Advertisement

ಅಂತ್ಯ ಕಾಣದ ಹೇಮಾವತಿ ಸಂತ್ರಸ್ತರ ಪುನರ್ವಸತಿ

01:56 PM Jul 28, 2019 | Suhan S |

ಸಕಲೇಶಪುರ: ಹೇಮಾವತಿ ಜಲಾಶಯ ಮುಳಗಡೆ ಸಂತ್ರಸ್ತರಿಗೆ ಕಾಲಮಿತಿಯೊಳಗೆ ಪುನರ್ವಸತಿ ಕಲ್ಪಿಸದ ಕಾರಣ ಹಾಗೂ ಸರಿಯಾದ ರೀತಿಯಲ್ಲಿ ಸಂತ್ರಸ್ತರ ದಾಖಲೆಗಳನ್ನು ನಿರ್ವಹಣೆ ಮಾಡದ ಕಾರಣ ಸರ್ಕಾರಿ ಭೂಮಿಯನ್ನು ಪ್ರಭಾವಿಗಳು ಗುಳುಂ ಮಾಡಲು ಕಾರಣವಾಗಿದ್ದು, ನೈಜ ಸಂತ್ರಸ್ತರು ಇದರಿಂದ ತೊಂದರೆ ಅನುಭವಿಸಬೇಕಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ.

Advertisement

ಹಾಸನ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ಜನರ ದಾಹ ತೀರಿಸುವ ಹೇಮಾವತಿ ನದಿಗೆ ಜಿಲ್ಲೆಯ ಗೊರೂರಿನಲ್ಲಿ 1979ರಲ್ಲಿ ಆಣೆಕಟ್ಟು ಕಟ್ಟಲಾಯಿತು. ಈ ಹಿನ್ನೆಲೆಯಲ್ಲಿ ಆಣೆಕಟ್ಟು ನಿರ್ಮಾಣ ಮಾಡುವ ಮೊದಲೇ ಸುಮಾರು 46ಕ್ಕೂ ಹೆಚ್ಚು ಗ್ರಾಮಗಳಲ್ಲಿ ಹೇಮಾವತಿ ಹಿನ್ನೀರಿನ ಸಮೀಪ ವಾಸ ಮಾಡುತ್ತಿದ್ದ ಹಲವಾರು ಕುಟುಂಬಗಳನ್ನು ಸ್ಥಳಾಂತರ ಮಾಡಿ ಬದಲಿ ಜಾಗ ನೀಡಲು ಸಂತ್ರಸ್ತರಿಗೆ ಸರ್ಕಾರದ ವತಿಯಿಂದ ಪ್ರಮಾಣ ಪತ್ರ ನೀಡ ಲಾಯಿತು. ಆದರೆ ಪ್ರಮಾಣ ಪತ್ರಗಳ ದಾಖಲೆಗಳನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡದ ಕಾರಣ ವ್ಯಾಪಕ ಭ್ರಷ್ಟಾಚಾರಕ್ಕೆ ನಾಂದಿಯಾಯಿತು.

ನೈಜ ಫ‌ಲಾನುಭವಿಗಳಿಗೆ ಸಂಕಷ್ಟ: ಭೂಮಿಯ ಮೌಲ್ಯದ ಬಗ್ಗೆ ಅರಿವಿಲ್ಲದ ಕೆಲವು ಸಂತ್ರಸ್ತರು ತಮಗೆ ಬೇಕಾದವರಿಗೆ ಪ್ರಮಾಣ ಪತ್ರ ನೀಡಿದರು. ಇದರಿಂದ ಹಲವು ಮಂದಿ ಸಂತ್ರಸ್ತರ ಬದಲಿಗೆ ಭೂಮಿಯನ್ನು ಪಡೆದರು. ಕಾಲ ಕ್ರಮೇಣ ಮಾರುಕಟ್ಟೆಯಲ್ಲಿ ಭೂಮಿಯ ಮೌಲ್ಯ ಹೆಚ್ಚುತ್ತಿರುವ ಹಾಗೆ ರಾಜಕಾ ರಣಿಗಳು, ಪ್ರಭಾವಿಗಳು, ಉದ್ಯಮಿಗಳು, ಸರ್ಕಾರಿ ಅಧಿಕಾರಿಗಳು ಮುಳುಗಡೆ ಪ್ರಮಾಣ ಪತ್ರವನ್ನು ಬಳಸಿಕೊಂಡು ಕಡಿಮೆ ದರದಲ್ಲಿ ಭೂಮಿಯನ್ನು ಕೊಳ್ಳುವ ವಿಧಾನವನ್ನು ಹುಡುಕಿಕೊಂಡರು.

