Advertisement

Karnataka: ಖಾಸಗಿ ವಿವಿಗಳ ನಿಯಂತ್ರಣ ರಾಜ್ಯ ಸರಕಾರದ ಹೊಣೆ: AICTE

10:16 PM Sep 25, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕಳೆದೊಂದು ದಶಕದಲ್ಲಿ ಹಲವು ಖಾಸಗಿ ವಿವಿಗಳು, ಸಂಸ್ಥೆಗಳು ಹುಟ್ಟಿಕೊಂಡಿದ್ದು, ಇವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಮುಂದಿನ ಎರಡ್ಮೂರು ವರ್ಷ ಹೊಸ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳಿಗೆ ಅನುಮತಿ ನೀಡಬೇಡಿ ಎಂದು ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ.ಸುಧಾಕರ್‌ ಬರೆದಿದ್ದ ಪತ್ರಕ್ಕೆ ಅಖೀಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್‌ (ಎಐಸಿಟಿಇ) ಅಧ್ಯಕ್ಷರು ಪ್ರತಿಕ್ರಿಯಿಸಿದ್ದು, ಈ ಕಾಲೇಜುಗಳು ಮತ್ತು ಅವುಗಳು ನೀಡುವ ಸೀಟುಗಳ ಬಗ್ಗೆ ಕ್ರಮ ಕೈಗೊಳ್ಳುವ ಅಧಿಕಾರ ರಾಜ್ಯ ಸರಕಾರಕ್ಕಿದೆ ಎಂದು ತಿಳಿಸಿದ್ದಾರೆ.

Advertisement

ರಾಜ್ಯದಲ್ಲಿ ಇತ್ತೀಚೆಗೆ ಸ್ಥಾಪನೆಯಾಗಿರುವ ಖಾಸಗಿ ವಿವಿ ಮತ್ತು ಸಂಸ್ಥೆಗಳು ಎಂಜಿನಿಯರಿಂಗ್‌ ಮತ್ತು ತಾಂತ್ರಿಕ ಶಿಕ್ಷಣಕ್ಕೆ ಒತ್ತು ಕೊಡುತ್ತಿದ್ದು, ಅವುಗಳ ಸೀಟು ಹಂಚಿಕೆ ಮೇಲೆ ರಾಜ್ಯ ಸರಕಾರಕ್ಕೆ ಯಾವುದೇ ಲಗಾಮು ಇಲ್ಲದಂತಾಗಿದೆ. ಬಹುತೇಕ ಇಂತಹ ಸಂಸ್ಥೆಗಳು ಮೊದಲ ಹಂತದ ನಗರಗಳಲ್ಲೇ ಇದ್ದು ಅವುಗಳ ಆಡಳಿತ ಮಂಡಳಿಯ ವಿವೇಚನೆ ಮೇರೆಗೆ ವಿವಿಧ ಕೋರ್ಸ್‌ಗಳ ಸೀಟು ಹೆಚ್ಚಳ ಹಾಗೂ ಕಡಿಮೆ ಮಾಡುವ ತೀರ್ಮಾನ ಕೈಗೊಳ್ಳುತ್ತಿವೆ. ಈ ಬಗ್ಗೆ ರಾಜ್ಯ ಸರಕಾರ ಅಥವಾ ಎಐಸಿಟಿಇಗೆ ಯಾವುದೇ ನಿಯಂತ್ರಣವಿಲ್ಲದಂತಾಗಿದೆ ಎಂದು ತಿಳಿಸಿದ್ದರು.

ಈ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಎಐಸಿಟಿಇ ಮುಖ್ಯಸ್ಥರು ನಮಗೆ ಹೊಸ ಕಾಲೇಜು ಸ್ಥಾಪನೆ ಬಗ್ಗೆ ಯಾವುದೇ ಅರ್ಜಿ ಬಂದರೂ ರಾಜ್ಯ ಸರಕಾರದ ಒಪ್ಪಿಗೆಯಿದ್ದರೆ ಮಾತ್ರ ಅನುಮತಿ ನೀಡುತ್ತೇವೆ. ಎಂಜಿನಿಯರಿಂಗ್‌ ಕೋರ್ಸ್‌ಗಳನ್ನು ನೀಡುತ್ತಿರುವ ರಾಜ್ಯ ಖಾಸಗಿ ವಿವಿಗಳು ಎಐಸಿಟಿಇ ವ್ಯಾಪ್ತಿಗೆ ಬರುವುದಿಲ್ಲ. ಆದ್ದರಿಂದ ಎಐಸಿಟಿಇ ತನ್ನ ನಿಯಂತ್ರಣ ಅಧಿಕಾರ ಬಳಸಲು ಸಾಧ್ಯವಿಲ್ಲ. ಈ ವಿವಿಗಳು ರಾಜ್ಯ ಸರಕಾರದ ಕಾಯ್ದೆಗಳ ಮೂಲಕ ಅಸ್ತಿತ್ವಕ್ಕೆ ಬಂದಿರುತ್ತವೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next