Advertisement

ಲೋಕಸಭೆ ಚುನಾವಣೆಗೆ ತಯಾರಾಗಿ

01:44 PM Jun 13, 2018 | |

ಮೈಸೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿ ಸರ್ಕಾರವನ್ನು ಕಿತ್ತೂಗೆಯಲು ಕಾಂಗ್ರೆಸ್ಸಿಗರು ಈಗಿನಿಂದಲೇ ತಯಾರಾಗಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.

Advertisement

ನಗರದಲ್ಲಿ ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಏರ್ಪಡಿಸಿದ್ದ ವರುಣಾ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಅವರು, ಸ್ವಾತಂತ್ರಾ ನಂತರ ಉಪ್ಪಾರ ಸಮುದಾಯವನ್ನು ಮೊದಲ ಬಾರಿಗೆ ಮಂತ್ರಿ ಮಾಡಿದ್ದೇವೆ. ಬಿಜೆಪಿಯವರ ಅಪಪ್ರಚಾರ ಹೆಚ್ಚು ದಿನ ನಡೆಯುವುದಿಲ್ಲ. ದೇಶದಲ್ಲಿ ಮೋದಿ ಅಲೆ ಮಾಯವಾಗಿದೆ.

ದೇಶದ ಜನತೆ ಬದಲಾವಣೆ ಬಯಸಿದ್ದಾರೆ. ಇತ್ತೀಚಿನ ವಿಧಾನಸಭೆ ಮತ್ತು ಲೋಕಸಭೆ ಉಪ ಚುನಾವಣೆಗಳಲ್ಲಿ ವಿರೋಧ ಪಕ್ಷಗಳು ಗೆಲ್ಲುತ್ತಿರುವುದೇ ಇದಕ್ಕೆ ಸಾಕ್ಷಿ. 2019ರಲ್ಲಿ ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ರಾಹುಲ್‌ ಗಾಂಧಿ ಪ್ರಧಾನ ಮಂತ್ರಿ ಆಗಲಿದ್ದಾರೆ ಎಂದರು.

ಸಿದ್ದರಾಮಯ್ಯ ಲಿಂಗಾಯತರನ್ನು ಒಡೆಯಲು ಪ್ರಯತ್ನಿಸಿದರು ಎಂದು ಅಪಪ್ರಚಾರ ಮಾಡುತ್ತಾರೆ. ಬಸವಣ್ಣ  850 ವರ್ಷಗಳ ಹಿಂದೆಯೇ ಲಿಂಗಾಯತ ಪ್ರತ್ಯೇಕ ಧರ್ಮ ಮಾಡಿದ್ದರು. ಎಲ್ಲರೂ ಬಂದು ಕೇಳಿದ್ದರಿಂದ ಕೇಂದ್ರಕ್ಕೆ ಶಿಫಾರಸು ಮಾಡಿದ್ದೇವೆ, ಅದರಲ್ಲಿ ನಮ್ಮ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಮಾನವೀಯತೆ: ಮನುಷ್ಯ ಸಂಬಂಧ, ಮಾನವೀಯತೆಯಲ್ಲಿ ನಂಬಿಕೆ ಇರುವವನು ನಾನು, ಸಮಾಜದಲ್ಲಿ ಸಾಮರಸ್ಯ, ಸಹಬಾಳ್ವೆ, ಸಹಿಷ್ಣುತೆ ಇರಬೇಕು. ನಮ್ಮ ಸರ್ಕಾರ ಯಾವುದೋ ಒಂದು ಜಾತಿಗೆ ಕಾರ್ಯಕ್ರಮ ಕೊಟ್ಟಿದ್ದೇವಾ? ರಾಜ್ಯದ 6.5 ಕೋಟಿ ಜನರಿಗೆ ಒಂದಲ್ಲಾ ಒಂದು ಕಾರ್ಯಕ್ರಮ ಕೊಟ್ಟಿದ್ದೇವೆ, ಎಲ್ಲರಿಗೂ ಅನುಕೂಲವಾಗಿದೆ.  ಕಾರ್ಯಕರ್ತರು ಇದನ್ನು ಜನರಿಗೆ ಅರ್ಥ ಮಾಡಿಸಬೇಕು ಎಂದರು.

