Advertisement

ಲಕ್ಷ ಪುಷ್ಪಗಳಲ್ಲಿ ಅರಳಿದ ಕುವೆಂಪು ನೆನಪು

12:05 PM Aug 05, 2017 | |

ಬೆಂಗಳೂರು: ಕನ್ನಡಕ್ಕೆ ಮೊದಲ ಜ್ಞಾನಪೀಠ ಪುರಸ್ಕಾರ ದೊರೆತು 50 ವರ್ಷ ಸಂದಿದ್ದು, ಈ ಸವಿ ನೆನಪಿಗಾಗಿ ರಾಷ್ಟ್ರಕವಿ ಕುವೆಂಪು ಅವರಿಗೆ ಪುಪ್ಪನಮನ ಸಲ್ಲಿಸುವ ಸ್ವಾತಂತ್ರೊತ್ಸವದ ಫ‌ಲಪುಷ್ಪ ಪ್ರದರ್ಶನಕ್ಕೆ ರಾಜ್ಯಪಾಲ ವಜೂಭಾಯ್‌ವಾಲಾ ಸಸಿ ನೆಡುವ ಮೂಲಕ ಚಾಲನೆ ನೀಡಿದರು.

Advertisement

ಪ್ರದರ್ಶನಕ್ಕೆ ಮೊದಲ ದಿನವೇ ಉತ್ತಮ ಸ್ಪಂದನೆ ದೊರೆತಿದ್ದು, ಗಾಜಿನಮನೆಯಲ್ಲಿ ಮೂರೂವರೆ ಲಕ್ಷ ಬಿಳಿ, ಹಳದಿ, ಕೆಂಪು ಗುಲಾಬಿ ಹೂವುಗಳು ಮತ್ತು ಆಯ್ದ ಬಣ್ಣ ಬಣ್ಣದ ಎಲೆ ಜಾತಿಯ ಜೋಡಣೆಗಳಿಂದ 21 ಅಡಿ ಎತ್ತರ, 30 ಅಡಿ ಅಗಲ ಹಾಗೂ 38 ಅಡಿ ಉದ್ದದ ಕವಿ ಕುವೆಂಪುರವರ ಕುಪ್ಪಳ್ಳಿಯ ಮನೆಯ ಪ್ರತಿರೂಪ  ಪ್ರಮುಖ ಆಕರ್ಷಣೆಯಾಗಿದೆ.  

ಜತೆಗೆ ಅದಕ್ಕೆ ಹೊಂದಿಕೊಂಡಂತೆ ಸೃಷ್ಟಿಸಲಾಗಿರುವ ಕವಿಶೈಲದ ಯಥಾವತ್‌ ಪ್ರತಿರೂಪ ಮೂಲ ಕವಿಶೈಲ ಹೋಲುವಂತಿದ್ದು ಮತ್ತೂಂದು ಆಕರ್ಷಣೆಯಾಗಿದೆ. ಜೋಗ ಜಲಪಾತದ ಪ್ರತಿರೂಪವೂ ಸುಂದರವಾಗಿ ಮೂಡಿ ಬಂದಿದ್ದು ಮಹಿಳೆಯರು ಮಕ್ಕಳನ್ನು ಸೆಳೆಯುತ್ತಿದೆ.ಆ.15ರವರೆಗೆ ಪುಷ್ಪ ಪ್ರದರ್ಶನ ನಡೆಯಲಿರುವ ಹಿನ್ನೆಲೆಯಲ್ಲಿ ಗಾಜಿನ ಮನೆಯ ಒಳಾಂಗಣದಲ್ಲಿ ಹೂವು, ಗಿಡಗಳು ಒಣಗದಿರುವಂತೆ ಹಿಮದ ಸಿಂಚನದ ವ್ಯವಸ್ಥೆ ಮಾಡಲಾಗಿದೆ.  

ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ವತಿಯಿಂದ ಪುಸ್ತಕ ಮಳಿಗೆ ತೆರೆಯಲಾಗಿದ್ದು, ಕುವೆಂಪು ಕೃತಿಗಳೊಂದಿಗೆ ಪ್ರತಿಷ್ಠಾನದ ಪ್ರಕಟಿತ ಕೃತಿಗಳ ಮಾರಾಟ ಮತ್ತು ಪ್ರದರ್ಶನದ ವ್ಯವಸ್ಥೆ ಮಾಡಲಾಗಿದೆ. ಕುವೆಂಪು ಅವರ ಕಾದಂಬರಿ, ಸಣ್ಣಕತೆ, ನಾಟಕಗಳು ಸೇರಿದಂತೆ ವಿವಿಧ ಬರಹಗಳ ಕೃತಿಗಳು ಇಲ್ಲಿ ಲಭ್ಯ.

ಅಮೂಲ್ಯ ಛಾಯಾಚಿತ್ರಗಳು ಪುರಾತನ ಲಾಲ್‌ಬಾಗ್‌ ಬಂಡೆ ಸಮೀಪದಲ್ಲೇ ಕುವೆಂಪು ಛಾಯಾಚಿತ್ರ ಹಾಗೂ ಪುಸ್ತಕ ಪ್ರದರ್ಶನ ಏರ್ಪಡಿಸಲಾಗಿದೆ. ಕುವೆಂಪು ಬಾಲಕನಾಗಿದ್ದಾಗ ತಮ್ಮ ತಂದೆ ವೆಂಕಟಪ್ಪಗೌಡ ಅವರೊಂದಿಗೆ ತೆಗೆದ ಛಾಯಾಚಿತ್ರ ಗಮನ ಸೆಳೆಯುತ್ತದೆ.  

Advertisement

” ಉದಯರವಿ’ ಯಲ್ಲಿ ಸರ್ವೋದಯ ರವಿ ವಿನೋಬಾ ಭಾವೆ, ಮಾಜಿ ಮುಖ್ಯಮಂತ್ರಿಗಳಾದ ನಿಜಲಿಂಗಪ್ಪ, ಕಡಿದಾಳ ಮಂಜಪ್ಪ, ಬಿ.ಡಿ.ಜತ್ತಿ ಅವರೊಂದಿಗೆ ಸಂಭಾಷಣೆಯಲ್ಲಿ ತೊಡಗಿದ್ದಾಗ ಕ್ಲಿಕ್ಕಿಸಿದ ಛಾಯಾಚಿತ್ರ, ಪತ್ನಿ ಹೇಮಾವತಿಯವರೊಂದಿಗೆ ಜೇಷ್ಠಪುತ್ರ ಪೂರ್ಣಚಂದ್ರ ತೇಜಸ್ವಿ ಮಗುವಾಗಿದ್ದಾಗ ತೆಗೆದ ಫ್ಯಾಮಿಲಿ ಫೋಟೋ, ಕೋ.ಚನ್ನಬಸಪ್ಪ, ಡಾ.ಮಾಸ್ತಿವೆಂಕಟೇಶ್‌ ಅಯ್ಯಂಗಾರ್‌ ಅವರೊಂದಿಗಿನ ಛಾಯಚಿತ್ರ, ಬೇಂದ್ರೆ-ಕುವೆಂಪು ಸಮಾಗಮದ ಚಿತ್ರ,

ಜ್ಞಾನಪೀಠ ಪ್ರಶಸ್ತಿ ಬಂದಾಗ ಅಂದಿನ ರಾಜ್ಯಪಾಲ ಜನರಲ್‌ ನಾಗೇಶ್‌, ಅಂದಿನ ಮುಖ್ಯಮಂತ್ರಿ ನಿಜಲಿಂಗಪ್ಪ ಅವರಿಂದ ಪ್ರಶಸ್ತಿ ಸ್ವೀಕರಿಸುತ್ತಿರುವ ಚಿತ್ರ, ಮುಖ್ಯವಾಗಿ ತೋಟಗಾರಿಕಾ ಪಿತಾಮಹಾ ಡಾ.ಎಂ.ಎಚ್‌.ಮರಿಗೌಡ, ದೇಜವರೇಗೌಡ ಅವರೊಂದಿಗೆ ಕುವೆಂಪು ಅವರ ಛಾಯಾಚಿತ್ರಗಳು ಸೇರಿದಂತೆ ಮಕ್ಕಳು, ಮೊಕ್ಕಳೊಂದಿಗೆ ಕಳೆದ ಮಧುರ ಕ್ಷಣವನ್ನು ನೆನಪಿಸುವ ಛಾಯಾಚಿತ್ರಗಳು ಸಾಹಿತ್ಯಾಭಿಮಾನಿಗಳನ್ನು ಆನಂದದ ತುತ್ತ ತುದಿಗೊಯ್ಯುವಂತಿವೆ.  

