Advertisement

RBI Unveils ULI: ಯುಎಲ್‌ಐ ಗೌಪ್ಯತೆ… ಆರ್‌ಬಿಐ ಮುಂದಿರುವ ಸವಾಲು

10:57 PM Aug 28, 2024 | Team Udayavani |

ಭಾರತ ಮಾತ್ರವಲ್ಲದೆ ಈಗ ವಿಶ್ವದೆಲ್ಲೆಡೆ ಸಾರ್ವತ್ರಿಕ ಪ್ರಶಂಸೆಗೆ ಪಾತ್ರವಾಗಿರುವ ಯುಪಿಐ ಮಾದರಿಯಲ್ಲಿ ಶೀಘ್ರದಲ್ಲಿಯೇ ಸಾಲ ನೀಡಿಕೆಗೂ ದೇಶವ್ಯಾಪಿಯಾಗಿ ಯುನಿಫೈಡ್‌ ಲೆಂಡಿಂಗ್‌ ಇಂಟರ್‌ಫೇಸ್‌(ಯುಎಲ್‌ಐ) ಅನ್ನು ಪರಿಚಯಿಸಲಾಗು­ವುದು ಎಂದು ಆರ್‌ಬಿಐ ಘೋಷಿಸಿದೆ. ಸಾಲ ನೀಡಿಕೆ ಪ್ರಕ್ರಿಯೆಯನ್ನು ಸರಳ ಮತ್ತು ಸುಲಲಿತಗೊಳಿಸುವುದೇ ಯುಎಲ್‌ಐ ಜಾರಿಯ ಹಿಂದಿನ ಉದ್ದೇಶ.

Advertisement

ಯುಪಿಐ, ಇಡೀ ಪಾವತಿ ವ್ಯವಸ್ಥೆಯನ್ನು ಬದಲಾಯಿಸಿದ್ದೇ ಅಲ್ಲದೆ ವಹಿವಾಟು ಮತ್ತು ವ್ಯವಹಾರವನ್ನು ಹೆಚ್ಚು ಪಾರದರ್ಶಕವಾಗಿಸಿತು. ನಿರೀಕ್ಷೆಗೂ ಮೀರಿದ ವೇಗದಲ್ಲಿ ದೇಶದ ಜನತೆ ಯುಪಿಐ ಪಾವತಿ ವ್ಯವಸ್ಥೆಗೆ ಹೊಂದಿಕೊಳ್ಳುವ ಮೂಲಕ ನಗದು ವ್ಯವಹಾರ ಒಂದಿಷ್ಟು ಹಿನ್ನೆಲೆಗೆ ಸರಿಯುವಂತಾಯಿತು. ದೇಶದಲ್ಲಿ ಯುಪಿಐ ಈಗ ಸಾರ್ವತ್ರಿಕವಾಗಿ ಬಳಕೆಯಲ್ಲಿದ್ದು ಬಲುಜನಪ್ರಿಯವಾಗಿದೆ. ಇದರಿಂದ ಪ್ರೇರಣೆ ಪಡೆದು ಭಾರತೀಯ ರಿಸರ್ವ್‌ ಬ್ಯಾಂಕ್‌ ಈಗ ಸಾಲ ನೀಡಿಕೆಗೂ ಇಂತಹುದೇ ತಂತ್ರಜ್ಞಾನ ಪ್ಲಾಟ್‌ಫಾರಂ ಅನ್ನು ಪರಿಚಯಿಸಲು ಮುಂದಾಗಿದೆ.

ಗ್ರಾಹಕರಿಗೆ ಯಾವುದೇ ಸಮಸ್ಯೆ, ತೊಡಕುಗಳಿಲ್ಲದೆ ಸಾಲ ಲಭಿಸುವಂತಾಗ ಬೇಕೆಂಬ ಉದ್ದೇಶದಿಂದ ಆರ್‌ಬಿಐ, ಸಾರ್ವಜನಿಕ ತಾಂತ್ರಿಕ ವೇದಿಕೆಯೊಂದನ್ನು ಅಭಿವೃದ್ಧಿಪಡಿಸಿತ್ತು. ಆದರೆ ಸಾಲ ನೀಡಿಕೆಗೆ ಅತ್ಯಗತ್ಯವಾದ ದಾಖಲೆ ಪತ್ರಗಳು, ಮಾಹಿತಿಗಳು, ದತ್ತಾಂಶಗಳು ವಿವಿಧ ವ್ಯವಸ್ಥೆಗಳಲ್ಲಿರುವುದರಿಂದ ಇದು ಕಷ್ಟಸಾಧ್ಯ ವಾಯಿತು. ಈ ಹಿನ್ನೆಲೆಯಲ್ಲಿ ಆರ್‌ಬಿಐ ಯುಎಲ್‌ಐ ಅನ್ನು ಪರಿಚಯಿಸಲು ತೀರ್ಮಾನಿಸಿದೆ. ಈ ಹೊಸ ವ್ಯವಸ್ಥೆಯಿಂದ ಗ್ರಾಮೀಣ ಮತ್ತು ಸಣ್ಣ ಸಾಲಗಾರರು ಹಾಗೂ ಸೂಕ್ಷ್ಮ, ಸಣ್ಣ ಮತ್ತು ಅತೀ ಸಣ್ಣ ಉದ್ದಿಮೆಗಳಿಗೆ ಅತ್ಯಂತ ತ್ವರಿತಗತಿಯಲ್ಲಿ ಸಾಲ ನೀಡಲು ಸಾಧ್ಯವಾಗಲಿದೆ. ಇನ್ನು ಕೇಂದ್ರ ಸರಕಾರದ ಅತ್ಯಂತ ಮಹತ್ವಾ ಕಾಂಕ್ಷೆಯ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಕೂಡ ಈ ಪ್ಲಾಟ್‌ಫಾರಂನ ವ್ಯಾಪ್ತಿಗೆ ಬರಲಿದೆ. ಗ್ರಾಹಕರ ಭೂ ದಾಖಲೆ ಸಹಿತ ಎಲ್ಲ ದಾಖಲೆಗಳು ಮತ್ತು ಮಾಹಿತಿಗಳು ಯುಎಲ್‌ಐನಲ್ಲಿ ಲಭ್ಯವಿರಲಿದ್ದು ಇದರ ಆಧಾರದಲ್ಲಿ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಸಾಲ ಮಂಜೂರು ಮಾಡಲು ಸಾಧ್ಯವಾಗಲಿದೆ. ಯುಪಿಐ ಮಾದರಿಯಲ್ಲಿ ಯುಎಲ್‌ಐ ಕೂಡ ಸಾಲ ನೀಡಿಕೆ ಪ್ರಕ್ರಿಯೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ ಎಂಬ ವಿಶ್ವಾಸ ಆರ್‌ಬಿಐನದ್ದಾಗಿದೆ.

