Advertisement

ವಿಧಾನಸಭೆಯಲ್ಲಿ ಚರ್ಚೆಗೆ ಸಿದ್ಧ

11:06 PM Jun 18, 2019 | Lakshmi GovindaRaj |

ಬೆಂಗಳೂರು: “ಸುಳ್ಳು ಆರೋಪ ಮಾಡಿ ಜನರನ್ನು ತಪ್ಪು ದಾರಿಗೆ ಎಳೆಯುವುದು ಸರಿಯಲ್ಲ. ನನ್ನ ಬಗ್ಗೆ ಚರ್ಚೆ ನಡೆಸುವುದಾದರೆ ವಿಧಾನಸಭೆಗೆ ಬರಲಿ. ನಾನು ದಾಖಲೆ ತರುತ್ತೇನೆ. ಅವರೂ ತರಲಿ. ವಿಧಾನಸಭೆಯಲ್ಲೇ ಚರ್ಚೆಗೆ ನಾನು ಸಿದ್ಧನಿದ್ದೇನೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಗೆ ಪಂಥಾಹ್ವಾನ ನೀಡಿದ್ದಾರೆ.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನದಲ್ಲಿದ್ದುಕೊಂಡು ತಮ್ಮ ಹುಳುಕು ಮುಚ್ಚಿಕೊಳ್ಳಲು ಹಗುರವಾಗಿ ಮಾತನಾಡುವುದನ್ನು ಇನ್ನಾದರೂ ಬಿಡಬೇಕು. ಸಿಬಿಐ ನ್ಯಾಯಾಲಯ ಖುಲಾಸೆಗೊಳಿಸಿರುವ ಏಳೆಂಟು ವರ್ಷಗಳ ಹಳೆಯ ವಿಷಯವಿದು. ಯಡಿಯೂರಪ್ಪನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ಅವರಿಗೆ ಶೋಭೆ ತರುವುದಿಲ್ಲ ಎಂದು ವಾಗ್ಧಾಳಿ ನಡೆಸಿದರು.

ಜಿಂದಾಲ್‌ ಕಂಪನಿಗೆ ಭೂಮಿ ಮಾರಾಟ ವಿಚಾರವನ್ನು ನಾವು ಪ್ರಶ್ನಿಸಿದಾಗ ಸಂಪುಟ ಉಪಸಮಿತಿ ರಚಿಸಿಕೊಂಡು ದೊಂಬರಾಟ ಮಾಡುತ್ತಿದ್ದಾರೆ. ಇದರ ವಿರುದ್ಧ ಪಾದಯಾತ್ರೆ ಬದಲಿಗೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು. ಈ ಬಗ್ಗೆ ಮುಖಂಡರೆಲ್ಲಾ ಸೇರಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಹೇಳಿದರು.

ಎಷ್ಟು ತೆಗೆದುಕೊಂಡು ಭೂಮಿ ಕೊಡುತ್ತಿದ್ದೀರಿ: ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ಯಡಿಯೂರಪ್ಪ ವಿರುದ್ಧ ಮುಖ್ಯಮಂತ್ರಿಯವರು 20 ಕೋಟಿ ರೂ. ಪಡೆದ ಆರೋಪ ಮಾಡಿದ್ದಾರೆ. 2006ರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಗುತ್ತಿಗೆ ನಂತರ ಮಾರಾಟ (ಲೀಸ್‌ ಕಮ್‌ ಸೇಲ್‌) ಮಾಡುವ ನಿರ್ಧಾರವಾಗಿತ್ತು. ಅಂದು ಕುಮಾರಸ್ವಾಮಿಯವರು ಸರ್ಕಾರದ ಮುಖ್ಯಸ್ಥರಾಗಿದ್ದರು. ಬಿಜೆಪಿಯು ಸರ್ಕಾರದ ಪಾಲುದಾರ ಪಕ್ಷವಷ್ಟೇ ಆಗಿತ್ತು ಎಂದು ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next