ಮಧ್ಯ ವರ್ತಿಗಳ ಹಾವಳಿ: ನಂತರ ದಿನಗಳಲ್ಲಿ ಈ ಬಗ್ಗೆ ಮಾಹಿತಿ ಪಡೆದ ಕೆಲವರು ಸುಲಭವಾಗಿ ಹಣ ಗಳಿಸಲು ಮಧ್ಯವರ್ತಿಗಳಾದರು. ಮಧ್ಯವರ್ತಿಗಳು ಹುಟ್ಟಿದ ನಂತರ ಕಂದಾಯ ಇಲಾಖೆಯ ಅಧಿಕಾರಿ ಗಳು ಹಾಗೂ ಸಿಬ್ಬಂದಿ ಎಚ್.ಆರ್‌.ಪಿ. (ಹೇಮಾ ವತಿ ಡ್ಯಾಂ ಸಂತ್ರಸ್ತರ ಪುನರ್ವಸತಿ ಯೋಜನೆ)ಯನ್ನು ಆದಾಯದ ಮೂಲವನ್ನಾಗಿಸಿಕೊಂಡರು.

ನಕಲಿ ಜ್ಞಾಪನಾ ಪತ್ರದ ಹಾವಳಿ: ಇದರ ನಡುವೆ ಹಣದ ಆಸೆಗಾಗಿ ಸುಮಾರು 300ಕ್ಕೂ ಹೆಚ್ಚು ನಕಲಿ ಒಎಂ (ಅಧಿಕೃತ ಜ್ಞಾಪನಾಪತ್ರ) ಪತ್ರಗಳನ್ನು ಸೃಷ್ಟಿ ಮಾಡಿ ಒಂದೇ ದಾಖಲಾತಿಗೆ ಎರಡುಕ್ಕೂ ಹೆಚ್ಚು ಬಾರಿ ಭೂಮಿ ಮಂಜೂರು ಮಾಡುವ ಕೆಲಸವನ್ನು ಕೆಲವರು ಮಾಡಿದ್ದು ಇದರಲ್ಲಿ ಹಲವು ಭೂಮಿಗಳಿಗೆ ಸಾಗುವಳಿ ಚೀಟಿ ದೊರೆತು, ಮುಟೇಷನ್‌ ಆಗಿ ಪಾಣಿಗೂ ಸಹ ದಾಖಲಾಗಿದ್ದು ಹಲವು ಜಾಗಗಳನ್ನು ಮಧ್ಯವರ್ತಿಗಳ ಮುಖಾಂತರ ಮಾರಾಟ ಮಾಡಲಾಗಿದೆ.

