Advertisement

ಬಾಡಿಗೆ ಬಸ್ ಗಳಿಗೆ ಮೊರೆ

06:24 PM Feb 18, 2021 | Team Udayavani |

ಹುಬ್ಬಳ್ಳಿ: ಬಿಆರ್‌ಟಿಎಸ್‌ ಹಾಗೂ ನಗರ ಸಾರಿಗೆ ಸೇವೆಯನ್ನು ಮತ್ತಷ್ಟು ಸದೃಢಗೊಳಿಸಲು ಎಲೆಕ್ಟ್ರಿಕ್‌ ಬಸ್‌ಗಳ ಖರೀದಿ ಬದಲಾಗಿ ಖಾಸಗಿ ಕಂಪನಿ ಮೂಲಕ ಬಾಡಿಗೆ ಆಧಾರದ ಮೇಲೆ ಬಸ್‌ಗಳನ್ನು ಪಡೆಯಲು ಮುಂದಾಗಿದೆ.

Advertisement

ಬಿಆರ್‌ಟಿಎಸ್‌ ಯೋಜನೆಯಲ್ಲಿ 100 ಯುಡಿ (ಚಿಗರಿ), 30 ಆರ್ಟಿಕ್ಯೂಲೆಟೆಡ್‌ (ರೈಲು ಬಸ್‌) ಬಸ್‌ಗಳನ್ನು ಖರೀದಿಸುವ ಯೋಜನೆಯಿತ್ತು. ಆದರೆ ಸಕಾಲಕ್ಕೆ ಆರ್ಟಿಕ್ಯೂಲೆಟೆಡ್‌ ಬಸ್‌ಗಳನ್ನು ಪೂರೈಸದ ಹಿನ್ನೆಲೆಯಲ್ಲಿ ಒಪ್ಪಂದ ರದ್ದುಗೊಳಿಸಲಾಗಿತ್ತು. ಈ ಬಸ್‌ಗಳಿಗೆ ಪರ್ಯಾಯವಾಗಿ ಸಿಎನ್‌ಜಿ ಬಸ್‌ಗಳನ್ನು ಖರೀದಿಸಬೇಕೆನ್ನುವ ನಿರ್ಧಾರಕ್ಕೆ ಬರಲಾಗಿತ್ತು. ಆದರೆ ಕೇಂದ್ರ ಸರಕಾರ ಪರಿಸರ ಸ್ನೇಹಿ ವಾಹನಗಳ ಬಳಕೆಗೆ ಕಾಳಜಿ ತೋರಿದ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್‌ ಬಸ್‌ಗಳ ಖರೀದಿಗೆ ಆಸಕ್ತಿ ತೋರಲಾಗಿತ್ತು. ಆದರೆ ಇದೀಗ ಕೋವಿಡ್‌-19 ಹಿನ್ನೆಲೆಯಲ್ಲಿ ಖರೀದಿ ಮಾಡುವಂತಹ ಆರ್ಥಿಕ ಸಾಮರ್ಥ್ಯ ಇಲ್ಲದಂತಾಗಿದೆ. ಒಂದು ಬಸ್‌ ಮೌಲ್ಯ ಸುಮಾರು 2 ಕೋಟಿ ರೂ. ಇರುವುದರಿಂದ 50 ಬಸ್‌ಗಳ ಖರೀದಿ ಅಸಾಧ್ಯವಾಗಿದೆ. ಹೀಗಾಗಿ ಕಿಲೋ ಮೀಟರ್‌ ಆಧಾರದ ಮೇಲೆ 50 ಬಸ್‌ಗಳನ್ನು ಬಾಡಿಗೆ ಪಡೆಯಲು ಚಿಂತನೆ ನಡೆದಿವೆ.

ಪ್ರಾಯೋಗಿಕ ಸಂಚಾರ ನಡೆಸಿದ ಬಸ್‌: ಅವಳಿ ನಗರದ ನಡುವಿನ ಸಂಚಾರಕ್ಕೆ ಎಲೆಕ್ಟ್ರಿಕ್‌ ಬಸ್‌ ಗಳು ಎಷ್ಟು ಸೂಕ್ತ ಎನ್ನುವ ಕುರಿತು ಓಲೆಕ್ಟ್ರಾ ಗ್ರೀನ್‌ ಟೆಕ್‌ ಲಿ. ಕಂಪನಿಯ ಬಸ್ಸೊಂದನ್ನು ಇಲ್ಲಿಗೆ ತರಿಸಿ ಬಿಆರ್‌ಟಿಎಸ್‌ ಕಾರಿಡಾರ್‌ನಲ್ಲಿ ಸಂಚಾರ ಮಾಡಿಸಲಾಗಿತ್ತು. ಸುಮಾರು ಮೂರ್‍ನಾಲ್ಕು ದಿನಗಳ ಕಾಲ ಬಸ್‌ ಪ್ರಾಯೋಗಿಕವಾಗಿ ಸಂಚಾರ ಮಾಡಿದ ನಂತರ ಸೂಕ್ತ ಎನ್ನುವ ಅಭಿಪ್ರಾಯ ಬಿಆರ್‌ ಟಿಎಸ್‌ನ ಅ ಧಿಕಾರಿಗಳಿಂದ ವ್ಯಕ್ತವಾಗಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅವಶ್ಯವಿರುವ 50 ಬಸ್‌ ಗಳ ಖರೀದಿಗೆ ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಬಾಡಿಗೆ ರೂಪದಲ್ಲಿ ಪಡೆಯುವುದು ಸೂಕ್ತ ಎನ್ನುವ ಅಭಿಪ್ರಾಯ ವ್ಯಕ್ತವಾಗಿದ್ದು, ಪಡೆಯುವ 50 ಎಲೆಕ್ಟ್ರಿಕ್‌ ಬಸ್‌ಗಳನ್ನು 25 ಬಿಆರ್‌ಟಿಎಸ್‌, 25 ನಗರ ಸಾರಿಗೆಗೆ ಬಳಸಲು ಚಿಂತನೆ ನಡೆದಿದೆ.

