Advertisement

ಮಾನಸಿಕ ಒತ್ತಡ ನಿವಾರಿಸಿಕೊಳ್ಳಿ

06:54 AM Mar 12, 2019 | |

ಆಧುನಿಕ ಜೀವನ ಶೈಲಿಯಲ್ಲಿ ಮಾನಸಿಕ ಒತ್ತಡ ಎಲ್ಲರಿಗೂ ಸಾಮಾನ್ಯ ಎಂಬಂತಾಗಿದೆ. ಇದನ್ನು ಹಾಗೇ ಬಿಟ್ಟರೆ ಮುಂದೆ ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಹೀಗಾಗಿ ಆರಂಭದಲ್ಲೇ ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಂಡರೆ ಮಾನಸಿಕ ಒತ್ತಡದಿಂದ ಪಾರಾಗಲು ಸಾಧ್ಯವಿದೆ.

Advertisement

ಆಧುನಿಕ ಜೀವನ ಶೈಲಿ ಗೊತ್ತಿದ್ದೊ ಗೊತ್ತಿಲ್ಲದೆಯೋ ಎಲ್ಲರಲ್ಲೂ ಮಾನಸಿಕ ಒತ್ತಡಕ್ಕೆ ಗುರಿಯಾಗಿಸುತ್ತದೆ. ಅತಿಯಾದ ಮೊಬೈಲ್‌, ಕಂಪ್ಯೂಟರ್‌ಗಳ ಬಳಕೆ ನಮ್ಮನ್ನು ಮಾನಸಿಕವಾಗಿ, ದೈಹಿಕವಾಗಿ ಬಳಲುವಂತೆ ಮಾಡುತ್ತದೆ. ಮನಸ್ಸು ಮಾಡಿದರೆ ಒತ್ತಡದಿಂದ ಹೊರ ಬರುವುದು ಕಷ್ಟವಲ್ಲ ಎನ್ನುತ್ತದೆ ಅಧ್ಯಯನ. ಅಂತಹ ಮಾನಸಿಕ ನೆಮ್ಮದಿಗೆ ಕಾರಣವಾಗಬಲ್ಲ 15 ಸರಳ ದಾರಿಗಳು ಇಲ್ಲಿವೆ. 

ವ್ಯಾಯಾಮ
ನಿತ್ಯ ವ್ಯಾಯಾಮದಲ್ಲಿ ತೊಡಗಿಸಿಕೊಂಡರೆ  ರಕ್ತ ಪರಿಚಲನೆ ಸರಾಗವಾಗುತ್ತದೆ. ಇದು ನೆಮ್ಮದಿಯನ್ನು ನೀಡುವ ಜತೆಗೆ ಮನಸ್ಸನ್ನು ಉಲ್ಲಸಿತಗೊಳಿಸುತ್ತದೆ. ಖನ್ನತೆಯಿಂದ ಹೊರಬರಲು ವ್ಯಾಯಾಮ ಅತ್ಯುತ್ತಮ ಮಾರ್ಗ ಎನ್ನುತ್ತದೆ ಅಧ್ಯಯನ. ದೈಹಿಕ ಶ್ರಮ ಬೇಡುವ ಚಟುವಟಿಕೆಗಳಾದ ಓಟ, ಸೈಕ್ಲಿಂಗ್‌, ಯೋಗ ಅಥವಾ 20-30 ನಿಮಿಷದ ನಡಿಗೆ ಮನಸ್ಸನ್ನು ತಿಳಿಯಾಗಿಸಬಲ್ಲದು.

ಯೋಗ
ದುಖ, ನಿರಾಸೆಯಿಂದ ಹೊರಬರಲು ಯೋಗ ಸಹಕಾರಿ. ಯೋಗ ಮಾಡುವಾಗ ಉಸಿರಾಟದ ಕಡೆಗೆ ಗಮನಹರಿಸುವುದರಿಂದ ಸಮಸ್ಯೆ ಬಾಧಿಸಲಾರದು. ಹೀಗಾಗಿ ಕೆಲವೊಂದು ಯೋಗಾಸನವನ್ನು ದಿನಚರಿಯಲ್ಲಿ ಅಳವಡಿಸಿಕೊಳ್ಳಿ.

