Advertisement

Dengue Case ಕರಾವಳಿಯಲ್ಲಿ ಈ ಬಾರಿ ದಾಖಲೆ ಡೆಂಗ್ಯೂ

01:26 AM Nov 27, 2023 | Team Udayavani |

ಮಂಗಳೂರು: ಹವಾಮಾನ ವೈಪರೀತ್ಯದ ಪರಿಣಾಮ ಸಾರ್ವಜನಿಕರ ಆರೋಗ್ಯ ಮೇಲೆ ಉಂಟಾಗು ತ್ತಿದ್ದು, ಕರಾವಳಿಯಲ್ಲಿ ಈ ವರ್ಷ ದಾಖಲೆ ಸಂಖ್ಯೆಯ ಡೆಂಗ್ಯೂ ಪ್ರಕರಣ ಗಳು ವರದಿಯಾಗಿವೆ.

Advertisement

ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಈ ವರ್ಷ ಅತೀ ಹೆಚ್ಚು ಡೆಂಗ್ಯೂ ಪ್ರಕರಣಗಳು ಕಂಡುಬಂದಿವೆ. 2020ರಲ್ಲಿ ದ.ಕ.ದಲ್ಲಿ 239 ಪ್ರಕರಣ ಇದ್ದರೆ 2023ರಲ್ಲಿ 426ಕ್ಕೆ ಏರಿಕೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ 139 ಇದ್ದುದು 618ಕ್ಕೆ ಏರಿದೆ. ಕರಾವಳಿಯಲ್ಲಿ ಈ ವರ್ಷದ ಮಳೆಗಾಲ ಉತ್ತಮವಾಗಿರಲಿಲ್ಲ. ಧಾರಾಕಾರ ಮಳೆ ಸುರಿಯುವ ಬದಲು ಬಿಸಿಲು-ಮಳೆ ಕಣ್ಣಾಮುಚ್ಚಾಲೆ ಯಿಂದ ಅಲ್ಲಲ್ಲಿ ನೀರು ಶೇಖರಗೊಂಡು ಸೊಳ್ಳೆಗಳ ಲಾರ್ವಾ ಉತ್ಪತ್ತಿಗೆ ಅನುಕೂಲ ಸೃಷ್ಟಿಸುತ್ತಿದೆ.

ನಗರ ಭಾಗದಲ್ಲೇ ಅತ್ಯಧಿಕ !
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ನಗರ ಭಾಗದಲ್ಲೇ ಅಧಿಕ ಡೆಂಗ್ಯೂ ಪ್ರಕರಣ ದಾಖಲಾಗಿವೆ. ಒಟ್ಟು ಪ್ರಕರಣಗಳಲ್ಲಿ ಶೇ. 60ರಷ್ಟು ನಗರ ಭಾಗದಿಂದಲೇ ವರದಿಯಾಗಿವೆ. ನಗರಕ್ಕೆ ವಿವಿಧ ಜಿಲ್ಲೆ, ಹೊರ ರಾಜ್ಯದಿಂದ ಉದ್ಯೋಗ, ಶಿಕ್ಷಣ ಸಂಬಂಧ ಜನರು ಬರುತ್ತಿದ್ದು, ಅವರಲ್ಲೇ ಕೆಲವರಿಗೆ ರೋಗ ಲಕ್ಷಣ ಕಂಡುಬಂದಿದೆ. ಮಂಗಳೂರಿನಲ್ಲಿ ವೆಲೆನ್ಸಿಯ, ಜಪ್ಪು, ಬಂದರು ಪ್ರದೇಶಗಳಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿದ್ದು, ಪಾಲಿಕೆಯಿಂದ ವಿಶೇಷ ನಿಗಾ ಇರಿಸಲಾಗಿದೆ.

