Advertisement

ಧರ್ಮ ಮತ್ತು ರಾಜಕಾರಣದ ನಡುವೆ…

09:51 AM Jan 21, 2020 | sudhir |

ಪ್ರಜಾಪ್ರಭುತ್ವ ಅಥವಾ ಜನತಂತ್ರಕ್ಕೆ ಅಪಮಾನ ಆಗದಂತೆ ನಡೆದುಕೊಳ್ಳಬೇಕಾದುದು ಎಲ್ಲ ಧಾರ್ಮಿಕರ ಕರ್ತವ್ಯ. ಮುಖ್ಯಮಂತ್ರಿಗಳನ್ನು ಸಭಿಕರ ಮುಂದೆ ಅವಮಾನ ಮಾಡುವುದು ಯಾವುದೇ ಪೀಠಕ್ಕೂ ಶೋಭಾಯಮಾನ ಅಲ್ಲ.

Advertisement

ಬದುಕೊಂದು ಹಾದಿಗಳು ನೂರಾರು. ಅದರಲ್ಲೂ ಪ್ರಮುಖವಾಗಿ ಎರಡು ಮಾರ್ಗಗಳು. ಸಂಸಾರ ಮತ್ತು ಸನ್ಯಾಸ. ಪ್ರತಿಶತ 95% ಜನರು ಸಾಂಸಾರಿಕ ಮಾರ್ಗವನ್ನು ಅನುಸರಿಸುತ್ತಾರೆ. ಕೇವಲ 5% ಜನರು ಸನ್ಯಾಸವನ್ನು ಅನುಭವಿಸುತ್ತಾರೆ.

ಬಡತನ, ಅಸಹಾಯಕತೆ, ಪರಿಸ್ಥಿತಿಯ ಒತ್ತಡದಿಂದಾಗಿ ಕೆಲವರು ಸನ್ಯಾಸದ ಕಡೆಗೆ ವಾಲುವಂತಾದರೆ, ಗುರುಕುಲ ಮಾದರಿ ಶಿಕ್ಷಣದಿಂದಾಗಿ ಕೆಲವರು ಆ ಹಾದಿಯನ್ನು ಅನುಸರಿಸುತ್ತಾರೆ. ಆಗಾಗ ಕೆಲವರು ಎಲ್ಲವನ್ನು ತೊರೆಯಲು ನಾನೇನು ಸನ್ಯಾಸಿಯೇ? ಎಂದು ಗೇಲಿ ಮಾಡುತ್ತಾರೆ. ಸನ್ಯಾಸ ಜೀವನದಲ್ಲು ಸವಾಲುಗಳು ಇವೆಯೆಂಬುದು ಕೆಲವರಿಗೆ ತಿಳಿದಿಲ್ಲವೆಂದು ಕಾಣುತ್ತದೆ. ಗೆಡ್ಡೆ- ಗೆಣಸು ಸ್ವೀಕರಿಸುತ್ತ, ಊರಿಂದೂರಿಗೆ ಸಂಚರಿಸುತ್ತ, ಒಮ್ಮೊಮ್ಮೆ ಭಿಕ್ಷೆ ಬೇಡುತ್ತ ತನ್ನ ವ್ರತ-ನಿಯಮಾದಿಗಳನ್ನು ಪಾಲಿಸುವವರು ಸನ್ಯಾಸಿಗಳೆಂದು ಕರೆಸಿಕೊಳ್ಳುತ್ತಾರೆ. ಸನ್ಯಾಸಿಗಳು ಒಂದೇ ಕಡೆ ಜಪ-ತಪ ಆಚರಿಸಲು ಅವಕಾಶವಿದೆ; ಅದರಂತೆ ಪರ್ಯಟನೆ ಮಾಡುತ್ತ ಜೀವನ ನಡೆಸಬಹುದಾಗಿರುತ್ತದೆ. ಇವರಿಗೆ ಒಮ್ಮೊಮ್ಮೆ ಕುಡಿಯಲು ನೀರು ಸಹ ಸಿಗುವುದಿಲ್ಲ. ಎಲ್ಲರಿಗೂ ಬದುಕಿನ ನಿರ್ವಹಣೆ ಬೃಹತ್‌ ಸಮಸ್ಯೆಯಾಗಿ ಕಾಡುತ್ತದೆ. ಕಾಡು-ಮೇಡಿನಲ್ಲಿ ವಾಸಿಸುವ ಸನ್ಯಾಸಿಗಳು ದುಡಿಯುವುದಿಲ್ಲವಾದರೂ, ಜೀವನ ನಿರ್ವಹಣೆ ಅವರವರದೇ ಆಗಿರುತ್ತದೆ.
ಬದ್ಧತೆಗೆ ಒಳಗಾಗುವವರನ್ನು ಸ್ವಾಮಿಗಳೆಂದು ಗುರುತಿಸಬಹುದು.