ಮನಸ್ಸು  ಪ್ರಫ‌ುಲ್ಲಗೊಳಿಸುವ ಹೂ
 ಹಾರ್ವರ್ಡ್‌ ವಿಜ್ಞಾನಿಗಳು ನಡೆಸಿದ ಸಂಶೋಧನೆಯ ಪ್ರಕಾರ ಮನೆಯೊಳಗೆ ತಾಜಾ ಹೂಗಳನ್ನು ಇರಿಸುವುದರಿಂದ ಋಣಾತ್ಮಕ ಆಯೋಚನೆಗಳು, ಆತಂಕ ಮರೆಯಾಗಿ ಮನಸ್ಸು ಶಾಂತವಾಗುತ್ತದೆ. 

Advertisement

ನಗು
ಸಂತೋಷದ ಪ್ರತೀಕ ನಗು.  ಇದರ ಜತೆಗೆ ಸಂಶೋಧನೆಯ ಪ್ರಕಾರ ಬಲವಂತದಿಂದ ನಗುವುದು ಕೂಡ ನಿಮ್ಮ ಖುಷಿಯನ್ನು ಹೆಚ್ಚಿಸಬಲ್ಲದು. ನೀವು ನಕ್ಕಾಗ ಮೆದುಳಿನಲ್ಲಿರುವ ನರ ಸಕ್ರಿಯವಾಗಿ ಧನಾತ್ಮಕ ಅಂಶ ತುಂಬಬಲ್ಲದು ಎನ್ನಲಾಗಿದೆ. ಹೀಗಾಗಿ ಆಗಾಗ ನಗುತ್ತಿದ್ದರೆ ಮನಸ್ಸಿನ ಆರೋಗ್ಯಕ್ಕೂ ಒಳ್ಳೆಯದು.

ಹೊರಗೆ ಸುತ್ತಾಡಿ
ಮಾನಸಿಕವಾಗಿ ತುಂಬಾ ಕುಗ್ಗಿದ್ದೀರಾ? ಇದರಿಂದ ಹೊರಗೆ ಬರೋದು ಹೇಗೆ ಎಂದು ಆಲೋಚಿಸುತ್ತಿದ್ದೀರಾ?ಚಿಂತೆ ಬಿಡಿ. ಒಮ್ಮೆ ಹೊರಗೆ ಸುತ್ತಾಡಿ ಬನ್ನಿ.  ಹೌದು, ಸೂರ್ಯನ ಬಿಸಿಲಲ್ಲಿ ಅಡ್ಡಾಡುವುದರಿಂದ ವಿಟಮಿನ್‌ ಡಿ ಸಾಕಷ್ಟು ಪ್ರಮಾಣದಲ್ಲಿ ದೊರೆಯುತ್ತದೆ. 20-25 ನಿಮಿಷ ಬಿಸಿಲಿನಲ್ಲಿ ನಡೆದರೆ ಸಹಜವಾಗಿ ಮನಃಸ್ಥಿತಿ ತಹಬದಿಗೆ ಬರುತ್ತದೆ.

ಅಣಬೆ ಸೇವನೆ
ವಿಟಮಿನ್‌ ಡಿ ಸಾಕಷ್ಟು ಪ್ರಮಾಣದಲ್ಲಿ ಹೊಂದಿರುವ ಅಣಬೆ ಸೇವನೆಯೂ ಮಾನಸಿಕ ಸ್ಥಿತಿಯನ್ನು ಉತ್ತಮಪಡಿಸುವ ಗುಣ ಹೊಂದಿದೆ. ಮೊದಲೇ ಹೇಳಿದಂತೆ ಡಿ ಪೋಷಕಾಂಶವು ಧನಾತ್ಮಕ ಚಿಂತನೆಯನ್ನು ಹೆಚ್ಚಿಸಬಲ್ಲದು. ಹೀಗಾಗಿ ಊಟದ ಮೆನುವಿನಲ್ಲಿ ಅಣಬೆಗೂ ಜಾಗ ನೀಡುವುದು ಒಳಿತು. 