Advertisement

ಸಮಗ್ರ ತನಿಖೆ: 2015 ರಿಂದ 2018ರವರೆಗೆ ಭೂ ಸಂತ್ರಸ್ತರಿಗೆ ವಿಶೇಷ ಭೂ ಭೂ ಸ್ವಾಧೀನಾಧಿಕಾರಿಗಳ ಕಚೇರಿ (ಪುನರ್ವಸತಿ) ಹಾಸನ ಇವರಿಂದ ನೀಡಲಾಗಿ ರುವ ಸಾವಿರಾರು ಮಂಜೂರಾತಿ ಆದೇಶ ಪತ್ರಗಳ ಸಮಗ್ರ ತನಿಖೆ ನಡೆಸಲಾಗುತ್ತಿದ್ದು, ಜಿಲ್ಲಾಧಿಕಾರಿಗಳು ತನಿಖೆಗಾಗಿ ಹಾಸನ ಉಪವಿಭಾಗಾಧಿಕಾರಿ ಡಾ. ನಾಗರಾಜ್, ಸಕಲೇಶಪುರದ ಉಪವಿಭಾಗಾಧಿಕಾರಿ ಕವಿತಾ ರಾಜಾರಾಂ ಹಾಗೂ ಎತ್ತಿನಹೊಳೆ ಯೋಜನೆಯ ವಿಶೇಷ ಭೂಸ್ವಾಧೀನ ಅಧಿಕಾರಿ ಗಿರೀಶ್‌ ನಂದನ್‌ ಮೂವರ ಒಂದು ತಂಡವನ್ನು ರಚನೆ ಮಾಡಿದ್ದಾರೆ. ತನಿಖೆಯನ್ನು ಚುರುಕುಗೊಳಿಸಿರುವ ತಂಡ ಮಿನಿ ವಿಧಾನಸೌಧದಲ್ಲಿ ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ.

ತಹಶೀಲ್ದಾರ್‌ ಪರಿಶೀಲನೆ: ಈಗ ಮಂಜೂರಾತಿಗೆ ಹಾಜರುಪ‌ಡಿಸಿರುವ ಮುಳುಗಡೆ ಸರ್ಟಿಫಿಕೆಟ್‌ಗಳ ನೈಜತೆಯನ್ನು ಯಾವ ಯಾವ ತಾಲೂಕಿನಲ್ಲಿ ಮಂಜೂರಾತಿಗೆ ಜಮೀನು ಕಾಯ್ದಿರಿಸಿದೆಯೋ ಆ ತಾಲೂಕಿನ ತಹಶೀಲ್ದಾರರಿಂದ ಸ್ಪಷ್ಟ ಮಾಹಿತಿಯನ್ನು ಪಡೆದು ಕೊಂಡು, ಒಂದೇ ಮುಳುಗಡೆ ಸರ್ಟಿಫಿಕೆಟ್‌ಗೆ ಒಂದೇ ಬಾರಿ ಮಂಜೂರಾಗಿ ಆಗಿದೆಯೋ ಅಥವಾ ಅನೇಕ ಬಾರಿ ಆಗಿದೆಯೋ ಎಂಬುದನ್ನು ಪರಿಶೀಲನೆ ಮಾಡಿ ಕೊಡಲಾಗುತ್ತಿದೆ.