ಟಿಪ್ಪು ಅರಮನೆಯಲ್ಲಿ ಸಾಧನೆ ಪಟ್ಟಿ ಗಾಜಿನ ಮನೆ ಸಮೀಪದಲ್ಲೇ ಬಲಗಡೆಯಲ್ಲಿ ಕೆ.ಆರ್‌.ಮಾರುಕಟ್ಟೆ ಸಮೀಪವಿರುವ ಟಿಪ್ಪುಸುಲ್ತಾನ್‌ ಬೇಸಿಗೆ ಅರಮನೆ ಮಾದರಿ ನಿರ್ಮಿಸಲಾಗಿದೆ. ಅದರಲ್ಲಿ ಸರ್ಕಾರದ ಸಾಧನೆಗಳ ಪ್ರತಿಬಿಂಬಿತ ಪೋಸ್ಟರ್‌ಗಳು, ಶಾಲಾ ಮಕ್ಕಳಿಗೆ ನೀಡುವ ಕ್ಷೀರಭಾಗ್ಯ, ಭಾಗ್ಯಲಕ್ಷಿ, ಅನ್ನಭಾಗ್ಯ, ವಸತಿ ಭಾಗ್ಯ, ಸರ್ಕಾರಿ ಶಾಲೆಗಳ ಮಾದರಿ, ಬೆಂಗಳೂರು ಮಹಾನಗರದ ಅಭಿವೃದ್ಧಿ ಕಾಮಗಾರಿಗಳು,  ನಮ್ಮ ಮೆಟ್ರೋ ಪ್ರತಿಕೃತಿ ಸೇರಿದಂತೆ ವಿವಿಧ ಸಾಧನೆ ತಿಳಿಸುವ ಮಾಹಿತಿಯನ್ನು ಅರಮನೆಯಲ್ಲಿ ಪ್ರಕಟಿಸಲಾಗಿದೆ.  

ಪುತ್ರಿಯರ ಭೇಟಿ
ಕುವೆಂಪು ಮಗಳ ಭೇಟಿ ಕುವೆಂಪು ಅವರ ಮಗಳು ತಾರಿಣಿ, ಅವರ ಪತಿ ಕುವೆಂಪು ವಿವಿ ವಿಶ್ರಾಂತ ಕುಲಪತಿ ಚಿದಾನಂದಗೌಡ, ಕುವೆಂಪು ಅವರ ಮತ್ತೂಬ್ಬ ಮಗಳು ಇಂಧುಕಲಾ ಅವರ ಪುತ್ರಿ ಅವರು ಗಾಜಿನಮನೆ ಸೇರಿದಂತೆ ಲಾಲ್‌ಬಾಗ್‌ನ ಇತರ ಪ್ರದೇಶಗಳಿಗೆ ಭೇಟಿ ನೀಡಿದರು. ಅವರಿಗೆ ಇಲಾಖೆ ಜಂಟಿ ನಿರ್ದೇಶಕ ಡಾ.ಜಗದೀಶ್‌ ಅವರು ಲಾಲ್‌ಬಾಗ್‌ನ ಮರಗಿಡಗಳ ವಿಶೇಷತೆ ಪರಿಚಯಿಸಿದರು.

