Advertisement

11 ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌,ಇಡುಕ್ಕಿಯಲ್ಲಿ ಗುಡ್ಡ ಕುಸಿತ

06:00 AM Aug 19, 2018 | |

ಕಾಸರಗೋಡು: ಪ್ರಕೃತಿಯ ಮುನಿಸಿಗೆ ತತ್ತರಿಸಿರುವ ಕೇರಳ ರಾಜ್ಯದ ನೆರೆ ಪೀಡಿತ ಪ್ರದೇಶಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ಬೆಳಗ್ಗೆ ವೈಮಾನಿಕ ಸಮೀಕ್ಷೆ ನಡೆಸಿ ಪರಿಸ್ಥಿತಿಯ ಗಂಭೀರತೆಯನ್ನು ಮನನ ಮಾಡಿಕೊಂಡು ತುರ್ತು ಪರಿಹಾರವಾಗಿ 500 ಕೋಟಿ ರೂ. ಸಹಾಯ ಘೋಷಿಸಿದ್ದಾರೆ. 

Advertisement

ಮುಖ್ಯಮಂತ್ರಿ, ರಾಜ್ಯಪಾಲ ಮತ್ತು ಕೇಂದ್ರ ಸಚಿವ ಅಲೊ#àನ್ಸಾ ಕಣ್ಣಂತ್ತಾನಂ ಅವರೂ ಪ್ರಧಾನಿ ಜತೆಗಿದ್ದರು. ಬೆಳಗ್ಗೆ ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ವೈಮಾನಿಕ ಸಮೀಕ್ಷೆ ವಿಳಂಬವಾಗಿ ಆರಂಭಿಸಲಾಯಿತು.

ಜಲಪ್ರಳಯದ ದುರಂತದ ಬಗ್ಗೆ ಅವಲೋಕನ ನಡೆಸಲು ಪ್ರಧಾನಿ ಆ.17 ರಂದು ರಾತ್ರಿ 10.50 ಕ್ಕೆ ವಿಶೇಷ ವಿಮಾನದಲ್ಲಿ ದಿಲ್ಲಿಯಿಂದ ಹೊರಟು ತಿರುವನಂತಪುರದಲ್ಲಿ ಬಂದಿಳಿದಿದ್ದರು. ರಾತ್ರಿ ತಿರುವನಂತಪುರದಲ್ಲೇ ಉಳಿದು ಕೊಂಡ ಪ್ರಧಾನಿ ಶನಿವಾರ ಬೆಳಗ್ಗೆ ರಾಜ್ಯಪಾಲ, ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವ ಕಣ್ಣಂತ್ತಾನಂ ಅವರ ಜತೆ ತಿರುವನಂತಪುರದಲ್ಲಿ ಸ್ಥಿತಿಗತಿಗಳ ಬಗ್ಗೆ ಸಮಾಲೋಚನೆ ನಡೆಸಿದ ಬಳಿಕ ವಿಮಾನದಲ್ಲಿ ಅವರ ಜೊತೆಯಲ್ಲಿ ಕೊಚ್ಚಿಯಲ್ಲಿ ಬಂದಿಳಿದರು. 

ಅಲ್ಲಿಂದ ನೌಕಾ ಪಡೆಯ ವಿಶೇಷ ಹೆಲಿಕಾಪ್ಟರ್‌ನಲ್ಲಿ ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ಜತೆ ಪ್ರಳಯ ಪೀಡಿತ ಪ್ರದೇಶಗಳಿಗೆ ವೈಮಾನಿಕ ಸಮೀಕ್ಷೆ ನಡೆಸಲು ಮುಂದಾಗಿರುವಂತೆಯೇ ಪ್ರತಿಕೂಲ ಹವಾಮಾನದಿಂದ ವೈಮಾನಿಕ ಸಮೀಕ್ಷೆ ನಡೆಸುವುದು ಭದ್ರತೆಯ ದೃಷ್ಟಿಯಿಂದ ಕೈಬಿಡುವಂತೆ ನೌಕಾಪಡೆಯ ಉನ್ನತ ಅಧಿಕಾರಿಗಳು ವಿನಂತಿಸಿದರು.
 
ಆ ಹಿನ್ನೆಲೆಯಲ್ಲಿ ವೈಮಾನಿಕ ಸಮೀಕ್ಷೆಯನ್ನು ದಿಢೀರ್‌ ರದ್ದುಪಡಿಸುವ ತೀರ್ಮಾನ ಕೈಗೊಳ್ಳಲಾಯಿತಾದರೂ, ಕೆಲವು ಕ್ಷಣಗಳ ಬಳಿಕ ಈ ತೀರ್ಮಾನವನ್ನು ಬದಲಾಯಿಸಿಕೊಂಡು ವೈಮಾನಿಕ ಸಮೀಕ್ಷೆ ನಡೆಸಿದರು.