ಕಿಲೋಮೀಟರ್‌ ಆಧಾರದ ಮೇಲೆ ಬಾಡಿಗೆ ಪಡೆಯುವ ಬಸ್‌ ಕಂಪನಿಗೆ ಪ್ರತಿ ಕಿಲೋಮೀಟರ್‌ 69ರೂ. ಪ್ರತಿ ನಿತ್ಯ ಕನಿಷ್ಠ 275 ಕಿಮೀ ಸಂಚಾರ ಮಾಡಬೇಕು ಎನ್ನುವುದು ಕಂಪನಿಗಳ ಪ್ರಸ್ತುತ ಬೇಡಿಕೆ. ಪ್ರತಿ ಕಿಲೋಮೀಟರ್‌ಗೆ ನೀಡಬೇಕಿರುವ ಹಣದ ಬಗ್ಗೆ ಚೌಕಾಸಿ ನಡೆದಿದೆ.

ಇನ್ನು ಈ ಬಸ್‌ಗಳ ಚಾಲಕರ ವೇತನ ಸೇರಿದಂತೆ ಸಂಪೂರ್ಣ ನಿರ್ವಹಣೆ ಕಂಪನಿಯೇ ಆಗಿರುವುದರಿಂದ ಇದರ ಭಾರ ಸಂಸ್ಥೆ ಮೇಲೆ ಇರಲ್ಲ. ಇನ್ನೂ ಇದಕ್ಕೆ ಬೇಕಾದ ರೀಚಾರ್ಜ್‌ ಕೇಂದ್ರಗಳನ್ನು ಕೂಡ ಕಂಪನಿಯೇ ಸ್ಥಾಪಿಸಲಿದೆ. ಹೀಗಾಗಿ ಪ್ರತಿ ಕಿಲೋಮೀಟರ್‌ಗೆ ಇಂತಿಷ್ಟು ಪಾವತಿಸಿದರೆ ಯಾವುದೇ ಭಾರ ಸಂಸ್ಥೆ ಮೇಲೆ ಬೀಳಲ್ಲ. ಹೀಗಾಗಿ ಎಲ್ಲಾ ಖರ್ಚುಗಳನ್ನು ಸೇರಿಸಿ ಪ್ರತಿ ಕಿಲೋಮೀಟರ್‌ 60 ರೂ. ಗಿಂತ ಕಡಿಮೆ ಮೊತ್ತ ನಿಗದಿ ಹಾಗೂ ಕೇಂದ್ರ ಸರಕಾರದಿಂದ ಸಬ್ಸಿಡಿ ದೊರೆತರಷ್ಟೇ ಲಾಭ ನಷ್ಟ ಸರಿದೂಗಲಿದೆ ಎನ್ನುವುದು ಅಧಿಕಾರಿಗಳ ಮಾತಾಗಿದೆ.