ಅಧಿಕೃತ ಜ್ಞಾಪನಾಪತ್ರಕ್ಕೆ ಬಾರ್‌ ಕೋಡ್‌: ಪ್ರಾಮಾ ಣಿಕ ಅಧಿಕಾರಿಗಳೆಂದೆ ಹೆಸರು ಪಡೆದಿರುವ ಜಿಲ್ಲಾಧಿ ಕಾರಿ ಅಕ್ರಂ ಪಾಷ ಹಾಗೂ ಹೇಮಾವತಿ ಸಂತ್ರಸ್ತರ ಭೂ ಸ್ವಾಧೀನ ವಿಶೇಷಾಧಿಕಾರಿ ಕ್ಯಾಪ್ಟನ್‌ ಶ್ರೀನಿವಾಸ ಗೌಡ ಇದೀಗ ನೀಡುತ್ತಿರುವ ಅಧಿಕೃತ ಜ್ಞಾಪನಾ ಪತ್ರಗಳಿಗೆ ಬಾರ್‌ ಕೋಡ್‌ಗಳನ್ನು ಹಾಕುತ್ತಿದ್ದು ಯಾವುದೇ ರೀತಿಯ ಅಕ್ರಮಕ್ಕೆ ಅವಕಾಶ ಇಲ್ಲದಂತಾ ಗಿದೆ. ಈ ಹಿಂದಿನ ಕೆಲವು ಭೂ ಸ್ವಾಧೀನ ವಿಶೇಷಾಧಿ ಕಾರಿಗಳು ಸ್ಥಳಕ್ಕೆ ಬರದೇ ಭೂಮಿ ಮಂಜೂರು ಮಾಡುತ್ತಿದ್ದರು. ಆದರೆ ಇದೀಗ ನೂತನ ಎಚ್.ಆರ್‌.ಪಿ. ಅಧಿಕಾರಿ ಕ್ಯಾಪ್ಟನ್‌ ಶ್ರೀನಿವಾಸ್‌ಗೌಡ ಖುದ್ದು ಸ್ಥಳ ಪರಿಶೀಲನೆ ಈ ಹಿನ್ನೆಲೆಯಲ್ಲಿ ಇವರ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ಬಡ ಜನರು, ರೈತರಿಗೆ ಆತಂಕ: ಎಚ್.ಆರ್‌.ಪಿ. ಮುಳುಗಡೆ ಪತ್ರವನ್ನು ಹೊಂದಿದ್ದರೂ ಸಹ ಕಚೇರಿ ಗಳಿಗೆ ಅಲೆದು ಅಲೆದು ಸುಸ್ತಾಗಿ ಸಾಲಸೋಲ ಮಾಡಿ ಸಿಬ್ಬಂದಿಗಳಿಗೆ, ಮಧ್ಯವರ್ತಿಗಳಿಗೆ ಹಣ ನೀಡಿ ಹಲವು ಬಡವರು ಇತರ ಸಂಗತಿಗಳ ಬಗ್ಗೆ ಅರಿವಿಲ್ಲದೇ 2015ರಿಂದ 2018ರ ಸಾಲಿನಲ್ಲಿ ಜಾಗ ಮಾಡಿಕೊಂಡಿ ದ್ದಾರೆ. ಹಲವು ಸಂತ್ರಸ್ತರಿಗೆ ತಮ್ಮ ಹೆಸರಿನಲ್ಲಿ ಎರಡು ಜಾಗ ನೀಡಿರುವ ಮಾಹಿತಿಯೇ ಇಲ್ಲ.

ಭೂಮಿ ಹೊಂದುವ ಕನಸಿನಲ್ಲಿದ್ದ ಕೆಲವು ಮಧ್ಯಮ ವರ್ಗದ ವರು ಸಾಲ ಮಾಡಿ ಮಧ್ಯವರ್ತಿಗಳಿಂದ ಎಚ್.ಆರ್‌.ಪಿ. ಭೂಮಿ ಖರೀದಿಸಿದ್ದಾರೆ. ಇನ್ನು ಕೆಲವು ಸಣ್ಣ ರೈತರು ತಮ್ಮ ಅಕ್ಕಪಕ್ಕದಲ್ಲಿರುವ ಎಚ್.ಆರ್‌.ಪಿ. ಭೂಮಿಯನ್ನು ಹಣ ತೆತ್ತು ಖರೀದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂತಹವರಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ಜಿಲ್ಲಾಡಳಿತ ಎಚ್ಚರಿಕೆ ವಹಿಸ ಬೇಕಾಗಿದೆ. ಇಲ್ಲದಿದ್ದಲ್ಲಿ ಅನೇಕ ಮುಗ್ದರು ವಿನಾಕಾರಣ ತೊಂದರೆ ಅನುಭವಿಸಬೇಕಾಗುತ್ತದೆ.