ತಗ್ಗಿದ ಮಳೆ ಬಿರುಸು
ರಾಜ್ಯದ ಹಲವು ಜಿಲ್ಲೆಗಳಲ್ಲಿ ಶುಕ್ರವಾರ ರಾತ್ರಿಯಿಂದ ಮಳೆಯ ಬಿರುಸು ತಗ್ಗತೊಡಗಿದೆ. ಕೋಟ್ಟಯಂ, ತಿರುವನಂತಪುರ ಮತ್ತು ಚೆಂಗನ್ನೂರಿನಲ್ಲಿ ಭಾರೀ ಮಳೆಯಾಗುತ್ತಿದೆ. ಇಡುಕ್ಕಿ ಮತ್ತು ಮುಲ್ಲಪೆರಿಯಾರ್‌ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಕುಸಿಯತೊಡಗಿದ್ದು, ಇದರಿಂದ ನೆಮ್ಮದಿ ತಂದಿದೆ. ನೆರೆಯಿಂದ ಆವೃತ್ತವಾಗಿರುವ ಚಾಲಕುಡಿ ಸೇರಿದಂತೆ ಇತರ ಪ್ರದೇಶಗಳಲ್ಲಿ ನೆರೆ ನೀರು ತಗ್ಗತೊಡಗಿದೆ. ಪತ್ತನಂತಿಟ್ಟ ಜಿಲ್ಲೆಯಲ್ಲಿ ಹಲವು ಪ್ರದೇಶಗಳಲ್ಲಿ ನೆರೆ ನೀರು ಇನ್ನೂ ಮುಂದುವರಿದಿದೆ. ಪ್ರಳಯ ಪೀಡಿತ ಎಲ್ಲಾ ಜಿಲ್ಲೆಗಳಲ್ಲಿ ಸೇನಾ ಪಡೆ, ನೌಕಾಪಡೆ ಮತ್ತು ವ್ಯೋಮ ಸೇನಾ ಪಡೆಯ ಹಲವು ತುಕಡಿಗಳು ಆಹೋರಾತ್ರಿ ನಿರಂತರವಾಗಿ ರಕ್ಷಾ ಕಾರ್ಯಾಚರಣೆ ನಡೆಸುತ್ತಿದೆ.

Advertisement

ಮುಂಗಾರು ಮಳೆ ಆರಂಭವಾದಲ್ಲಿಂದ ಈ ವರೆಗೆ ಕೇರಳದಲ್ಲಿ 324 ಮಂದಿ ಬಲಿಯಾಗಿದ್ದಾರೆ. ನಾಲ್ಕು ಲಕ್ಷ ಜನರು ನಿರಾಶ್ರಿತರಾಗಿದ್ದಾರೆ. ಆ.17 ರಂದು 45 ಮಂದಿ ಸಾವಿಗೀಡಾಗಿದ್ದರು. 82,442 ಮಂದಿಯನ್ನು ರಕ್ಷಿಸಲಾಗಿದೆ. ರೈಲು, ಭೂಸಾರಿಗೆ ಮತ್ತು ವಿಮಾನ ಸೇವೆಯೂ ಅಸ್ತವ್ಯಸ್ತಗೊಂಡಿದೆ. ಮಂಗಳೂರಿನಿಂದ ಕಲ್ಲಿಕೋಟೆಯ ವರೆಗೆ ಮಾತ್ರವೇ ರೈಲು ಸಂಚಾರ ನಡೆಯುತ್ತಿದೆ. ಸಹಸ್ರಾರು ಮಂದಿ ತಮ್ಮ ಮನೆ ಆಸ್ತಿಪಾಸ್ತಿಗಳನ್ನು ಕಳೆದುಕೊಂಡಿದ್ದಾರೆ. ಕೃಷಿ ನಾಶ ನಷ್ಟವನ್ನು ಇನ್ನಷ್ಟೇ ಲೆಕ್ಕಹಾಕಬೇಕಾಗಿದೆ. ಇದೇ ಸಂದರ್ಭದಲ್ಲಿ ಪ್ರವಾಹ ಪೀಡಿತ ಕೇರಳಕ್ಕೆ ಆರ್ಥಿಕ ಸಹಾಯ ಹರಿದು ಬರುತ್ತಿದೆ.
ಪ್ರವಾಹದಿಂದ ಕೇರಳಕ್ಕೆ ಸಹಸ್ರಾರು ಕೋಟಿ ರೂ. ನಾಶನಷ್ಟ ಉಂಟಾಗಿದೆ. ಅದಕ್ಕೆ ಹೊಂದಿಕೊಂಡು ಕೇಂದ್ರ ಸರಕಾರ ಸಹಾಯ ಒದಗಿಸಬೇಕೆಂದು ಮುಖ್ಯಮಂತ್ರಿ ಪ್ರಧಾನಿಯವರನ್ನು ವಿನಂತಿಸಿದ್ದಾರೆ. ಅದರಂತೆ ತುರ್ತು ಪರಿಹಾರವಾಗಿ 500 ಕೋಟಿ ರೂ. ಪ್ರಧಾನಿ ನೆರವು ಘೋಷಿಸಿದ್ದಾರೆ. ಮಾತ್ರವಲ್ಲದೆ ಅಗತ್ಯದ ಸಹಾಯವನ್ನು ಮುಂದೆ ನೀಡಲಾಗುವುದೆಂದು ಪ್ರಧಾನಿ ಭರವಸೆ ನೀಡಿದ್ದಾರೆ.