ಫ‌ಲಪುಷ್ಪ ಪ್ರದರ್ಶನದ ಉದ್ಘಾಟನೆಯಲ್ಲಿ ತೋಟಗಾರಿಕೆ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌, ಮೇಯರ್‌ ಪದ್ಮಾವತಿ, ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಹಂಪಾನಾಗರಾಜಯ್ಯ, ಇಲಾಖೆ ನಿರ್ದೇಶಕ ಪ್ರಭಾಷ್‌ಚಂದ್ರ ರೇ, ಜಂಟಿ ನಿರ್ದೇಶಕ ಡಾ.ಜಗದೀಶ್‌, ಉಪನಿರ್ದೇಶಕ ಎಂ.ಆರ್‌.ಚಂದ್ರಶೇಖರ್‌, ಮೈಸೂರು ಉದ್ಯಾನಕಲಾ ಸಂಘದ ಉಪಾಧ್ಯಕ್ಷ ಶ್ರೀಕಂಠಯ್ಯ ಮತ್ತಿತರರು ಪಾಲ್ಗೊಂಡಿದ್ದರು.  

ಮತ್ತಷ್ಟು ಆಕರ್ಷಣೆಗಳು
ಕುವೆಂಪು ಪುಷ್ಪ ಸಾಹಿತ್ಯ ದರ್ಶನ, ಇಂಡೋ ಅಮೆರಿಕನ್‌ ಹೈಬ್ರಿಡ್‌ ಸೀಡ್ಸ್‌ ಕಂಪನಿಯ ಆಕರ್ಷಕ ಅಲಂಕಾರಿಕ ಪುಷ್ಪಗಳ ಜೋಡಣೆ, ಹೂವಿನ ಪಿರಮಿಡ್‌ಗಳು, ವಾರ್ಷಿಕ ಹೂಗಳ ರಂಗು, ಹೊಸ ಹೂಗಳ ಜೋಡಣೆ, ರಾಷ್ಟ್ರಪಕ್ಷಿ ನವೀಲಿನ ಪುಷ್ಪ ಮಾದರಿ. ಇಳಿಜಾರಿನ ಪುಷ್ಪಗಳ ಜೋಡಣೆ, ಹೃದಯಾಕಾರದ ಹೂಬಳ್ಳಿಗಳ ಕಮಾನುಗಳು ನೋಡುಗರಲ್ಲಿ ರೋಮಾಂಚನ ಮೂಡಿಸುತ್ತವೆ.    

ತೇವಗೊಂಡ ತಾರಿಣಿ ಕಣ್ಗಳು
ಅಪ್ಪ ಮೈಸೂರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಸಂದರ್ಭದಲ್ಲಿ ರಜಾ ದಿನಗಳಲ್ಲಿ ಅವರೊಂದಿಗೆ ನಾನು ಕೂಡ ಲಾಲ್‌ಬಾಗ್‌ಗೆ ಬರುತ್ತಿದ್ದೆ. ಆಗ ಇದ್ದದ್ದಕ್ಕಿಂತ ಈಗ ಸಾಕಷ್ಟು ಬದಲಾಗಿದ್ದು, ಅಭಿವೃದ್ದಿಯಾಗಿದೆ. ಅಪ್ಪ ಮತ್ತು ಎಂ.ಎಚ್‌.ಮರಿಗೌಡರು ಒಳ್ಳೆಯ ಸ್ನೇಹಿತರಾಗಿದ್ದರು ಎಂದು ಕುವೆಂಪು ಅವರ ಮಗಳು ತಾರಿಣಿ ಅವರು ನೆನಪಿಸಿಕೊಂಡರು. ಬಳಿಕ ಗಾಜಿನಮನೆಯಲ್ಲಿ ಕುಪ್ಪಳ್ಳಿಯ ಮನೆ ಲಕ್ಷಾಂತರ ಹೂವುಗಳಿಂದ ಅಲಂಕೃತವಾಗಿದ್ದು, ಅದರ ಆವರಣದಲ್ಲಿ ತಂದೆ ಕುವೆಂಪು ಕುಳಿತಿರುವಂತೆ ನಿರ್ಮಿಸಲಾಗಿರುವ ಮೂರ್ತಿಕಂಡು ಭಾವಾಪರವಶರಾದ ತಾರಿಣಿ ಅವರ ಕಣ್ಣಂಚಿನಲ್ಲಿ ನೀರು ಜಿನುಗಿತು.    

