Advertisement

ಸಕಾಲ ವ್ಯಾಪ್ತಿಗೆ ನಮೂನೆ-3 ತರಲು ಶಿಫಾರಸು

04:05 PM Nov 26, 2019 | Suhan S |

ಮಂಡ್ಯ: ನಗರ ಮತ್ತು ಪುರಸಭೆ ವ್ಯಾಪ್ತಿಯಲ್ಲಿ ಬರುವ ವಾಣಿಜ್ಯ ಸಂಕೀರ್ಣ, ನಿವೇಶನ ಹಾಗೂ ಮನೆಗಳ ಆಸ್ತಿ ತೆರಿಗೆ ಪಾವತಿ ಬಳಿಕ ನೀಡಲಾಗುವ ನಮೂನೆ-3 ವಿತರಣಾ ವ್ಯವಸ್ಥೆಯನ್ನು ಸಕಾಲ ವ್ಯಾಪ್ತಿಗೆ ತರುವುದಕ್ಕೆ ಜಿಲ್ಲಾಡಳಿತ ನಿರ್ಧರಿಸಿದೆ.

Advertisement

ಪ್ರಸ್ತುತ ಆಸ್ತಿ ತೆರಿಗೆ ಪಾವತಿಸುವ ಕಟ್ಟಡಗಳ ಮಾಲೀಕರಿಗೆ ನಿಗದಿತ ಸಮಯದೊಳಗೆ ನಮೂನೆ-3 ಸಿಗದೆ ಪರದಾಡುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿಬರುತ್ತಿವೆ. ನಮೂನೆ-3 ಕೈ ಬರಹದಲ್ಲೂ ನೀಡ ಲಾಗುತ್ತಿದೆ ಎಂಬ ಆರೋಪಗಳೂ ಇವೆ. ಆ ಹಿನ್ನೆಲೆಯಲ್ಲಿನಮೂನೆ-3 ಅನ್ನು ಸಕಾಲ ವ್ಯಾಪ್ತಿಗೆ ತರುವುದಕ್ಕೆ ರಾಜ್ಯಸರ್ಕಾರಕ್ಕೆ ಶಿಫಾರಸು ಮಾಡಲು ಮುಂದಾಗಿದೆ.

ಕಚೇರಿಗೆ ಅಲೆದಾಟ: ಆಸ್ತಿ ತೆರಿಗೆ ಪಾವತಿಸಿದ ಕಟ್ಟಡಮಾಲೀಕರಿಗೆ ನಮೂನೆ-3 ಅನ್ನು ಕೊಡುವುದಕ್ಕೆ ಕನಿಷ್ಠ 3ರಿಂದ 6 ತಿಂಗಳು ಕಚೇರಿಗಳಿಗೆ ಅಲೆಸುತ್ತಿರುವುದು ಕಂಡು ಬಂದಿದೆ. ಕಟ್ಟಡಗಳು ಹಾಗೂ ವಾಣಿಜ್ಯ ಸಂಕೀರ್ಣಗಳ ನಿರ್ಮಾಣಕ್ಕೆ ನಿಗದಿತ ಸಮಯದಲ್ಲಿ ನಮೂನೆ-3 ಸಿಗದೆ ಎಷ್ಟೋ ಮಂದಿ ಪರವಾನಗಿ ಇಲ್ಲದೆ ಕಟ್ಟಡ ನಿರ್ಮಿಸುತ್ತಿರುವ ಪ್ರಕರಣಗಳೂ ಚಾಲ್ತಿಯಲ್ಲಿವೆ.ಇದರಿಂದ ಪರವಾನಗಿ ಇಲ್ಲದೆ ನಿರ್ಮಾಣಗೊಳ್ಳುತ್ತಿರುವ ಕಟ್ಟಡಗಳ ಸಂಖ್ಯೆ ನಗರದಲ್ಲಿ ಹೆಚ್ಚುತ್ತಿರುವುದರಿಂದ ಇದಕ್ಕೆ ಕಡಿವಾಣ ಹಾಕಲು ನಿರ್ಧರಿಸಿರುವ ಜಿಲ್ಲಾಡಳಿತ ನಮೂನೆ-3 ಕೊಡುವ ವ್ಯವಸ್ಥೆ ಸಕಾಲ ವ್ಯಾಪ್ತಿಯಡಿಗೆ ತರಲು ನಿರ್ಧರಿಸಿದೆ.

