Advertisement

ಮಾತುಗಳಿಗೆ ಇರಲಿ ನಿಯಂತ್ರಣ

02:01 AM Apr 03, 2019 | sudhir |

ವಿಧಾನಸಭೆ, ಲೋಕಸಭೆ ಚುನಾವಣೆ ವೇಳೆ ರಾಜಕೀಯ ಪಕ್ಷಗಳ ನಾಯಕರಿಗೆ ತಾವು ಯಾವ ಜಾತಿಗೆ ಸೇರಿದವರು ಎಂಬ ವಿಚಾರ ಜಾಗೃತವಾಗುತ್ತದೆ. ಹಣ ಹಂಚಿಕೆಯ ಜತೆಗೆ ಚುನಾವಣೆಯಲ್ಲಿ ಮತ್ತೂಂದು ಪ್ರಮುಖ ಅಸ್ತ್ರವೆಂದರೆ ಜಾತಿ. ಕರ್ನಾಟಕದ ವಿಚಾರವನ್ನೇ ಗಮನಿಸುವುದಾದರೆ, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರವಂತೂ ಪರಾಕಾಷ್ಠೆಗೆ ತಲುಪಿದೆ. ಅಲ್ಲಿ ಪ್ರಚಾರ ನಡೆಸಲು ತೆರಳಿದವರೆಲ್ಲ, ಒಬ್ಬರು ಮತ್ತೂಬ್ಬರು ಸೇರಿದ ಜಾತಿಯನ್ನೇ ಆಧಾರವಾಗಿಟ್ಟುಕೊಂಡು ಬೈಗುಳಗಳ ಸುರಿಮಳೆ ನಡೆಸಿದ್ದಾರೆ. ಸೋಮವಾರ ಪ್ರಮುಖ ರಾಜಕೀಯ ನಾಯಕರು, ಅಭ್ಯರ್ಥಿಗಳು, ಅವರ ಬೆಂಬಲಿಗರು ಆಡಿದ ಮಾತುಗಳನ್ನು ಗಮನಿಸಿದರೆ ದೇಶದ ಚುನಾವಣಾ ರಾಜಕೀಯ ಯಾವ ಮಗ‌Yಲಿಗೆ ಹೊರಳಿಕೊಂಡಿದೆ ಎನ್ನುವುದು ಸ್ಪಷ್ಟವಾಗಿ ಅರಿವಾಗುತ್ತದೆ.

Advertisement

ಮಂಡ್ಯದಲ್ಲಿ ಪ್ರಚಾರದ ವೇಳೆ ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ತೀರಾ ಗಂಭೀರ ಎನಿಸುವಂಥ ಆರೋಪ ಮಾಡಿದ್ದಾರೆ. ಇದರ ಜತೆಗೆ ರಾಜ್ಯ ಬಿಜೆಪಿಯ ಹಿರಿಯ ನಾಯಕ ಕೆ.ಎಸ್‌.ಈಶ್ವರಪ್ಪ ಕೂಡ ಸ್ಪರ್ಧೆಗೆ ಬಿದ್ದವರಂತೆ ನಿಗದಿತ ಸಮುದಾಯದವರನ್ನು ಕುರಿತು ಆಡಿದ್ದಾರೆ. ಕ್ಷೇತ್ರದ ಹಾಲಿ ಸಂಸದ ಎಲ್‌.ಆರ್‌.ಶಿವರಾಮೇಗೌಡರು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ವಿರುದ್ಧ ಹೇಳಿದ ಮಾತುಗಳು ನಿಜಕ್ಕೂ ಪ್ರಶ್ನಾರ್ಹವೇ ಆಗಿದೆ. ಇದರಿಂದಾಗಿ ಮಾತುಗಳು ಹೊರಬಿದ್ದು ಜನರ ನಡುವೆ ಅಪನಂಬುಗೆಯ ಕಂದರ ಹೆಚ್ಚುತ್ತದೆ ಮತ್ತು ರಾಜಕಾರಣಿಗಳಿಗೆ ಮತಗಳೆಂಬ ಆದಾಯ ಸಿಗುತ್ತದೆ. ಅಂತಿಮವಾಗಿ ದಿನ ನಿತ್ಯದ ವಹಿವಾಟಿನಲ್ಲಿ ಆಯಾ ಊರುಗಳಲ್ಲಿ ಮುಖ ಮುಖ ನೋಡಿಕೊಳ್ಳಬೇಕಾದದ್ದು ಸ್ಥಳೀಯರೇ. ಚುನಾವಣೆಯೋ, ಇನ್ನು ಏನೋ ಒಂದು ದೊಡ್ಡ ಕಾರ್ಯಕ್ರಮದ ವೇಳೆ ಭಾಷಣ ಮಾಡುವವರು ಅವರ ಕೆಲಸ ಮುಗಿಸಿ ಹೋಗಿರುತ್ತಾರೆ. ಹೀಗಾಗಿ ಅಂಥವುಗಳಿಗೆ ಅವಕಾಶ ಯಾಕೆ ಮಾಡಿಕೊಡಬೇಕು ಎನ್ನುವುದನ್ನು ಜನರೇ ಕೇಳಿಕೊಳ್ಳಬೇಕಾಗಿದೆ.

