Advertisement

ಯೂನಿಟ್‌ಗೆ 2.50 ರೂ.ನಂತೆ ವಿದ್ಯುತ್‌ ನೀಡಿದರೆ ಖರೀದಿಸಲು ಸಿದ್ಧ

07:44 AM Nov 29, 2017 | Team Udayavani |

ಬೆಂಗಳೂರು: “ಕೇಂದ್ರ ಸರ್ಕಾರ ಪ್ರತಿ ಯೂನಿಟ್‌ ವಿದ್ಯುತ್ತನ್ನು 2.50 ರೂ.ನಂತೆ ನೀಡಿ, ಅದಕ್ಕೆ ಅಗತ್ಯವಿರುವ ಕಾರಿಡಾರ್‌ ಸೌಲಭ್ಯ ಒದಗಿಸಿದರೆ ರಾಜ್ಯಕ್ಕೆ ಬೇಕಾದ ಸಂಪೂರ್ಣ ವಿದ್ಯುತ್ತನ್ನು ಖರೀದಿಸಲು ಸಿದ್ಧ’ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

Advertisement

ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಒಂದು ವೇಳೆ ತಾವು ಹೇಳಿರುವಂತೆ ಕೇಂದ್ರ ಸರ್ಕಾರ ಯೂನಿಟ್‌ಗೆ 2.50 ರೂ.ನಂತೆ ಕರ್ನಾಟಕ ರಾಜ್ಯಕ್ಕೆ ಬೇರೆ ಮೂಲಗಳಿಂದ ಬರುತ್ತಿರುವ ವಿದ್ಯುತ್ತಿಗೆ ನೀಡುವ ದರಕ್ಕಿಂತ ಕಡಿಮೆ ದರದಲ್ಲಿ ಕೇಂದ್ರ ಸರ್ಕಾರ ವಿದ್ಯುತ್‌ ಸರಬರಾಜು ಮಾಡಲು ಸಿದ್ಧವಿದ್ದರೆ ಮತ್ತು ಅದಕ್ಕೆ ಅಗತ್ಯ ಕಾರಿಡಾರ್‌ ಸೌಲಭ್ಯ ಒದಗಿಸಿದರೆ ಕೇಂದ್ರ ಸರ್ಕಾರದಿಂದಲೇ ಸಂಪೂರ್ಣ ವಿದ್ಯುತ್‌ ಖರೀದಿಸಲು ಸರ್ಕಾರ ಬದ್ಧವಿದೆ. ಈ ಬಗ್ಗೆ ಕೇಂದ್ರ ಸಚಿವರು ಮತ್ತು ಅಧಿಕಾರಿಗಳನ್ನು ಭೇಟಿ ಮಾಡಲು ದಿನಾಂಕ ನಿಗದಿಪಡಿಸಿ ಎಂದು ಕೋರಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನನ್ನ ಕಾಲಾವಧಿಯಲ್ಲಿ ವಿದ್ಯುತ್‌ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆಪಾದಿಸಿದ್ದೀರಿ. ಕೇಂದ್ರ ಸರ್ಕಾರ ಒಂದು ಯೂನಿಟ್‌ಗೆ 2.50 ರೂ.ನಂತೆ ಸರಬರಾಜು ಮಾಡಲು ಸಿದ್ಧವಿದ್ದರೂ ಅದನ್ನು ಪರಿಗಣಿಸದೆ ಜೆಎಸ್‌ಡಬ್ಲ್ಯು ಮತ್ತು ಯುಪಿಸಿಎಲ್‌ನಿಂದ 4 ರೂ.ಗೂ ಹೆಚ್ಚು ದರದಲ್ಲಿ ವಿದ್ಯುತ್‌ ಖರೀದಿಸಲಾಗುತ್ತಿದೆ ಎಂದು ಆರೋಪ ಮಾಡಿದ್ದೀರಿ. ನನ್ನ ಅವಧಿಯಲ್ಲಿ ಕೇಂದ್ರ ಸರ್ಕಾರ ಯೂನಿಟ್‌ಗೆ 4 ರೂ.ಗಿಂತ ಹೆಚ್ಚಿನ ದರದ ಪ್ರಸ್ತಾವನೆ ಮಾಡಿದೆಯೇ ಹೊರತು 2.5 ರೂ.ನಂತೆ ವಿದ್ಯುತ್‌ ಸರಬರಾಜು ಮಾಡುವ ಪ್ರಸ್ತಾವನೆಯನ್ನು ರಾಜ್ಯಕ್ಕೆ ತಿಳಿಸಿಲ್ಲ ಎಂದು ಪತ್ರದಲ್ಲಿ ಸಚಿವರು ಹೇಳಿದ್ದಾರೆ.

ಮುಖ್ಯಮಂತ್ರಿಯಂತಹ ಜವಾಬ್ದಾರಿ ಸ್ಥಾನದಲ್ಲಿದ್ದ ನೀವು ಈ ರೀತಿಯ ಆರೋಪ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ಪತ್ರದಲ್ಲಿ ಯಡಿಯೂರಪ್ಪ ಅವರಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next