ಮೇಲ್ಮನವಿಗೆ ಅವಕಾಶ: ಆಸ್ತಿ ತೆರಿಗೆ ಪಾವತಿಸಿದ ಬಳಿಕ ನಮೂನೆ-3 ನೀಡುವುದಕ್ಕೆ ನಗರಸಭೆ ಮತ್ತು ಪುರಸಭೆಗಳ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸರ್ವೆಯರ್‌ಗಳು ಬಂದು ಸ್ಥಳ ಪರಿಶೀಲನೆ ನಡೆಸಿ ಆನ್‌ಲೈನ್‌ಗೆ ಅಪ್‌ಲೋಡ್‌ ಮಾಡುವುದಕ್ಕೂ ಕಾಲಮಿತಿ ನಿಗದಿಪಡಿಸಲಾಗುವುದು. ಒಂದು ವೇಳೆಲೋಪ ಕಂಡುಬಂದಲ್ಲಿ ಉಪ ವಿಭಾಗಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಿಕೊಡುವುದಕ್ಕೆ ಮುಂದಾಗಿದೆ.

ಸರಳೀಕರಣಕ್ಕೆ ಚಿಂತನೆ: ನಮೂನೆ-3 ಅನ್ನು ಈಗಿರುವುದಕ್ಕಿಂತಲೂ ಸರಳೀಕರಣ ಮಾಡುವುದಕ್ಕೂ ಚಿಂತನೆ ನಡೆಸಿರುವ ಜಿಲ್ಲಾಡಳಿತ, ಜನರಿಗೆ ಸುಲಭವಾಗಿ ಅರ್ಥವಾಗುವಂತೆ ಹಾಗೂ ಅರ್ಜಿ ಫಾರಂನ್ನು ಭರ್ತಿ ಮಾಡುವುದು, ಆನ್‌ಲೈನ್‌ಗೆ ಅಪ್‌ಲೋಡ್‌ ಮಾಡುವುದು, ಆನ್‌ಲೈನ್‌ನಲ್ಲೇ ನಮೂನೆ-3 ಪಡೆದುಕೊಳ್ಳುವ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವುದಕ್ಕೆ ಚಿಂತನೆ ನಡೆಸಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಆಸ್ತಿಗಳ ಆರ್‌ಟಿಸಿಗಳು ಸುಲಭವಾಗಿ ದೊರೆಯುವ ಮಾದರಿಯಲ್ಲೇ ನಮೂನೆ-3 ಅನ್ನೂ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ ನಿಗದಿತ ಅವಧಿಯೊಳಗೆ ಸುಲಭವಾಗಿ ಪಡೆದುಕೊಳ್ಳುವಂತಹ ವ್ಯವಸ್ಥೆ ಜಾರಿಗೆ ತಂದಲ್ಲಿ ಹಲವು ಗೊಂದಲ ನಿವಾರಣೆಯಾಗುವ ಜೊತೆಗೆ ಸಿವಿಲ್‌ ವ್ಯಾಜ್ಯಗಳು ಸೃಷ್ಟಿಯಾಗುವುದು ತಪ್ಪಿಸಬಹುದು ಎಂಬ ಉದ್ದೇಶ ಹೊಂದಿದೆ.

