Advertisement

Mantralayam: ಮಂತ್ರಾಲಯದಲ್ಲಿ ರಾಯರ ಪೂರ್ವಾರಾಧನೆ ಸಂಭ್ರಮ

11:41 PM Aug 31, 2023 | Team Udayavani |

ರಾಯಚೂರು: ಕಲಿಯುಗದ ಕಾಮಧೇನು, ಭಕ್ತರ ಆರಾಧ್ಯದೈವ ಎನಿಸಿಕೊಂಡಿರುವ ಮಂತ್ರಾ­ಲಯದ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವ ಪ್ರಯುಕ್ತ ಗುರುವಾರ ಪೂರ್ವಾ­ರಾಧನೆ ಅತೀ ವಿಜೃಂಭಣೆಯಿಂದ ನೆರವೇರಿತು.

Advertisement

ಬೆಳಗ್ಗೆಯಿಂದಲೇ ಮಠದಲ್ಲಿ ವಿವಿಧ ಧಾರ್ಮಿಕ ಆಚರಣೆಗಳು, ಪೂಜಾ ಕಾರ್ಯಕ್ರಮ ನೆರವೇರಿ­ದವು. ರಾಯರ ಮೂಲ ವೃಂದಾ­ವನಕ್ಕೆ ವಿಶೇಷ ಅಲಂಕಾರ ಸೇವೆ ಜರಗಿತು. ಬೆಳಗಿನ ಜಾವ ನಿರ್ಮಾಲ್ಯ ವಿಸರ್ಜನೆ, ಗ್ರಂಥ ಪಾರಾಯಣ ಬಳಿಕ ವಿಶೇಷ ಅಭಿಷೇಕ ನೆರವೇರಿಸಲಾಯಿತು.

ಶ್ರೀಮಠದ ಪೀಠಾ ಧಿಪತಿ ಸುಬುಧೇಂದ್ರ ತೀರ್ಥರು ಪ್ರಹ್ಲಾದರಾಜರ ಪಾದುಕೆ ಪೂಜೆ ನೆರವೇರಿಸಿದರು. ಅನಂತರ ಚಿನ್ನದ ಮಂಟಪದಲ್ಲಿ ಮೂಲ ರಘುಪತಿ ವೇದವಾಸ್ಯರ ಪೂಜೆ, ಅಲಂಕಾರ ಸಂತರ್ಪಣೆ, ಹಸ್ತೋದಕ, ಮಹಾಮಂಗಳಾರತಿ ಸೇವೆ ನೆರವೇರಿಸಿ­ದರು. ಶ್ರೀಮಠದ ಪ್ರವಚನ ಮಂದಿರದಲ್ಲಿ ಪೂರ್ವಾ­ರಾಧನೆ ನಿಮಿತ್ತ ವಿವಿಧ ಪಂಡಿತರಿಂದ ಪ್ರವಚನ ಜರಗಿತು. ಈ ಬಾರಿ ತಮಿಳುನಾಡಿನ ಶ್ರೀ ರಂಗನಾಥ ದೇವಸ್ಥಾನದಿಂದ, ಅಹೋಬಲದ ಶ್ರೀ ನರಸಿಂಹಸ್ವಾಮಿ ದೇವಸ್ಥಾನ ದಿಂದ ಹಾಗೂ ಶ್ರೀಪಾದ ತೀರ್ಥರ ಮಠದಿಂದ ರಾಯರಿಗೆ ಆಶೀರ್ವಾದ ರೂಪದಲ್ಲಿ ಶೇಷ ವಸ್ತ್ರಗಳನ್ನು ಸಮರ್ಪಿಸಲಾಯಿತು. ಶೇಷವಸ್ತ್ರ­ಗಳನ್ನು ಅದ್ದೂರಿಯಾಗಿ ಸಕಲ ವಾದ್ಯಮೇಳದೊಂದಿಗೆ ಬರಮಾಡಿ­ಕೊಂಡ ಶ್ರೀಮಠದ ಪೀಠಾಧಿ ಪತಿ ಶ್ರೀ ಸುಬುಧೇಂದ್ರ ತೀರ್ಥರು, ಬಳಿಕ ರಾಯರಿಗೆ ಸಮರ್ಪಿಸಿದರು.

Advertisement

ಈ ವೇಳೆ ಅನುಗ್ರಹ ಸಂದೇಶ ನೀಡಿದ ಶ್ರೀಗಳು, ಶ್ರೀರಂಗಂ- ಅಹೋ­ಬಲ ಕ್ಷೇತ್ರದಿಂದ ಬಂದ ಶೇಷವಸ್ತ್ರ­ಗಳನ್ನು ಗುರುರಾಯರಿಗೆ ಸಮರ್ಪಣೆ ಮಾಡಲಾಗಿದೆ. ಈ ಎಲ್ಲ ಪುಣ್ಯಕ್ಷೇತ್ರಗಳ ಫಲ ಮಂತ್ರಾಲಯಕ್ಕೆ ಬಂದಿದ್ದು, ಮಂತ್ರಾಲಯದಲ್ಲಿ ಎಲ್ಲ ಪುಣ್ಯ ಕ್ಷೇತ್ರಗಳ ಸಮ್ಮಿಲನವಾಗುತ್ತಿದೆ. ಐತಿ­ಹಾಸಿಕ ದೈವಿಕ ಕ್ಷೇತ್ರಗಳಿಂದ ಬಂದಿರುವ ಶೇಷವಸ್ತ್ರದ ಮೂಲಕ ರಾಯರು ಭಕ್ತರನ್ನು ಅನುಗ್ರಹಿ­ಸುವರು. ಅಹೋಬಲ ಕ್ಷೇತ್ರದ ನರಸಿಂಹ­ಸ್ವಾಮಿ ಹಾಗೂ ಶ್ರೀರಂಗಂ ಕ್ಷೇತ್ರದೊಂದಿಗೆ ಶ್ರೀಮಠ ಅವಿನಾಭಾವ ಸಂಬಂಧ ಹೊಂದಿದೆ ಎಂದರು.

ಈ ಸಂದರ್ಭದಲ್ಲಿ ಅಹೋಬಲ ನರಸಿಂಹಸ್ವಾಮಿ ದೇವಸ್ಥಾನದ ಆಡಳಿತ ಅಧಿಕಾರಿ ಸಂಪತ್‌ ಕುಮಾರ್‌, ಪ್ರಧಾನ ಅರ್ಚಕ ರಮೇಶ್‌ ಆರ್ಚಾಯ, ಶ್ರೀ ರಂಗಂ ಕ್ಷೇತ್ರದ ಗೋಪಾಲನ್‌, ವಿದ್ವಾನ್‌ ಸು ಧೀಂದ್ರ ಆಚಾರ್ಯ, ಶ್ರೀಧರ ಆಚಾರ್ಯ, ಶ್ರೀ ಮಠದ ಆಡಳಿತಾಧಿಕಾರಿ ಮಾಧವಶೆಟ್ಟಿ, ವ್ಯವಸ್ಥಾಪಕ ಎಸ್‌.ಕೆ. ಶ್ರೀನಿವಾಸರಾವ್‌ ಸಹಿತ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಪೂರ್ವಾರಾಧನೆಗೆ ವಿವಿಧೆಡೆಯಿಂದ ಭಕ್ತರ ದಂಡು ಹರಿದು ಬಂದಿತ್ತು. ರಾಯರ ದರ್ಶನಾಶೀರ್ವಾದ ಪಡೆದು ಪುನೀತರಾದರು.

Advertisement

Udayavani is now on Telegram. Click here to join our channel and stay updated with the latest news.

Next