Advertisement

Desi Swara: ನೆನಪಿನಂಗಳದ ಸಂಕ್ರಾಂತಿ ;ರಂಗೋಲಿಯ ಚಿತ್ತಾರ, ರಾಸುಗಳ ಕಿಚ್ಚು ಹಾಯಿಸುವಿಕೆ

01:05 PM Jan 13, 2024 | Team Udayavani |

ಹಬ್ಬಗಳೆಂದರೆ ಯಾರಿಗೆ ಖುಷಿಯಾಗುವುದಿಲ್ಲ ಹೇಳಿ. ಪ್ರತೀ ಹಬ್ಬವು ಸಂಭ್ರಮವನ್ನೇ ಹೊತ್ತು ತರುವುದು. ಅದರಲ್ಲು ಸಂಕ್ರಾತಿಯ ಸಿಹಿಯೇ ವಿಭಿನ್ನ. ಹೊಸವರ್ಷದ ಆರಂಭದ ದಿನದಿಂದ ಕಾಯುವುದು ಸಂಕ್ರಾಂತಿಗೆ. ಯಾಕೆಂದರೆ ವರ್ಷದ ಮೊದಲ ಹಬ್ಬದ ರಜೆ ಸಿಗುವ ಖುಷಿ ಹಾಗೂ ಬಗೆಬಗೆ ತಿಂಡಿಗಳನ್ನು ಆಸ್ವಾದಿಸುವ ಬಯಕೆಯೂ ಹೌದು. ಪ್ರತೀ ಪ್ರದೇಶಕ್ಕೂ ಸಂಕ್ರಾತಿಯ ಆಚರಣೆ ಕೊಂಚ ಬದಲಾವಣೆ ಹೊಂದಿದೆ. ನಮ್ಮ ಮೈಸೂರಿನ ಭಾಗದಲ್ಲಿ ಸಂಕ್ರಾತಿಗೆ ವಿಶೇಷ ಸ್ಥಾನಮಾನವಿದೆ. ಈ ಹಬ್ಬದಂದು ಇಡೀ ಊರಿಗೆ ಬೇವು-ಬೆಲ್ಲದ ಸವಿಯನ್ನು ಉಣಿಸಲಾಗುತ್ತದೆ. ಪ್ರತೀ ಮನೆಯಿಂದ ಇನ್ನೊಬ್ಬರ ಮನೆಗೆ ಬೇವು-ಬೆಲ್ಲವನ್ನು ಹಂಚಿ ಹಬ್ಬದ ಖುಷಿಯನ್ನು ದುಪ್ಪಟ್ಟಾಗಿಸುತ್ತದೆ. ಹಳ್ಳಿಗಳಲ್ಲಿ ರಾತ್ರಿ ಇಡೀ ಊರಿಗೆ ಊರೇ ಸೇರಿ ಸಾಂಪ್ರದಾಯಿಕವಾಗಿ ಹಬ್ಬವನ್ನು ಆನಂದಿಸುತ್ತದೆ.

Advertisement

ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿ. ಸುಗ್ಗಿಯ ಹಿಗ್ಗು ಒಂದಿಡಿ ಹೆಚ್ಚೇ. ಹೆಂಗೆಳೆಯರಿಗೆ ಹಬ್ಬವೆಂದರೆ ವಿಶೇಷ ಸಡಗರ. ವರ್ಷಪೂರ್ತಿಯ ಸಡಗರಕ್ಕೆ ಸಂಕ್ರಾಂತಿ ಮುನ್ನುಡಿಯನ್ನೇ ಬರೆಯುತ್ತದೆ. ದೀಪಾವಳಿ ಮುಗಿದ ಅನಂತರ ಕಾಯುವುದೇ ಹೊಸವರ್ಷದ ಮೊದಲ ಹಬ್ಬ ಸಂಕಾಂತಿಗೆ. ವರ್ಷದ ಮೊದಲ ಹೊಸ ಉಡುಗೆ ತೆಗೆದುಕೊಳ್ಳುವ ಖುಷಿಯೂ ಆರಂಭವಾಗುವುದು ಇಲ್ಲಿಯೇ. ಒಬ್ಬಕ್ಕಾಗಿ ಹೊಸ ಬಟ್ಟೆ ಖರೀದಿಸುವುದರಿಂದ ಹಿಡಿದು ಅದನ್ನು ಯಾವ ಡಿಸೈನ್‌ ಕೊಟ್ಟು ಹೊಲಿಸಬೇಕೆಂಬುದರ ವರೆಗೂ ನಮ್ಮ ಸಡಗರ.

