Advertisement

ಗುಂಡಿನ ಏಟು ತಿಂದರೂ ಎದೆಗುಂದದ ಧೀರ: ಇದು ಹಾಕಿ ಮಾಂತ್ರಿಕ ಸಂದೀಪ್ ಸಿಂಗ್ ಇನ್ ಸೈಡ್ ಸ್ಟೋರಿ

04:30 PM Jul 24, 2020 | keerthan |

ಅಚಲ ಗುರಿ, ಸಾಧಿಸುವ ತವಕ, ಪ್ರತಿ ದಿನ ಕಾಡುವ ಕನಸು, ಕಠಿಣ ಪರಿಶ್ರಮ ಇದ್ದರೆ ಅಸಾಧ್ಯವಾದುದನ್ನು ಸಾಧ್ಯವಾಗಿಸಬಹುದು. ಬದುಕಿನಲ್ಲಿ ಎದುರಾಗುವ ಎಡರುತೊಡರುಗಳನ್ನು ಹಿಮ್ಮೆಟ್ಟಿಸಿ ಜಯದ ಅಂತಿಮ ರೇಖೆಯನ್ನು ತಲುಪುವವರನ್ನು ನಾವು ಸಾಧಕರು ಎನ್ನುತ್ತೇವೆ. ಕಠಿಣ ಪರಿಸ್ಥಿತಿಯಲ್ಲೂ ಸಾಧಿಸಿದ, ಸಾಧಿಸಿದರೆ ಸಬಳ ನುಂಗಬಹುದು ಎಂಬ ಮಾತನ್ನು ನಿಜವಾಗಿಸಿದ ತಾರೆ, ಭಾರತ ಸದಾ ಹೆಮ್ಮೆ ಪಡಬೇಕಾದ ಹಾಕಿ ಮಾಂತ್ರಿಕ ಸಂದೀಪ್ ಸಿಂಗ್.

Advertisement

ಇದು ಸಂದೀಪ್ ಸಿಂಗ್ ಎಂಬ ಕುರುಕ್ಷೇತ್ರದ ಹುಟ್ಟ ಹೋರಾಟಗಾರನ ಕಥೆ. ಗುಂಡಿನ ಏಟಿಗೂ ಜಗ್ಗದ ಕ್ರೀಡಾ ಲೋಕದ ಮಿಂಚು ಹರಿಸಿದ ಆತ್ಮವಿಶ್ವಾಸವೇ ಮೂರ್ತಿವೆತ್ತ ಕಥೆ. ತಾನು ಬಲಹೀನ, ತನ್ನಿಂದಾಗದು ಎಂದು ಸುಮ್ಮನೆ ಕುಳಿತವರಿಗೆ ಚಳಿ ಬಿಡಿಸುವ ಕಥೆ.

1986ರ ಫೆಬ್ರವರಿ 27ರಂದು ಜನಿಸಿದ ಸಂದೀಪ್ ಸಿಂಗ್ ಹುಟ್ಟೂರು ಹರ್ಯಾಣದ ಕುರುಕ್ಷೇತ್ರ ಪಟ್ಟಣದ ಶಹಾಬಾದ್. ತಂದೆ ಗುರುಚರಣ್ ಸಿಂಗ್ ಸೈನಿ, ತಾಯಿ ದಲ್ಜೀತ್ ಕೌರ್ ಸೈನಿ. ಸಹೋದರ ಬಿಕ್ರಮ್ ಜೀತ್ ಸಿಂಗ್. ಇವರೂ ಹಾಕಿ ಆಟಗಾರ.

ಸಹೋದರ ಬಿಕ್ರಮ್ ಹಾಕಿ ಆಟಗಾರನಾಗಿದ್ದ ಕಾರಣ, ಸಂದೀಪ್ ಗೆ ಎಳವೆಯಿಂದಲೇ ಹಾಕಿ ನಂಟು ಬೆಳೆದಿತ್ತು. ಸಹೋದರನಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಗದ ಕಾರಣ ತಾನಾದರೂ ರಾಷ್ಟ್ರೀಯ ತಂಡದಲ್ಲಿ ಆಡಬೇಕು, ಟೀಂ ಇಂಡಿಯಾ ಜೆರ್ಸಿ ತೊಡಬೇಕು, ಮನೆಯ ಬಡತನವನ್ನು ದೂರ ಮಾಡಬೇಕು ಎಂದು ಸಂದೀಪ್ ಸದಾ ಹಂಬಲಿಸುತ್ತಿದ್ದ.