ಸಮಸ್ಯೆಗೆ ಕಾರಣ: ಹೇಮಾವತಿ ಯೋಜನೆಯ ಮುಳುಗಡೆ ಸಂತ್ರಸ್ತರಿಗೆ ಕಾಲಮಿತಿಯೊಳಗೆ ಬದಲಿ ಜಾಗ ನೀಡದ ಕಾರಣ, ಪ್ರಮಾಣ ಪತ್ರಗಳ ದಾಖಲೆಗಳನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡದ ಕಾರಣ ವ್ಯಾಪಕ ಭ್ರಷ್ಟಾಚಾರಕ್ಕೆ ನಾಂದಿಯಾಗಿದೆ. ಇದರ ಜೊತೆಗೆ ಜಾಗ ಮಂಜೂರಾಗಿರುವ ಸ್ಥಳಕ್ಕೆ ಅಧಿ ಕಾರಿಗಳು ಬರದೆ ಕೂತಲ್ಲೇ ನಕ್ಷೆ ತಯಾರಿಸಿದ್ದರಿಂದ ಕೆಲವೆಡೆ ಎಚ್.ಆರ್‌.ಪಿ. ಜಾಗವನ್ನು ಒತ್ತುವರಿ ಮಾಡಿಕೊಂಡು ತೋಟಗಳನ್ನು ಮಾಡಿಕೊಂಡು ಫಾರಂ 53ನಲ್ಲಿ ಅರ್ಜಿ ಸಲ್ಲಿಸಿದ ಹಲವು ರೈತರು ತೊಂದರೆ ಅನುಭವಿಸುವಂತಾಗಿದೆ. ಕೆಲವು ಜಾಗಗಳು ಸಂತ್ರಸ್ತರಿಗೆ ಮಂಜೂರಾಗಿದೆ. ಆದರೆ ಅರಣ್ಯ ಇಲಾಖೆ ಮರಕಡಿಯಲು ಅವಕಾಶ ನೀಡದಿರುವುದು ಹಾಗೂ ಹಲವೆಡೆ ಎಚ್.ಆರ್‌.ಪಿ. ಜಾಗವನ್ನು ತನ್ನ ಜಾಗ ಎಂದು ಅರಣ್ಯ ಇಲಾಖೆ ಹೇಳುತ್ತಿರುವುದರಿಂದ ಸಮಸ್ಯೆ ಬಗೆಹರಿಯುತ್ತಿಲ್ಲ.

ಸಮಸ್ಯೆಗೆ ಪರಿಹಾರ ಏನು?: ಈಗಾಗಲೇ ಎಚ್.ಆರ್‌.ಪಿ. ಪ್ರಮಾಣಪತ್ರಗಳನ್ನು ನೀಡಲು ಜಿಲ್ಲಾಡಳಿತ 31ಡಿಸೆಂಬರ್‌ 2018 ಅಂತಿಮ ದಿನಾಂಕ ನಿಗದಿ ಮಾಡಿದ್ದು, ಸುಮಾರು 2ಸಾವಿರ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಇದನ್ನು ಸರಿಯಾಗಿ ಪರಿಶೀಲನೆ ಮಾಡಿ ದಾಖಲೆ ಸರಿಯಿಲ್ಲದ ಅರ್ಜಿಗಳನ್ನು ತಿರಸ್ಕರಿಸಿ ಬಾಕಿ ಅರ್ಜಿಗಳನ್ನು ಕಾಲಮಿತಿ ಯಲ್ಲಿ ವಿಲೇವಾರಿ ಮಾಡಿ ಸಂಪೂರ್ಣವಾಗಿ ಎಚ್.ಆರ್‌.ಪಿ. ಪ್ರಕ್ರಿಯೆ ಮುಕ್ತಾಯ ಗೊಳಿಸಲು ನೈಜ ಫ‌ಲಾನುಭವಿಗಳು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

 

● ಸುಧೀರ್‌ ಎಸ್‌.ಎಲ್

Advertisement

Udayavani is now on Telegram. Click here to join our channel and stay updated with the latest news.

Next