಚಾರ್ಯರು ಸಾಬೀತುಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next