Advertisement

2004ರ ಸುಲ್ತಾನ್ ಅಜ್ಲಾನ್ ಶಾ ಕಪ್ ಸರಣಿಗಾಗಿ ಭಾರತೀಯ ತಂಡಕ್ಕೆ ಸಂದೀಪ್ ಮೊದಲ ಬಾರಿ ಆಯ್ಕೆಯಾದ. ಆಗ ಸಂದೀಪ್ ಇನ್ನೂ 17 ವರ್ಷದ ಬಾಲಕ. ಆದರೆ ಆ ಪ್ರತಿಷ್ಠಿತ ಕೂಟದಲ್ಲಿ ಭಾರತ ನೀರಸ ಪ್ರದರ್ಶನ ನೀಡಿತು. ಕೊನೆಯ ಸ್ಥಾನಿಯಾಗಿ ಕೂಟವನ್ನು ಭಾರತ ಮುಗಿಸಿತ್ತು. ನಂತರ ಅದೇ ವರ್ಷ ನಡೆದ ಏಷ್ಯಾ ಕಪ್ ನಲ್ಲಿ ಭಾರತ ವಿಜಯಿಯಾಗಿತ್ತು.

ಆದರೆ ಮುಂದಿನ ಎರಡು ವರ್ಷ ಒಬ್ಬ ಯುವ ಹಾಕಿ ಆಟಗಾರ ಏನೆಲ್ಲಾ ಬಯಸಿದ್ದ ಅದೆಲ್ಲವನ್ನೂ ಈಡೇರಿಸಿದ್ದ. ಹಾಕಿ ಅಂಗಳದಲ್ಲಿ ಸಂದೀಪ್ ನಷ್ಟು ವೇಗವಾಗಿ, ನಿಖರವಾಗಿ ಡ್ರ್ಯಾಗ್ ಫ್ಲಿಕ್ ಮಾಡುವವರು ಇನ್ನೊಬ್ಬರಿಲ್ಲ ಎನ್ನುವಷ್ಟರ ಮಟ್ಟಿಗೆ ಸಂದೀಪ್ ಬೆಳೆದಿದ್ದರು. ಒಂದರ ಮೇಲೊಂದು ಗೋಲು ಬಾರಿಸುತ್ತಾ ಕೇವಲ ಎರಡೇ ವರ್ಷದಲ್ಲಿ ಭಾರತೀಯ ಹಾಕಿಯಲ್ಲಿ ಸೂಪರ್ ಸ್ಟಾರ್ ಆಗಿ ಬೆಳೆದಿದ್ದ ಸಂದೀಪ್. ಆದರೆ ಯಶಸ್ಸಿನ ಉತ್ತುಂಗದಲ್ಲಿದ್ದ ಸಂದೀಪ್ ನ ಜೊತೆ ವಿಧಿ ಬೇರೆಯದೇ ಆಟವನ್ನು ಆಡಿತ್ತು.

ಅಂದು 2006ರ ಆಗಸ್ಟ್ 21. ನ್ಯಾಶನಲ್ ಕ್ಯಾಂಪ್ ಸೇರಿಕೊಳ್ಳಲು ಶತಾಬ್ದಿ ಎಕ್ಸ್ ಪ್ರೆಸ್ ರೈಲಿನಲ್ಲಿ ಹೋಗುತ್ತಿದ್ದಾಗ ಭದ್ರತಾ ಸಿಬ್ಬಂದಿಯ ಕೈಯಲ್ಲಿದ್ದ ಬಂದೂಕಿನಿಂದ ಅಕಸ್ಮಾತ್ ಆಗಿ ಗುಂಡು ಹಾರಿತ್ತು. ಆ ಗುಂಡು ಬಂದು ಹೊಕ್ಕಿದ್ದು ಎರಡು ದಿನದಲ್ಲಿ ಆಫ್ರಿಕಾದಲ್ಲಿ ನಡೆಯುವ ವಿಶ್ವಕಪ್ ಗೆ ಹಾರಬೇಕಿದ್ದ ಸಂದೀಪ್ ಸಿಂಗ್ ದೇಹಕ್ಕೆ!

