Advertisement

ಪೊಲೀಸ್‌ ಸಿಬ್ಬಂದಿ ಕೊರತೆ ಸಮಸ್ಯೆಗೆ ಮುಕ್ತಿ; 2 ಸಾವಿರ ಮಂದಿ ನೇಮಕ

08:54 PM Feb 17, 2023 | Team Udayavani |

ರಾಜ್ಯ ಪೊಲೀಸ್‌ ಇಲಾಖೆಯಲ್ಲಿರುವ ಸಿಬ್ಬಂದಿ ಕೊರತೆ ಸಮಸ್ಯೆ ಇನ್ನಾದರೂ ಬಗೆಹರಿಯಬಹುದೇ? ಬಜೆಟ್‌ನಲ್ಲಿ ಸರ್ಕಾರ ನೀಡಿರುವ ವಾಗ್ಧಾನವು ಇಂಥದ್ದೊಂದು ಭರವಸೆಯನ್ನು ಹುಟ್ಟುಹಾಕಿದೆ. ಸಿಬ್ಬಂದಿ ಕೊರತೆ ಸರಿದೂಗಿಸಲು ಮುಂದಾಗಿರುವ ಸರ್ಕಾರ, ಬೆಂಗಳೂರು ನಗರದಲ್ಲಿ ಪೊಲೀಸ್‌ ವ್ಯವಸ್ಥೆ ಬಲಪಡಿಸಲು ವಿವಿಧ ಹಂತಗಳಲ್ಲಿ ಹೆಚ್ಚುವರಿಯಾಗಿ 2 ಸಾವಿರ ಹುದ್ದೆಗಳನ್ನು ಸೃಜಿಸುವುದಾಗಿ ತಿಳಿಸಿದೆ.

Advertisement

ಹಾಗೆಯೇ ನೂತನ ಪೊಲೀಸ್‌ ಠಾಣೆಗಳ ಸ್ಥಾಪನೆಗೂ ತೀರ್ಮಾನಿಸಲಾಗಿದೆ. ಪೊಲೀಸ್‌ ಇಲಾಖೆಯಲ್ಲಿ 2 ಸಾವಿರ ಹುದ್ದೆ ಸೃಜಿಸುವುದರ ಜೊತೆಗೆ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯನ್ನು ಇನ್ನಷ್ಟು ಬಲಪಡಿಸಲು ಒಂದು ಸಾವಿರ ಸಿಬ್ಬಂದಿ ನೇಮಕಕ್ಕೆ ನಿರ್ಧರಿಸಲಾಗಿದೆ. ಬೆಂಗಳೂರು ನಗರದಲ್ಲಿ ಸುಗಮ ಸಂಚಾರಕ್ಕಾಗಿ ಹೊಸ ನಾಲ್ಕು ಸಂಚಾರಿ ಪೊಲೀಸ್‌ ಠಾಣೆಗಳನ್ನು ಪ್ರಾರಂಭಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ ಬೆಂಗಳೂರಿನಲ್ಲಿ 9 ಕಾನೂನು ಮತ್ತು ಸುವ್ಯವಸ್ಥೆ, ಐದು ಸಂಚಾರಿ, ಆರು ಮಹಿಳಾ ಪೊಲೀಸ್‌ ಠಾಣೆಗಳನ್ನು ಹೊಸದಾಗಿ ಸ್ಥಾಪಿಸಲಾಗುವುದು ಎಂದಿದ್ದಾರೆ ಸಿಎಂ.

ಪೊಲೀಸ್‌ ವಸತಿ:
ಪೊಲೀಸ್‌ ಸಿಬ್ಬಂದಿ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಅತ್ಯಂತ ಮಹತ್ತರ ಹೆಜ್ಜೆಯಿಟ್ಟಿದೆ. ಪೊಲೀಸ್‌ ಗೃಹ-2025 ಯೋಜನೆ ಅಡಿ 2022-23ನೇ ಸಾಲಿನಲ್ಲಿ 250 ಕೋಟಿ ರೂ. ಒದಗಿಸಲಾಗಿದ್ದು, ಪ್ರಸಕ್ತ ವರ್ಷ 450 ಕೋಟಿ ರೂ.ಗಳನ್ನು ಒದಗಿಸುವುದರ ಮೂಲಕ 3 ಸಾವಿರ ವಸತಿ ಗೃಹಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಿದೆ.