ಧ್ಯಾನ ದಿನಚರಿಯ ಭಾಗವಾಗಲಿ
ಧ್ಯಾನ ಪಾರ್ಶ್ವ ಪರಿಣಾಮ ಇಲ್ಲದ ಒತ್ತಡ ನಿವಾರಣೆಯ ಪ್ರಮುಖ ಮಾರ್ಗ ಎಂದೇ ಪರಿಗಣಿಸಲಾಗುತ್ತದೆ. ನೋವು ನಿವಾರಣೆ ಜತೆಗೆ ಧ್ಯಾನ ಮಾಡುವುದರಿಂದ ರಕ್ತ ಪರಿಚಲನೆ ಸರಾಗವಾಗಿ ಮನಸ್ಸು ಉಲ್ಲಸಿತವಾಗುತ್ತದೆ. 

ಸಾಕು ಪ್ರಾಣಿಗಳ ಒಡನಾಟ
ಪ್ರೀತಿಯಿಂದ ಸಾಕುವ ಪ್ರಾಣಿಗಳು ಕೂಡ ಮಾನ ಸಿಕ ಒತ್ತಡವನ್ನು ಕಡಿಮೆ ಮಾಡಬಲ್ಲವು. ಸ್ವಲ್ಪ ಹೊತ್ತು ನಾಯಿ, ಬೆಕ್ಕು, ದನ-ಕರು ಅಥವಾ ಇನ್ಯಾವುದಾದರೂ ಪ್ರಾಣಿ ಜತೆ ಆಟ ಆಡಿ. ಅಧ್ಯಯನವೊಂದು ಹೇಳುವಂತೆ 15 ನಿಮಿಷ ನಾಯಿಯೊಂದಿಗೆ ಕಳೆದರೆ ಮಾನಸಿಕ ಕಿರಿಕಿರಿ ಕಡಿಮೆಯಾಗುತ್ತದೆ. 

ಚಿಕ್ಕ ವಿರಾಮ ಇರಲಿ
ಕೆಲಸದ ಮಧ್ಯೆ ಆಗಾಗ ಕೆಲವು ನಿಮಿಷಗಳ ಕಾಲ ವಿಶ್ರಾಂತಿ ಪಡೆಯಿರಿ. ಕಂಪ್ಯೂಟರ್‌ ಮುಂದೆಯೇ ಕುಳಿತು ಕೆಲಸ ಮಾಡುವುದಾದರೆ ಆಗಾಗ ಮುಖ ತೊಳೆದು ಕಣ್ಣಿಗೆ ಶುದ್ಧ ನೀರು ಚಿಮುಕಿಸುತ್ತಿರಿ. ಜತೆಗೆ ಫ‌ನ್ನಿ ವೀಡಿಯೋ ನೋಡುವುದರಿಂದ ಒತ್ತಡ ಕಡಿಮೆಯಾಗಿ ಮನಸ್ಸು ಹಗುರವಾಗುತ್ತದೆ. 