ವಿಶ್ವಕಪ್ ನಲ್ಲಿ ಚಿನ್ನ ಗೆಲ್ಲುವ ಕನಸು ಕಣ್ಣುಗಳಿಂದ ಹೊರಟಿದ್ದ ಸಂದೀಪ್ ಗುಂಡೇಟು ತಿಂದು ಮಲಗಿದ್ದ. ಸೊಂಟದಿಂದ ಕೆಳಕ್ಕೆ ಬಲವಿಲ್ಲ. ಭಾರತದ ಸ್ಟಾರ್ ಆಟಗಾರನ ಬದುಕು ದುರಂತದಲ್ಲಿ ಅಂತ್ಯವಾಯಿತು ಎಂದು ಎಲ್ಲರೂ ಮರುಗಿದ್ದರು. ಇನ್ನೂ ಹಾಕಿ ಆಡುವುದು ಬಿಡಿ, ಈತ ಸ್ವತಂತ್ರವಾಗಿ ನಡೆಯಲೂ ಸಾಧ್ಯವಿಲ್ಲ ಎಂದು ವೈದ್ಯರು ಶರಾ ಬರೆದಿದ್ದರು!

ಹಾಕಿ ಅಂಗಳದಲ್ಲಿ ಮಿಂಚಿನ ವೇಗದಲ್ಲಿ ಡ್ರ್ಯಾಗ್ ಫ್ಲಿಕ್ ಬಾರಿಸುತ್ತಿದ್ದ ಸಂದೀಪ್ ಸಿಂಗ್ ವ್ಹೀಲ್ ಚೇರ್ ನಲ್ಲಿ ಇರಬೇಕಾದ ಪರಿಸ್ಥಿತಿ ಬಂತು. ಚಿಕಿತ್ಸೆಗಾಗಿ ನೀರಿನಂತೆ ಹಣ ಖರ್ಚಾಗಿತ್ತು. ಆಗಷ್ಟೇ ಸುಧಾರಿಸುತ್ತಿದ್ದ ಮನೆಯ ಪರಿಸ್ಥಿತಿ ಮತ್ತೆ ನೆಲಕಚ್ಚಿತು. ಇದ್ದ ಬಾಡಿಗೆ ಮನೆಯಿಂದ ಹೊರಹಾಕಲಾಯಿತು. ಸಂದೀಪ್ ಮಾನಸಿಕವಾಗಿಯೂ ಕುಸಿದಿದ್ದರು. ಆಗ ನೆರವಿಗೆ ನಿಂತವರು ಸಹೋದರ ಬಿಕ್ರಮ್ ಜೀತ್. ತಮ್ಮನ ಜೊತೆಯಿದ್ದು, ಮಾನಸಿಕ ಸ್ಥೈರ್ಯ ತುಂಬಿದರು.