Advertisement

ಅಪಪ್ರಚಾರ: ಮೋದಿ, ಶಾ ಎಷ್ಟೇ ಸುಳ್ಳು ಹೇಳಬಹುದು, ಅಪಪ್ರಚಾರ ಮಾಡಬಹುದು. ಉಚಿತ ಅಕ್ಕಿ ಕೇಂದ್ರ ಸರ್ಕಾರ ಕೊಡುವುದು ಎನ್ನುತ್ತಾರೆ. ಹಾಗಿದ್ದರೆ, ಬಿಜೆಪಿ ಸರ್ಕಾರಗಳಿರುವ ಗುಜರಾತ್‌, ರಾಜಸ್ಥಾನ, ಮಧ್ಯಪ್ರದೇಶ, ಹರ್ಯಾಣ, ಗೋವಾ, ಛತ್ತೀಸ್‌ಗಡ, ಉತ್ತರ ಪ್ರದೇಶ, ಮಹಾರಾಷ್ಟ್ರ ರಾಜ್ಯಗಳಲ್ಲಿ ಏಕೆ ಉಚಿತ ಅಕ್ಕಿ ಕೊಡುತ್ತಿಲ್ಲ ಎಂದು ಪ್ರಶ್ನಿಸಿದರೆ ಅವರ ಬಳಿ ಉತ್ತರವಿಲ್ಲ ಎಂದು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ, ಇಡೀ ದೇಶದಲ್ಲಿ ಕರ್ನಾಟಕ ಮಾತ್ರ ಉಚಿತ ಅಕ್ಕಿ ಕೊಡುತ್ತಿದೆ. ಹಸಿವು ಮುಕ್ತ ರಾಜ್ಯಕ್ಕಾಗಿ ಈ ಕಾರ್ಯಕ್ರಮ ರೂಪಿಸಿದ್ದೇವೆ. ಇದರಿಂದ ಜನ ಗುಳೇ ಹೋಗುವುದು, ಭಿಕ್ಷೆ ಬೇಡುವುದು ತಪ್ಪಿದೆ ಎಂದರು.

ಎಸ್‌ಇಪಿ, ಟಿಎಸ್‌ಪಿ ಹಣವನ್ನು ಜನಸಂಖ್ಯೆಗೆ ಅನುಗುಣವಾಗಿ ಖರ್ಚು ಮಾಡಲು ಕ್ರಾಂತಿಕಾರಿ ಕಾನೂನು ತಂದು ಐದು ವರ್ಷದಲ್ಲಿ ಈ ವರ್ಗದ ಜನರ ಕಲ್ಯಾಣ ಕಾರ್ಯಕ್ರಮಗಳಿಗೆ 88 ಸಾವಿರ ಕೋಟಿ ಖರ್ಚು ಮಾಡಿದ್ದೇವೆ. ಹಿಂದಿನ ಬಿಜೆಪಿ ಸರ್ಕಾರ ಐದು ವರ್ಷದಲ್ಲಿ ಖರ್ಚು ಮಾಡಿದ್ದು 21 ಸಾವಿರ ಕೋಟಿ ಮಾತ್ರ.

ಕೇಂದ್ರದ ಬಜೆಟ್‌ ಗಾತ್ರ 24 ಲಕ್ಷ ಕೋಟಿ, ಆದರೆ, ಎಸ್‌ಸಿ-ಎಸ್‌ಟಿ ವರ್ಗದವರ ಕಲ್ಯಾಣ ಕಾರ್ಯಕ್ರಮಗಳಿಗೆ ಎಲ್ಲಾ ರಾಜ್ಯಗಳಿಗೆ ಕೊಡುವುದು 53 ಸಾವಿರ ಕೋಟಿ ಮಾತ್ರ, ಕೇಂದ್ರ ಸರ್ಕಾರ ಕನಿಷ್ಠ 2 ಲಕ್ಷ ಕೋಟಿ ಖರ್ಚು ಮಾಡಬೇಕು. ಎಸ್‌ಸಿ-ಎಸ್‌ಟಿ ವರ್ಗದವರ ನಿಜವಾದ ಕಳಕಳಿ ಅವರಿಗೆ ಇದ್ದರೆ ನಮ್ಮಂತೆ ಕಾನೂನು ಮಾಡಲಿ ಎಂದು ಆಗ್ರಹಿಸಿದರು. 

ಚುನಾವಣೆ ಸಮಯದಲ್ಲಿ ಬಿಜೆಪಿ ನಡಿಗೆ-ದಲಿತರ ಮನೆ ಕಡೆಗೆ ಎಂದು ಡೋಂಗಿತನ ತೋರಿ ದಲಿತರ ಮನೆಗೆ ಹೋಟೆಲ್‌ನಿಂದ ದೋಸೆ ತರಿಸಿಕೊಂಡು ತಿಂದು ಬರುತ್ತಾರೆ. ಇದನ್ನೆಲ್ಲಾ ನಮ್ಮ ಕಾರ್ಯಕರ್ತರು ಮನೆ ಮನೆಗೆ ತಿಳಿಸಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next