ಆಹಾರದಲ್ಲಿರಲಿ ಅರಿಸಿನ
ಅರಿಸಿನ ಖನ್ನತೆಯನ್ನು ದೂರ ಮಾಡುವ ಶಕ್ತಿ ಹೊಂದಿದೆ. ಆದ್ದರಿಂದ ಆಹಾರದಲ್ಲಿ ಅರಿ ಸಿನ ಅಂಶ ಇರುವಂತೆ ನೋಡಿಕೊಳ್ಳಿ. ಜತೆಗೆ ಅರಿಸಿನವು ಸಂಧಿವಾತ, ಅಲ್ಜಿಮರ್‌ ಮತ್ತು ಸಕ್ಕರೆ ಕಾಯಿಲೆಯನ್ನು ದೂರ ಮಾಡುವ ಗುಣ ಹೊಂದಿದೆ.  ಸಂಗೀತ ಆಲಿಸಿ ಮನಸ್ಸಿಗೆ ತೀರಾ ಖನ್ನತೆ ಆವರಿಸಿದಾಗ ಮೊದಲು ಬಯಸುವುದು ಇಂಪಾದ ಸಂಗೀತವನ್ನು. ಹೌದು ಸಂಗೀತಕ್ಕೆ ಒತ್ತಡ ನಿವಾರಿಸಿ ಮಾನಸಿಕ ನೆಮ್ಮದಿ ತರುವ ಗುಣ ಇದೆ. ಆದ್ದರಿಂದ ದಿನದಲ್ಲಿ  ಸ್ವಲ್ಪ ಹೊತ್ತು ಸಂಗೀತ ಕೇಳಿ

ನೀವೇ ಹಾಡಿ
ಹಾಡುವುದು ಕೂಡ ಮನಃಸ್ಥಿತಿಯನ್ನು ಶಾಂತವಾಗಿಸಬಲ್ಲದು ಎಂಬು ದಾಗಿ ಸಂಶೋಧನೆಯೊಂದು ತಿಳಿ ಸಿ ದೆ. ಒಳಕಿವಿಯ ಅತಿ ಚಿಕ್ಕ ಅಂಗ ಸಾಕ್ಯುಲಸ್‌ ಮೆದುಳಿನೊಂದಿಗೆ ಸಂಪರ್ಕ ಹೊಂದಿದ್ದು, ಇದು ಖುಷಿಯ ಕ್ಷಣಗಳನ್ನು ದಾಖಲಿಸುತ್ತದೆ. ನೀವು ಹಾಡಿದ ತತ್‌ಕ್ಷಣ ಸಾಕ್ಯುಲಸ್‌ ಚುರುಕಾಗಿ ಮೆದುಳಿಗೆ ಸಂದೇಶ ರವಾನಿಸುತ್ತದೆ. 

ಚಾಕಲೇಟ್‌ ಸೇವನೆ
ಚಾಕಲೇಟ್‌ನಲ್ಲಿ ಟ್ರಿಟ್ರೋಫಾನ್‌ ಅಂಶ ಹೊಂದಿದ್ದು, ಇದು ಮೆದುಳನ್ನು ಪ್ರಚೋದಿಸಿ ಸೆರಟೋನಿನ್‌ ಎನ್ನುವ ಉಲ್ಲಾಸದ ರಾಸಾಯನಿಕವನ್ನು ಬಿಡುಗಡೆಗೊಳಿಸುತ್ತದೆ. ಹೀಗಾಗಿ ಚಾಕ ಲೇಟ್‌ ಸೇವಿಸಿ ಒತ್ತಡ ಮುಕ್ತರಾಗಬಹುದು. ಈ ಅಂಶ ಚಿಕನ್‌ ಹಾಗೂ ಮೊಟ್ಟೆಯಲ್ಲಿಯೂ ಇದೆ. 

ಸ್ನೇಹಿತರನ್ನು ಭೇಟಿಯಾಗಿ
 ಮೊಬೈಲ್‌ ಫೋನ್‌ ಬಿಟ್ಟು, ಕಂಪ್ಯೂಟರ್‌ ಶಟ್‌ ಡೌನ್‌ ಮಾಡಿ ಸ್ನೇಹಿತರು, ಬಂಧುಗಳನ್ನು ಭೇಟಿಯಾಗಿ ಅವರ ಜತೆ ಒಂದಷ್ಟು ಹೊತ್ತು ಮನಸ್ಸು ಬಿಚ್ಚಿ ಮಾತನಾಡಿ. ಪ್ರೀತಿ ಪಾತ್ರರ ಸ್ಪರ್ಶ ನಮ್ಮಲ್ಲಿ ಧನಾತ್ಮಕ ಚಿಂತನೆಯನ್ನು ಹೆಚ್ಚಿಸುವ ಗುಣ ಹೊಂದಿದೆ. ಜತೆಗೆ ನಿಮ್ಮ ಬ್ಲಿಡ್‌ ಪ್ರಶರ್‌ ಅನ್ನು ನಿಯಂತ್ರಿಸುತ್ತದೆ ಮತ್ತು ಹೃದಯ ಬಡಿತ ಸ್ತಿಮಿತಕ್ಕೆ ಬರುತ್ತದೆ. 