ಬಲವಿಲ್ಲದೆ ಹಾಸಿಗೆಯಲ್ಲಿ ಮಲಗಿದ್ದ ಸಂದೀಪ್ ತನ್ನ ಹಾಕಿ ಸ್ಟಿಕ್ ಗಳನ್ನು ತನ್ನ ಕಣ್ಣೆದುರು ಇರಿಸಿದ್ದರು. ಅದನ್ನು ನೋಡುವಾಗ ನಾನು ಮತ್ತೆ ಎದ್ದು ನಿಲ್ಲಬೇಕು, ಮತ್ತೆ ಭಾರತಕ್ಕೆ ಆಡಬೇಕು ಎಂಬ ಛಲ ಮೂಡುತ್ತಿತ್ತು ಎನ್ನತ್ತಾರೆ ಸಂದೀಪ್. ಹಾಕಿ ಫೆಡರೇಶನ್ ನೆರವಿನಿಂದ ಹೊಲ್ಯಾಂಡ್ ನಲ್ಲಿ ಚಿಕಿತ್ಸೆ ಪಡೆದ ಸಂದೀಪ್ ಸಿಂಗ್ ಮತ್ತೆ ಎದ್ದು ನಿಲ್ಲುವಂತಾದರು. ಓಡುವಂತಾದರು. ಭಾರತಕ್ಕೆ ಮರಳಿದ ಸಂದೀಪ್ ಸಹೋದರನಲ್ಲಿ ಹೇಳಿದ ಮೊದಲ ಮಾತು “ನಾನು ಭಾರತಕ್ಕೆ ಮತ್ತೆ ಆಡಬೇಕು”. ಯಾಕೆಂದರೆ ಆತ ಕುರುಕ್ಷೇತ್ರದ ಹುಟ್ಟು ಹೋರಾಟಗಾರ!

ಸಿಂಹ ಎಂದಿಗೂ ಸಿಂಹವೇ, ಒಮ್ಮೆ ಚಾಂಪಿಯನ್ ಆದರೆ ಆತ ಎಂದಿಗೂ ಚಾಂಪಿಯನ್ ಎಂಬ ಮಾತಿದೆ. ಸಂದೀಪ್ ಮತ್ತೆ ಹಾಕಿ ಸ್ಟಿಕ್ ಕೈಗೆತ್ತಿಕೊಂಡರು. ಮತ್ತೆ ಅಭ್ಯಾಸ ನಡೆಸಿದರು. ಸಹೋದರನೊಂದಿಗೆ ಸೇರಿ ವಲಯ ಮಟ್ಟದ ಕೂಟದಲ್ಲಿ ಆಡಿದರು. ಸಂದೀಪ್ ತಂಡ ಕೂಟದಲ್ಲಿ ಜಯಿಸಿತ್ತು. ಡ್ರ್ಯಾಗ್ ಫ್ಲಿಕರ್ ಮತ್ತೆ ತನ್ನ ಕರಾಮತ್ತು ತೋರಿಸಿದ್ದ. ಸಂದೀಪ್ ಗೆ ಮತ್ತೆ ರಾಷ್ಟ್ರೀಯ ತಂಡದ ಕರೆ ಬಂದಿತ್ತು.

ಗುಂಡೇಟು ತಿಂದು ಸೊಂಟದ ಕೆಳಗೆ ಶಕ್ತಿ ಕಳೆದುಕೊಂಡಿದ್ದ ಸಂದೀಪ್ ಕೇವಲ ಎರಡೇ ವರ್ಷದಲ್ಲಿ ಟೀಂ ಇಂಡಿಯಾ ಭಾಗವಾಗಿದ್ದ. 2008ರ ಸುಲ್ತಾನ್ ಅಜ್ಲಾನ್ ಶಾ ಕೂಟದಲ್ಲಿ ರಾಷ್ಟ್ರೀಯ ತಂಡದಲ್ಲಿ ಆಡಿದ. ಗಾಯಗೊಂಡಿರುವುದು ದೇಹ ಮಾತ್ರ, ತನ್ನ ಕೌಶಲವಲ್ಲ ಎಂದು ಜಗತ್ತಿಗೆ ತೋರಸಿದ. ಕೂಟದಲ್ಲಿ ಸಂದೀಪ್ ಎಂಟು ಗೋಲು ಬಾರಿಸಿದ್ದ. 2009ರಲ್ಲಿ ಟೀಂ ಇಂಡಿಯಾ ನಾಯಕನಾದ. 2009ರ ಸುಲ್ತಾನ್ ಅಜ್ಲಾನ್ ಶಾ ಕೂಟದಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿದ ಸಂದೀಪ್ ಭಾರತವನ್ನು 13 ವರ್ಷಗಳ ನಂತರ ಕಪ್ ಗೆಲ್ಲುವಂತೆ ಮಾಡಿದ್ದ. ಅತೀ ಹೆಚ್ಚು ಗೋಲು ಬಾರಿಸಿದ ಸಂದೀಪ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ. ಲಂಡನ್ ಒಲಿಂಪಿಕ್ಸ್ ಅರ್ಹತಾ ಕೂಟದಲ್ಲಿ ಅತೀ ಹೆಚ್ಚು ಗೋಲು ಬಾರಿಸಿದ.