ಬದ್ಧತೆಯೆಂದರೆ ಸಾಮಾಜಿಕ ಹೊಣೆಗಾರಿಕೆ. ಸಂಘ-ಸಂಸ್ಥೆಗಳ ಜವಾಬ್ದಾರಿ. ಒಂದು ಮಠ-ಪೀಠವನ್ನು ನಡೆಸಿಕೊಂಡು ಹೋಗುವುದು ಸುಲಭವೇನಲ್ಲ! ಸಮಸ್ಯೆಗಳು ಇರತಕ್ಕವೆ. ಹೆಜ್ಜೆ ಹೆಜ್ಜೆಗೆ ಕಾಡುವವರು ಇರುತ್ತಾರೆ. ಇವರ ಕಣ್ಣು ಎಲ್ಲರ ಮೇಲಿದ್ದರೆ, ಎಲ್ಲರ ಕಣ್ಣು ಇವರ ಮೇಲಿರುತ್ತದೆ. ಅನೇಕರ ಅನುಮಾನಗಳ ನಡುವೆ ಒಬ್ಬ ಸ್ವಾಮಿಯು ಜೀವನ ನಡೆಸಬೇಕಾಗುತ್ತದೆ.

ಅನುಮಾನವು ಅವಮಾನಕ್ಕೆ ಕಾರಣ ಆಗುತ್ತದೆ. ಸಾಮಾಜಿಕ ಬದ್ಧತೆಗೆ ಒಳಗಾಗಿ, ಸಂಘ-ಸಂಸ್ಥೆ ಸ್ಥಾಪಿಸುವವರದು ಸ್ವಾಮಿತ್ವ; ಅಲೆಮಾರಿ ಜೀವನ ನಡೆಸುತ್ತ ಕಂದಮೂಲಾದಿಗಳನ್ನು ಸೇವಿಸುತ್ತ ಜೀವನ ನಡೆಸುವುದು ಸನ್ಯಾಸತ್ವ. ಸಂನ್ಯಾಸತ್ವದಲ್ಲಿ ಏಕವ್ಯಕ್ತಿ ಸುಖ; ಸ್ವಾಮಿತ್ವದಲ್ಲಿ ಬಹುಮುಖೀ ಸೇವಾಸುಖ.

Advertisement

ಸನ್ಯಾಸಿಗೆ ಯಾವ ಕಟ್ಟುಪಾಡುಗಳು ಇರುವುದಿಲ್ಲ; ಸ್ವಾಮಿತ್ವಕ್ಕೆ ಹಲವಾರು ಕಟ್ಟುಪಾಡುಗಳಿರುತ್ತವೆ. ಬಾಯಾರಿಕೆಯಾದರೆ ಎಲ್ಲರಂತೆ ಅವನು ನೀರು ಕುಡಿಯುವಂತಿಲ್ಲ. ಧ್ಯಾನಾದಿಗಳನ್ನು (ಪೂಜೆ) ಮಾಡಿಯೇ ಪ್ರಸಾದ ಸ್ವೀಕರಿಸಬೇಕೆಂಬ ವ್ರತಾಚರಣೆ.

ನೀರು ಕುಡಿಯುವ ಸ್ವಾತಂತ್ರÂವೂ ಅವನಿಗೆ ಇರುವುದಿಲ್ಲ. ಅಕಸ್ಮಾ ತ್ತಾಗಿ ಬಹಿರಂಗ ಸಭೆಯಲ್ಲಿ ನೀರು ಕುಡಿದರೆ ಅದನ್ನು ಚಿತ್ರೀಕರಣ ಮಾಡಿಕೊಂಡು ಕೆಲವರು ಸೋಷಿಯಲ್‌ ಮೀಡಿಯಾಗಳಿಗೆ ರವಾನಿಸುತ್ತಾರೆ. ಒಂದು ಅಪರಾಧ ಎಂಬಂತೆ ಬಿಂಬಿಸಲಾಗುತ್ತದೆ.