ಹಬ್ಬದ ಹಿಂದಿನ ರಾತ್ರಿ ಮನೆಯ ಮುಂದೆ ಗಲ್ಲಿಯ ಎಲ್ಲ ಹೆಣ್ಣು ಮಕ್ಕಳು ಸೇರಿ ದೊಡ್ಡದಾದ ರಂಗೋಲಿ ಮತ್ತೆ ಅದಕ್ಕೆ ಎಲ್ಲ ಬಣ್ಣದ ಮೆರುಗು ಜತೆಗೆ ದಾರಿಯ ತುಂಬಾ ಸಂಕ್ರಾಂತಿಯ ಶುಭಾಶಯಗಳು ಎಂದು ಬರೆಯುತ್ತಿದ್ದೇವು. ಅನಂತರ ನಮ್ಮ ಅಕ್ಕಪಕ್ಕದವರು ಹೇಗೆ ಚಿತ್ತಾರ ಮೂಡಿಸಿದ್ದಾರೆ ಎಂದು ನೋಡುವ ಕುತೂಹಲವು ಇರುತ್ತಿತ್ತು. ಇಡೀ ಗಲ್ಲಿಯಲ್ಲಿ ಯಾರ ರಂಗೋಲಿ ಚಂದದೆಂದು ನೋಡುತ್ತಾ ಮಧ್ಯರಾತ್ರಿ ಸಮಯ 12 ಆಗುವವರೆಗೂ ರಂಗೋಲಿಯದ್ದೇ ಗುಂಗು. ಅನಂತರ ಪರಸ್ಪರ ಶುಭಾಶಯ ತಿಳಿಸಿ ನಿದ್ರೆಗೆ ಜಾರುತ್ತಿದ್ದೆವು.

ಬಾಲ್ಯದಲ್ಲಿ ಬೇಗ ಏಳುವುದೆಂದರೆ ಸ್ವಲ್ಪ ಹೆಚ್ಚೇ ಸೋಮಾರಿತನವಿದ್ದರೂ, ಹೊಸ ಬಟ್ಟೆಯನ್ನು ತೊಡಬೇಕು ಎನ್ನುವ ಉತ್ಸಾಹ ನಮ್ಮನ್ನು ಬೇಗ ಏಳುವಂತೆ ಹುರಿದುಂಬಿಸುತ್ತಿತ್ತು. ಹಬ್ಬದಂದು ಭಕ್ತಿಯಿಂದಲೇ ಎದ್ದು ಸ್ನಾನ ಮುಗಿಸಿ ಹೊಸ ಉಡುಪು ಧರಿಸಿ ಧನುರ್ಮಾಸದ ಕಡೆಯ ದಿನವಾದ್ದರಿಂದ ಎಲ್ಲ ದೇವಸ್ಥಾನಗಳಲ್ಲೂ ವಿಶೇಷ ಪೂಜೆಗೆ ಎಲ್ಲರೂ ಸೇರಿ ಹೋಗುವುದು ವಾಡಿಕೆ. ಈ ಭಕ್ತಿ, ಹರಟೆ, ನಗು ಒಂದಿಡಿ ಸಮೃದ್ಧ ನೆನಪುಗಳು…ಇವೆಲ್ಲ ನಮ್ಮ ಬದುಕಿನಲ್ಲಿ ಸ್ಮತಿ ಪಟಲದಲ್ಲಿ ಉಳಿದು ಹೋಗುವಂತ ದಿನಗಳಿವು. ಮನೆಗೆ ಮರಳಿ, ಬಾಗಿಲಿಗೆ ಮಾವಿನ ತೋರಣದಿಂದ ಸಿಂಗರಿಸಿ ಪೂಜೆಗೆ ಸಹಕರಿಸುವ ಹೂವಿನ ಅಲಂಕಾರ ಅತ್ಯಂತ ಪ್ರಿಯವೆನಿಸುತ್ತಿತ್ತು.

ನಮ್ಮದು ಮೈಸೂರು. ದಸರಾ, ದೀಪಾವಳಿಯಂತೆ ಸಂಕ್ರಾಂತಿಯೂ ಇಲ್ಲಿ ದೊಡ್ಡ ಹಬ್ಬವೇ. ಇಲ್ಲಿನ ಹಳ್ಳಿಹಳ್ಳಿಗಳಲ್ಲಿ ಸಂಕ್ರಾತಿಯನ್ನು ಸಾಂಪ್ರಾದಾಯಿಕವಾಗಿ ಆಚರಿಸಲಾಗುತ್ತದೆ. ಹಳ್ಳಿಗಳಲ್ಲಿ ರೈತರು ಜಾನುವರುಗಳಿಗೆ ಕಿಚ್ಚು ಹಾಯಿಸುತ್ತಾರೆ. ಊರಿನಿಂದ ದೂರಹೋದ ಮೇಲೆ ಇವೆಲ್ಲವನ್ನು ನೆನಪಿಸಿ ಖುಷಿ ಪಡುವ ಸಂಭ್ರಮ.