ಸೊರಗಿದ ಜೋಗ ಅಸಲಿ ಜೋಗ ಜಲಪಾತ ನೋಡಿದ್ದೇನೆ. ಬೇಸಿಗೆಯಲ್ಲಿ ಅಲ್ಲಿಗೆ ಹೋಗಿದ್ದೆ. ಮಳೆಯಿಲ್ಲದೆ ಅದು ಸೊರಗಿತ್ತು. ಇಲ್ಲಿ ನಿರ್ಮಿಸಲಾಗಿರುವ ಜೋಗದ ಪ್ರತಿರೂಪ ಚೆನ್ನಾಗಿದೆ. ಆದರೆ, ನೀರು ಜಿನುಗುತ್ತಿರುವುದು ಪ್ರೇಕ್ಷಕರಿಗೆ ನಿರಾಸೆ ಮೂಡಿಸಿದೆ. ಮುಂದಿನ ದಿನಗಳಲ್ಲಿ ನೀರು ಸ್ವಲ್ಪ ಹೆಚ್ಚಾಗಿಯೇ ಸುರಿಯುವಂತೆ ಮಾಡಿದ್ದರೆ ಸಾರ್ವಜನಿಕರನ್ನು ಸೆಳೆಯಬಹುದು.
-ರಚಿತಾ, ರಾಜಸ್ಥಾನ್‌.  

ಇಷ್ಟು ವರ್ಷಗಳಲ್ಲಿಯೇ ಅತ್ಯಂತ ಆಕರ್ಷಣೀಯ ಪುಪ್ಪ ಪ್ರದರ್ಶನ ಇದೆನ್ನಬಹುದು. ಕುಪ್ಪಳ್ಳಿಯ ಕವಿ ಮನೆ, ಕವಿಶೈಲ ತುಂಬಾ ಸುಂದರವಾಗಿದೆ. ಕಳೆದ ಪುಷ್ಪಪ್ರದರ್ಶನಗಳಿಗಿಂತ ಈ ಬಾರಿ ಹೆಚ್ಚು ಹೆಚ್ಚು ವೀಕ್ಷಣೆಗೆ ಯೋಗ್ಯವಾದ ಚಿತ್ರಣಗಳನ್ನು ತೋಟಗಾರಿಕೆ ಇಲಾಖೆ ಸೃಷ್ಟಿಸಿದ್ದು, ಅತ್ಯದ್ಭುತ ಪ್ರಕೃತಿ ಸೌಂದರ್ಯಕ್ಕೆ ಮಾರುಹೋಗಿದ್ದೇನೆ.
-ಸುಕುಮಾರ್‌, ಪ್ರವಾಸಿಗ.  

ಆರು ಸಾವಿರ ಮಂದಿ ಭೇಟಿ
ಫ‌ಲಪುಷ್ಪ ಪ್ರದರ್ಶನ ಮೊದಲ ದಿನ ಆರು ಸಾವಿರ ಮಂದಿ ಲಾಲ್‌ಬಾಗ್‌ಗೆ ಭೇಟಿ ನೀಡಿದ್ದು, ಈ ಪೈಕಿ 5,143 ಮಂದಿ ವಯಸ್ಕರು, 7,71 ಮಕ್ಕಳು. ಇವರಿಂದ ಒಟ್ಟು 2.75 ಲಕ್ಷ ರೂ. ಟಿಕೆಟ್‌ ದರ ಸಂಗ್ರಹವಾಗಿದೆ. ಶುಕ್ರವಾರ ವರಮಹಾಲಕ್ಷ್ಮೀ ಹಬ್ಬ ಇದ್ದುದರಿಂದ ಪುಷ್ಪಪ್ರದರ್ಶನಕ್ಕೆ ಆಗಮಿಸಿದವರ ಸಂಖ್ಯೆ ಕಡಿಮೆ ಇದೆ. ಶನಿವಾರ ಮತ್ತು ಭಾನುವಾರ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಜಗದೀಶ್‌ ತಿಳಿಸಿದ್ದಾರೆ.       

Advertisement

Udayavani is now on Telegram. Click here to join our channel and stay updated with the latest news.

Next