ಇಡುಕ್ಕಿಯಲ್ಲಿ  : ನಾಲ್ವರ ಸಾವು
ಇಡುಕ್ಕಿ ಜಿಲ್ಲೆಯ ಎರಡು ಕಡೆಗಳಲ್ಲಿ ಉಂಟಾದ ಗುಡ್ಡೆ ಕುಸಿತದಿಂದ ನಾಲ್ವರು ಸಾವಿಗೀಡಾಗಿದ್ದಾರೆ. ಆ.17 ರಂದು ರಾತ್ರಿ ಚೆರುತೋಣಿಯಲ್ಲಿ ಸಂಭವಿಸಿದ ಗುಡ್ಡೆ ಕುಸಿತದಿಂದ ಒಂದೇ ಕುಟುಂಬದ ಮೂವರು ಸಹಿತ ನಾಲ್ವರು ಸಾವಿಗೀಡಾದರು. 15 ಮಂದಿ ಕೆಎಸ್‌ಆರ್‌ಟಿಸಿ ಬಸ್‌ ನೌಕರರು ಅದ್ಭುತಕರವಾಗಿ ಅಪಾಯದಿಂದ ಪಾರಾದರು. ಅಯ್ಯನ್‌ಕುನ್ನೇಲ್‌ ಮ್ಯಾಥ್ಯೂ ಮತ್ತು ಕುಟುಂಬ ಸದಸ್ಯರು ಸಾವಿಗೀಡಾದವರು.

ಕಟ್ಟಪ್ಪನ ವೆಳ್ಳಾಯಾಂಕುಡಿಯಲ್ಲಿ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಮುಂಜಾನೆ 1.15 ಕ್ಕೆ ಗುಡ್ಡೆ ಕುಸಿದರೂ 15 ಮಂದಿ ಕೆಎಸ್‌ಆರ್‌ಟಿಸಿ ನೌಕರರು ಯಾವುದೇ ಅಪಾಯವಿಲ್ಲದೆ ಪಾರಾದರು. ಬಸ್‌ಗಳು ಮಣ್ಣಿನಡಿಯಲ್ಲಿ ಸೇರಿಹೋಗಿದೆ. ಈ ಪ್ರದೇಶದ ಆರು ಕಡೆಗಳಲ್ಲಿ ಗುಡ್ಡೆ ಕುಸಿತ ಉಂಟಾಗಿದ್ದು, ಆರು ಕಟ್ಟಡಗಳು ಹಾನಿಗೀಡಾಯಿತು. ಈ ಪ್ರದೇಶದಲ್ಲಿರುವ ಕುಟುಂಬ ಗಳನ್ನು ಸ್ಥಳಗಳಿಗೆ ಸ್ಥಳಾಂತರಿಸಲಾಯಿತು.

ಕಟ್ಟೆಚ್ಚರ 
ಕಾಸರಗೋಡು, ಕೊಲ್ಲಂ ಮತ್ತು ತಿರುವನಂತಪುರ ಜಿಲ್ಲೆಯ ಹೊರತು ಪಡಿಸಿ 11 ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಈ ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಕೊಲ್ಲಂ ಮತ್ತು ಕಾಸರಗೋಡು ಜಿಲ್ಲೆಯಲ್ಲಿ ಎಲ್ಲೋ ಅಲರ್ಟ್‌ ಘೋಷಿಸಲಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next