Advertisement

ಹಬ್ಬದ ದಿನದ ನಮ್ಮ ಆನಂದಕ್ಕೆ ಇನ್ನೊಂದು ಕಾರಣ ಅಡುಗೆಮನೆಯಲ್ಲಿ ಸಿಹಿ-ಖಾರ ಪೊಂಗಲ್‌ನ ಘಮ. ಧನುìಮಾಸದಲ್ಲಿ ಪೊಂಗಲ್‌ನದ್ದು ವಿಶೇಷ ತಿಂಡಿಗಳ ಸಾಲಿನಲ್ಲಿ ಅಗ್ರ ಸ್ಥಾನ. ಇನ್ನು ಜತೆಗೆ ವಿಧ-ವಿಧ ಅಡುಗೆಗೆ ಅಮ್ಮನ ಓಡಾಟ. ಮೊದಲೇ ಸಿದ್ಧಪಡಿಸಿದ ಎಳ್ಳು-ಬೆಲ್ಲವನ್ನು ಇಟ್ಟು ಪೂಜೆ ಮುಗಿಸಿ ರಸ್ತೆಯಲ್ಲಿರುವ ಗೋವನ್ನು ಕರೆತಂದು ಕಾಲೊ¤ಳೆದು ಅರಶಿನ-ಕಂಕುಮ ಹೂವಿನಿಂದ ಪೂಜಿಸಿ ಪೊಂಗಲ್‌ ತಿನ್ನಿಸಿದರೆ ಹಬ್ಬದ ಒಂದು ಭಾಗ ಆದಂತೆ. ಅನಂತರ ನಮ್ಮ ಉಪಾಹಾರ. ಮನೆ-ಮನೆಗೆ ಹೋಗಿ ಎಳ್ಳು-ಬೆಲ್ಲ ಹಂಚುವುದರೊಂದಿಗೆ ನಮ್ಮ ಸಂಭ್ರಮ ಆರಂಭವಾಗುತ್ತಿತ್ತು. ಪುಟ್ಟ – ಪುಟ್ಟ ಅಡುಗೆ ಪಾತ್ರೆಗಳ ಆಕಾರದ ಅಥವಾ ಸಣ್ಣ ಕುಡಿಕೆಗಳಲ್ಲಿ ಎಲ್ಲರಿಗೂ ಎಳ್ಳು ಹಂಚುವುದು ಅದಕ್ಕಿಂತ ಹೆಚ್ಚಾಗಿ ನಮಗೆ ಯಾವ ಬಣ್ಣ ಯಾವ ಪುಟ್ಟ ಪಾತ್ರೆ ಸಿಗುತ್ತದೆ ಎನ್ನುವ ಕುತೂಹಲ. ಸಿಕ್ಕ ಅನಂತರ ದುಪ್ಪಟ್ಟಾಗುತ್ತಿದ್ದ ಸಂಭ್ರಮ.

ನಮ್ಮ ಮನೆಯ ಸಡಗರ ಇಷ್ಟಾದರೆ ಬಾಲ್ಯದಲ್ಲಿ ಅಜ್ಜಿ ಮನೆಯಲ್ಲಿ ಸಂಕ್ರಾಂತಿ ಆಚರಿಸುವ ಸಂಭ್ರಮಕ್ಕೆ ಸರಿಸಾಟಿ ಮತ್ತೂಂದಿಲ್ಲ. ನಮಗೆ ಮುದ್ದೂ ಹೆಚ್ಚು , ನಮ್ಮ ಪಾಲಿನ ಕೆಲಸವೂ ಕಡಿಮೆ. ಹಿರಿಯರ ಕಾರ್ಯವೈಖರಿ, ರೀತಿ, ರಿವಾಜು, ಚಾಕಚಕ್ಯತೆ ನೋಡುತ್ತಾ ಕಣ್ತುಂಬಿಕೊಳ್ಳುವುದೊಂದು ಅನುಭೂತಿ.