ಸಭೆ-ಸಮಾರಂಭ ಇತ್ಯಾದಿಗಳಲ್ಲಿ ನಿರತರಾದಾಗ ವೇಳೆಗೆ ಸರಿಯಾಗಿ ಪ್ರಸಾದ (ಭೋಜನ) ಸ್ವೀಕರಿಸಲು ಆಗುವುದಿಲ್ಲ. ನಮ್ಮ ಶ್ರೀಮಠದಲ್ಲಿ ವೇಳೆಗೆ ಸರಿಯಾಗಿ ಪ್ರಸಾದ ಸ್ವೀಕರಿಸುವವರೆಂದರೆ ವಿದ್ಯಾರ್ಥಿಗಳು/ಮಕ್ಕಳು ಮತ್ತು ಬರುವ ಭಕ್ತಾದಿಗಳು. ಕೊನೆಯಲ್ಲಿ ಭೋಜನ ಸ್ವೀಕರಿಸುವವನು ನಾನಾಗಿರುತ್ತೇನೆ.

ಮಧ್ಯಾಹ್ನ 3 ಗಂಟೆ ಅಥವಾ 4 ಗಂಟೆ, ರಾತ್ರಿ 10 ಅಥವಾ 11 ಗಂಟೆಗೆ ಪ್ರಸಾದ ಸ್ವೀಕರಿಸ ಬೇಕಾದ ಅನಿವಾರ್ಯತೆ. ದಿನವೂ ಈ ಪದ್ಧತಿ ಮುಂದುವರಿದರೆ ಅಸಿಡಿಟಿ, ಅಲ್ಸರ್‌, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಮೂತ್ರಕೋಶದ ತೊಂದರೆಗಳು ಎದುರಾಗುತ್ತವೆ. ಬಹಳ ಜನ ಸ್ವಾಮಿಗಳು ಮೂತ್ರಕೋಶದ ತೊಂದರೆ ಅನುಭವಿಸುತ್ತಾರೆ (ವೇಳೆಗೆ ಸರಿಯಾಗಿ ನೀರು ಕುಡಿಯದೆ ಇರುವುದರಿಂದ). ಇದನ್ನೆಲ್ಲ ಗಮನಿಸಿದ ಕೆಲವರು ಧೈರ್ಯವಾಗಿ ಇತ್ತೀಚೆಗೆ ಬಹಿರಂಗವಾಗಿ ನೀರು ಕುಡಿಯುವುದನ್ನು ಆರಂಭಿಸಿದ್ದಾರೆ. ಮಠಾಧೀಶರ ಮತ್ತೂಂದು ಜಟಿಲವಾದ ಸಮಸ್ಯೆಯೆಂದರೆ ಮಧುಮೇಹ. ಈ ಕಾಯಿಲೆಯು ಅತಿಯಾದ ಒತ್ತಡ (ಖಠಿrಛಿss)ದಿಂದ ಎದುರಾಗುತ್ತದೆಂದು ವೈದ್ಯಕೀಯ ಲೋಕದ ಅಂಬೋಣ. ಮಲಬದ್ಧತೆಯಿಂದಲೂ ಬಳಲುವ ಸಂಭವ.

ಮಠಾಧೀಶರು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಾರೆ. ಸಮಯದ ಒತ್ತಡ, ಕಾರ್ಯಬಾಹುಳ್ಯದ ಒತ್ತಡ, ಲೋಕಾಪವಾದದ ಒತ್ತಡ ಇತ್ಯಾದಿ.

ಸಮಾಜದ ಒಳಿತಿಗಾಗಿಯೂ ತನ್ನ ಬದುಕಿನ ಉದ್ಧಾರ ಕ್ಕಾಗಿಯೂ ಒಬ್ಬ ಸ್ವಾಮಿ ಮನೆ ಮ ತ್ತು ಹೆತ್ತವರನ್ನು ತೊರೆದು – ಸಮಾಜವೇ ನೀನೇ ನನಗೆ ಗತಿ ಮತಿ ಯೆಂದು ಭಾವಿಸಿ, ಕ ಟ್ಟಿಕೊಂಡಿದ್ದ ಉಡು ದಾರವನ್ನು ಹರಿದು ಬರುತ್ತಾನೆ. ಉಡು ದಾರ ಸಂಸಾರದ ಸಂಕೇತ; ಶಿವದಾರ ಮತ್ತು ಜನಿವಾರ ಪರಮಾರ್ಥ ಸಾಧನೆಯ ಸಂಕೇತ. ಆ ದಿಶೆಯಲ್ಲಿ ಸ್ವಾಮಿಗಳು, ಶರಣರು, ಮಠಾಧೀಶರು ತ್ಯಾಗಮೂರ್ತಿಗಳು. ಸ್ವಾಮಿತ್ವದಲ್ಲಿ ತ್ಯಾಗತ್ವ ಇದೆ.
ಸಾರ್ವಜನಿಕರಿಂದ ಪೂಜೆಗೊಳ್ಳುವುದು ಸ್ವಾಮಿಗಳಿಗಿರುವ ಅವಕಾಶ.

