Advertisement

ಹಿನ್ನೋಟ: 2021 ರಲ್ಲಿ ಓದುಗರ ಮನ ಗೆದ್ದ ಕನ್ನಡ ಕೃತಿಗಳು

02:37 PM Dec 30, 2021 | Team Udayavani |

2021 ಕೋವಿಡ್ ತನ್ನ ಕ್ರೂರ ರೂಪ ಮುಂದುವರಸಿದ ವರ್ಷ. ಆರಂಭದಲ್ಲಿ ಲಾಕ್ ಡೌನ್, ಬಳಿಕ ಕಟ್ಟುನಿಟ್ಟು,ಮಾಸ್ಕ್ಮ ಸ್ಯಾನಿಟೈಸ್.. ಹೀಗೆ ಇವುಗಳು ನಮ್ಮ ಬದುಕಿನ ಭಾಗವೇ ಆಗಿವೆ ಬಿಡಿ. ಈ ನಡುವೆ ಎಲ್ಲಾ ಕ್ಷೇತ್ರಕ್ಕೂ ಗಪ್ ಚುಪ್ ಅಂಥ ಮೌನವಾಗಿಯೇ ಇರುವ ಪರಿಸ್ಥಿತಿ ಬಂತು.

Advertisement

ನಿಧಾನವಾಗಿ ಎಲ್ಲವೂ ಸರಿಯಾಗದೇ ಇದ್ರು, ಈ ವರ್ಷ ಅಂತೂ – ಇಂತೂ ಒಂದಷ್ಟು ನೆಮ್ಮದಿಯಂತೂ ಸಿಕ್ಕಿದೆ.  ಈ ಸಾಲಿಗೆ ಸಾಹಿತ್ಯವೂ ಸೇರುತ್ತದೆ. ಜನ ಮನೆಯಲ್ಲೇ ಇದ್ದಾಗ ಹೇಗೆ ನೆಟ್ ಫ್ಲಿಕ್ಸ್, ಪ್ರೈಮ್, ಹಾಟ್ ಸ್ಟಾರ್ ಮನರಂಜನೆಗೆ ಜತೆಯಾದವೋ ಹಾಗೆ, ಓದುಗರ ಪಾಲಿಗೆ ಈ ವರ್ಷ ಹೊಸ ಬಗೆಯ ಓದನ್ನು ಓದಲು ಸಾಧ್ಯವಾಯಿತು.

ಈ ಹೊಸ ಬಗೆಯ ಓದಿನಲ್ಲಿ ಗಮನ ಸೆಳೆದ ಪುಸ್ತಕಗಳು ಇಲ್ಲಿವೆ. ..

ಕೃತಿ: ಇಜಯಾ

ಲೇಖಕರು: ಪೂರ್ಣಿಮಾ ಮಾಳಗಿಮನಿ

Advertisement

ಪೂರ್ಣಿಮಾ ಮಾಳಗಿಮನಿ ಅವರು ಬರೆದ ಈ ಕಾದಂಬರಿ, ಒಂದು ಬಗೆಯ ಸೊಗಸು ಮತ್ತು ರೋಚಕ. ಹೆಣ್ಣೊಬ್ಬಳು ಉದ್ಯೋಗದಲ್ಲಿದ್ದಾಗ ಅವಳ ಕಚೇರಿಯ ದಿನಚರಿಯೊಂದಿಗೆ ಮನೆಯ ದಾಸಿಯಾಗಿ ನಿಭಾಯಿಸುವ ಪರಿಸ್ಥಿತಿಯನ್ನು ಮೊದಲಿಗೆ ಹೇಳಿಲಾಗಿದ್ದು, ಬಳಿಕ ಸಾಗುವ ಕಥಾ ದಾರಿ ರೋಚಕತೆಯಾಗಿ ಹಣೆದಿದ್ದಾರೆ. ಕನ್ನಡಕ್ಕೆ ಈ ಬಗೆಯ ಟ್ವಿಸ್ಟ್, ಥ್ರಿಲ್ಲರ್ ಕಾದಂಬರಿ ಹೊಸದು. ಸಾದ್ಯವಾದರೆ ಒಮ್ಮೆ ಓದಿ.