ಹಲವು ಗೋವುಗಳಿದ್ದರಿಂದ ಅಲ್ಲಿನ ಹಬ್ಬದ ವೈಖರಿಯೇ ಭಿನ್ನ. ಕೊಟ್ಟಿಗೆಯನ್ನು ಸೆಗಣಿಯಿಂದ ಸಾರಿಸಿ ಸ್ವತ್ಛಗೊಳಿಸಿ ಹಸುಗಳ ಮೈತೊಳೆದು ಮೈಯೆಲ್ಲ ಅರಿಶಿನ ಲೇಪಿಸಿ, ಕೊಂಬುಗಳಿಗೆ ಬಣ್ಣ ಹಚ್ಚಿ ಸಿಂಗರಿಸುವುದು ಒಂದಕ್ಕಿಂತ ಒಂದು ಚೆಂದವಾಗಿ ಅಲಂಕರಿಸಿ ಜತೆಗೆ ಕುರಿ, ಮೇಕೆಗಳಂತಹ ಪ್ರಾಣಿಗಳನ್ನು ಚಂದಗೊಳಿಸುವುದು. ಅರಶಿನ ಕುಂಕುಮದಿಂದ ಕರ್ನಾಟಕದ ಬಣ್ಣವನ್ನು ಅದರ ಮೇಲೆ ಲೇಪಿಸಿ ರಾಜ್ಯದ ಬಗೆಗೆ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದರು.

ಮುಸ್ಸಂಜೆಯ ತಂಪಲ್ಲಿ ಗಲ್ಲಿಯುದ್ದಕ್ಕೂ ಹುಲ್ಲಿನ ಸಾಲುಗಳನ್ನು ಹಾಕಿ ಕತ್ತಲೆಯಾದನಂತರ ಸಾಲಿಗೆ ಬೆಂಕಿ ಹಚ್ಚಿ ಅದರ ಮೇಲೆ ಹಸುಗಳನ್ನು ಹಾರಿಸುವುದು ಪ್ರತೀ ಗೋವು ಪಾಲಕರ ವಾಡಿಕೆ. ಇದರಿಂದ ಹಸುಗಳ ಚರ್ಮಕ್ಕೂ ಬಿಸಿಯ ಶಾಖದಿಂದ ಹುಳು – ಉಪ್ಪಟೆಗಳಿಂದ ಮುಕ್ತವಾಗಿ ಆರೋಗ್ಯವಾಗಿರಲು ಸಹಕಾರಿಯಾಗುತ್ತದೆ. ಇದನ್ನು ನೋಡಲೆಂದೇ ಸೇರುವ ಜನಜಂಗುಳಿ. ಎಲ್ಲರಿಗೂ ಎಳ್ಳು-ಬೆಲ್ಲ ಹಂಚಿ ಸಂಭ್ರಮಿಸುವ ಪರಿ ಇತ್ತೀಚೆಗೆ ಕಾಣಸಿಗುವುದೇ ಅಪರೂಪ.

ಊರಿನಿಂದ ಜೀವನ ಜರ್ಮನಿಗೆ ಕರೆದೊಯ್ಯಿತು. ಜರ್ಮನಿಯ ನೆಲದಲ್ಲಿ ಪ್ರತೀ ಬಾರಿ ಹಬ್ಬಗಳು ಸರಳ ಆಚರಣೆಗೆ ಸೀಮಿತವಾಗಿದೆ. ಹಬ್ಬವನ್ನು ನೆನಪಿನ ಗುಂಗಿನಲ್ಲೇ ಕಳೆದು ಬಹಳ ಸರಳವಾಗಿ ಪೂಜೆ ಮತ್ತು ಒಂದಿಷ್ಟು ಹಬ್ಬದಡಿಗೆಯೊಂದಿಗೆ ಮುಗಿಸುವಾಗ, ಮನಸ್ಸು ಭಾರತದ ನೆಲದಲ್ಲೂ ನಾವು ಕೂಡು ಕುಟುಂಬದೊಂದಿಗೆ ಸೇರಿ ಮಾಡುತ್ತಿದ್ದ ಹಬ್ಬ – ಸಂಪ್ರದಾಯದಗಳು ಕಣ್ಮರೆಯಾಗುತ್ತಿವೆ. ನಮ್ಮ ಮುಂದಿನ ಪೀಳಿಗೆಗೆ ಒಂದು ಅಭೂತಪೂರ್ವ ಕ್ಷಣ-ಘಳಿಗೆಗಳನ್ನು ಕಟ್ಟಿಕೊಡುವಲ್ಲಿ ಸೋಲುತ್ತಿದ್ದೇವೇನೋ, ಬಾಂಧವ್ಯಗಳ ಆನ್‌ಲೈನ್‌ಗಷ್ಟೇ ಸೀಮಿತವಾಗಿವೆ ಎಂಬ ಭಾವ ಬಹಳ ಕಾಡುವುದು.

*ಶೋಭಾ ಚೌಹ್ಹಾಣ್‌, ಫ್ರಾಂಕ್‌ಫ‌ರ್ಟ್‌

Advertisement

Udayavani is now on Telegram. Click here to join our channel and stay updated with the latest news.

Next