Advertisement

ಲಾಭ ನಷ್ಟದ ಲೆಕ್ಕಾಚಾರ

ಸದ್ಯದ ಪರಿಸ್ಥಿತಿಯಲ್ಲಿ ಚಿಗರಿ ಬಸ್‌ಗಳ ನಿರ್ವಹಣೆ ವಾಯವ್ಯ ಸಾರಿಗೆ ಸಂಸ್ಥೆಗೆ ದೊಡ್ಡ ಸಂಕಷ್ಟವಾಗಿ ಪರಿಣಮಿಸಿದೆ. ಚಿಗರಿ ಬಸ್‌ಗಳ ಕಾರ್ಯಾಚರಣೆಯಿಂದ ಪ್ರತಿ ಕಿಲೋಮೀಟರ್‌ 41-43 ರೂ. ಸಾರಿಗೆ ಆದಾಯವಿದ್ದು, 60-63 ರೂ. ಪ್ರತಿ ಕಿಲೋಮೀಟರ್‌ ಗೆ ಖರ್ಚಾಗುತ್ತಿದೆ. ಪ್ರಸ್ತುತ ಸುಮಾರು 20-23 =ರೂ. ನಷ್ಟವಾಗುತ್ತಿದೆ. ಇದೀಗ 50 ಎಲೆಕ್ಟ್ರಿಕ್‌ ಬಸ್‌ಗಳ ಬಾಡಿಗೆ ಆಧಾರದ ಮೇಲೆ ಪಡೆದರೆ ಯಾವುದೇ ನಿರ್ವಹಣೆಯಿಲ್ಲದೆ 67 ರೂ. ನೀಡಿದರೆ ನಷ್ಟಕ್ಕೆ ದಾರಿ ಮಾಡಿಕೊಟ್ಟಂತಾಗುತ್ತಿದೆ. ಕಳೆದೆರಡು ವರ್ಷದಿಂದ ಆಗುತ್ತಿರುವ ನಷ್ಟವನ್ನು ನಗರಾಭಿವೃದ್ಧಿ ಇಲಾಖೆಯಿಂದ ತುಂಬಿ ಕೊಡುವ ಕೆಲಸ ಆಗಿಲ್ಲ. ಅದರೊಂದಿಗೆ ಈ ಬಸ್‌ಗಳ ಹೆಚ್ಚುವರಿ ನಷ್ಟದಿಂದ ಮತ್ತಷ್ಟು ಸಂಕಷ್ಟ ಎದುರಾಗಲಿದೆ ಎನ್ನುವುದು ವಾಯವ್ಯ ಸಾರಿಗೆ ಸಂಸ್ಥೆಗಳ ಅಧಿಕಾರಿಗಳ ಅಭಿಪ್ರಾಯವಾಗಿದೆ.

ಈ ಹಿಂದೆ ಕೆಎಸ್‌ಆರ್‌ಟಿಸಿ ನಾಲ್ಕು ನಿಗಮಗಳಲ್ಲಿ ಕಿಲೋಮೀಟರ್‌ ಆಧಾರದ ಮೇಲೆ ನೂರಾರು ಬಸ್‌ಗಳನ್ನು 5 ವರ್ಷದ ಅವ ಧಿಗೆ ಪಡೆಯಲಾಗಿತ್ತು. ಕೆಲವೆಡೆ ಸಂಸ್ಥೆಗೆ ಲಾಭವಾದರೆ ಕಡಿಮೆ ಆದಾಯ ಇರುವ ದೂರದ ಅನುಸೂಚಿಗಳನ್ನು ನೀಡಿದ ಕಡೆಗಳಲ್ಲಿ ಸಂಸ್ಥೆಯ ನಷ್ಟಕ್ಕೆ ಕಾರಣವಾಗಿತ್ತು.

ಮಹಾನಗರದ ಜನತೆಗೆ ಉತ್ತಮ ಸೇವೆ ಹಾಗೂ ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಎಲೆಕ್ಟ್ರಿಕ್‌ ಬಸ್‌ಗಳು ಅನಿವಾರ್ಯವಾಗಿದೆ. ಹೀಗಾಗಿ ಖಾಸಗಿ ಕಂಪನಿಯಿಂದ ಪ್ರತಿ ಕಿಲೋಮೀಟರ್‌ ಬಾಡಿಗೆ ಆಧಾರದ ಮೇಲೆ  ಪಡೆಯಲು ಚಿಂತನೆ ನಡೆಸಿದ್ದೇವೆ. ಪ್ರತಿ ಕಿಲೋಮೀಟರ್‌ ನಿಗದಿ ಮಾಡಿರುವ ಹಣ ಕಡಿಮೆ ಮಾಡುವಂತೆ  ಚೌಕಾಸಿ ನಡೆಸಿದ್ದೇವೆ. ನಾವು ಕೇಳುತ್ತಿರುವ ಮೊತ್ತಕ್ಕೆ ಒಪ್ಪಿದರೆ ಸಂಸ್ಥೆಗೆ ಉಳಿತಾಯವಾಗಲಿದೆ. ಇಷ್ಟೆಲ್ಲಾ  ಸೌಲಭ್ಯ ನೀಡಿದ ನಂತರ ಬೇಂದ್ರೆ ಸಾರಿಗೆ ಸಂಪೂರ್ಣ ಸ್ಥಗಿತಗೊಳಿಸಬೇಕು. ನಂತರ ಇನ್ನಿತರೆ ಯಾವುದೇ ವಾಹನಗಳ ಸಂಚಾರಕ್ಕೆ ಆಸ್ಪದ ನೀಡದಿದ್ದರೆ ಮಾತ್ರ ಲಾಭ ನಷ್ಟ ಸರಿದೂಗಿಸಲು ಸಾಧ್ಯ.

ಕೃಷ್ಣ ಬಾಜಪೇಯಿ (ವ್ಯವಸ್ಥಾಪಕ ನಿರ್ದೇಶಕ ವಾಕರಸಾ ಸಂಸ್ಥೆ ಹಾಗೂ ಬಿಆರ್‌ಟಿಎಸ್‌ )

 

Advertisement

Udayavani is now on Telegram. Click here to join our channel and stay updated with the latest news.

Next