ಗಂಟೆಗೆ 145 ಕಿ.ಮೀ ವೇಗದಲ್ಲಿ ಸಂದೀಪ್ ಡ್ರ್ಯಾಗ್ ಫ್ಲಿಕ್ ಬಾರಿಸುತ್ತದ್ದ ಸಂದೀಪ್ ಸಿಂಗ್ ಗೆ ಫ್ಲಿಕರ್ ಸಿಂಗ್ ಎಂಬ ಬಿರುದು ಲಭಿಸಿತ್ತು. 2010ರಲ್ಲಿ ಅರ್ಜುನ ಪ್ರಶಸ್ತಿ ಪಡೆದ ಸಂದೀಪ್ 2012ರ ನಂತರ ನಿವೃತ್ತರಾದರು. ಹರ್ಯಾಣ ಪೊಲೀಸ್ ಇಲಾಖೆಯಲ್ಲಿ ಡಿಎಸ್ ಪಿ ಹುದ್ದೆಯಲ್ಲಿದ್ದ ಸಂದೀಪ್ ಸದ್ಯ ಪೆಹುವಾ ಕ್ಷೇತ್ರದ ಶಾಸಕರಾಗಿದ್ದಾರೆ.

ಸಂದೀಪ್ ಸಿಂಗ್ ಹರ್ಜಿಂದರ್ ಕೌರ್ ಕೂಡಾ ಹಾಕಿ ಆಟಗಾರ್ತಿ. ಆದರೆ ವಿವಾಹದ ನಂತರ ಆಟ ತ್ಯಜಿಸಿದ್ದಾರೆ. ಸಂದೀಪ್ ಸಿಂಗ್ ಜೀವನದ ಕುರಿತಾಗಿ ಬಾಲಿವುಡ್ ನಲ್ಲಿ ಚಿತ್ರವೊಂದು ತೆರೆಗೆ ಬಂದಿದೆ. ದಿಲ್ಜೀತ್ ಸಿಂಗ್ ಅವರು ‘ಸೂರ್ಮ’ ಚಿತ್ರದಲ್ಲಿ ಸಂದೀಪ್ ಸಿಂಗ್ ಆಗಿ ತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಚಿತ್ರದಲ್ಲಿ ನಿಜಜೀವನಕ್ಕಿಂತ ಹೊರತಾಗಿ ಬಹಳಷ್ಟನ್ನು ಸೇರಿಸಿದ್ದಾರೆ.

ಹಿರಿದಾದುದನ್ನು ಸಾಧಿಸಲು ಹೊರಟಾಗ ಅನೇಕ ಕಷ್ಟಗಳನ್ನು ನಮ್ಮನ್ನು ಹಿಂದೆ ಸರಿಯುವಂತೆ ಮಾಡುತ್ತದೆ. ಆದರೆ ಅದಕ್ಕೆ ಯಾವುದಕ್ಕೂ ಜಗ್ಗದೆ, ನಮ್ಮ ಲಕ್ಷ್ಯ ಕೇವಲ ಅಂತಿಮ ಗುರಿಯ ಕಡೆಗೆ ಇದ್ದರೆ ನಾವು ಎಂಥಹ ಕಠಿಣ ಗುರಿಯನ್ನು ಸಾಧಿಸಬಹುದು ಎನ್ನುವುದಕ್ಕೆ ಸಂದೀಪ್ ಸಿಂಗ್ ಉತ್ತಮ ಉದಾಹರಣೆ.

ಕೀರ್ತನ್ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next