ಯೋಗ ಸುಲಭ ದಾರಿ
ಬಹುತೇಕ ಎಲ್ಲರೂ ಇಂದು ಒತ್ತಡದ ಜೀವನ ನಡೆಸುತ್ತಿದ್ದಾರೆ. ಒತ್ತಡ ನಿವಾರಣೆಗೆ ಹಲವು ದಾರಿಗಳಿದ್ದರೂ ಅದರಲ್ಲಿ ಕೆಲವನ್ನಾದರೂ ಜೀವನದಲ್ಲಿ  ಅಳವಡಿಸಿ ಕೊಂಡರೆ ಪರಿಹಾರ ಪಡೆಯ ಬಹುದು. ಒತ್ತಡ  ನಿವಾರಣೆಗೆ ಯೋಗ ಒಂದು  ಸುಲಭದ ದಾರಿ. ಅದಲ್ಲದೇ ಜೀವನ ಶೈಲಿ, ಆಹಾರ ವಿಧಾನದಲ್ಲಿ ಕೊಂಚ ಬದಲಾವಣೆ ಮಾಡಿಕೊಂಡರೂ ಸಾಕು. ಮಾಡುವ ಕೆಲಸದಲ್ಲಿ  ಕಳೆದು ಹೋಗದೆ ಅರ್ಧ ಗಂಟೆಗೊಮ್ಮೆಯಾದರೂ ಬ್ರೇಕ್‌ ತೆಗೆದುಕೊಂಡು ಸಣ್ಣದೊಂದು ನಡಿಗೆ ಮಾಡುವ ಮೂಲ ಕವೂಮಾನಸ್ಸು, ದೇಹದ ಮೇಲಾಗುವ ಒತ್ತಡ ನಿವಾರಿಸಿಕೊಳ್ಳಲು ಸಾಧ್ಯವಿದೆ. 
–  ಡಾ| ಅಶೋಕ್‌, ವೈದ್ಯರು

ಹಸುರು ಸೊಪ್ಪು ತರಕಾರಿ
ಆಹಾರದಲ್ಲಿ ತಾಜಾ ತರಕಾರಿ ಮತ್ತು ಸೊಪ್ಪುಗಳನ್ನು ಬಳಸುವ ಅಭ್ಯಾಸ ರೂಢಿಸಿಕೊಳ್ಳಬೇಕು. ಇದು ಶರೀರಕ್ಕೆ ಬೇಕಾದ ಶೇ. 33ರಷ್ಟು ಚೈತನ್ಯವನ್ನು ಒದಗಿಸುತ್ತದೆ. ಇವುಗಳ ಸೇವನೆ ನಕಾರಾತ್ಮಕ ಚಿಂತನೆ, ಖನ್ನತೆ ಹೋಗಲಾಡಿಸಿ ಧನಾತ್ಮಕ ಮನಃಸ್ಥಿತಿಯನ್ನು ತುಂಬುತ್ತದೆ. 2012ರ ಒಂದು ಸಂಶೋಧನೆಯ ಪ್ರಕಾರ ಈ ರೀತಿಯ ಆಹಾರ ಸೇವಿಸಿದ ಮಧ್ಯ ವಯಸ್ಕರಲ್ಲಿ ಖನ್ನತೆ ಕಡಿಮೆ ಪ್ರಮಾಣದಲ್ಲಿತ್ತು.

   ರಮೇಶ್‌ ಬಳ್ಳಮೂಲೆ

Advertisement

Udayavani is now on Telegram. Click here to join our channel and stay updated with the latest news.

Next