ಕೃತಿ: ಹುಲಿಪತ್ರಿಕೆ-2

ಲೇಖಕರು: ಅನುಷ್ ಶೆಟ್ಟಿ

ಮೈಸೂರಿನಲ್ಲಿ ಬೆಳದ ಈ ಲೇಖಕನ ಲೇಖನಿ ತೇಜಸ್ವಿಯ ಶಿಷ್ಯನಂತೆಯೇ ಕಾಣುತ್ತದೆ. ಮಲೆನಾಡು ಅಲ್ಲಿ ಕಾಡು ಅದರೊಳಗಿನ ಅಕ್ರಮ, ಮಳೆ ಮತ್ತದನ್ನು ಆವರಿಸಿಕೊಂಡಿರುವ ಒಂದು ಪುಟ್ಟ ಊರು. ಇದೇ ಅನುಷ್ ಶೆಟ್ಟಿಯವರ ಕಥಾ ವಸ್ತು. ಹುಲಿಪತ್ರಿಕೆ -1 ಐದು ಜನ ಗೆಳಯರಿಂದ ಶುರುವಾಗುವ ಪತ್ರಿಕೆಯೊಂದು ಹೇಗೆ ಊರಿನೊಳಗಿನ ಕೆಲವೊಮ್ಮೆ ಮನೆಯೊಳಗೆಇನ ಸುದ್ದಿಯನ್ನು ಅಚ್ಚಾಗಿಸುತ್ತದೆ ಎನ್ನುವುದನ್ನು ಹುಲಿ ಪತ್ರಿಕೆ-2 ರಲ್ಲಿಯೂ ಹೇಳಿದ್ದಾರೆ. ಇದೊಂದು ಬಗೆಯ ಅಕ್ಷರವನ್ನು ಪ್ರೀತಿಯಿಂದ ಓದುತ್ತಲೇ ಹೋಗುವ ಅನುಭವದ ದಾಟಿ. ಈ ಕಾದಂಬರಿಯ ಹೆಚ್ಚೇನೂ ಹೇಳಲಾರೆ. ಹೇಳಿದರೆ ಅದು ಅಂದವನ್ನು ಕೆಡಿಸಿದಾಗೆ ಆಗುತ್ತದೆ.

ಕೃತಿ: ಬ್ರ್ಯಾಂಡ್ ಬಿಲ್ಡರ್ಸ್

ಲೇಖಕರು: ದೀಪಾ ಹಿರೇಗುತ್ತಿ

ಇಂಗ್ಲೀಷ್  ಉಪನ್ಯಾಸಕಿ ಆಗಿರುವ ದೀಪಾ ಹಿರೇಗುತ್ತಿ ಅವರು ಬರೆದಿರುವ ‘ಬ್ರ್ಯಾಂಡ್ ಬಿಲ್ಡರ್ಸ್’ ಸೋತವರಿಗೆ ಸ್ಪೂರ್ತಿ, ಸಾಧಿಸುವವರಿಗೆ ಹಾದಿಯಂತಿವೆ ಇದರೊಳಗಿನ ಬರಹಗಳು. ಸಾಮಾನ್ಯರು ಸಾಧಕರಾಗಿ ಪ್ರಸಿದ್ಧ ಕಂಪೆನಿಗಳನ್ನು ಕಟ್ಟಿ ಬೆಳೆಸಿದ ರಿಯಲ್ ಕಥೆಗಳನ್ನು ಲೇಖಕಿ ಇಲ್ಲಿ ಅಚ್ಚಾಗಿಸಿದ್ದಾರೆ. ಅಡಿಡಾಸ್,ಅಮೆಜಾನ್, ಬಿಸ್ಲೇರಿ,ಬಾಟಾ.. ಹೀಗೆ ಜಗತ್ತಿನಲ್ಲಿ ಇಂದು ಯಶಸ್ಸಿನ ಉತ್ತುಂಕ್ಕೇರಿರುವ ಕಂಪೆನಿಗಳ ಸೃಷ್ಟಿಕರ್ತರ ಆರಂಭಿಕ ಬಾಲ್ಯದ ಹಜ್ಜೆಗಳಿಂದ, ಪರಿಶ್ರಮ,ಪ್ರತಿಫಲದ ಯಶೋಗಾಥೆಯನ್ನು ಉಲ್ಲೇಖಿಸಿದ್ದಾರೆ. ಸಾಧ್ಯವಾದರೆ ಓದಿ, ಸಾಧನೆಗೆ ಇದು ಟಾನಿಕ್ ಆದೀತು.!