ತೆಲಂಗಾಣ, ಆಂಧ್ರಪ್ರದೇಶ, ಉತ್ತರ ಪ್ರದೇಶ, ಮಧ್ಯಪ್ರದೇಶ ಸೇರಿದಂತೆ ದೇಶದ ಪ್ರತಿಯೊಂದು ಭಾಗದಲ್ಲಿಯೂ ಕೂಡ ಚುನಾವಣೆ ಎದುರಿಸುವುದು ಎಂದರೆ ಅದು ಜಾತಿ ಮತ್ತು ಹಣದ ಬಲದಲ್ಲಿಯೇ ಎನ್ನುವಂತಾಗಿದೆ.

ತೆಲಂಗಾಣ ಮತ್ತು ಆಂಧ್ರಪ್ರದೇಶದ ಪ್ರಚಾರದ ವೈಖರಿ ನೋಡುವುದಿದ್ದರೆ, ಅಲ್ಲಿ ತೆಲುಗು ಭಾಷೆ, ಆಹಾರದ ಬಗ್ಗೆ ಯಾರು ಏನೆಂದರು ಎನ್ನುವುದೂ ಪ್ರಮುಖವಾಗುತ್ತದೆ. ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ ಪ್ರಚಾರ ನಡೆಸುವ ವೇಳೆ ಟಿಡಿಪಿ ನಾಯಕರು ಹೈದರಾಬಾದ್‌ ಬಿರಿಯಾನಿಯನ್ನು ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್‌ ಸಗಣಿಯಂತಿದೆ ಎಂದು ಹೇಳಿದ್ದರು ಎಂದು ಆಪಾದಿಸಿದ್ದರು.

ಇನ್ನು ಎಲ್ಲಾ ಪಕ್ಷಗಳಿಗಲ್ಲಿಯೂ ಕೂಡ ಯಾವ ಜಾತಿ, ಸಮುದಾಯಕ್ಕೆ ಎಷ್ಟು ಪ್ರಾಧಾನ್ಯತೆ ನೀಡಿದ್ದಾರೆ ಎನ್ನುವುದು ಪ್ರಧಾನವಾಗುತ್ತದೆ. ಹಿಂದಿನ ಚುನಾವಣೆಯಲ್ಲಿ ನಿಗದಿತ ಕ್ಷೇತ್ರದ ಸಂಸದ ತನ್ನ ವ್ಯಾಪ್ತಿಯಲ್ಲಿನ ಪ್ರದೇಶದ ಸಮಸ್ಯೆಗಳು, ಅಗತ್ಯಗಳಿಗೆ ಎಷ್ಟು ಸ್ಪಂದಿಸಿದ್ದಾನೆ ಎನ್ನುವುದು ಪ್ರಧಾನವಾಗುವುದೇ ಇಲ್ಲ.

Advertisement

ಸಾಹಿತಿ- ಬರಹಗಾರರಾಗಿರುವ ಗಿರೀಶ್‌ ಕಾರ್ನಾಡ್‌, ನಯನತಾರಾ ಸೆಹಗಲ್‌ ಸೇರಿದಂತೆ 200 ಮಂದಿ ಈ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜಾತಿ ಮತ್ತು ಹಣಬಲಕ್ಕೆ ಬಗ್ಗದೆ ಹೊಸ ಭಾರತ ನಿರ್ಮಾಣಕ್ಕೆ ಮುಂದಾಗಲು ಜನರು ಮನಸ್ಸು ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಅದಕ್ಕೆ ಪೂರಕವಾಗಿ ಎಲ್ಲರೂ ಶ್ರಮಿಸಬೇಕು ಎಂದು ಮನವಿ ಮಾಡಿದ್ದಾರೆ.