ತ್ಯಾಗಮಯವಾದ ಬದುಕಿಗೆ ಗೌರವ-ಘನತೆ ಮತ್ತು ಪೂಜ್ಯತೆ. ಆ ಸ್ಥಾನದ ಪೂಜ್ಯತೆ ಮತ್ತು ಘನತೆ ಹೆಚ್ಚಾಗುವಂತೆ ನೋಡಿಕೊಳ್ಳಬೇಕಾಗುತ್ತದೆ. ಪೂಜ್ಯತೆ ಹೆಚ್ಚದಿದ್ದರು ತೊಂದರೆಯಿಲ್ಲ ಅದಕ್ಕೆ ಚ್ಯುತಿ ಬಾರದಂತೆ ನೋಡಿಕೊಳ್ಳಬೇಕಾಗುತ್ತದೆ. ಸಿಂಹಾಸನ ಇರಬಹುದು, ಮತ್ಯಾವ ಅಧಿಕಾರದ ಗದ್ದುಗೆ ಹಿಡಿದವರೇ ಇರಬಹುದು, ಅವರೆಲ್ಲ ಸದಾ ಸಿಂಹಾವಲೋಕನ ಮಾಡಿಕೊಳ್ಳ ಬೇಕಾಗುತ್ತದೆ. ತನ್ಮೂಲಕ ತಪ್ಪು-ಒಪ್ಪುಗಳ ಪರಾಮರ್ಶೆ. ಬದುಕಿನಲ್ಲಿ ಧ್ಯಾನ, ಮೌನ ಮತ್ತು ಸುಜ್ಞಾನದ ಮೂಲಕ ಅಂತರೀಕ್ಷಣೆ
ಮಾಡಿಕೊಳ್ಳದಿದ್ದಲ್ಲಿ ಆಗುವ ಅನಾಹುತಗಳು ಅಷ್ಟಿಷ್ಟಲ್ಲ.

ಪಟ್ಟಾಧಿಕಾರವೆಂದರೆ ಕೆಲವರು ಮಠಾಧಿಕಾರವೆಂದು ಭ್ರಮಿಸಿದಂತಿದೆ. ಭ್ರಮೆಗೆ ಒಳಗಾದಲ್ಲಿ ಕಣ್ಣು ಕುರುಡಾಗುತ್ತವೆ; ನೆತ್ತಿಗೇರುತ್ತವೆ. ಇಂದ್ರಿಯ ನಿಯಂತ್ರಣ ಬಹುಮುಖ್ಯ. ಬುದ್ಧಿ ಹೇಳಿದಂತೆ ಅವು ಕೇಳಿದರೆ ಚೆನ್ನ. ಅವು ಹೇಳಿದಂತೆ ಬುದ್ಧಿ ಕೇಳಬಾರದು. ಮಠಗಳು ಮತ ಬ್ಯಾಂಕ್‌ ಆಗುತ್ತಿವೆ ಎಂಬ ಸಂದೇಹವು ಇತ್ತೀಚೆಗೆ ವ್ಯಾಪಕವಾಗಿದೆ.