ಮುನ್ನೆಚ್ಚರಿಕೆ ಅಗತ್ಯ
ಡೆಂಗ್ಯೂ ಹರಡದಂತೆ ಸ್ವಯಂ ಮುನ್ನೆಚ್ಚರಿಕೆ ವಹಿಸಬೇಕಾದ ಅಗತ್ಯವಿದೆ. ತೆಂಗಿನ ಚಿಪ್ಪು, ಟಯರ್‌, ಟ್ಯೂಬ್‌, ಪ್ಲಾಸ್ಟಿಕ್‌ ಸಹಿತ ಸೊಳ್ಳೆಗಳು ಉತ್ಪತ್ತಿಯಾಗುವ ತ್ಯಾಜ್ಯಗಳ ಮೂಲವನ್ನು ಸಮರ್ಪಕ ನಿರ್ವಹಣೆ ಮಾಡಬೇಕು. ಮನೆಯ ಸುತ್ತಮತ್ತ, ತಾರಸಿ ಹಾಗೂ ಹೂ ಕುಂಡಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ನೀರು ಶೇಖರಣ ತೊಟ್ಟಿ, ಟ್ಯಾಂಕ್‌ಗಳ ಮುಚ್ಚಳಗಳನ್ನು ಭದ್ರವಾಗಿ ಮುಚ್ಚಿಡಬೇಕು. ಯಾವುದೇ ಜ್ವರವನ್ನು ನಿರ್ಲಕ್ಷಿಸದೆ ವೈದ್ಯರನ್ನು ಭೇಟಿ ಮಾಡಬೇಕು. ಸೊಳ್ಳೆ ಪರದೆ¿ನ್ನು ಉಪಯೋಗಿಸಬೇಕು. ಕುದಿಸಿ ಆರಿಸಿದ ಶುದ್ಧ ನೀರನ್ನೇ ಕುಡಿಯಬೇಕು. ತೊಟ್ಟಿ, ಡ್ರಮ್‌ಗಳಲ್ಲಿ 2ರಿಂದ 3 ದಿನಗಳಿಗೊಮ್ಮೆ ನೀರು ಬದಲಾಯಿಸಿ ಸ್ವಚ್ಛಗೊಳಿಸಬೇಕು ಎನ್ನುತ್ತಾರೆ ವೈದ್ಯರು.

ವೈರಲ್‌ ಜ್ವರವೂ ಹೆಚ್ಚಳ
ಕರಾವಳಿಯಲ್ಲಿ ಒಂದೆಡೆ ಡೆಂಗ್ಯೂ ಹೆಚ್ಚಳ ಇದ್ದರೆ, ವೈರಲ್‌ ಜ್ವರದ ಆತಂಕವೂ ಇದೆ. ಕೆಲವು ದಿನಗಳಿಂದ ಬೆಳಗ್ಗೆ, ರಾತ್ರಿ ವೇಳೆ ಬಿಟ್ಟು ಬಿಟ್ಟು ಮಳೆಯಾಗುತ್ತಿದೆ. ಮೋಡ-ಬಿಸಿಲಿನ ಜತೆ ಸೆಕೆಯೂ ಇದೆ. ಗ್ರಾಮೀಣ ಭಾಗದಲ್ಲಿ ಬೆಳಗ್ಗೆ ತುಸು ಚಳಿ ಇದೆ. ಇಂತಹ ಹವಾಮಾನ ಏರಿಳಿತಗಳಿಂದಾಗಿ ವೈರಲ್‌ ಜ್ವರ ಪ್ರಕರಣಗಳು ಹೆಚ್ಚುತ್ತಿವೆ. ಕೆಮ್ಮು, ಜ್ವರ, ಗಂಟಲು ನೋವು, ತಲೆನೋವು ಮುಂತಾದ ಲಕ್ಷಣಗಳೊಂದಿಗೆ ವೈದ್ಯರ ಬಳಿ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ.

Advertisement

ಸಾರ್ವಜನಿಕರು ಕೈಜೋಡಿಸಿ
ಈ ವರ್ಷ ಹೆಚ್ಚು ಡೆಂಗ್ಯೂ ಪ್ರಕರಣ ಕಂಡುಬಂದಿದೆ. ಕರಾವಳಿಯಲ್ಲಿ ಈ ಬಾರಿಯ ಮಳೆಗಾಲದ ಸ್ಥಿತಿಗತಿ ಡೆಂಗ್ಯೂ ಹೆಚ್ಚಳಕ್ಕೆ ಪೂರಕವಾಗಿತ್ತು. ಕೆಲವು ದಿನಗಳಿಂದ ಮಳೆ ನಿಂತಿದ್ದು, ಪ್ರಕರಣ ಕಡಿಮೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಹತೋಟಿಗೆ ಬರುವ ವಿಶ್ವಾಸ ಇದೆ. ಡೆಂಗ್ಯೂ ಸಹಿತ ಸಾಂಕ್ರಾಮಿಕ ರೋಗ ತಡೆಗೆ ಆರೋಗ್ಯ ಇಲಾಖೆಗಳ ಜತೆ ಸಾರ್ವಜನಿಕರು ಕೈಜೋಡಿಸ ಬೇಕು.
– ಡಾ| ನವೀನ್‌ ಚಂದ್ರ ಕುಲಾಲ್‌, ಡಾ| ಪ್ರಶಾಂತ್‌ ಭಟ್‌
ಜಿಲ್ಲಾ ಆಶ್ರಿತ ರೋಗ ವಾಹಕ ನಿಯಂತ್ರಣ ಅಧಿಕಾರಿಗಳು, ದ.ಕ., ಉಡುಪಿ

-ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next