ಮೊದಲ ಹಂತದ ಮತದಾನಕ್ಕೆ ಇನ್ನು ಸರಿಯಾಗಿ ಒಂಭತ್ತು ದಿನಗಳು ಬಾಕಿ ಉಳಿದಿವೆ. ಹೀಗಾಗಿ, ಎಲ್ಲಾ ರಾಜಕೀಯ ಪಕ್ಷಗಳು ವಿಷಯದ ಆಧಾರ, ಕ್ಷೇತ್ರದ ಆದ್ಯತೆಗಳಿಗೆ ಗಮನ ನೀಡಬೇಕೆ ಹೊರತು, ಹಿಂದಿನ ಯಾವತ್ತೋ ಹಳೆಯ, ಈಗಿನ ಸಂದರ್ಭಕ್ಕೆ ಹೊಂದಿಕೆಯಲ್ಲದ ವಿಚಾರಗಳಿಗೆ ಆದ್ಯತೆ ಕೊಡುವುದನ್ನು ಬಿಟ್ಟು ನಿಜವಾದ ಜನನಾಯಕರು ಎಂಬ ಅರ್ಥದಲ್ಲಿ ಪ್ರಚಾರ ಕಾರ್ಯ ನಡೆಸಬೇಕು. ಈಗೀಗ ಸಾಮಾಜಿಕ ಜಾಲತಾಣಗಳೇ ಪ್ರಧಾನ ಪಾತ್ರ ವಹಿಸುತ್ತಿವೆಯಾದ್ದರಿಂದ, ಜಾತಿ, ಸಮುದಾಯ ಆಧಾರಿತ ಪ್ರಚಾರ ಅಲ್ಲಿಯೇ ಜೋರಾಗಿ ನಡೆಯುತ್ತಿದೆ. ಅದನ್ನು ತಡೆಯುವುದೇ ಚುನಾವಣಾ ಆಯೋಗ ಮತ್ತು ಇತರ ಸಂಸ್ಥೆಗಳಿಗೆ ಸವಾಲಿನ ಕೆಲಸ.

ಸದ್ಯ ಇರುವ ನಿಯಮಗಳ ಅನ್ವಯವೇ ಧರ್ಮ, ಜಾತಿ ಆಧಾರಿತ, ರಕ್ಷಣಾ ಪಡೆಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುವುದರ ಬಗ್ಗೆ ನಿಯಮ-ಕಾನೂನುಗಳಲ್ಲಿ ಸ್ಪಷ್ಟವಾಗಿ ಕೂಡದು ಎಂದು ಉಲ್ಲೇಖೀಸಲಾಗಿದೆ. ಇದರ ಜತೆಗೆ ಚುನಾವಣಾ ಆಯೋಗ ಕೂಡ ದಿನಗಳ ಹಿಂದಷ್ಟೇ ಎಲ್ಲಾ ಪಕ್ಷಗಳಿಗೆ ಮನವಿ ಮಾಡಿ, ಪ್ರಚಾರದ ಭರಾಟೆಯಿಂದ ರಕ್ಷಣಾ ಪಡೆಗಳಿಗೆ ಸಂಬಂಧಿತ ವಿಚಾರ ಹೊರಗಿಡಬೇಕೆಂದು ಮನವಿ ಮಾಡಿತ್ತು. ಆದರೆ ಅದು ನಿರೀಕ್ಷಿತ ಫ‌ಲ ನೀಡಿಲ್ಲ. ಹೀಗಾಗಿ, ಈ ಅಂಶಗಳನ್ನೆಲ್ಲ ತಡೆಯಲು ಕಾಲಕಾಲಕ್ಕೆ ಕಾನೂನಿನಲ್ಲಿ ಬದಲಾವಣೆಯ ಜತೆಗೆ, ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಬೇಕು. ಅದಕ್ಕೆ ಜತೆಯಾಗಿ ಮತದಾರರು ಸೂಕ್ಷ್ಮತೆ ಅರ್ಥ ಮಾಡಿಕೊಳ್ಳಬೇಕು.

Advertisement

Udayavani is now on Telegram. Click here to join our channel and stay updated with the latest news.

Next