ಮಠಗಳು ಶ್ರದ್ಧಾಕೇಂದ್ರಗಳು, ಸಾಂತ್ವನ ಕೇಂದ್ರಗಳು. ಅವು ಶ್ರದ್ಧಾಕೇಂದ್ರ ಮತ್ತು ಸಾಂತ್ವನ ಕೇಂದ್ರಗಳಾದರೆ ಯಾವ ತೊಂದರೆ ಇಲ್ಲ. ಅವು ಶಕ್ತಿ ಕೇಂದ್ರಗಳಾಗುತ್ತಿರುವುದು ಹಲವು ಅನುಮಾನಗಳಿಗೆ ಕಾರಣ ಆಗುತ್ತಿದೆ.
ಮಠಾಧೀಶನ ಮೇಲೆ ಆ ಜನಾಂಗದ ಭಕ್ತಿ-ಶ್ರದ್ಧೆ ಇದ್ದೇ ಇರುತ್ತದೆ. ಜನರು ಜಮಾಯಿಸುತ್ತಲೆ ಗದ್ದುಗೆ ಮೇಲೆ ಕುಳಿತವರ ಪಿತ್ತ ನೆತ್ತಿಗೇರಿ ಸಮತೋಲನ ಕಳೆದುಹೋಗುತ್ತದೆ. ಜನಬಲದೊಟ್ಟಿಗೆ ಧನಬಲ ಸೇರಿಬಿಟ್ಟರೆ, ಅಂಥವರನ್ನು ಮಾತನಾಡಿಸುವುದು ಎಲ್ಲಿಲ್ಲದ ಕಷ್ಟ. ತಮ್ಮ ಜನಾಂಗದ ಬಗೆಗೆ ಒಲವು ಇರಲಿ; ಸರ್ಕಾರಕ್ಕೆ ತಮ್ಮ ಹಕ್ಕೊತ್ತಾಯ ಮಾಡಲಿ. ಆದರೆ ಅದು ದರ್ಪ ಆಗಬಾರದು ತಮ್ಮ ಸಮುದಾಯದ ಬೇಡಿಕೆಗಳನ್ನು ಅಧಿಕಾರಸ್ಥರಿಗೆ ಸಾತ್ವಿಕವಾಗಿ ಹೇಳಿಕೊಳ್ಳಬಹುದು.

ಪ್ರಜಾಪ್ರಭುತ್ವ ಅಥವಾ ಜನತಂತ್ರಕ್ಕೆ ಅಪಮಾನ ಆಗದಂತೆ ನಡೆದುಕೊಳ್ಳಬೇಕಾದುದು ಎಲ್ಲ ಧಾರ್ಮಿಕರ ಕರ್ತವ್ಯ. ಮುಖ್ಯಮಂತ್ರಿಗಳನ್ನು ಸಭಿಕರ ಮುಂದೆ ಅವಮಾನ ಮಾಡುವುದು ಯಾವುದೇ ಪೀಠಕ್ಕೂ ಶೋಭಾಯಮಾನ ಅಲ್ಲ. ದರ್ಪ ತೋರಿಸಿದವರಿಗಿಂತಲೂ ಅವರನ್ನು ಪ್ರಚೋದಿಸಿದವರು ಹೆಚ್ಚು ಹೊಣೆಗಾರರಾಗುತ್ತಾರೆ. ಇಂಥ ಶಕ್ತಿಗಳ ಬಗೆಗೆ ಧಾರ್ಮಿಕರು ಸದಾ ಜಾಗರೂಕರಾಗಿ ಇರಬೇಕಾಗುತ್ತದೆ. ಮಠಾಧೀಶರು ಮಾತನಾಡಿ ನಿಷ್ಠುರರಾಗಿಬಿಡುತ್ತಾರೆ. ಅಂಥವರ ಅಮಾಯಕ ಸ್ಥಿತಿಗೆ ಮರುಕ ಪಡಬೇಕಾಗುತ್ತದೆ. ಪಟ್ಟಭದ್ರ ಹಿತಾಸಕ್ತಿಗೆ ಮಠಾಧೀಶರು ಒಳಗಾದರೆ ಏನೆಲ್ಲ ಅನಾಹುತಕ್ಕೆ ಆಮಂತ್ರಣ ನೀಡಿದಂತಾಗುತ್ತದೆ. ಮಠಗಳು ಮತಬ್ಯಾಂಕ್‌ ಆಗುವುದರಿಂದ ಆಗುವ ದುಷ್ಪರಿಣಾಮಗಳನ್ನು ತಪ್ಪಿಸುವ ದಿಸೆಯಲ್ಲಿ ರಾಜಕಾರಣ ಮತ್ತು ಧರ್ಮದ ನಡುವೆ ಅಂತರ ಕಾಯ್ದುಕೊಳ್ಳಬೇಕಾಗುತ್ತದೆ..

– ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು

Advertisement

Udayavani is now on Telegram. Click here to join our channel and stay updated with the latest news.

Next