ಕೃತಿ: ನಾಲ್ಕು ದಶಕದ ಕತೆಗಳು

ಲೇಖಕರು : ಜೋಗಿ

ಜೋಗಿಯವರ ಕತೆಗಳೆಂದರೆ ಹಾಗೆ. ಅಲ್ಲಿ ಸ್ಥಳೀಯತೆಯ ಘಮಲು ಇರುತ್ತದೆ. ಊರಾ ಬೀದಿಯ ಪರಿಚಯವಿರುತ್ತದೆ.

ಈ ವರ್ಷ ಜೋಗಿಯವರ ಕೆಲವೊಂದು ಕೃತಿಗಳು ಬಿಡುಗಡೆ ಆಗಿವೆ. ಅವುಗಳಲ್ಲಿ ‘ನಾಲ್ಕು ದಶಕದ ಕತೆಗಳು’ ಗಮನ ಸೆಳೆದಿದೆ. ಜೋಗಿಯವರ ನಾಲ್ಕು ದಶಕದ ಪ್ರಮುಖ 108 ಕತೆಗಳು ಇಲ್ಲಿವೆ. ಎಲ್ಲಾ ಕತೆಗಳನ್ನು  ಒಂದೇ ಕಡೆ ಓದುವುದರ ಖುಷಿಯೇ ಬೇರೆ. ಗಾತ್ರದಲ್ಲಿ ಪುಸ್ತಕ ದೊಡ್ಡದಿರ ಬಹುದು. ಆದರೆ ಓದುವ ಅನುಭವಕ್ಕೆ ಭಂಗವಾಗದು.

ಕೃತಿ: ನಗ್ನ ಸತ್ಯ

ಲೇಖಕರು :  ರಾಮಕೃಷ್ಣ

ಪತ್ರಕರ್ತ ರಾಮಕೃಷ್ಣ ಅವರು ಬರೆದಿರುವ ‘ನಗ್ನಸತ್ಯ’ ಈ ವರ್ಷ ಸದ್ದು ಮಾಡಿದ ಕೃತಿಗಳಲ್ಲಿ ಒಂದು. ದಕ್ಷ ಅಧಿಕಾರಿ ಡಿಕೆ ರವಿ ಅವರ ಬದುಕಿನ ಹಿನ್ನೆಲೆ, ಅವರ ಅಧಿಕಾರದ ನಡುವೆ ಸಾಗಿದ ಕರ್ತವ್ಯದ ದಿನಗಳು, ಸವಾಲುಗಳು, ಆ ಬಳಿಕ ಇಡೀ ರಾಜ್ಯವೇ ಬೆಚ್ಚಿ ಬಿದ್ದ ಅವರ ಅನಿರೀಕ್ಷಿತ ಸಾವು. ಆ ಬಳಿಕ ಬೆಳವಣಿಗೆ ಎಲ್ಲವನ್ನು ಈ ಕೃತಿಯಲ್ಲಿ ಸೂಕ್ಷ್ಮವಾಗಿ ಹೇಳಿದ್ದಾರೆ.

ಕೃತಿ: ಸಿನಿ ಮಾಯಾಲೋಕ

ಲೇಖಕರು : ಎನ್ . ಸಂಧ್ಯಾರಾಣಿ

ಕೆಲ ಸಿನಿಮಾಗಳನ್ನು ನೋಡಿದ ಮೇಲೆ ಅವುಗಳ ಬಗ್ಗೆ ಬರೆಯದೆ ಅಥವಾ ಅವುಗಳ ಯಾರ ಬಳಿಯೂ ಹೇಳಿಕೊಳ್ಳದೆ ಹಾಗೆಯೇ ಕೂರುವುದು ಕಷ್ಟ. ಎನ್. ಸಂಧ್ಯಾರಾಣಿ ಅವರ ಈ ಕೃತಿ ಸಿನಿಮಾವನ್ನು ಪ್ರೀತಿಸುವವರಿಗೆ ಕೈಗನ್ನಡಿಯಂತೆ ಭಾಸವಾಗುತ್ತದೆ. ಮೂವತ್ತು ಸಿನಿಮಾಗಳ ಕುರಿತಾದ ಬರಹಗಳು ಇಲ್ಲಿವೆ. ಇಲ್ಲಿರುವ ಬರಹಗಳು, ಸಿನಿಮಾ ಬರೀ ಮನರಂಜನೆಯೇ ಅಲ್ಲ, ಅದಕ್ಕೂ ಮಿಗಿಲು ಸಿನಿಮಾ ಒಂದು ಬಂಧ, ಭಾವನೆ ಮತ್ತು ಮಾನವನ ಭಾವ ಎನ್ನುವುದನ್ನು ಅರ್ಥೈಸುತ್ತದೆ.