ಇದೇ ವೇಳೆ ಯುಎಲ್‌ಐ ಜಾರಿಯಿಂದ ಗ್ರಾಹಕರ ಮಾಹಿತಿ ಸಾರ್ವಜನಿಕರಿಗೆ ಮುಕ್ತವಾಗಿರುವುದಿಲ್ಲ ಮತ್ತು ಗ್ರಾಹಕರ ವೈಯಕ್ತಿಕ ಮಾಹಿತಿಗಳು ಮತ್ತು ದಾಖಲೆಗಳನ್ನು ಗೌಪ್ಯವಾಗಿ ಇಡಲಾಗುವುದು ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. ಆದರೆ ಯುಪಿಐ ಜಾರಿಯಾದ ಬಳಿಕ ವಂಚನೆ ಪ್ರಕರಣಗಳು ಅಗಾಧ ಪ್ರಮಾಣದಲ್ಲಿ ಹೆಚ್ಚಿವೆ. ಪ್ರತಿನಿತ್ಯ ಎಂಬಂತೆ ಜನರು ವಂಚನ ಜಾಲಕ್ಕೆ ಸಿಲುಕಿ ಕೈಸುಟ್ಟುಕೊಳ್ಳುತ್ತಿದ್ದಾರೆ. ಜನರ ವೈಯಕ್ತಿಕ ಮಾಹಿತಿ, ದತ್ತಾಂಶಗಳು,

ದಾಖಲೆಗಳು ಪರರ ಕೈಸೇರಿ ಮೋಸ ಹೋಗುತ್ತಿರುವ ಘಟನೆಗಳು ನಿತ್ಯ ನಿರಂತರ ಎಂಬಂತಾಗಿದೆ. ಇಂತಹ ಸ್ಥಿತಿಯಲ್ಲಿ ಈಗ ಸಾಲ ನೀಡಿಕೆಗೂ ತಂತ್ರಜ್ಞಾನದ ಪ್ಲಾಟ್‌ಫಾರಂ ಅನ್ನು ಪರಿಚಯಿಸಿದಲ್ಲಿ ಯಾರ್ಯಾರದೋ ಹೆಸರಲ್ಲಿ ಇನ್ಯಾರೋ ಸಾಲ ಪಡೆದು ಗ್ರಾಹಕರಿಗೆ ಮಾತ್ರವಲ್ಲದೆ ಬ್ಯಾಂಕ್‌ಗಳಿಗೂ ಪಂಗನಾಮ ಹಾಕುವ ಸಾಧ್ಯತೆ ಇದೆ. ಹಾಗಾಗದಂತೆ ಎಚ್ಚರ ವಹಿಸಲಾಗುವುದು ಎಂದು ಆರ್‌ಬಿಐ ಮುಖ್ಯಸ್ಥರು ಭರವಸೆ ನೀಡಿದ್ದರೂ ಈಗ ದೇಶದ ವಿವಿಧೆಡೆ ವಂಚಕರು ನವನವೀನ ಮಾದರಿಯಲ್ಲಿ ತಂತ್ರಜ್ಞಾನವನ್ನು ಬಳಸಿಯೇ ವಂಚಿಸುತ್ತಿರುವ ಘಟನೆಗಳಿಂದಾಗಿ ಯುಎಲ್‌ಐ ಸುರಕ್ಷೆಯ ಬಗೆಗೆ ಸಾರ್ವಜನಿಕರಿಗೆ ಅನುಮಾನ ಇದ್ದೇ ಇದೆ. ಹೀಗಾಗಿ ಆರ್‌ಬಿಐ ಯುಎಲ್‌ಐ ಜಾರಿಗೂ ಮುನ್ನ ಇಂತಹ ಅಕ್ರಮ, ವಂಚನೆಗಳು ನಡೆಯದಂತೆ, ಗ್ರಾಹಕರ ವೈಯಕ್ತಿಕ ದಾಖಲೆ, ಮಾಹಿತಿಗಳ ಗೌಪ್ಯತೆಯನ್ನು ಕಾಯ್ದುಕೊಳ್ಳುವುದು ಆರ್‌ಬಿಐನ ಹೊಣೆಗಾ­ರಿ­ಕೆಯಾಗಿದೆ. ಆರ್‌ಬಿಐ ಈ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದರ ಮೇಲೆ ಯುಎಲ್‌ಐ ನ ಯಶಸ್ಸು ನಿಂತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next