Advertisement

ಕೈ ಬರಹದಲ್ಲಿ ನೀಡಿಕೆಗೆ ಕಡಿವಾಣ: ಕೈ ಬರಹಗಳಲ್ಲಿ ನಮೂನೆ-3 ನೀಡುತ್ತಿರುವುದರಿಂದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಸರ್ಕಾರಿ ಆಸ್ತಿಗಳನ್ನು ಅಕ್ರಮವಾಗಿ ಅತಿಕ್ರಮಿಸಿಕೊಂಡು ನೋಂದಣಿ ಮಾಡಿಸುತ್ತಿರುವುದು, ಕೈ ಬರಹದಲ್ಲಿರುವುದನ್ನು ತಿದ್ದುವುದು ಕಂಡುಬಂದಿದೆ. ಇದರಿಂದ ಸಿವಿಲ್‌ ವ್ಯಾಜ್ಯಗಳು ಉದ್ಭವವಾಗುತ್ತಿದೆ.ಇದನ್ನು ತಪ್ಪಿಸುವ ಉದ್ದೇಶದಿಂದ ನಮೂನೆ-3 ಅನ್ನು ಅಧಿಕೃತವಾಗಿ ತಂತ್ರಾಂಶದ ಮೂಲಕ ಪಡೆದು ಸಕ್ಷಮ ಅಧಿಕಾರಿಯಿಂದ ದೃಢೀಕರಿಸಿದ ಫಾರಂ-3 ಪಡೆದು ನಂತರ ಆಸ್ತಿಯನ್ನು ನೋಂದಣಿ ಮಾಡುವಂತೆ ಸಂಬಂಧಿಸಿದ ಉಪ ನೋಂದಣಾಧಿಕಾರಿಗಳ ಕಚೇರಿಗೆ ಸೂಚನೆ ನೀಡುವಂತೆ ಪೌರಾಡಳಿತ ನಿರ್ದೇಶನಾಲಯಕ್ಕೆ ಜಿಲ್ಲಾಡಳಿತ ಪತ್ರ ಬರೆದಿದೆ.

ಜಾಗೃತಿ ಫ‌ಲಕಕ್ಕೆ ಸೂಚನೆ: ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಕಚೇರಿಗಳಲ್ಲಿ ಆಸ್ತಿ ತೆರಿಗೆ ಪಾವತಿಸಿದ ಕಟ್ಟಡ ಮಾಲೀಕರು ನಮೂನೆ-3 ಪಡೆಯುವ ಬಗ್ಗೆ ಜಾಗೃತಿ ಫ‌ಲಕಗಳನ್ನು ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಎಷ್ಟೋ ಜನರು ಆಸ್ತಿ ತೆರಿಗೆ ಪಾವತಿಸಿ ನಮೂನೆ-3 ಅನ್ನು ಪಡೆಯದೆ ರಸೀದಿ ಪಡೆದುಕೊಂಡು ಹೋಗುತ್ತಿದ್ದಾರೆ. ಕಟ್ಟಡ ಮಾಲೀಕರು ತಮ್ಮ ಆಸ್ತಿಯ ಎದುರು ನಿಂತು ಫೋಟೋ ತೆಗೆಸಿಕೊಂಡು ಬಳಿಕ ಆಸ್ತಿಯ ವಿವರಗಳನ್ನು ಅರ್ಜಿಯಲ್ಲಿ ನಮೂದಿಸಿ ಅಪ್‌ಲೋಡ್‌ ಮಾಡುವ ವಿಧಾನವೇ ಗೊತ್ತಿಲ್ಲದೆ ಪರಿತಪಿಸುತ್ತಿದ್ದಾರೆ. ಕೆಲವರು ನಮೂನೆ-3 ಪಡೆಯಲು ತಿಂಗಳಾನುಗಟ್ಟಲೆ ಅಲೆದಾಡುತ್ತಿರುವ ವಿಷಯ ಜಿಲ್ಲಾಧಿಕಾರಿಯವರ ಗಮನಕ್ಕೆ ಬಂದಿರುವುದರಿಂದ ನಗರಸಭೆ-ಪುರಸಭೆ, ಪಟ್ಟಣ ಪಂಚಾಯಿತಿಯಲ್ಲಿರುವ ಅವ್ಯವಸ್ಥೆ ಸರಿಪಡಿಸುವುದಕ್ಕೆ ಕಟ್ಟುನಿಟ್ಟಿನ ಕ್ರಮ ಜರುಗಿಸುವುದಕ್ಕೆ ಕಾರ್ಯೋನ್ಮುಖವಾಗಿದೆ.

 

-ಮಂಡ್ಯ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next