ಕಾರಾಗೃಹಗಳ ಆಧುನೀಕರಣ
ಕಾರಾಗೃಹದಲ್ಲಿನ ಬಂದಿಗಳ ಅಭ್ಯುದಯಕ್ಕಾಗಿ ಬಂಧೀಖಾನೆ ಅಭಿವೃದ್ಧಿ ಮಂಡಳಿ ರಚಿಸಲಾಗಿದೆ. ಬಂದಿಗಳ ಜೀವನ ಸುಧಾರಣೆಗೆ ಮತ್ತು ಶಿಕ್ಷೆಯ ಅವಧಿ ನಂತರ ಪುನರ್ವಸತಿಗೆ ಸಶಕ್ತೀರಣಗೊಳಿಸಲು ಅಗತ್ಯ ಕೌಶಲ್ಯಗಳನ್ನು ಹೆಚ್ಚಿಸುವ ಯೋಜನೆಗಳನ್ನು ರೂಪಿಸಲಾಗಿದೆ. ಬಂದಿಗಳಿಗೆ ನೀಡುವ ಕೂಲಿ ದರ ಕನಿಷ್ಠ ವೇತನ ಕಾಯ್ದೆ ಅನ್ವಯ ಹೆಚ್ಚಿಸಲು ಕ್ರಮವಹಿಸಲಾಗಿದೆ. ಕಾರಾಗೃಹಗಳಲ್ಲಿನ ಆಸ್ಪತ್ರೆಗಳ ನಿರ್ವಹಣೆಯನ್ನು ಸುಧಾರಿಸಲು ಈ ಆಸ್ಪತ್ರೆಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲಾಗುತ್ತಿದೆ.

ಒಂದೇ ತಿಂಗಳಲ್ಲಿ ಎಫ್ಎಸ್‌ಎಲ್‌ ವರದಿ
ರಾಜ್ಯದಲ್ಲಿ ಈಗಾಗಲೇ 8 ವಿಧಿವಿಜ್ಞಾನ ಪ್ರಯೋಗಾಲಯಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಎಫ್ಎಸ್‌ಎಲ್‌ ವರದಿಗಾಗಿ ಕಾಯುವ ಅವಧಿಯನ್ನು 2 ವರ್ಷಗಳಿಂದ ಒಂದು ತಿಂಗಳಿಗೆ ಇಳಿಸಲಾಗಿದೆ. ಪ್ರಸಕ್ತ ವರ್ಷ 10 ಕೋಟಿ ರೂ. ವೆಚ್ಚದಲ್ಲಿ ತುಮಕೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ವಿಧಿವಿಜ್ಞಾನ ಪ್ರಯೋಗಾಲಯ, ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಧಾರವಾಡದಲ್ಲಿ ವಿಧಿವಿಜ್ಞಾನ ವಿಶ್ವವಿದ್ಯಾಲಯವನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ.

Advertisement

ಹಳೇ ವಾಹನಗಳಿಗೆ ಮುಕ್ತಿ
ಹಳೆಯ ಮತ್ತು ಅನುಪಯುಕ್ತ ವಾಹನಗಳನ್ನು ಹಂತ-ಹಂತವಾಗಿ ಬದಲಾಯಿಸಿ ಹೊಸ ವಾಹನಗಳನ್ನು ಇಲಾಖೆಗೆ ಸೇರ್ಪಡೆಗೊಳಿಸಲು ಪ್ರಸಕ್ತ ಸಾಲಿನಲ್ಲಿ 50 ಕೋಟಿ ರೂ. ಅನುದಾನ ಒದಗಿಸಲಾಗುವುದು.

ಗೃಹ ರಕ್ಷಕರಿಗೆ 100 ರೂ.ವೇತನ ಹೆಚ್ಚಳ
ರಾಜ್ಯದಲ್ಲಿ ಕಾನೂನು ಮತ್ತು ಶಿಸ್ತು ಪಾಲನೆಯಲ್ಲಿ ಸಹಾಯಕ ಪಡೆಯಾಗಿ ಕಾರ್ಯ ನಿರ್ವಹಿಸುತ್ತಿರುವ 35 ಸಾವಿರ ನೋಂದಾಯಿತ ಗೃಹ ರಕ್ಷಕರಿಗೆ ಪ್ರಸ್ತುತ ಪ್ರತಿ ದಿನಕ್ಕೆ ನೀಡುತ್ತಿರುವ ಕರ್ತವ್ಯಭತ್ಯೆ 100 ರೂ. ನಷ್ಟು ಹೆಚ್ಚಿಸಲಾಗಿದೆ.

ಸೈಬರ್‌ ಸೆಕ್ಯೂರಿಟಿ ಆಪರೇಷನ್‌
ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಮಾಹಿತಿ ತಂತ್ರಜ್ಞಾನದ ಬಳಕೆ ವ್ಯಾಪಕವಾಗಿದ್ದು, ಈ ವ್ಯವಸ್ಥೆಯ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಸರ್ಕಾರಿ ವೆಬ್‌ಸೈಟ್‌ಗಳು, ಆನ್‌ಲೈನ್‌ ಸೇವೆಗಳು ಮತ್ತು ದತ್ತಾಂಶಗಳ ಸುರಕ್ಷತೆಗಾಗಿ, ಸೈಬರ್‌ ತಜ್ಞರು ಮತ್ತು ಆಧುನಿಕ ತಂತ್ರಜ್ಞಾನವನ್ನೊಳಗೊಂಡ 24*7 ಸೈಬರ್‌ ಸೆಕ್ಯೂರಿಟಿ ಆಪರೇಷನ್ಸ್‌ ಸೆಂಟರ್‌ ಅನ್ನು ಸ್ಥಾಪಿಸುವುದಾಗಿ ಸರ್ಕಾರ ಘೋಷಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next