Advertisement

Kannada ಶಾಲೆಗಳಿಗೆ ಮರಾಠಿ ಶಿಕ್ಷಕರ ನೇಮಕ! ಕಾಸರಗೋಡಿನಂತೆ ಗಡಿಭಾಗದಲ್ಲಿ ಮಹಾ ಉದ್ಧಟತನ

01:05 AM Jun 18, 2024 | Team Udayavani |

ಬೆಳಗಾವಿ: ಕೇರಳದ ಕಾಸರಗೋಡಿನ ರೀತಿಯಲ್ಲೇ ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದ ಕನ್ನಡ ಶಾಲೆಗಳ ಮಕ್ಕಳಿಗೆ ಶಿಕ್ಷಕರ ನೇಮಕಾತಿ ವಿಷಯದಲ್ಲಿ ಮಹಾರಾಷ್ಟ್ರ ಸರಕಾರ ಅತಂತ್ರ ಸ್ಥಿತಿ ನಿರ್ಮಿಸಿದೆ.

Advertisement

ಕಾಸರಗೋಡಿನಲ್ಲಿ ಕನ್ನಡ ಶಾಲೆಗೆ ಮಲೆಯಾಳಿ ಶಿಕ್ಷಕರನ್ನು ನೇಮಕ ಮಾಡಿದಂತೆ ಇತ್ತ ಮಹಾರಾಷ್ಟ್ರ ಸರಕಾರವೂ ಕನ್ನಡ ಶಾಲೆಗಳಿಗೆ ಮರಾಠಿ ಮಾಧ್ಯಮದ ಶಿಕ್ಷಕರನ್ನು ನೇಮಕ ಮಾಡಿ ಆದೇಶ ಹೊರಡಿಸುವ ಮೂಲಕ ವಿವಾದಕ್ಕೆ ಕಾರಣವಾಗಿದೆ. ಈ ಆದೇಶ ಸಾಂಗ್ಲಿ ಹಾಗೂ ಸೊಲ್ಲಾಪುರ ಜಿಲ್ಲೆಗಳ 40 ಸಾವಿರಕ್ಕಿಂತ ಹೆಚ್ಚಿನ ಮಕ್ಕಳಿಗೆ ಅತಂತ್ರ ಸ್ಥಿತಿ ತಂದೊಡ್ಡಿದೆ.

ಕೆಲವು ದಿನಗಳ ಹಿಂದೆ ಮಹಾರಾಷ್ಟ್ರ ಸರಕಾರ ಗಡಿ ಭಾಗದ ಜತ್‌ ತಾಲೂಕಿಗೆ 11 ಮತ್ತು ಸೊಲ್ಲಾಪುರ ಜಿಲ್ಲೆಯ ಸರಕಾರಿ ಕನ್ನಡ ಶಾಲೆಗಳಿಗೆ 13 ಶಿಕ್ಷಕರನ್ನು ನೇಮಕ ಮಾಡಿದೆ. ಆದರೆ ಈ 24 ಶಿಕ್ಷಕರಲ್ಲಿ ಕೇವಲ 7 ಮಂದಿಗೆ ಮಾತ್ರ ಕನ್ನಡ ತಿಳಿದಿದೆ ಎನ್ನಲಾಗಿದೆ.

ಮಹಾರಾಷ್ಟ್ರ ಸರಕಾರದ ಈ ನಿರ್ಧಾರದ ವಿರುದ್ಧ ಕನ್ನಡ ಹೋರಾಟಗಾರರು ತಿರುಗಿ ಬಿದ್ದಿದ್ದಾರೆ.

ಕನ್ನಡದ ಗಂಧಗಾಳಿ ಇಲ್ಲ
ಈ ಶಿಕ್ಷಕರಿಗೆ ಕನ್ನಡದ ಗಂಧ ಗಾಳಿಯೂ ಇಲ್ಲ ಎಂದು ಜತ್‌ ತಾಲೂಕಿನ ಕನ್ನಡ ಹೋರಾಟಗಾರರಾದ ಸರೋಜಿನಿ ಬಿರಾದಾರ ಕಿಡಿಕಾರಿದ್ದಾರೆ. ಮಹಾರಾಷ್ಟ್ರ ಸರಕಾರದ ಈ ಆದೇಶದ ವಿರುದ್ಧ ಕನ್ನಡಿಗರು ದೊಡ್ಡ ಪ್ರಮಾಣದಲ್ಲಿ ವಿರೋಧ ಮಾಡುತ್ತಿದ್ದಾರೆ. ಆದರೆ ಸರಕಾರ ಯಾವುದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ರಾಜ್ಯ ಸರಕಾರ ತುರ್ತಾಗಿ ಇಲ್ಲಿನ ಕನ್ನಡಿಗರ ಬೆನ್ನೆಲುಬಾಗಿ ನಿಲ್ಲಬೇಕಿದೆ. ಇಲ್ಲವಾದಲ್ಲಿ ಈ ಭಾಗದಲ್ಲಿ ಕನ್ನಡ ಶಾಲೆಗಳು ನಶಿಸಿ ಹೋಗಲಿವೆ ಎಂದು ಗಡಿ ಭಾಗದ ಕನ್ನಡಿಗರು ಆತಂಕ ವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next