ಕೃತಿ: ಸಕೀನಾಳ ಮುತ್ತು

ಲೇಖಕರು : ವಿವೇಕ ಶಾನುಭಾಗ

ಕಥೆಗಾರ ವಿವೇಕ್ ಶಾನುಭಾಗ ಆರು ವರ್ಷದ ಬಳಿಕ ಬರೆದ ಕಾದಂಬರಿ ಇದು. ‘ಸಕೀನಾಳ ಮುತ್ತು’ ಇದೊಂದು ಫೀಲ್ ಗುಡ್ ಓದು. ಒಂದು ಕುಟುಂಬ ಮತ್ತದರೊಳಗಿನ ಬಂಧ,ಭಾವವನ್ನು ಕಟ್ಟುವ ಕೃತಿಯಿದು. ಇಲ್ಲಿ ಪೀಳಿಗೆಗಳ ಸ್ಥಿತಿ,ಮನಸ್ಥಿತಿ ಪರಿಸ್ಥಿತಿಗಳು ಪಾಡುಗಳಿವೆ. ಹೆಚ್ಚೇನು ಹೇಳಲಾರೆ ಹೇಳಿದರೆ ನಿಮ್ಮ ಓದಿನ ಕುತೂಹಲಕ್ಕೆ ಭಂಗವಾದೀತು. ಒಮ್ಮೆ ಓದಿ ನೋಡಿ.

ಕೃತಿ: ಕತೆ ಡಬ್ಬಿ

ಲೇಖಕರು: ರಂಜನಿ ರಾಘವನ್

ಕಿರುತೆರೆಯ ನಟಿಯಾಗಿ ತನ್ನ ಭಾವನೆಗಳಿಂದ ಅಪಾರ ಪ್ರೇಕ್ಷಕರ ಮನ ಗೆದ್ದಿರುವ ರಂಜನಿ ರಾಘವನ್ ಪೆನ್ ಹಿಡಿದು, ಓದುಗೆ ಮನವನ್ನೂ ಗೆದ್ದಿದ್ದಾರೆ. ‘ಕತೆ ಡಬ್ಬಿ’ ಸಣ್ಣಕತೆಗಳ ಗುಚ್ಛ. ಇಲ್ಲಿರುವ ಕತೆಗಳು ನಮ್ಮದೇ, ನಮ್ಮ ಸೋಲು, ಗೆದ್ದ ಕ್ಷಣ, ಸಾಧನೆಯ ತುಡಿತ, ನಾಳೆಯೆಂಬ ನಂಬಿಕೆ. ಇವಿಷ್ಟನೇ ಕತೆಗಳನ್ನಾಗಿಸಿ, ಓದುಗರಿಗೆ ತನ್ನ ಬರಹಗಳಿಂದ ಮೋಡಿ ಮಾಡುತ್ತಾರೆ ಲೇಖಕಿ. ಈ ವರ್ಷ ಬಿಡುಗಡೆ ಆಗಿ ಇದೇ ವರ್ಷ 5ನೇ ಮುದ್ರಣವನ್ನು ಕಾಣುತ್ತಿರುವ ಈ ಕೃತಿಯನ್ನು ಓದಿ. ನೀವು ಇವರ ಧಾರಾವಾಹಿ ಅಭಿಮಾನಿಯೊಟ್ಟಿಗೆ, ಇದನ್ನು ಓದಿದ ಮೇಲೆ ಇವರ ಬರಹ ಅಭಿಮಾನಿ ಕೂಡ ಖಂಡಿತ ಆಗುತ್ತೀರಿ.

