Advertisement

ಶಾಲಾ ನೂತನ ಕಟ್ಟಡ ಉದ್ಘಾಟನೆಗೆ ಸಜ್ಜು

11:16 AM Dec 10, 2022 | Team Udayavani |

ಕಡಬ: ಹಳೆಯ ಕಟ್ಟಡ ಶಿಥಿಲಗೊಂಡು ಹೊಸ ಕಟ್ಟಡ ಇಲ್ಲದೇ ಅತಂತ್ರ ಸ್ಥಿತಿ ಅನುಭವಿಸುತ್ತಿದ್ದ ಕೋಡಿಂಬಾಳ ಗ್ರಾಮದ ಮೂರಾಜೆ ಕೊಪ್ಪ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ 21.20 ಲಕ್ಷ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣಗೊಂಡಿದ್ದು, ಉದ್ಘಾಟನೆಗೆ ಸಜ್ಜಾಗಿದೆ.

Advertisement

ಕಟ್ಟಡ ಇಲ್ಲದೇ ಮೂರಾಜೆ ಕೊಪ್ಪ ಶಾಲೆ ಅತಂತ್ರ ಸ್ಥಿತಿಯಲ್ಲಿರುವ ಕುರಿತು ಉದಯವಾಣಿ ಸುದಿನ ಹಲವು ಬಾರಿ ಸಚಿತ್ರ ವರದಿಗಳನ್ನು ಪ್ರಕಟಿಸಿ ಜನಪ್ರತಿನಿಧಿಗಳ, ಇಲಾಖಾಧಿಕಾರಿಗಳ ಗಮನ ಸೆಳೆದಿತ್ತು. ಇಲಾಖಾಧಿಕಾರಿಗಳ ಮನವಿಯಂತೆ 2 ವರ್ಷಗಳ ಹಿಂದೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕೆರೆಕೊಡಿ ಹಳ್ಳಿ ಸ. ಕಿ.ಪ್ರಾ. ಶಾಲೆಗೆ ಮಂಜೂರಾಗಿದ್ದ ಅನುದಾನವನ್ನು ಬದಲಾಯಿಸಿ ಮೂರಾಜೆ ಕೊಪ್ಪ ಶಾಲೆಗೆ ನೀಡುವ ಮೂಲಕ ನೂತನ ಕಟ್ಟಡ ನಿರ್ಮಾಣದ ಕನಸು ನನಸಾಗಿದೆ.

ಒಟ್ಟು 41.20 ಲಕ್ಷ ರೂ. ಅನುದಾನ

ಶಾಲಾ ಕಟ್ಟಡ ಶಿಥಿಲಗೊಂಡ ಹಿನ್ನೆಲೆ ಹಲವು ವರ್ಷಗಳಿಂದ ಇಲ್ಲಿನ ವಿದ್ಯಾರ್ಥಿ ಗಳಿಗೆ ಸ್ಥಳೀಯ ಭಜನ ಮಂದಿರದಲ್ಲಿ ಪಾಠ ಮಾಡಲಾಗುತ್ತಿತ್ತು. ಜಾಗದ ಸಮಸ್ಯೆ ಯಿಂದಾಗಿ ಹೊಸ ಕಟ್ಟಡ ನಿರ್ಮಾಣಕ್ಕೆ ಅನುದಾನ ದೊರೆಯದೆ ಸಮಸ್ಯೆ ಎದುರಾಗಿತ್ತು. ಸ್ಥಳೀಯರು, ಇಲಾಖಾಧಿಕಾರಿಗಳ ನಿರಂತರ ಪ್ರಯತ್ನದಿಂದ ಕಂದಾಯ ಇಲಾಖೆಯು 26 ಸೆಂಟ್ಸ್‌ ಜಾಗವನ್ನು ಶಾಲೆಯ ಹೆಸರಿಗೆ ಪಹಣಿ ಮಾಡಿಕೊಟ್ಟಿತ್ತು.

ಬಳಿಕ ಸರಕಾರದಿಂದ 2 ತರಗತಿ ಕೊಠಡಿಗಳ ನೂತನ ಕಟ್ಟಡ ನಿರ್ಮಾಣಕ್ಕೆ 21.20 ಲಕ್ಷ ರೂ., ತಡೆ ಗೋಡೆ ರಚನೆಗೆ 5 ಲಕ್ಷ ರೂ., ಅಡುಗೆ ಕೋಣೆ ಮೇಲ್ಛಾವಣಿ ದುರಸ್ತಿಗೆ 2 ಲಕ್ಷ ರೂ., ಹೆಚ್ಚುವರಿಯಾಗಿ ಇನ್ನೊಂದು ತರಗತಿ ಕೊಠಡಿಗೆ 13 ಲಕ್ಷ ರೂ. ಅನು ದಾನ ಲಭಿಸಿತ್ತು. ಆ ಪೈಕಿ 2 ತರಗತಿ ಕೊಠಡಿ, ತಡೆಗೋಡೆ ನಿರ್ಮಾಣ ಪೂರ್ಣ ಗೊಂಡಿದೆ. ಅಡುಗೆ ಕೋಣೆ ಮೇಲ್ಛಾವಣಿ ದುರಸ್ತಿ, ಹೆಚ್ಚುವರಿ ಕೊಠಡಿ ನಿರ್ಮಾಣ ಕಾಮಗಾರಿ ಶೀಘ್ರ ಆರಂಭಗೊಳ್ಳಲಿದೆ.

Advertisement

ಇಂದು ಉದ್ಘಾಟನೆ:

ನೂತನ ಕಟ್ಟಡವನ್ನು ಸಚಿವ ಎಸ್‌. ಅಂಗಾರ ಅವರು ಡಿ. 10 ರಂದು ಅಪರಾಹ್ನ 3.30ಗಂಟೆಗೆ ಉದ್ಘಾಟಿಸಲಿದ್ದು, ಜನಪ್ರತಿನಿಧಿಗಳು, ಇಲಾಖಾಧಿಕಾರಿಗಳು ಭಾಗವಹಿಸಲಿದ್ದಾರೆ. ಕಟ್ಟಡದ ಗೋಡೆಯನ್ನು ಮಕ್ಕಳ ಕಲಿಕಾ ಆಸಕ್ತಿಯನ್ನು ಹೆಚ್ಚಿಸುವ ರೀತಿಯಲ್ಲಿ ಸುಂದರ ವರ್ಲಿ ಚಿತ್ತಾರಗಳು, ಪ್ರಾಣಿ ಪಕ್ಷಿಗಳ ಚಿತ್ರ, ಮಾಹಿತಿ ಫಲಕಗಳಿಂದ ಅಲಂಕರಿಸಲಾಗಿದೆ ಎಂದು ಮುಖ್ಯಶಿಕ್ಷಕ ಆನಂದಮೂರ್ತಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next