ಕೃತಿ: ಚೆನ್ನಭೈರಾದೇವಿ

ಲೇಖಕರು : ಗಜಾನನ ಶರ್ಮ

ಗಜಾನನ ಶರ್ಮ ಅವರ ‘ಪುನರ್ವಸು’ವಿನ ಶರಾವತಿ ಪಾತ್ರ ನನ್ನೊಳಗೆ ಇನ್ನು ಹಾಗೆಯೇ ಕಾಡುತ್ತಲೇ ಇದೆ. ಆ ಬಳಿಕ ನನ್ನನು ಮತ್ತೆ ಕಾಡಿದ್ದು 54 ವರ್ಷಗಳ ಕಾಲ ಮಲೆನಾಡು, ಕರಾವಳಿ ಪ್ರದೇಶವನ್ನು ಆಳಿದ ಧೈರ್ಯವಂತೆ ರಾಣಿ ಚೆನ್ನಭೈರಾದೇವಿ. ಚೆನ್ನಭೈರಾದೇವಿ ಬಗ್ಗೆ ತಿಳಿದುಕೊಂಡವು ಕಡಿಮೆ. ಆದರೆ ಒಂದು ಸುದೀರ್ಘ ಅಧ್ಯಾಯವನ್ನು ಮಾಡಿ, ಸಿಕ್ಕಷ್ಟು ಮಾಹಿತಿ ಸಂಗ್ರಹಿಸಿಕೊಂಡು ಅಷ್ಟು ಹಳೆಯದಾದ ಮರೆಯಲಾಗದ ರಾಣಿಯೊಬ್ಬಳ ಬದುಕಿನ, ಸಾಮ್ರಾಜ್ಯದ ಕಥೆಯನ್ನು ಓದುಗರಿಗೆ ಒಗಿಸಿರುವ ಲೇಖಕರಿಗೊಂದು ಸಲಾಂ.

ಆ ಸಮಯದಲ್ಲಿ ವಿದೇಶಿಗರೊಂದಿಗಿನ ವ್ಯಾಪಾರ ವಹಿವಾಟು, ಜನರ ಬಗ್ಗೆ ಕಾಳಜಿ, ಯುದ್ಧಕ್ಕೆ ಸಿದ್ಧವೆನ್ನುವ ಧೈರ್ಯವಿದ್ದ ರಾಣಿಯ ಬಗ್ಗೆ ನಾವು  – ನೀವೆಲ್ಲಾ ತಿಳಿದುಕೊಳ್ಳಲೇ ಬೇಕು. ಕಾದಂಬರಿ ದೊಡ್ಡದಿರಬಹುದು ಆದರೆ, ಓದಿನ ಸುಖಕ್ಕೆ ಭಂಗವಾಗದು.

ಇವಿಷ್ಟೇ ಅಲ್ಲ 2021 ರಲ್ಲಿ ಗಮನ ಸೆಳೆದಿರುವುದು ಮಾತ್ರ ಉತ್ತಮ ಕೃತಿಯಲ್ಲ. ಓದುಗನಿಗೆ ಎಲ್ಲಾ ಓದು ಕೂಡ ಅದ್ಭುತವೇ.!  ದಾದಾ ಪೀರ್ ಜೈಮನ್ ಅವರ ‘ಪರ್ದಾ and ಪಾಲಿಗಮಿ’, ‘’ನೀಲಕುರಿಂಜಿ’ ಪಲ್ಲವಿ ಇಡೂರು ಅವರ ; ‘ಆಗಸ್ಟ್ ಮಾಸದ ರಾಜಕೀಯ ಕಥನ’, ರಾಜೇಶ್ ಶೆಟ್ಟಿಯ ‘ಡ್ರಾಮಾ ಕಂಪೆನಿ’, ಯುವ ಕಥೆಗಾರ ಕೌಶಿಕ್ ಕೂಡುರಸ್ತೆ ಅವರ ‘ತ್ಯಾಗರಾಜ್ ಕಾಲೋನಿ’ ಅಕ್ಕಯ್ ಪದ್ಮಸಾಲಿ ಅವರ ‘ಅಕ್ಕಯ್’(ಆತ್ಮಕಥನ),ಹಿರಿಯ ಸಾಹಿತಿ ಸಬ್ರಾಯ ಚೊಕ್ಕಾಡಿ ಅವರ ‘ಕಾಲದೊಂದೊಂದೇ ಹನಿ’(ಅನುಭವಕಥನ), ಮನಸ್ಸಿಗೆ ತಟ್ಟುವ ವಿನುತಾ ವಿಶ್ವನಾಥ್ ಅವರ ‘ಹುಣ್ಸ್ ಮಕ್ಕಿ ಹುಳ(ಆತ್ಮಕಥನ).. ಪಟ್ಟಿ ಮಾಡಿದರೆ ಓದಿಗೆ ಕೊನೆಯಲ್ಲಿ..?

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next